Homeಪುಸ್ತಕ ವಿಮರ್ಶೆಉಸಿರುಗಟ್ಟಿಸುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದ ವ್ಯಕ್ತಿಯ ಜ್ವಾಲಾಮುಖಿಯಂತಹ ಆತ್ಮಕಥೆ

ಉಸಿರುಗಟ್ಟಿಸುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದ ವ್ಯಕ್ತಿಯ ಜ್ವಾಲಾಮುಖಿಯಂತಹ ಆತ್ಮಕಥೆ

ಇದು ಕೇವಲ ಮನೆಯ ವರ್ಣನೆಯಲ್ಲ. ಸೃಜನಶೀಲ ಜೀವವೊಂದು ಸ್ವತಂತ್ರವಾಗಿ ಬದುಕಲು ಬೇಕಾದ ಸಾಮಾಜಿಕ ಆರ್ಥಿಕ ಅವಕಾಶ ಕೂಡ ಎಂಬುದು ಓದುಗರಿಗೆ ಹೊಳೆಯುತ್ತ್ತದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಅಜಿತ್ ಕೌರ್, ಕುವೆಂಪು ಕಾದಂಬರಿಗಳಲ್ಲಿ ಬರುವ ಎಲ್ಲ ಮಹಿಳಾ ಪಾತ್ರಗಳ ಚೈತನ್ಯದ ಪ್ರತೀಕದಂತಿದ್ದಾರೆ.

- Advertisement -
- Advertisement -

ಈಚೆಗೆ ಪಂಜಾಬಿ ಲೇಖಕಿ ಅಜಿತ್ ಕೌರರ ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’ ಓದಿದೆ. ಆತ್ಮಕಥೆ ನನ್ನ ಪ್ರಿಯ ಪ್ರಕಾರ. ವಿಜಯಾ ಅವರ ‘ಕುದಿ ಎಸರು’ವಿನಲ್ಲಿ ಇರುವಂತೆ ಇಲ್ಲಿ ಕೌಟುಂಬಿಕ ಹಿಂಸೆಯ ದಾರುಣ ಚಿತ್ರಗಳೇನಿಲ್ಲ. ಗೋದಾವರಿ ಪರುಳೇಕರ್ ಅವರಲ್ಲಿರುವಂತೆ ಚಳವಳಿಯ ಭಾಗವಾಗಿ ಎದುರಿಸಿದ ಕಠೋರ ಸವಾಲುಗಳಿಲ್ಲ. ಅಮೃತಾ ಪ್ರೀತಮ್ ಅವರಲ್ಲಿರುವಂತೆ ದೇಶವಿಭಜನೆಯ ಘೋರ ಘಟನೆಗಳಿಲ್ಲ. ಡಚ್ ಲೇಖಕಿ ಓಹರ್ನ್ ಅವರಲ್ಲಿರುವಂತೆ ಲೈಂಗಿಕ ದಾಸ್ಯಕ್ಕೆ ಒಳಗಾಗಿ ಜಪಾನಿ ಸೈನಿಕರ ಬಲಾತ್ಕಾರಕ್ಕೆ ಸಿಲುಕಿದ ಎದೆಸೀಳುವ ಸ್ಮೃತಿಗಳಿಲ್ಲ. ಬದಲಾಗಿ ತನ್ನಿಚ್ಛೆಯಂತೆ ಬದುಕಲು ಬಯಸುವ ಒಬ್ಬ ಮಹಿಳೆ ಪ್ರೇಮದಲ್ಲಿ ವಿಫಲೆಯಾಗಿ, ತನಗೊಲ್ಲದ ಸಂಸಾರವನ್ನು ಒಗೆದು ಹೊರಬಂದು, ಲೇಖಕಿಯಾಗಿ ಪತ್ರಕರ್ತೆಯಾಗಿ ಕಷ್ಟಪಟ್ಟು ಬದುಕನ್ನು ಕಟ್ಟಿಕೊಂಡ ಕೆಲವು ಚಿತ್ರಗಳಿವೆ. ಆದರೆ ಈ ಚಿತ್ರಗಳ ಒಳಗಿಂದ ಹೊಮ್ಮುವ ಧೀಮಂತಿಕೆ ಸಂವೇದನೆಗಳು ಮಾತ್ರ ಝಗಝಗಿಸುವ ಕತ್ತಿಗಳಂತೆ ಹರಿತವಾಗಿವೆ.

ಭಾರತೀಯ ಸಾಂಪ್ರದಾಯಿಕ ಸಮಾಜವು ಮಹಿಳೆಯರ ಬದುಕಿಗೆ ಕೆಲವು ಚೌಕಟ್ಟುಗಳನ್ನು ಒದಗಿಸುತ್ತದೆ. ಬಂಧನ ಮತ್ತು ಅಪಮಾನಸಹಿತ ಸುರಕ್ಷೆಯಿರುವ ಚೌಕಟ್ಟದು. ಆದರೆ ಇದು ಅವರ ಸೃಜನಶೀಲ ಚೈತನ್ಯವನ್ನು ಚೂರುಚೂರು ಮಾಡುತ್ತದೆ. ಆಗ ದಿಟ್ಟೆಯರಾದ ಕೆಲವರು ಈ ಚೌಕಟ್ಟನ್ನು ಮುರಿದು ಹೊರಬರುವರು. ಇದರ ಫಲವಾಗಿ ಅಪಾರ ಕಷ್ಟವನ್ನೂ ಹಕ್ಕಿಯ ಸ್ವಾತಂತ್ರ್ಯವನ್ನೂ ಅನುಭವಿಸುವರು. ವಿಜಯಾ, ಪ್ರತಿಭಾ ನಂದಕುಮಾರ್, ಉಮಾಶ್ರೀ, ಅಮೃತಾಪ್ರೀತಂ, ಕಮಲಾದಾಸ್ ಮುಂತಾದವರ ಆತ್ಮಕಥೆಗಳು ಇದಕ್ಕೆ ನಿದರ್ಶನ. ಈ ಸರಣಿಯಲ್ಲೇ ಬರುವ ಅಜಿತ್ ಕೌರರ ಆತ್ಮಕಥೆ ಹಲವು ಕಾರಣಗಳಿಂದ ವಿಶಿಷ್ಟವಾಗಿದೆ.

1. ಓದುಗರನ್ನು ತಲ್ಲಣಗೊಳಿಸುವಂತೆ ಘಟನೆಗಳನ್ನು ವಿವರಿಸುವ ವಿಶಿಷ್ಟ ಬಗೆ. ಲೇಖಕಿಯ ಮಗಳು ಸುಟ್ಟುಕೊಂಡು ಸಾಯುವ ಇಲ್ಲವೇ ಲೇಖಕಿ ತನ್ನ ಪ್ರಿಯತಮನನ್ನು ಬೆನ್ನಹತ್ತಿಹೋಗುವ ಘಟನೆಗಳು, ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಉದ್ವಿಗ್ನ ಓದುಗರನ್ನು ತನ್ನೊಟ್ಟಿಗೆ ಕರೆದೊಯ್ಯುವ ಕಸುವುಳ್ಳ ಶೈಲಿಯ ನಿರೂಪಣೆಯಿಲ್ಲಿದೆ. ತನ್ನ ಸಮಸ್ತ ಚೈತನ್ಯವನ್ನು ಬಸಿಯುವಂತೆ ಅಜಿತ್ ಬರೆಯುತ್ತಾರೆ.

2. ಬಾಲ್ಯದಿಂದ ಮುಪ್ಪಿನತನಕ ಬದುಕಿನ ವಿವಿಧ ಘಟ್ಟಗಳಲ್ಲಿ ಪಟ್ಟ ಅನುಭವಗಳನ್ನು ಕ್ರಮಬದ್ಧವಾಗಿ ದಾಖಲಿಸುವ ಚಾರಿತ್ರಿಕ ನಿರೂಪಣ ವಿಧಾನವನ್ನು ಬಿಟ್ಟುಕೊಡುವುದು; ಬದಲಿಗೆ ಬಾಳಿನ ಕೆಲವು ಘಟನೆಗಳನ್ನು ಆಯ್ದು ನಿರೂಪಿಸುವ ಹಾದಿಯನ್ನು ಹಿಡಿಯುವುದು. ಇಲ್ಲಿರುವ ಮುಖ್ಯ ಘಟನೆಗಳೆಂದರೆ, ಹದಿಹರೆಯದಲ್ಲಿ ತನ್ನ ಪ್ರಿಯ ಅಧ್ಯಾಪಕನನ್ನು ಪ್ರೇಮಿಸುವ ಕಥೆ, ಮಗಳು ಸುಟ್ಟುಕೊಂಡು ಸಾಯುವುದಕ್ಕೆ ಸಾಕ್ಷಿಯಾಗುವ ಘಟನೆ, ಗಂಡನ ಮನೆಯನ್ನು ಬಿಟ್ಟು ಹೊರನಡೆವ ಘಟನೆ, ಹೊಸ ಪುರುಷನ ಪ್ರೇಮದಲ್ಲಿ ಅನುಭವಿಸುವ ಸುಖದುಃಖಗಳು, ಪತ್ರಕರ್ತೆಯಾಗಿ ಎದುರಿಸುವ ಬಿಕ್ಕಟ್ಟು, ಬಾಡಿಗೆ ಮನೆಯನ್ನು ಪಡೆಯಲು ಮಾಡುವ ಸೆಣಸಾಟ ಇತ್ಯಾದಿ. ಇಂತಹ ಕೆಲವೇ ಪ್ರಸಂಗಗಳ ಮೂಲಕ ಸಾರ್ವಜನಿಕ ಬದುಕಿನಲ್ಲಿರುವ ಹೆಣ್ಣ ಬಾಳಿನ ತಲ್ಲಣಗಳನ್ನು ಅಜಿತ್ ಶಕ್ತವಾಗಿ ಕಾಣಿಸುವರು.

3. ವಿವರಗಳಿಗೆ ಹೋಗದೆ ಧ್ವನಿಪೂರ್ಣವಾದ ಸಂಕೇತ ಪ್ರತಿಮೆಗಳ ಮೂಲಕ ನಿರೂಪಿಸುವ ಪರಿ; ಕಥೆಯ ಭಾರವನ್ನು ಕಳೆದುಕೊಂಡು ಅನುಭವದ ಸೂಕ್ಷ್ಮಸ್ತರಗಳನ್ನು ಮುಟ್ಟಿ ಕಾಣಿಸುವಲ್ಲಿ ಸ್ವತಃ ಕಾವ್ಯವಾಗುವ ಗದ್ಯಭಾಷೆ. ವಿಷಾದಭರಿತವಾದ ಮತ್ತು ಹರಿತವಾದ ವ್ಯಂಗ್ಯ; ನಾಟಕೀಯವಾದ ಈ ವ್ಯಂಗ್ಯದೊಳಗೆ ಸ್ತ್ರೀಸಂವೇದನೆಯ ಮೌಲ್ಯಗಳನ್ನು ಕಾಣಿಸುವ ದಾರ್ಶನಿಕತೆ ಇದೆ. ಉದಾಹರಣೆಗೆ ವಾಣಿಜ್ಯ ವ್ಯವಹಾರದ ಪತ್ರಿಕೆಯ ಸಂಪಾದಕಿಯಾಗಿದ್ದ ಲೇಖಕಿಯನ್ನು, ಆಕೆಗೆ ಸಲ್ಲಬೇಕಾದ ಪ್ರಕಾಶನದ ಖರ್ಚನ್ನು ಹಣವನ್ನು ಪಾವತಿಸದೆ, ಅಧಿಕಾರಶಾಹಿ ಮತ್ತು ರಾಜಕಾರಣಿಗಳು ಸತಾಯಿಸುವ ಪ್ರಕರಣವನ್ನು ಗಮನಿಸಬಹುದು. ‘ದುರ್ಘಟನೆಗಳ ಪರಿಷೆ’ ಎಂಬ ಹೆಸರಿನ ಅಧ್ಯಾಯದಲ್ಲಿ ಇದು ನಿರೂಪಿತಗೊಂಡಿದೆ. ಇದು ಶುರುವಾಗುವುದು ಹೀಗೆ:

“ಗೆಳೆಯರೇ, ನಾನೊಂದು ಸ್ವಾರಸ್ಯಕರ ಘಟನೆಯ ಬಗ್ಗೆ ಹೇಳ್ತೀನಿ. ಮಾಮೂಲಿ ಘಟನೆಯಾದರೂ ವಿಚಲಿತಗೊಳಿಸುವಂಥದ್ದು. ಮುಖ್ಯ ಅಪರಾಧ ‘ಹೆಣ್ಣಾಗಿರುವುದು’. ಎರಡನೆಯ ಅಪರಾಧ ‘ಒಂಟಿಯಾದ ಹೆಣ್ಣು’. ಮೂರನೆಯ ಅಪರಾಧ ‘ಏಕಾಂಗಿ ಮತ್ತು ತನ್ನ ರೊಟ್ಟಿಯನ್ನು ತಾನೇ ಗಳಿಸಬಲ್ಲ ಹೆಣ್ಣು’. ಮಹಾ ಅಪರಾಧ ‘ತನ್ನ ರೊಟ್ಟಿಯನ್ನು ಖುದ್ದು ಗಳಿಸಬಲ್ಲ, ಬುದ್ಧಿವಂತೆ, ಸ್ವಾವಲಂಬಿಯಾದ ಈ ಒಂಟಿ ಹೆಣ್ಣುಮಗಳು, ದೇವತೆಗಳು ವಾಸಿಸುವ ಈ ಭಾರತದಲ್ಲಿರುವುದು. ಆದ್ದರಿಂದ ಗೆಳೆಯರೇ, ಮೊಟ್ಟಮೊದಲು ಮೇಲೆ ಉಲ್ಲೇಖಿಸಿದ ನಾಲ್ಕೂ ಅಪರಾಧಗಳನ್ನು ನಾನು ಸ್ವೀಕರಿಸುತ್ತೇನೆ. ಈ ಅಪರಾಧಗಳಲ್ಲದೇ ಇನ್ನೂ ಒಂದು ಅಪರಾಧವಿದೆ ದಯಾಳುಗಳೇ. ಅದು ಇಡೀ ಮಾನವಜಾತಿಗೆ ಅನ್ವಯಿಸುವಂಥದ್ದು. ಮತ್ತದು ಅಪರಾಧಗೈದ ಅಪರಾಧಿಯನ್ನು ಸುಮ್ಮನೆ ಬಿಡುವುದಿಲ್ಲ. ಅಪರಾಧಿಯಾದವ ಯಾರ ಅನುಕಂಪವನ್ನೂ ಬೇಡುವುದಿಲ್ಲ. ಅನುಕಂಪದ ಹಪಹಪಿಯೇ ಇರುವುದಿಲ್ಲ ಅವನಿಗೆ. ಇದಕ್ಕೆ ವ್ಯತಿರಿಕ್ತವಾಗಿ ‘ಅನುಕಂಪ’, ‘ಕರುಣೆ’ಯಂಥ ಜಿಡ್ಡುಲಡ್ಡಾದ ಪೊಳ್ಳುಪದಗಳೆಂದರೆ ಅಪರಾಧಿಗೆ ತಿರಸ್ಕಾರವಿರುತ್ತದೆ. ಆ ಅಪರಾಧಗಳೆಂದರೆ- ತನ್ನ ಷರತ್ತುಗಳ ಮೇಲೆ ಬದುಕುವುದು. ತನ್ನ ಆತ್ಮಗೌರವದಲ್ಲಿ ತಲೆಯೆತ್ತಿ ಬಾಳುವುದು, ಸ್ವಾಭಿಮಾನದಿಂದ ಬಾಳುವುದು ಮತ್ತು ಲೋಕದ ಸಿದ್ಧಮಾದರಿಯ ಮೌಲ್ಯಗಳೊಂದಿಗೆ ರಾಜಿಯಾಗಲು ಅಥವಾ ಯಾವುದೇ ಷರತ್ತನ್ನು ಮನಸ್ಸೊಪ್ಪಿಕೊಳ್ಳದಿದ್ದಾಗ ಯಾವುದಕ್ಕೂ ರಾಜಿ ಮಾಡಿಕೊಳ್ಳದೇ ಇರುವುದು. ಅಂಥ ಅಪರಾಧಿಯನ್ನು ನಟ್ಟನಡುವೆ ನಾಲ್ಕು ದಾರಿ ಕೂಡುವಲ್ಲಿ ನೇಣುಗಂಬಕ್ಕೇರಿಸಬೇಕು ಸ್ನೇಹಿತರೇ”

4. ಸಹಜವಾದ ವಿವರಗಳನ್ನು ದಾರ್ಶನಿಕ ಅರ್ಥದಲ್ಲಿ ದುಡಿಸಿಕೊಳ್ಳುವುದು. ಚಿಕ್ಕಚಿಕ್ಕ ಮನೆ-ಹಾಸ್ಟೆಲುಗಳ ಖೋಲಿಗಳಲ್ಲಿ ಜೀವಿಸುವ ಲೇಖಕಿ ಕೊನೆಗೊಮ್ಮೆ ಇಷ್ಟಪಟ್ಟು ಹಿಡಿದ ಬಾಡಿಗೆ ಮನೆಯನ್ನು ವರ್ಣಿಸುವುದು ಹೀಗೆ:

“ವಿಶಾಲವಾದ ಮನೆ. ವಿಶಾಲವಾದ ಮನೆಯಲ್ಲಿ ಸುಳಿದಾಡುವ ರಾಶಿರಾಶಿ ಗಾಳಿ. ಆ ಮನೆಯಲ್ಲಿ ನಾವು ಆಗಂತುಕರಲ್ಲ. ನಮ್ಮದೇ ಮನೆಯೆಂದು ನುಸುಳುವ ಪೂರ್ತಿ ಬಿಸಿಲನ್ನು ಪೂರ್ತಿ ಬೆಳಕನ್ನು ನಿರುಮ್ಮಳವಾಗಿ ಆಸ್ವಾದಿಸುತ್ತಿದ್ದೆವು. ಪೂರಾ ಮನೆ, ಪೂರಾ ಮಾಳಿಗೆ ಮತ್ತು ಪೂರಾಪೂರಾ ನೀಲಿ ಆಕಾಶ. ಎಲ್ಲವೂ ನಮ್ಮದೇ! ಎದುರು ಚಾಚಿಕೊಂಡ ಹಸಿರು ಸಾಗರ ಮತ್ತು ಗಾಳಿಯಲ್ಲಿ ಮೆಲ್ಲಮೆಲ್ಲನೇ ಕಂಪಿಸುವ ಗಿಡಗಳು. ನಿಧಾನಕ್ಕೆ ಅವುಗಳ ಎತ್ತರ ನಮ್ಮ ಮಾಳಿಗೆಯವರೆಗೆ ಬೆಳೆಯುತ್ತಿತ್ತು. ಜೀವನದಲ್ಲಿ ಮೊದಲ ಬಾರಿ ಇಷ್ಟು ವಿಶಾಲ, ಇಂಥ ನೆಮ್ಮದಿಯ ಮನೆಯಲ್ಲಿದ್ದೆವು. ನಮ್ಮಿಬ್ಬರದೇ ಮನೆ-ಅಪರ್ಣಾ ಮತ್ತು ನನ್ನದು. ದೊಡ್ಡದೊಡ್ಡ ವಿಶಾಲ ಮನೆ ಲಾಹೋರಿನಲ್ಲೂ ಇತ್ತು. ಆದರೆ ಅದು ಅಪ್ಪಾಜಿಯದು. ಅಲ್ಲಿರುವ ಮತ್ತು ಇಲ್ಲದಿರುವ ಎಲ್ಲ ವಸ್ತುವೂ ಅಪ್ಪಾಜಿಯವರ ಇಚ್ಛೆಗನುಗುಣವಾಗಿದ್ದವು. ಈ ಮನೆಯಲ್ಲಿ ಎಲ್ಲವೂ ನಾವು ಸದಾ ಕಾಲ ಬಯಸಿದವೇ ಆಗಿದ್ದವು. ಗಾಳಿ-ಬಿಸಿಲು, ಈ ಜಾಗ, ಸುಂದರ ವಸ್ತುಗಳು, ಸಂಗೀತ, ಪುಸ್ತಕ ಎಲ್ಲವೂ”

ಇದು ಕೇವಲ ಮನೆಯ ವರ್ಣನೆಯಲ್ಲ. ಸೃಜನಶೀಲ ಜೀವವೊಂದು ಸ್ವತಂತ್ರವಾಗಿ ಬದುಕಲು ಬೇಕಾದ ಸಾಮಾಜಿಕ ಆರ್ಥಿಕ ಅವಕಾಶ ಕೂಡ ಎಂಬುದು ಓದುಗರಿಗೆ ಹೊಳೆಯುತ್ತದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಅಜಿತ್ ಕೌರ್, ಕುವೆಂಪು ಕಾದಂಬರಿಗಳಲ್ಲಿ ಬರುವ ಎಲ್ಲ ಮಹಿಳಾ ಪಾತ್ರಗಳ ಚೈತನ್ಯದ ಪ್ರತೀಕದಂತಿದ್ದಾರೆ. ಕುವೆಂಪು ಗೃಹಿಣಿಯನ್ನು ಕುರಿತು ರಚಿಸಿರುವ ಒಂದು ಪದ್ಯದಲ್ಲಿ ‘ಹೊಸಲಾಚೆಗೆ ನೀ ಹೋದರೆ ಮನೆಯ ಬೆಳಕು ಆರಿಹೋಗುತ್ತದೆ’ ಎಂಬರ್ಥದ ಮಾತುಗಳಿವೆ. ಆದರೆ ಅಜಿತ್ ಕೌರ್, ತನ್ನ ಧೀಮಂತ ಬದುಕನ್ನು ಹೊಸಿಲಾಚೆ ಕಾಲಿಟ್ಟೇ ಕಟ್ಟಿಕೊಂಡವರು. ಪಂಜಾಬಿನ ಲೇಖಕಿಯರ ಆತ್ಮಕಥನಗಳಲ್ಲಿ ಅಲ್ಲಿನ ಪುರುಷಪ್ರಧಾನ ಸಮಾಜದ ತಣ್ಣನೆಯ ಕ್ರೌರ್ಯದ ಚಿತ್ರಗಳು ಸಾಮಾನ್ಯ.

ಅಮೃತಾ ಪ್ರೀತಂ ತಮ್ಮ ಆತ್ಮಕಥೆಗೆ ‘ರೆವಿನ್ಯೂ ಸ್ಟಾಂಪ್’ ಹೆಸರಿಡಲು ಕಾರಣ, ಅವರ ಜೀವನದ ಬಗ್ಗೆ ಕುಶವಂತ್‌ಸಿಂಗರು ಕುಹಕದಿಂದ ಆಡಿದ ಒಂದು ಮಾತು. ಬಹುಶಃ ಯೋಧ ಚಟುವಟಿಕೆ ಪ್ರಧಾನವಾಗಿರುವ ಸಮಾಜಗಳಲ್ಲಿ ಹೆಣ್ಣನ್ನು ಉಪಭೋಗದ ಸರಕಾಗಿ ನೋಡುವ ಗುಣ ದಟ್ಟವಾಗಿರುತ್ತದೆ. ಅದುವೇ ಇಂಥ ಸ್ತ್ರೀಸ್ವಾತಂತ್ರ್ಯವಾದಿಗಳನ್ನು ಕೂಡ ಪತ್ರಿಯಾಗಿ ಹುಟ್ಟಿಸುತ್ತದೆ. ಅಮೃತಾ ಮತ್ತು ಅಜಿತ್ ಇಬ್ಬರೂ, ಪಂಜಾಬಿ ಸಮಾಜದಲ್ಲಿದ್ದ ವಿವಾಹ-ಕುಟುಂಬ-ಪತಿನಿಷ್ಠೆ ಎಂಬ ಉಸಿರುಗಟ್ಟುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದವರು. ಲಗ್ನವಾದ ಗಂಡನನ್ನು ಬಿಟ್ಟು ತಮ್ಮ ಜೀವಕ್ಕೆ ಮಿಡಿವ ಸಂಗಾತಿಗಳನ್ನು ಅರಸುತ್ತ ಹೋದವರು. ಆ ಸಂಗಾತಿಗಳ ಜತೆ ಮಾಡಿದ ಬಾಳುವೆಯನ್ನು ದಾಖಲಿಸಿದವರು. ಒಂಟಿ ಮಹಿಳೆಯರಾಗಿದ್ದು ತಮ್ಮ ಮಕ್ಕಳನ್ನು ಬೆಳೆಸಿದವರು.

ಈ ಆತ್ಮಕಥೆಯನ್ನು ದೆಹಲಿ ಕನ್ನಡತಿ ರೇಣುಕಾ ನಿಡಗುಂದಿ ಕನ್ನಡಿಸಿದ್ದಾರೆ. ಈ ಹಿಂದೆ ಅವರು ಅಮೃತಾ ಪ್ರೀತಮರ ನೆನಪುಗಳನ್ನು ಕನ್ನಡಕ್ಕೆ ಸಮರ್ಥವಾಗಿ ತಂದವರು. ಅವರಿಗೆ ಅಮೃತಾ, ಅಜಿತ್ ಕೌರರಂತಹ ಪಂಜಾಬಿ ಲೇಖಕರ ಕುದಿಯುವ ವ್ಯಕ್ತಿತ್ವವನ್ನು, ಅವರ ಕಾವ್ಯಮಯ ಭಾಷೆ ಮತ್ತು ಸಂವೇದನೆ-ಸೂಕ್ಷ್ಮತೆಯನ್ನು ಹಿಡಿದುಕೊಡುವ ಕುಶಲತೆ ದಕ್ಕಿದೆ. ಈ ಕೃತಿ ಮಹಿಳಾ ಸಂವೇದನೆಯ ಕೃತಿಗಳನ್ನು ಪ್ರಕಟಿಸುವುದಕ್ಕೆ ಖ್ಯಾತವಾಗಿರುವ ಅಹರ್ನಿಶಿ ಪ್ರಕಾಶನದಿಂದ ಬಂದಿರುವುದು ಮತ್ತೂ ಔಚಿತ್ಯದಾಯಕವಾಗಿದೆ. ಪಂಜಾಬಿನ ಅಜಿತ್‌ಕೌರ್, ಧಾರವಾಡದ ರೇಣುಕಾ, ತೀರ್ಥಹಳ್ಳಿಯ ಅಕ್ಷತಾ ಇವರಿಗೆ ಕೃತಜ್ಞತೆಗಳು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಬಿಎಸ್‌ಇ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಬೋರ್ಡ್ ಪರೀಕ್ಷೆ ಕಡ್ಡಾಯ, ಪರಿಣಾಮಗಳ ಬಗ್ಗೆ ಎಚ್ಚರಿಕೆ

ನವದೆಹಲಿ: 10ನೇ ತರಗತಿಯ ವಿದ್ಯಾರ್ಥಿಗಳು ಮೊದಲ ಬೋರ್ಡ್ ಪರೀಕ್ಷೆ ಬರೆಯುವುದು ಕಡ್ಡಾಯ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಸ್ಪಷ್ಟಪಡಿಸಿದ್ದು, ಮೊದಲ ಆವೃತ್ತಿಯಲ್ಲಿ ಕನಿಷ್ಠ ಮೂರು ವಿಷಯಗಳನ್ನು ಪ್ರಯತ್ನಿಸದ ವಿದ್ಯಾರ್ಥಿಗಳು "ಅಗತ್ಯ...

ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧುಗೊಳಿಸಿದ ಹೈಕೋರ್ಟ್‌

ವಿಧಾನಸಭೆಯ 2023ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ (ಭಾಗ್ಯನಗರ) ಕ್ಷೇತ್ರದಿಂದ ಕಾಂಗ್ರೆಸ್ ಶಾಸಕ ಎನ್‌.ಸುಬ್ಬಾರೆಡ್ಡಿ ಆಯ್ಕೆಯಾಗಿರುವುದನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಬಾರ್ &ಬೆಂಚ್ ಸೋಮವಾರ (ಫೆ.16) ವರದಿ ಮಾಡಿದೆ. ಸುಬ್ಬಾರೆಡ್ಡಿ...

ಗಂಗಾವತಿ : ವಿದೇಶಿ ಮಹಿಳೆ ಸೇರಿ ಇಬ್ಬರ ಅತ್ಯಾಚಾರ, ಓರ್ವನ ಕೊಲೆ ಪ್ರಕರಣ ; ಮೂವರು ಅಪರಾಧಿಗಳಿಗೆ ಮರಣದಂಡನೆ

ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿ ಸ್ಥಳೀಯ ಹೋಮ್‌ ಸ್ಟೇ ಮಾಲಕಿ ಮತ್ತು ಇಸ್ರೇಲಿ ಯುವತಿ ಮೇಲೆ ಅತ್ಯಾಚಾರವೆಸಗಿ, ಅವರ ಜೊತೆಗಿದ್ದ ಯುವಕನನ್ನು ಕೊಲೆಗೈದ ಪ್ರಕರಣದ ಮೂವರು ಅಪರಾಧಿಗಳಿಗೆ ಒಂದನೇ ಹೆಚ್ಚುವರಿ...

ಶಿವಮೊಗ್ಗ: 40 ಸಾವಿರ ಲಂಚ ಪಡೆಯುತ್ತಿದ್ದ ಕೆಎಎಸ್ ಅಧಿಕಾರಿ ಸೇರಿ ಇಬ್ಬರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು 

ಶಿವಮೊಗ್ಗ: 40,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿ (KAS officer) ಸಿದ್ದಲಿಂಗ ರೆಡ್ಡಿ ಮತ್ತು ಗ್ರಾಮ ಸಹಾಯಕ ರಾಜೇಶ್‌ ಎಂಬುವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ...

ದ್ವೇಷ ಭಾಷಣ | ಅಸ್ಸಾಂ ಸಿಎಂ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ ; ಹೈಕೋರ್ಟ್‌ಗೆ ಹೋಗಲು ಸೂಚನೆ

ಸಂವಿಧಾನದ 32ನೇ ವಿಧಿಯಡಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಈ ವಿಷಯವಾಗಿ ಗುವಾಹಟಿ ಹೈಕೋರ್ಟ್...

ಕಲಬುರಗಿ| ಅನುಮತಿ ಇಲ್ಲದೆ ಪುರಾತತ್ವ ಇಲಾಖೆ ಕೋಟೆ ಪ್ರವೇಶಕ್ಕೆ ಯತ್ನಿಸಿದ ಪಿಎಸ್‌ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ತಂಡ

ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಮಾಜಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ನೇತೃತ್ವದ ಗುಂಪೊಂದು ಭಾನುವಾರ ಕಲಬುರಗಿ ಕೋಟೆಗೆ ಮಹಾಶಿವರಾತ್ರಿ ಪೂಜೆ ಮಾಡಲು ಅನುಮತಿಯಿಲ್ಲದೆ ಪ್ರವೇಶಿಸಲು ಯತ್ನಿಸಿದ...

‘ಆರೆಸ್ಸೆಸ್ ಭೂತ, ಬಿಜೆಪಿ ಅದರ ನೆರಳು’: ಆರ್‌ಎಸ್‌ಎಸ್ ನೋಂದಣಿ ಆಗೇ ಆಗುತ್ತೆ, ನಾವು ಮಾಡಿಸುತ್ತೇವೆ: ಪ್ರಿಯಾಂಕ್ ಖರ್ಗೆ 

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಭಾನುವಾರ ಆರ್‌ಎಸ್‌ಎಸ್ ಮತ್ತು ಅದರ ಸೈದ್ಧಾಂತಿಕ ಸಂತತಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಆರ್‌ಎಸ್‌ಎಸ್ ಇಲ್ಲದೆ ಬಿಜೆಪಿ "ಜೆಡಿ (ಎಸ್) ಗಿಂತ ದುರ್ಬಲವಾಗಿದೆ"...

ರಾಜಸ್ಥಾನ| ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ; ಏಳು ಮಂದಿ ಸಾವು – ಹಲವರು ಸಿಲುಕಿರುವ ಶಂಕೆ

ರಾಜಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯ ಭಿವಾಡಿ ಪಟ್ಟಣದಲ್ಲಿ ಸೋಮವಾರ ಅಕ್ರಮ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸಮಭವಿಸಿದ ಬೆಂಕಿ ಅವಘಡದಲ್ಲಿ ಏಳು ಮಂದಿ ಸಜೀವ ದಹನಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಘಟನೆಯಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಇದು...

ಶಬರಿಮಲೆಗೆ ಮಹಿಳೆಯರ ಪ್ರವೇಶ: ಏಪ್ರಿಲ್ 7ರಿಂದ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಸಂವಿಧಾನ ಪೀಠ

ಏಪ್ರಿಲ್ 7 ರಿಂದ ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು 9 ನ್ಯಾಯಾಧೀಶರ ಪೀಠವನ್ನು ಸ್ಥಾಪಿಸುವುದಾಗಿ ಸುಪ್ರೀಂ ಕೋರ್ಟ್ ಫೆಬ್ರವರಿ 16, ಸೋಮವಾರದಂದು ಘೋಷಿಸಿರುವುದಾಗಿ ಲೈವ್ ಲಾ...

ಬಾಂಗ್ಲಾ ಪ್ರಧಾನಿ ಪದಗ್ರಹಣ : ಭಾರತವನ್ನು ಪ್ರತಿನಿಧಿಸಲಿರುವ ಸ್ಪೀಕರ್ ಓಂ ಬಿರ್ಲಾ

ಫೆಬ್ರವರಿ 17ರಂದು ನಡೆಯಲಿರುವ ಬಾಂಗ್ಲಾದೇಶದ ನೂತನ ಪ್ರಧಾನಿ ತಾರಿಖ್ ರೆಹಮಾನ್ ಅವರ ಪದಗ್ರಹಣದ ಸಮಾರಂಭದಲ್ಲಿ ಭಾರತದಿಂದ ಅಧಿಕೃತ ಪ್ರತಿನಿಧಿಯಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು...