ಕೊರೊನಾ ವೈರಸ್ನಿಂದಾಗಿ ಉಂಟಾದ ಆರ್ಥಿಕ ಹಿಂಜರಿತದಿಂದ ದೇಶವನ್ನು ಮೇಲೆತ್ತಲು ದೃಡವಾದ ನೀತಿ ಚೌಕಟ್ಟಿನ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದು, ಈ ಹಿನ್ನಲೆಯಲ್ಲಿ ಖಾಸಗಿ ವಲಯವು ಬೆಳೆಯಲು ಅವಕಾಶ ನೀಡಬೇಕು ಹಾಗೂ ಕೇಂದ್ರ ಮತ್ತು ರಾಜ್ಯಗಳು ಇದಕ್ಕೆ ಸಹಕರಿಸಬೇಕು ಎಂದು ಹೇಳಿದ್ದಾರೆ.
ನೀತಿ ಆಯೋಗದ ಆರನೇ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ಸರ್ಕಾರಗಳಾದ ನಾವು ಆತ್ಮನಿರ್ಭರ ಭಾರತದ ಧ್ಯೇಯವನ್ನು ಸಾಕಾರಗೊಳಿಸಲು, ಖಾಸಗಿ ವಲಯಕ್ಕೆ ಅವಕಾಶಗಳನ್ನು ನೀಡಬೇಕಾಗಿದೆ” ಎಂದು ಹೇಳಿದ್ದಾರೆ. ಈ ಸಭೆಯಲ್ಲಿ ಮುಖ್ಯಮಂತ್ರಿಗಳು, ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ಗಳು ಭಾಗವಹಿಸಿದ್ದರು.
ಇದನ್ನೂ ಓದಿ: ಉನ್ನಾವೊ ದಲಿತ ಬಾಲಕಿಯರ ಸಾವು: ಪ್ರೀತಿ ನಿರಾಕರಿಸಿದ್ದಕ್ಕೆ ವಿಷಪ್ರಾಶನ ಮಾಡಿದವನ ಬಂಧನ
“ಕೊರೊನಾ ಅವಧಿಯಲ್ಲಿ, ಕೇಂದ್ರ ಮತ್ತು ರಾಜ್ಯಗಳು ಹೇಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಾವು ನೋಡಿದ್ದೇವೆ. ಇದರಿಂದಾಗಿ ರಾಷ್ಟ್ರವು ಯಶಸ್ವಿಯಾಗಿದ್ದು, ಭಾರತದ ಉತ್ತಮ ಚಿತ್ರಣವನ್ನು ಇಡೀ ಪ್ರಪಂಚದ ಮುಂದೆ ಇಡಲಾಯಿತು” ಎಂದು ಅವರು ಹೇಳಿದ್ದಾರೆ.
“ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡಿ ಒಂದು ನಿರ್ದಿಷ್ಟ ದಿಕ್ಕಿನತ್ತ ಸಾಗುವುದು ಮತ್ತು ಸಹಕಾರಿ ಫೆಡರಲಿಸಂ ಅನ್ನು ಇನ್ನಷ್ಟು ಅರ್ಥಪೂರ್ಣವಾಗಿಸುವುದು ಭಾರತದ ಅಭಿವೃದ್ಧಿಯ ಅಡಿಪಾಯವಾಗಿದೆ. ಇದು ಮಾತ್ರವಲ್ಲದೆ, ಸ್ಪರ್ಧಾತ್ಮಕ, ಸಹಕಾರಿ ಫೆಡರಲಿಸಂ ಅನ್ನು ರಾಜ್ಯಗಳ ನಡುವೆ ಮಾತ್ರವಲ್ಲದೆ ಜಿಲ್ಲೆಗಳಲ್ಲೂ ತರಲು ನಾವು ಪ್ರಯತ್ನಿಸಬೇಕು” ಎಂದು ಪ್ರಧಾನಿ ಹೇಳಿದ್ದಾರೆ.
ಈ ಸಭೆಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರು ಹಾಜರಿಯಾಗಿದ್ದಾರೆ. ಮಮತಾ ಬ್ಯಾನರ್ಜಿ ಅವರು ಈ ಹಿಂದೆಯು ನೀತಿ ಆಯೋಗದ ಸಭೆಗಳಲ್ಲಿ ಗೈರು ಹಾಜರಿಯಾಗಿದ್ದರು. ಈ ಸಭೆಗಳನ್ನು “ಫಲಪ್ರದವಲ್ಲದ” ಕಾರ್ಯಕ್ರಮವಾಗಿದೆ ಎಂದಿದ್ದ ಅವರು, ನೀತಿ ಆಯೋಗಕ್ಕೆ, “ಯಾವುದೇ ಆರ್ಥಿಕ ಶಕ್ತಿ ಇಲ್ಲದೆ ಇರುವುದಿಂದ ರಾಜ್ಯಗಳ ಯೋಜನೆಗಳನ್ನು ಬೆಂಬಲಿಸಲು ಅದಕ್ಕೆ ಸಾಧ್ಯವಿಲ್ಲ” ಎಂದು ಅವರು ಆರೋಪಿಸಿದ್ದರು. ಆದರೆ ಅಮರಿಂದರ್ ಸಿಂಗ್ ಅವರು ತಮ್ಮ ಅನಾರೋಗ್ಯದ ಕಾರಣಕ್ಕೆ ಹಾಜರಿರಲಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: ಕಾರಿನಲ್ಲಿ ಕೊಕೇನ್ ಸಾಗಾಟ – ಪಶ್ಚಿಮ ಬಂಗಾಳದ ಬಿಜೆಪಿ ನಾಯಕಿಯ ಬಂಧನ



Sale India