ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಎನ್ಡಬ್ಲ್ಯುಕೆಆರ್ಟಿಸಿ)ದ ಚಾಲಕ ಕೊಡೆ ಹಿಡಿದು ಬಸ್ ಚಾಲನೆ ಮಾಡಿದ ವಿಡಿಯೋವೊಂದು ಮೇ 24, 2024ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ವಿಡಿಯೋ ಆಧರಿಸಿ ಕನ್ನಡದ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು “ಕೊಡೆ ಹಿಡಿದು ಬಸ್ ಓಡಿಸಿದ ಕೆಎಸ್ಆರ್ಟಿಸಿ ಡ್ರೈವರ್“, “ಛೇ..! ಬಸ್ ಒಳಗೆ ಛತ್ರಿ” “ಛತ್ರಿ ಹಿಡಿದು ಸಾರಿಗೆ ಬಸ್ ಓಡಿಸಿದ ಚಾಲಕ! ಬಸ್ ರಿಪೇರಿಗೂ ದುಡ್ಡಿಲ್ವಾ? ಜನರ ಪ್ರಶ್ನೆ” ಇತ್ಯಾದಿ ಶೀರ್ಷಿಕೆಗಳೊಂದಿಗೆ ಸುದ್ದಿ ಪ್ರಕಟಿಸಿತ್ತು.


ರಾಜ್ಯ ಬಿಜೆಪಿ ಮತ್ತು ಅದರ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಡಾ.ಸಿಎನ್ ಅಶ್ವತ್ಥ್ ನಾರಾಯಣ ಸೇರಿದಂತೆ ಹಲವರು ವಿಡಿಯೋ ಹಂಚಿಕೊಂಡು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.



ವಿಡಿಯೋ ವೈರಲ್ ಆಗುತ್ತಿದ್ದಂತೆ ಮೇ 24, 2024ರಂದು ಎಕ್ಸ್ ಮೂಲಕ ಪ್ರತಿಕ್ರಿಯೆ ಕೊಟ್ಟಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, “ಮಳೆ ಬರುತ್ತಿರುವಾಗ ಸಂಸ್ಥೆಯ ವಾಹನದ ಚಾಲಕರು ಕೊಡೆ ಹಿಡಿದುಕೊಂಡು ಚಾಲನೆ ಮಾಡುವ ವಿಡಿಯೋ (ಮನರಂಜನೆಗಾಗಿ ಮಾಡಿದ ವಿಡಿಯೋ ಕುರಿತು) ಬಿಜೆಪಿಯವರು ಟ್ವೀಟ್ ಮಾಡಿ ಮಾಡಿ ಉತ್ತರಕುಮಾರನ ಪೌರುಷವನ್ನು ತೋರಿಸುತ್ತಿರುವುದಕ್ಕೆ ಹಾಗೂ ಅವರ ಈ ಸಂತೋಷಕ್ಕೆ ಕಡಿವಾಣ ಹಾಕಬೇಕಾಗಿದೆಯಲ್ಲ ಎಂಬ ನೋವಿನೊಂದಿಗೆ ಈ ವಿವರಣೆ ನೀಡಲಾಗುತ್ತಿದೆ.
“ಕೆಲವರಿಗೆ ಕಣ್ಣಿರುತ್ತದೆ. ಆದರೆ, ನೋಡಲು ಸಾಧ್ಯವಾಗದ ಸ್ಥಿತಿ. ತಲೆ ಇರುತ್ತದೆ ಬುದ್ದಿಯನ್ನು ಸರಿಯಾಗಿ ಉಪಯೋಗಿಸಲಾಗದ ಪರಿಸ್ಥಿತಿ. ಇವೆಲ್ಲವೂ ಅನ್ವಯಿಸುವುದು ಬಸನಗೌಡ ಪಾಟೀಲ್ ಯತ್ನಾಳ್, ಆರ್. ಅಶೋಕ್ ಮತ್ತು ಡಾ.ಸಿಎನ್ ಅಶ್ವತ್ಥ್ ನಾರಾಯಣ ಅವರಿಗೆ. ಬಿಜೆಪಿಯವರು ಕಣ್ಣು, ತಲೆ ಯಾವುದೂ ಸರಿಯಾಗಿ ಕನೆಕ್ಟ್ ಆಗದೆ ಇರೋ ಪಂಡಿತ ಪುತ್ರರು ಎಂಬುವುದನ್ನು ಬಿಡಿಸಿ ಹೇಳಬೇಕಿಲ್ಲ. ಈ ವಿಡಿಯೋ ನೋಡಿದರೆ ಚಾಲಕ ಹಿಡಿದಿರುವ ಕೊಡೆ ಮೇಲೆ ಒಂದೇ ಒಂದು ಹನಿ ನೀರು ಕಾಣುತ್ತಿಲ್ಲ. ಅದನ್ನು ನೋಡುವ, ಯೋಚಿಸುವ ವ್ಯವಧಾನ, ಬುದ್ದಿಯಾದರೂ ಬೇಡವೇ ಇವರಿಗೆ ?”
“ಬಿಜೆಪಿ ಅವಧಿಯಲ್ಲಿ ರಾಜ್ಯದ ಸಾರಿಗೆ ಸಂಸ್ಥೆಗಳನ್ನು ರೂ.5,900 ಕೋಟಿ ಸಾಲದ ಸುಳಿಯಲ್ಲಿ ಮುಳುಗಿಸಿ ಹೋಗಿರುವ ಕೀರ್ತಿವಂತರು ಇವರು. ಅವರ ಅವಧಿಯಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ. ಡಕೋಟ ಬಸ್ಸುಗಳನ್ನು ಕಲ್ಪಿಸಿರುವ ಸಾಧನೆ ಅವರದ್ದೇ. ನೇಮಕಾತಿಯಂತೂ ಮರೀಚಿಕೆಯೇ ಸರಿ. ನಮ್ಮ ಅವಧಿಯಲ್ಲಿ ಹೊರಡಿಸಿದ್ದ ನೇಮಕಾತಿ ಪ್ರಕಟಣೆಗೂ ತಡೆ ನೀಡಿದ್ದ ಕೀರ್ತಿ ಬಿಜೆಪಿ ಅವರಿಗೆ ಸಲ್ಲಬೇಕು. ನಮ್ಮ ಸರ್ಕಾರ ಬಂದೊಡನೆ 5,800 ಹೊಸ ಬಸ್ಸುಗಳ ಸೇರ್ಪಡೆಗೆ ಚಾಲನೆ ನೀಡಿದೆ.”
“ಬಿಜೆಪಿ ಅವಧಿಯಲ್ಲಿ ತಡೆ ಹಿಡಿಯಲಾಗಿದ್ದ ನೇಮಕಾತಿಗೆ ಚಾಲನೆ ನೀಡಲಾಗಿದೆ. 13,999 ಹುದ್ದೆಗಳು ಖಾಲಿಯಿದ್ದು, ತಾಂತ್ರಿಕ ಸಿಬ್ಬಂದಿ ಹಾಗೂ ಚಾಲಕ ನಿರ್ವಾಹಕರಿಗೆ ನೇಮಕಾತಿ ಪತ್ರವನ್ನು ವಿತರಿಸಲಾಗಿದೆ. ಇತರೆ ನೇಮಕಾತಿ ಪ್ರಕ್ರಿಯೆಗಳು ಜಾರಿಯಲ್ಲಿವೆ.”
“ಬಿಜೆಪಿಯವರು ಸಾರಿಗೆ ಸಂಸ್ಥೆಗಳಿಗೆ ದಯಪಾಲಿಸಿದ ದುರಂತ ಕಥೆಗಳನ್ನು ಮತ್ತೊಮ್ಮೆ ಮಗದೊಮ್ಮೆ ನೆನಪಿಸಲು ನಮಗೆ ಅವರೇ ಅವಕಾಶ ಮಾಡಿಕೊಡುವುದರ ಹಿಂದಿನ ಉದ್ದೇಶ, ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಪ್ರಚಾರ ನೀಡುವುದು ಎಂದಾದರೆ ನಮಗೇನು ಅಭ್ಯಂತರವಿಲ್ಲ.”
ಮಳೆ ಬರುತ್ತಿರುವಾಗ ಸಂಸ್ಥೆಯ ವಾಹನದ ಚಾಲಕರು ಕೊಡೆ ಹಿಡಿದುಕೊಂಡು ಚಾಲನೆ ಮಾಡುವ ವಿಡಿಯೋ (ಮನರಂಜನೆಗಾಗಿ ಮಾಡಿದ ವಿಡಿಯೋ ಕುರಿತು) @BJP4Karnataka ದವರು ಟ್ವೀಟ್ ಮಾಡಿ ಮಾಡಿ ಉತ್ತರಕುಮಾರನ ಪೌರುಷವನ್ನು ತೋರಿಸುತ್ತಿರುವುದಕ್ಕೆ ಹಾಗೂ ಅವರ ಈ ಸಂತೋಷಕ್ಕೆ ಕಡಿವಾಣ ಹಾಕಬೇಕಾಗಿದೆಯಲ್ಲ ಎಂಬ ನೋವಿನೊಂದಿಗೆ ಈ ವಿವರಣೆ ನೀಡಲಾಗುತ್ತಿದೆ.… pic.twitter.com/6LSvTRmvyj
— Ramalinga Reddy (@RLR_BTM) May 24, 2024
“ಮುಂದುವರೆದು, ಚಾಲಕ ಕೊಡೆ ಹಿಡಿದು ಬಸ್ ಚಾಲನೆ ಮಾಡಿದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಅದರನ್ವಯ, ದಿನಾಂಕ: 23-05-2024 ರಂದು ಧಾರವಾಡ ಘಟಕದ ವಾಹನ ಸಂಖ್ಯೆ ಕೆಎ-25 ಎಫ್-1336 ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಕಾರ್ಯಾಚರಿಸುತ್ತಿರುವಾಗ ವಾಹನದಲ್ಲಿ ಚಾಲಕರಾಗಿ ಶ್ರೀ ಹನುಮಂತಪ್ಪ ಅ ಕಿಲ್ಲೇದಾರ, ಬಿ.ಸಂ-1203 D ಹಾಗೂ ನಿರ್ವಾಹಕರಾಗಿ ಶ್ರೀಮತಿ ಅನಿತಾ ಹೆಚ್. ಬಿ ಸಂ-396 ರವರು ಕರ್ತವ್ಯ ನಿರ್ವಹಿಸುತ್ತಿದ್ದರು. ಮಳೆ ಬರುತ್ತಿದ್ದ ಆ ಸಮಯದಲ್ಲಿ ಅಂದರೆ ಸುಮಾರು 16:30 ಕ್ಕೆ ಬಸ್ಸಿನಲ್ಲಿ ಪ್ರಯಾಣಿಕರು ಇಲ್ಲದೇ ಖಾಲಿ ಇದ್ದುದರಿಂದ ಚಾಲಕರು ಮನೋರಂಜನೆಗಾಗಿ ನಿರ್ವಾಹಕರ ಬಳಿ ಇದ್ದ ಕೊಡೆಯನ್ನು ಪಡೆದು, ಹಿಡಿದುಕೊಂಡು ವಾಹನ ಚಾಲನೆ ಮಾಡಿರುತ್ತಾರೆ. ಇದನ್ನು ಸದರಿ ನಿರ್ವಾಹಕಿಯು ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ.”
“ಆ ಸಮಯದಲ್ಲಿ ಚಾಲಕರ ಮೇಲಿನ ಛಾವಣಿಯಾಗಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದ ಛಾವಣಿಯಾಗಲಿ ಸೋರಿಕೆ (Roof Leakage)ಇರಲಿಲ್ಲ . ವಾಹನದ ಛಾವಣಿ ಸೋರಿಕೆ ಬಗ್ಗೆ ಚಾಲಕ, ನಿರ್ವಾಹಕರ, ಪ್ರಯಾಣಿಕರ ಯಾವುದೇ ದೂರು ಸಹ ದಾಖಲು ಆಗಿರುವುದಿಲ್ಲ. ಸದರಿ ವಾಹನವನ್ನು ವಿಭಾಗದ ತಾಂತ್ರಿಕ ಶಿಲ್ಪಿಗಳಿಂದ ಪರಿಶೀಲನೆ ಮಾಡಲಾಗಿ ಮೇಲ್ಚಾವಣಿಯು ಸೋರದೆ ಇರುವುದನ್ನು ಖಚಿತಪಡಿಸಿಕೊಂಡಿರುತ್ತಾರೆ.”
“ಈ ರೀತಿಯ ಬೇಜಾವಬ್ದಾರಿತನದಿಂದ ವರ್ತಿಸಿ, ಸಂಸ್ಥೆಯ ಘನತೆಗೆ ಧಕ್ಕೆ ತಂದ ಚಾಲನಾ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.” ಎಂದು ತಿಳಿಸಿದ್ದಾರೆ.
“ಬಸ್ ಸೋರುತ್ತಿತ್ತು, ಚಾಲಕ ಕೊಡೆ ಹಿಡಿದು ಚಾಲನೆ ಮಾಡಿದ್ದಾರೆ” ಎಂದು ಸುದ್ದಿ ಪ್ರಕಟಿಸಿದ್ದ ಅದೇ ಮಾಧ್ಯಮಗಳು, ಸಾರಿಗೆ ಸಚಿವರ ಹೇಳಿಕೆ ಅನುಸರಿಸಿ ರೀಲ್ಸ್ ಮಾಡಿ ಕೆಲಸ ಕಳೆದುಕೊಂಡ ಚಾಲಕ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿವೆ.
ಆದರೆ, vijayapatha.in ಎಂಬ ಸುದ್ದಿ ವೆಬ್ಸೈಟ್ವೊಂದು “NWKRTC:ಮಳೆ ನೀರು ಮುಖಕ್ಕೆ ರಾಚುತ್ತಿದ್ದರೂ ಬಿಡದೆ ಬಸ್ ಓಡಿಸಿದ ಅಮಾಯಕ ಚಾಲಕ, ನಿರ್ವಾಹಕರನ್ನೇ ಅಮಾನತು ಮಾಡಿ ತಮ್ಮ ತಪ್ಪು ಮುಚ್ಚಿಕೊಂಡ ಡಿಸಿ ಚೆನ್ನಗೌಡರ್!!” ಎಂಬ ಶೀರ್ಷಿಕೆಯಲ್ಲಿ ಮೇ 25, 2024ರಂದು ಸುದ್ದಿ ಪ್ರಕಟಿಸಿದೆ. ಈ ಸುದ್ದಿಯಲ್ಲಿ “ಬಸ್ ಮುಂದಿನ ಗಾಜಿನಿಂದ ಚಾಲಕನ ಮುಖಕ್ಕೆ ಮಳೆ ನೀರು ಹೊಡೆಯುತ್ತಿತ್ತು. ಇದರಿಂದ ಚಾಲನೆ ಮಾಡಲು ಅವರಿಗೆ ಕಷ್ಟವಾಗಿತ್ತು. ಈ ಕಾರಣಕ್ಕೆ ಕೊಡೆ ಹಿಡಿದು ಬಸ್ ಓಡಿಸಿದ್ದಾರೆ. ಇದಕ್ಕೆ ಯಾರನ್ನು ಅಮಾನತು ಮಾಡಬೇಕು ಎಂಬುವುದನ್ನು ಉನ್ನತ ಅಧಿಕಾರಿಗಳು ನಿರ್ಧರಿಸಬೇಕಿತ್ತು. ಆದರೆ, ಇಲ್ಲಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಚಾಲಕ, ನಿರ್ವಾಹಕರನ್ನು ಅಮಾನತು ಮಾಡಿ ದರ್ಪ ಮೆರೆದಿದ್ದಾರೆ ಧಾರವಾಡ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಚನ್ನಪ್ಪಗೌಡರ್” ಎಂದು ಹೇಳಿದೆ.

ನಾನು ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚಾಲಕನ ಎಡ ಬದಿಯ ಗೇರ್ ಬಾಕ್ಸ್ ಮೇಲೆ ನೀರು ಬಿದ್ದಿರುವುದು ಮತ್ತು ಹೊರಗಡೆ ಜೋರಾಗಿ ಮಳೆ ಸುರಿಯುತ್ತಿದ್ದುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು ಚಾಲಕ ಹಿಡಿದ ಕೊಡೆ ಮೇಲೆ ನೀರು ಇದೆಯೋ..ಇಲ್ಲವೋ ಎಂಬುವುದು ಸ್ಪಷ್ಟವಾಗಿ ಕಾಣುತ್ತಿಲ್ಲ.
ಒಟ್ಟಾರೆಯಾಗಿ, ಚಾಲಕ ಕೊಡೆ ಹಿಡಿದು ಬಸ್ ಓಡಿಸಿ ವಿಡಿಯೋ ಮಾಡಿರುವುದು ಮನೋರಂಜನೆಯ ಉದ್ದೇಶಕ್ಕೆ ಎಂದು ಸಚಿವರು ಹೇಳಿದರೆ, ಇತ್ತ ವಿಡಿಯೋದ ಕೆಲ ಅಂಶಗಳು ಮತ್ತು ಮಾಧ್ಯಮ ವರದಿ ವ್ಯತಿರಿಕ್ತವಾಗಿ ಕಾಣುತ್ತಿದೆ. ಹಾಗಾಗಿ, ಈ ಪ್ರಕರಣ ಗೊಂದಲಮಯವಾಗಿದೆ.
ಇದನ್ನೂ ಓದಿ : ಪರಿಷತ್ ಚುನಾವಣೆ: ಐವರು ಬಂಡಾಯ ಅಭ್ಯರ್ಥಿಗಳನ್ನು ಉಚ್ಚಾಟಿಸಿದ ಕಾಂಗ್ರೆಸ್


