ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಲೋಕಸಭೆಯಲ್ಲಿ ಉತ್ತರಿಸುವಾಗ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರ ಮೇಲೆ ಕಟುವಾದ ದಾಳಿ ನಡೆಸಿದರು.
“ಕೆಲವು ನಾಯಕರು ‘ಅರ್ಬನ್ ನಕ್ಸಲರ ಭಾಷೆ’ ಮಾತನಾಡುತ್ತಿದ್ದಾರೆ; ಸುಳ್ಳು ಭರವಸೆಗಳೊಂದಿಗೆ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಆರೋಪಿಸಿದರು.
“ಇಂದು ಕೆಲವರು ನಗರ ನಕ್ಸಲರ ಭಾಷೆಯನ್ನು ಬಹಿರಂಗವಾಗಿ ಮಾತನಾಡುತ್ತಿದ್ದಾರೆ, ಭಾರತದ ಆಡಳಿತವನ್ನು ಸವಾಲು ಮಾಡುತ್ತಾ, ಅದರ ವಿರುದ್ಧ ಹೋರಾಟವನ್ನು ಘೋಷಿಸುತ್ತಿದ್ದಾರೆ ಎಂಬುದು ದುರದೃಷ್ಟಕರ. ಈ ಭಾಷೆಯನ್ನು ಮಾತನಾಡುವವರಿಗೆ ಸಂವಿಧಾನ ಅಥವಾ ರಾಷ್ಟ್ರದ ಏಕತೆ ಅರ್ಥವಾಗುವುದಿಲ್ಲ” ಎಂದು ಮೋದಿ ಹೇಳಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮೋದಿ, “ದಶಕಗಳಿಂದ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿದ್ದು, ಇದು ಜನರಿಗೆ ಮತ್ತು ಸಂವಿಧಾನಕ್ಕೆ ಅನ್ಯಾಯ” ಎಂದು ಕರೆದರು.
“ನಾವು ಸಂವಿಧಾನದ ಆಶಯದಂತೆ ಬದುಕುತ್ತೇವೆ, ಅದಕ್ಕಾಗಿಯೇ ನಾವು ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಮ್ಮ ಸಂವಿಧಾನವು ತಾರತಮ್ಯ ಮಾಡುವ ಹಕ್ಕನ್ನು ನೀಡುವುದಿಲ್ಲ” ಎಂದು ಮೋದಿ ಪ್ರತಿಪಾದಿಸಿದರು.
ವಿರೋಧ ಪಕ್ಷಗಳು ಈಡೇರದ ಭರವಸೆಗಳೊಂದಿಗೆ ಯುವಕರನ್ನು ದಾರಿ ತಪ್ಪಿಸುತ್ತಿವೆ ಎಂದು ಮೋದಿ ಆರೋಪಿಸಿದರು. “ನಾವು ಯುವಕರ ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ, ಯುವಕರನ್ನು ವಂಚಿಸುತ್ತಿರುವ ಕೆಲವು ಪಕ್ಷಗಳಿವೆ. ಅವರು ಚುನಾವಣೆಯ ಸಮಯದಲ್ಲಿ ಭತ್ಯೆಗಳನ್ನು ಭರವಸೆ ನೀಡುತ್ತಾರೆ. ಆದರೆ, ಆ ಭರವಸೆಗಳನ್ನು ಈಡೇರಿಸುವುದಿಲ್ಲ” ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಮೋದಿ, “ಬಡವರ ಗುಡಿಸಲುಗಳಲ್ಲಿ ಫೋಟೋ ಸೆಷನ್ಗಳನ್ನು ಮಾಡಿಸಿಕೊಂಡು ಮನರಂಜನೆ ಪಡೆಯುವವರಿಗೆ ಸಂಸತ್ತಿನಲ್ಲಿ ಬಡವರ ಬಗ್ಗೆ ಮಾತನಾಡುವುದೇ ಬೇಸರವಾಗುತ್ತದೆ” ಎಂದು ಹೇಳಿದರು.
ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿ, “ಕೆಲವು ನಾಯಕರು ಜಕುಝಿ ಮತ್ತು ಸ್ಟೈಲಿಶ್ ಶವರ್ಗಳ ಮೇಲೆ ಕೇಂದ್ರೀಕರಿಸುತ್ತಾರೆ. ಆದರೆ, ನಮ್ಮ ಗಮನವು ಪ್ರತಿ ಮನೆಗೆ ನೀರು ಒದಗಿಸುವುದರ ಮೇಲೆ ಇದೆ” ಎಂದು ಹೇಳಿದರು.
ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡಿ, “ನಾವು ಸುಳ್ಳು ಘೋಷಣೆಗಳನ್ನು ನೀಡಿಲ್ಲ. ಆದರೆ, ಜನರಿಗೆ ನಿಜವಾದ ಅಭಿವೃದ್ಧಿಯನ್ನು ನೀಡಿದ್ದೇವೆ” ಎಂದು ಹೇಳಿಕೊಂಡರು.
“ದಶಕಗಳಿಂದ ಕಾಂಗ್ರೆಸ್ ‘ಗರೀಬಿ ಹಟಾವೋ’ ಬಗ್ಗೆ ಮಾತನಾಡುತ್ತಿದ್ದರೂ, ನಮ್ಮ ಸರ್ಕಾರವು 25 ಕೋಟಿ ಜನರನ್ನು ಬಡತನದಿಂದ ಹೊರಬರಲು ಸಹಾಯ ಮಾಡಿದೆ. ಬಡತನದ ಜೀವನವನ್ನು ನಡೆಸಿದವರಿಗೆ ಸರಿಯಾದ ಛಾವಣಿಯಿರುವ ಮನೆಯನ್ನು ಹೊಂದುವುದರ ಅರ್ಥವೇನೆಂದು ತಿಳಿದಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ; ರಾಜ್ಯಸಭೆ ಕಲಾಪ; ಬಿಜೆಪಿ ಸದಸ್ಯರ ಮಾತಿಗೆ ತಾಳ್ಮೆ ಕಳೆದುಕೊಂಡ ಮಲ್ಲಿಕಾರ್ಜುನ ಖರ್ಗೆ


