Homeಪುಸ್ತಕ ವಿಮರ್ಶೆಉಸಿರುಗಟ್ಟಿಸುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದ ವ್ಯಕ್ತಿಯ ಜ್ವಾಲಾಮುಖಿಯಂತಹ ಆತ್ಮಕಥೆ

ಉಸಿರುಗಟ್ಟಿಸುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದ ವ್ಯಕ್ತಿಯ ಜ್ವಾಲಾಮುಖಿಯಂತಹ ಆತ್ಮಕಥೆ

ಇದು ಕೇವಲ ಮನೆಯ ವರ್ಣನೆಯಲ್ಲ. ಸೃಜನಶೀಲ ಜೀವವೊಂದು ಸ್ವತಂತ್ರವಾಗಿ ಬದುಕಲು ಬೇಕಾದ ಸಾಮಾಜಿಕ ಆರ್ಥಿಕ ಅವಕಾಶ ಕೂಡ ಎಂಬುದು ಓದುಗರಿಗೆ ಹೊಳೆಯುತ್ತ್ತದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಅಜಿತ್ ಕೌರ್, ಕುವೆಂಪು ಕಾದಂಬರಿಗಳಲ್ಲಿ ಬರುವ ಎಲ್ಲ ಮಹಿಳಾ ಪಾತ್ರಗಳ ಚೈತನ್ಯದ ಪ್ರತೀಕದಂತಿದ್ದಾರೆ.

- Advertisement -
- Advertisement -

ಈಚೆಗೆ ಪಂಜಾಬಿ ಲೇಖಕಿ ಅಜಿತ್ ಕೌರರ ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’ ಓದಿದೆ. ಆತ್ಮಕಥೆ ನನ್ನ ಪ್ರಿಯ ಪ್ರಕಾರ. ವಿಜಯಾ ಅವರ ‘ಕುದಿ ಎಸರು’ವಿನಲ್ಲಿ ಇರುವಂತೆ ಇಲ್ಲಿ ಕೌಟುಂಬಿಕ ಹಿಂಸೆಯ ದಾರುಣ ಚಿತ್ರಗಳೇನಿಲ್ಲ. ಗೋದಾವರಿ ಪರುಳೇಕರ್ ಅವರಲ್ಲಿರುವಂತೆ ಚಳವಳಿಯ ಭಾಗವಾಗಿ ಎದುರಿಸಿದ ಕಠೋರ ಸವಾಲುಗಳಿಲ್ಲ. ಅಮೃತಾ ಪ್ರೀತಮ್ ಅವರಲ್ಲಿರುವಂತೆ ದೇಶವಿಭಜನೆಯ ಘೋರ ಘಟನೆಗಳಿಲ್ಲ. ಡಚ್ ಲೇಖಕಿ ಓಹರ್ನ್ ಅವರಲ್ಲಿರುವಂತೆ ಲೈಂಗಿಕ ದಾಸ್ಯಕ್ಕೆ ಒಳಗಾಗಿ ಜಪಾನಿ ಸೈನಿಕರ ಬಲಾತ್ಕಾರಕ್ಕೆ ಸಿಲುಕಿದ ಎದೆಸೀಳುವ ಸ್ಮೃತಿಗಳಿಲ್ಲ. ಬದಲಾಗಿ ತನ್ನಿಚ್ಛೆಯಂತೆ ಬದುಕಲು ಬಯಸುವ ಒಬ್ಬ ಮಹಿಳೆ ಪ್ರೇಮದಲ್ಲಿ ವಿಫಲೆಯಾಗಿ, ತನಗೊಲ್ಲದ ಸಂಸಾರವನ್ನು ಒಗೆದು ಹೊರಬಂದು, ಲೇಖಕಿಯಾಗಿ ಪತ್ರಕರ್ತೆಯಾಗಿ ಕಷ್ಟಪಟ್ಟು ಬದುಕನ್ನು ಕಟ್ಟಿಕೊಂಡ ಕೆಲವು ಚಿತ್ರಗಳಿವೆ. ಆದರೆ ಈ ಚಿತ್ರಗಳ ಒಳಗಿಂದ ಹೊಮ್ಮುವ ಧೀಮಂತಿಕೆ ಸಂವೇದನೆಗಳು ಮಾತ್ರ ಝಗಝಗಿಸುವ ಕತ್ತಿಗಳಂತೆ ಹರಿತವಾಗಿವೆ.

ಭಾರತೀಯ ಸಾಂಪ್ರದಾಯಿಕ ಸಮಾಜವು ಮಹಿಳೆಯರ ಬದುಕಿಗೆ ಕೆಲವು ಚೌಕಟ್ಟುಗಳನ್ನು ಒದಗಿಸುತ್ತದೆ. ಬಂಧನ ಮತ್ತು ಅಪಮಾನಸಹಿತ ಸುರಕ್ಷೆಯಿರುವ ಚೌಕಟ್ಟದು. ಆದರೆ ಇದು ಅವರ ಸೃಜನಶೀಲ ಚೈತನ್ಯವನ್ನು ಚೂರುಚೂರು ಮಾಡುತ್ತದೆ. ಆಗ ದಿಟ್ಟೆಯರಾದ ಕೆಲವರು ಈ ಚೌಕಟ್ಟನ್ನು ಮುರಿದು ಹೊರಬರುವರು. ಇದರ ಫಲವಾಗಿ ಅಪಾರ ಕಷ್ಟವನ್ನೂ ಹಕ್ಕಿಯ ಸ್ವಾತಂತ್ರ್ಯವನ್ನೂ ಅನುಭವಿಸುವರು. ವಿಜಯಾ, ಪ್ರತಿಭಾ ನಂದಕುಮಾರ್, ಉಮಾಶ್ರೀ, ಅಮೃತಾಪ್ರೀತಂ, ಕಮಲಾದಾಸ್ ಮುಂತಾದವರ ಆತ್ಮಕಥೆಗಳು ಇದಕ್ಕೆ ನಿದರ್ಶನ. ಈ ಸರಣಿಯಲ್ಲೇ ಬರುವ ಅಜಿತ್ ಕೌರರ ಆತ್ಮಕಥೆ ಹಲವು ಕಾರಣಗಳಿಂದ ವಿಶಿಷ್ಟವಾಗಿದೆ.

1. ಓದುಗರನ್ನು ತಲ್ಲಣಗೊಳಿಸುವಂತೆ ಘಟನೆಗಳನ್ನು ವಿವರಿಸುವ ವಿಶಿಷ್ಟ ಬಗೆ. ಲೇಖಕಿಯ ಮಗಳು ಸುಟ್ಟುಕೊಂಡು ಸಾಯುವ ಇಲ್ಲವೇ ಲೇಖಕಿ ತನ್ನ ಪ್ರಿಯತಮನನ್ನು ಬೆನ್ನಹತ್ತಿಹೋಗುವ ಘಟನೆಗಳು, ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಉದ್ವಿಗ್ನ ಓದುಗರನ್ನು ತನ್ನೊಟ್ಟಿಗೆ ಕರೆದೊಯ್ಯುವ ಕಸುವುಳ್ಳ ಶೈಲಿಯ ನಿರೂಪಣೆಯಿಲ್ಲಿದೆ. ತನ್ನ ಸಮಸ್ತ ಚೈತನ್ಯವನ್ನು ಬಸಿಯುವಂತೆ ಅಜಿತ್ ಬರೆಯುತ್ತಾರೆ.

2. ಬಾಲ್ಯದಿಂದ ಮುಪ್ಪಿನತನಕ ಬದುಕಿನ ವಿವಿಧ ಘಟ್ಟಗಳಲ್ಲಿ ಪಟ್ಟ ಅನುಭವಗಳನ್ನು ಕ್ರಮಬದ್ಧವಾಗಿ ದಾಖಲಿಸುವ ಚಾರಿತ್ರಿಕ ನಿರೂಪಣ ವಿಧಾನವನ್ನು ಬಿಟ್ಟುಕೊಡುವುದು; ಬದಲಿಗೆ ಬಾಳಿನ ಕೆಲವು ಘಟನೆಗಳನ್ನು ಆಯ್ದು ನಿರೂಪಿಸುವ ಹಾದಿಯನ್ನು ಹಿಡಿಯುವುದು. ಇಲ್ಲಿರುವ ಮುಖ್ಯ ಘಟನೆಗಳೆಂದರೆ, ಹದಿಹರೆಯದಲ್ಲಿ ತನ್ನ ಪ್ರಿಯ ಅಧ್ಯಾಪಕನನ್ನು ಪ್ರೇಮಿಸುವ ಕಥೆ, ಮಗಳು ಸುಟ್ಟುಕೊಂಡು ಸಾಯುವುದಕ್ಕೆ ಸಾಕ್ಷಿಯಾಗುವ ಘಟನೆ, ಗಂಡನ ಮನೆಯನ್ನು ಬಿಟ್ಟು ಹೊರನಡೆವ ಘಟನೆ, ಹೊಸ ಪುರುಷನ ಪ್ರೇಮದಲ್ಲಿ ಅನುಭವಿಸುವ ಸುಖದುಃಖಗಳು, ಪತ್ರಕರ್ತೆಯಾಗಿ ಎದುರಿಸುವ ಬಿಕ್ಕಟ್ಟು, ಬಾಡಿಗೆ ಮನೆಯನ್ನು ಪಡೆಯಲು ಮಾಡುವ ಸೆಣಸಾಟ ಇತ್ಯಾದಿ. ಇಂತಹ ಕೆಲವೇ ಪ್ರಸಂಗಗಳ ಮೂಲಕ ಸಾರ್ವಜನಿಕ ಬದುಕಿನಲ್ಲಿರುವ ಹೆಣ್ಣ ಬಾಳಿನ ತಲ್ಲಣಗಳನ್ನು ಅಜಿತ್ ಶಕ್ತವಾಗಿ ಕಾಣಿಸುವರು.

3. ವಿವರಗಳಿಗೆ ಹೋಗದೆ ಧ್ವನಿಪೂರ್ಣವಾದ ಸಂಕೇತ ಪ್ರತಿಮೆಗಳ ಮೂಲಕ ನಿರೂಪಿಸುವ ಪರಿ; ಕಥೆಯ ಭಾರವನ್ನು ಕಳೆದುಕೊಂಡು ಅನುಭವದ ಸೂಕ್ಷ್ಮಸ್ತರಗಳನ್ನು ಮುಟ್ಟಿ ಕಾಣಿಸುವಲ್ಲಿ ಸ್ವತಃ ಕಾವ್ಯವಾಗುವ ಗದ್ಯಭಾಷೆ. ವಿಷಾದಭರಿತವಾದ ಮತ್ತು ಹರಿತವಾದ ವ್ಯಂಗ್ಯ; ನಾಟಕೀಯವಾದ ಈ ವ್ಯಂಗ್ಯದೊಳಗೆ ಸ್ತ್ರೀಸಂವೇದನೆಯ ಮೌಲ್ಯಗಳನ್ನು ಕಾಣಿಸುವ ದಾರ್ಶನಿಕತೆ ಇದೆ. ಉದಾಹರಣೆಗೆ ವಾಣಿಜ್ಯ ವ್ಯವಹಾರದ ಪತ್ರಿಕೆಯ ಸಂಪಾದಕಿಯಾಗಿದ್ದ ಲೇಖಕಿಯನ್ನು, ಆಕೆಗೆ ಸಲ್ಲಬೇಕಾದ ಪ್ರಕಾಶನದ ಖರ್ಚನ್ನು ಹಣವನ್ನು ಪಾವತಿಸದೆ, ಅಧಿಕಾರಶಾಹಿ ಮತ್ತು ರಾಜಕಾರಣಿಗಳು ಸತಾಯಿಸುವ ಪ್ರಕರಣವನ್ನು ಗಮನಿಸಬಹುದು. ‘ದುರ್ಘಟನೆಗಳ ಪರಿಷೆ’ ಎಂಬ ಹೆಸರಿನ ಅಧ್ಯಾಯದಲ್ಲಿ ಇದು ನಿರೂಪಿತಗೊಂಡಿದೆ. ಇದು ಶುರುವಾಗುವುದು ಹೀಗೆ:

“ಗೆಳೆಯರೇ, ನಾನೊಂದು ಸ್ವಾರಸ್ಯಕರ ಘಟನೆಯ ಬಗ್ಗೆ ಹೇಳ್ತೀನಿ. ಮಾಮೂಲಿ ಘಟನೆಯಾದರೂ ವಿಚಲಿತಗೊಳಿಸುವಂಥದ್ದು. ಮುಖ್ಯ ಅಪರಾಧ ‘ಹೆಣ್ಣಾಗಿರುವುದು’. ಎರಡನೆಯ ಅಪರಾಧ ‘ಒಂಟಿಯಾದ ಹೆಣ್ಣು’. ಮೂರನೆಯ ಅಪರಾಧ ‘ಏಕಾಂಗಿ ಮತ್ತು ತನ್ನ ರೊಟ್ಟಿಯನ್ನು ತಾನೇ ಗಳಿಸಬಲ್ಲ ಹೆಣ್ಣು’. ಮಹಾ ಅಪರಾಧ ‘ತನ್ನ ರೊಟ್ಟಿಯನ್ನು ಖುದ್ದು ಗಳಿಸಬಲ್ಲ, ಬುದ್ಧಿವಂತೆ, ಸ್ವಾವಲಂಬಿಯಾದ ಈ ಒಂಟಿ ಹೆಣ್ಣುಮಗಳು, ದೇವತೆಗಳು ವಾಸಿಸುವ ಈ ಭಾರತದಲ್ಲಿರುವುದು. ಆದ್ದರಿಂದ ಗೆಳೆಯರೇ, ಮೊಟ್ಟಮೊದಲು ಮೇಲೆ ಉಲ್ಲೇಖಿಸಿದ ನಾಲ್ಕೂ ಅಪರಾಧಗಳನ್ನು ನಾನು ಸ್ವೀಕರಿಸುತ್ತೇನೆ. ಈ ಅಪರಾಧಗಳಲ್ಲದೇ ಇನ್ನೂ ಒಂದು ಅಪರಾಧವಿದೆ ದಯಾಳುಗಳೇ. ಅದು ಇಡೀ ಮಾನವಜಾತಿಗೆ ಅನ್ವಯಿಸುವಂಥದ್ದು. ಮತ್ತದು ಅಪರಾಧಗೈದ ಅಪರಾಧಿಯನ್ನು ಸುಮ್ಮನೆ ಬಿಡುವುದಿಲ್ಲ. ಅಪರಾಧಿಯಾದವ ಯಾರ ಅನುಕಂಪವನ್ನೂ ಬೇಡುವುದಿಲ್ಲ. ಅನುಕಂಪದ ಹಪಹಪಿಯೇ ಇರುವುದಿಲ್ಲ ಅವನಿಗೆ. ಇದಕ್ಕೆ ವ್ಯತಿರಿಕ್ತವಾಗಿ ‘ಅನುಕಂಪ’, ‘ಕರುಣೆ’ಯಂಥ ಜಿಡ್ಡುಲಡ್ಡಾದ ಪೊಳ್ಳುಪದಗಳೆಂದರೆ ಅಪರಾಧಿಗೆ ತಿರಸ್ಕಾರವಿರುತ್ತದೆ. ಆ ಅಪರಾಧಗಳೆಂದರೆ- ತನ್ನ ಷರತ್ತುಗಳ ಮೇಲೆ ಬದುಕುವುದು. ತನ್ನ ಆತ್ಮಗೌರವದಲ್ಲಿ ತಲೆಯೆತ್ತಿ ಬಾಳುವುದು, ಸ್ವಾಭಿಮಾನದಿಂದ ಬಾಳುವುದು ಮತ್ತು ಲೋಕದ ಸಿದ್ಧಮಾದರಿಯ ಮೌಲ್ಯಗಳೊಂದಿಗೆ ರಾಜಿಯಾಗಲು ಅಥವಾ ಯಾವುದೇ ಷರತ್ತನ್ನು ಮನಸ್ಸೊಪ್ಪಿಕೊಳ್ಳದಿದ್ದಾಗ ಯಾವುದಕ್ಕೂ ರಾಜಿ ಮಾಡಿಕೊಳ್ಳದೇ ಇರುವುದು. ಅಂಥ ಅಪರಾಧಿಯನ್ನು ನಟ್ಟನಡುವೆ ನಾಲ್ಕು ದಾರಿ ಕೂಡುವಲ್ಲಿ ನೇಣುಗಂಬಕ್ಕೇರಿಸಬೇಕು ಸ್ನೇಹಿತರೇ”

4. ಸಹಜವಾದ ವಿವರಗಳನ್ನು ದಾರ್ಶನಿಕ ಅರ್ಥದಲ್ಲಿ ದುಡಿಸಿಕೊಳ್ಳುವುದು. ಚಿಕ್ಕಚಿಕ್ಕ ಮನೆ-ಹಾಸ್ಟೆಲುಗಳ ಖೋಲಿಗಳಲ್ಲಿ ಜೀವಿಸುವ ಲೇಖಕಿ ಕೊನೆಗೊಮ್ಮೆ ಇಷ್ಟಪಟ್ಟು ಹಿಡಿದ ಬಾಡಿಗೆ ಮನೆಯನ್ನು ವರ್ಣಿಸುವುದು ಹೀಗೆ:

“ವಿಶಾಲವಾದ ಮನೆ. ವಿಶಾಲವಾದ ಮನೆಯಲ್ಲಿ ಸುಳಿದಾಡುವ ರಾಶಿರಾಶಿ ಗಾಳಿ. ಆ ಮನೆಯಲ್ಲಿ ನಾವು ಆಗಂತುಕರಲ್ಲ. ನಮ್ಮದೇ ಮನೆಯೆಂದು ನುಸುಳುವ ಪೂರ್ತಿ ಬಿಸಿಲನ್ನು ಪೂರ್ತಿ ಬೆಳಕನ್ನು ನಿರುಮ್ಮಳವಾಗಿ ಆಸ್ವಾದಿಸುತ್ತಿದ್ದೆವು. ಪೂರಾ ಮನೆ, ಪೂರಾ ಮಾಳಿಗೆ ಮತ್ತು ಪೂರಾಪೂರಾ ನೀಲಿ ಆಕಾಶ. ಎಲ್ಲವೂ ನಮ್ಮದೇ! ಎದುರು ಚಾಚಿಕೊಂಡ ಹಸಿರು ಸಾಗರ ಮತ್ತು ಗಾಳಿಯಲ್ಲಿ ಮೆಲ್ಲಮೆಲ್ಲನೇ ಕಂಪಿಸುವ ಗಿಡಗಳು. ನಿಧಾನಕ್ಕೆ ಅವುಗಳ ಎತ್ತರ ನಮ್ಮ ಮಾಳಿಗೆಯವರೆಗೆ ಬೆಳೆಯುತ್ತಿತ್ತು. ಜೀವನದಲ್ಲಿ ಮೊದಲ ಬಾರಿ ಇಷ್ಟು ವಿಶಾಲ, ಇಂಥ ನೆಮ್ಮದಿಯ ಮನೆಯಲ್ಲಿದ್ದೆವು. ನಮ್ಮಿಬ್ಬರದೇ ಮನೆ-ಅಪರ್ಣಾ ಮತ್ತು ನನ್ನದು. ದೊಡ್ಡದೊಡ್ಡ ವಿಶಾಲ ಮನೆ ಲಾಹೋರಿನಲ್ಲೂ ಇತ್ತು. ಆದರೆ ಅದು ಅಪ್ಪಾಜಿಯದು. ಅಲ್ಲಿರುವ ಮತ್ತು ಇಲ್ಲದಿರುವ ಎಲ್ಲ ವಸ್ತುವೂ ಅಪ್ಪಾಜಿಯವರ ಇಚ್ಛೆಗನುಗುಣವಾಗಿದ್ದವು. ಈ ಮನೆಯಲ್ಲಿ ಎಲ್ಲವೂ ನಾವು ಸದಾ ಕಾಲ ಬಯಸಿದವೇ ಆಗಿದ್ದವು. ಗಾಳಿ-ಬಿಸಿಲು, ಈ ಜಾಗ, ಸುಂದರ ವಸ್ತುಗಳು, ಸಂಗೀತ, ಪುಸ್ತಕ ಎಲ್ಲವೂ”

ಇದು ಕೇವಲ ಮನೆಯ ವರ್ಣನೆಯಲ್ಲ. ಸೃಜನಶೀಲ ಜೀವವೊಂದು ಸ್ವತಂತ್ರವಾಗಿ ಬದುಕಲು ಬೇಕಾದ ಸಾಮಾಜಿಕ ಆರ್ಥಿಕ ಅವಕಾಶ ಕೂಡ ಎಂಬುದು ಓದುಗರಿಗೆ ಹೊಳೆಯುತ್ತದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಅಜಿತ್ ಕೌರ್, ಕುವೆಂಪು ಕಾದಂಬರಿಗಳಲ್ಲಿ ಬರುವ ಎಲ್ಲ ಮಹಿಳಾ ಪಾತ್ರಗಳ ಚೈತನ್ಯದ ಪ್ರತೀಕದಂತಿದ್ದಾರೆ. ಕುವೆಂಪು ಗೃಹಿಣಿಯನ್ನು ಕುರಿತು ರಚಿಸಿರುವ ಒಂದು ಪದ್ಯದಲ್ಲಿ ‘ಹೊಸಲಾಚೆಗೆ ನೀ ಹೋದರೆ ಮನೆಯ ಬೆಳಕು ಆರಿಹೋಗುತ್ತದೆ’ ಎಂಬರ್ಥದ ಮಾತುಗಳಿವೆ. ಆದರೆ ಅಜಿತ್ ಕೌರ್, ತನ್ನ ಧೀಮಂತ ಬದುಕನ್ನು ಹೊಸಿಲಾಚೆ ಕಾಲಿಟ್ಟೇ ಕಟ್ಟಿಕೊಂಡವರು. ಪಂಜಾಬಿನ ಲೇಖಕಿಯರ ಆತ್ಮಕಥನಗಳಲ್ಲಿ ಅಲ್ಲಿನ ಪುರುಷಪ್ರಧಾನ ಸಮಾಜದ ತಣ್ಣನೆಯ ಕ್ರೌರ್ಯದ ಚಿತ್ರಗಳು ಸಾಮಾನ್ಯ.

ಅಮೃತಾ ಪ್ರೀತಂ ತಮ್ಮ ಆತ್ಮಕಥೆಗೆ ‘ರೆವಿನ್ಯೂ ಸ್ಟಾಂಪ್’ ಹೆಸರಿಡಲು ಕಾರಣ, ಅವರ ಜೀವನದ ಬಗ್ಗೆ ಕುಶವಂತ್‌ಸಿಂಗರು ಕುಹಕದಿಂದ ಆಡಿದ ಒಂದು ಮಾತು. ಬಹುಶಃ ಯೋಧ ಚಟುವಟಿಕೆ ಪ್ರಧಾನವಾಗಿರುವ ಸಮಾಜಗಳಲ್ಲಿ ಹೆಣ್ಣನ್ನು ಉಪಭೋಗದ ಸರಕಾಗಿ ನೋಡುವ ಗುಣ ದಟ್ಟವಾಗಿರುತ್ತದೆ. ಅದುವೇ ಇಂಥ ಸ್ತ್ರೀಸ್ವಾತಂತ್ರ್ಯವಾದಿಗಳನ್ನು ಕೂಡ ಪತ್ರಿಯಾಗಿ ಹುಟ್ಟಿಸುತ್ತದೆ. ಅಮೃತಾ ಮತ್ತು ಅಜಿತ್ ಇಬ್ಬರೂ, ಪಂಜಾಬಿ ಸಮಾಜದಲ್ಲಿದ್ದ ವಿವಾಹ-ಕುಟುಂಬ-ಪತಿನಿಷ್ಠೆ ಎಂಬ ಉಸಿರುಗಟ್ಟುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದವರು. ಲಗ್ನವಾದ ಗಂಡನನ್ನು ಬಿಟ್ಟು ತಮ್ಮ ಜೀವಕ್ಕೆ ಮಿಡಿವ ಸಂಗಾತಿಗಳನ್ನು ಅರಸುತ್ತ ಹೋದವರು. ಆ ಸಂಗಾತಿಗಳ ಜತೆ ಮಾಡಿದ ಬಾಳುವೆಯನ್ನು ದಾಖಲಿಸಿದವರು. ಒಂಟಿ ಮಹಿಳೆಯರಾಗಿದ್ದು ತಮ್ಮ ಮಕ್ಕಳನ್ನು ಬೆಳೆಸಿದವರು.

ಈ ಆತ್ಮಕಥೆಯನ್ನು ದೆಹಲಿ ಕನ್ನಡತಿ ರೇಣುಕಾ ನಿಡಗುಂದಿ ಕನ್ನಡಿಸಿದ್ದಾರೆ. ಈ ಹಿಂದೆ ಅವರು ಅಮೃತಾ ಪ್ರೀತಮರ ನೆನಪುಗಳನ್ನು ಕನ್ನಡಕ್ಕೆ ಸಮರ್ಥವಾಗಿ ತಂದವರು. ಅವರಿಗೆ ಅಮೃತಾ, ಅಜಿತ್ ಕೌರರಂತಹ ಪಂಜಾಬಿ ಲೇಖಕರ ಕುದಿಯುವ ವ್ಯಕ್ತಿತ್ವವನ್ನು, ಅವರ ಕಾವ್ಯಮಯ ಭಾಷೆ ಮತ್ತು ಸಂವೇದನೆ-ಸೂಕ್ಷ್ಮತೆಯನ್ನು ಹಿಡಿದುಕೊಡುವ ಕುಶಲತೆ ದಕ್ಕಿದೆ. ಈ ಕೃತಿ ಮಹಿಳಾ ಸಂವೇದನೆಯ ಕೃತಿಗಳನ್ನು ಪ್ರಕಟಿಸುವುದಕ್ಕೆ ಖ್ಯಾತವಾಗಿರುವ ಅಹರ್ನಿಶಿ ಪ್ರಕಾಶನದಿಂದ ಬಂದಿರುವುದು ಮತ್ತೂ ಔಚಿತ್ಯದಾಯಕವಾಗಿದೆ. ಪಂಜಾಬಿನ ಅಜಿತ್‌ಕೌರ್, ಧಾರವಾಡದ ರೇಣುಕಾ, ತೀರ್ಥಹಳ್ಳಿಯ ಅಕ್ಷತಾ ಇವರಿಗೆ ಕೃತಜ್ಞತೆಗಳು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...