Homeಪುಸ್ತಕ ವಿಮರ್ಶೆಉಸಿರುಗಟ್ಟಿಸುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದ ವ್ಯಕ್ತಿಯ ಜ್ವಾಲಾಮುಖಿಯಂತಹ ಆತ್ಮಕಥೆ

ಉಸಿರುಗಟ್ಟಿಸುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದ ವ್ಯಕ್ತಿಯ ಜ್ವಾಲಾಮುಖಿಯಂತಹ ಆತ್ಮಕಥೆ

ಇದು ಕೇವಲ ಮನೆಯ ವರ್ಣನೆಯಲ್ಲ. ಸೃಜನಶೀಲ ಜೀವವೊಂದು ಸ್ವತಂತ್ರವಾಗಿ ಬದುಕಲು ಬೇಕಾದ ಸಾಮಾಜಿಕ ಆರ್ಥಿಕ ಅವಕಾಶ ಕೂಡ ಎಂಬುದು ಓದುಗರಿಗೆ ಹೊಳೆಯುತ್ತ್ತದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಅಜಿತ್ ಕೌರ್, ಕುವೆಂಪು ಕಾದಂಬರಿಗಳಲ್ಲಿ ಬರುವ ಎಲ್ಲ ಮಹಿಳಾ ಪಾತ್ರಗಳ ಚೈತನ್ಯದ ಪ್ರತೀಕದಂತಿದ್ದಾರೆ.

- Advertisement -
- Advertisement -

ಈಚೆಗೆ ಪಂಜಾಬಿ ಲೇಖಕಿ ಅಜಿತ್ ಕೌರರ ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’ ಓದಿದೆ. ಆತ್ಮಕಥೆ ನನ್ನ ಪ್ರಿಯ ಪ್ರಕಾರ. ವಿಜಯಾ ಅವರ ‘ಕುದಿ ಎಸರು’ವಿನಲ್ಲಿ ಇರುವಂತೆ ಇಲ್ಲಿ ಕೌಟುಂಬಿಕ ಹಿಂಸೆಯ ದಾರುಣ ಚಿತ್ರಗಳೇನಿಲ್ಲ. ಗೋದಾವರಿ ಪರುಳೇಕರ್ ಅವರಲ್ಲಿರುವಂತೆ ಚಳವಳಿಯ ಭಾಗವಾಗಿ ಎದುರಿಸಿದ ಕಠೋರ ಸವಾಲುಗಳಿಲ್ಲ. ಅಮೃತಾ ಪ್ರೀತಮ್ ಅವರಲ್ಲಿರುವಂತೆ ದೇಶವಿಭಜನೆಯ ಘೋರ ಘಟನೆಗಳಿಲ್ಲ. ಡಚ್ ಲೇಖಕಿ ಓಹರ್ನ್ ಅವರಲ್ಲಿರುವಂತೆ ಲೈಂಗಿಕ ದಾಸ್ಯಕ್ಕೆ ಒಳಗಾಗಿ ಜಪಾನಿ ಸೈನಿಕರ ಬಲಾತ್ಕಾರಕ್ಕೆ ಸಿಲುಕಿದ ಎದೆಸೀಳುವ ಸ್ಮೃತಿಗಳಿಲ್ಲ. ಬದಲಾಗಿ ತನ್ನಿಚ್ಛೆಯಂತೆ ಬದುಕಲು ಬಯಸುವ ಒಬ್ಬ ಮಹಿಳೆ ಪ್ರೇಮದಲ್ಲಿ ವಿಫಲೆಯಾಗಿ, ತನಗೊಲ್ಲದ ಸಂಸಾರವನ್ನು ಒಗೆದು ಹೊರಬಂದು, ಲೇಖಕಿಯಾಗಿ ಪತ್ರಕರ್ತೆಯಾಗಿ ಕಷ್ಟಪಟ್ಟು ಬದುಕನ್ನು ಕಟ್ಟಿಕೊಂಡ ಕೆಲವು ಚಿತ್ರಗಳಿವೆ. ಆದರೆ ಈ ಚಿತ್ರಗಳ ಒಳಗಿಂದ ಹೊಮ್ಮುವ ಧೀಮಂತಿಕೆ ಸಂವೇದನೆಗಳು ಮಾತ್ರ ಝಗಝಗಿಸುವ ಕತ್ತಿಗಳಂತೆ ಹರಿತವಾಗಿವೆ.

ಭಾರತೀಯ ಸಾಂಪ್ರದಾಯಿಕ ಸಮಾಜವು ಮಹಿಳೆಯರ ಬದುಕಿಗೆ ಕೆಲವು ಚೌಕಟ್ಟುಗಳನ್ನು ಒದಗಿಸುತ್ತದೆ. ಬಂಧನ ಮತ್ತು ಅಪಮಾನಸಹಿತ ಸುರಕ್ಷೆಯಿರುವ ಚೌಕಟ್ಟದು. ಆದರೆ ಇದು ಅವರ ಸೃಜನಶೀಲ ಚೈತನ್ಯವನ್ನು ಚೂರುಚೂರು ಮಾಡುತ್ತದೆ. ಆಗ ದಿಟ್ಟೆಯರಾದ ಕೆಲವರು ಈ ಚೌಕಟ್ಟನ್ನು ಮುರಿದು ಹೊರಬರುವರು. ಇದರ ಫಲವಾಗಿ ಅಪಾರ ಕಷ್ಟವನ್ನೂ ಹಕ್ಕಿಯ ಸ್ವಾತಂತ್ರ್ಯವನ್ನೂ ಅನುಭವಿಸುವರು. ವಿಜಯಾ, ಪ್ರತಿಭಾ ನಂದಕುಮಾರ್, ಉಮಾಶ್ರೀ, ಅಮೃತಾಪ್ರೀತಂ, ಕಮಲಾದಾಸ್ ಮುಂತಾದವರ ಆತ್ಮಕಥೆಗಳು ಇದಕ್ಕೆ ನಿದರ್ಶನ. ಈ ಸರಣಿಯಲ್ಲೇ ಬರುವ ಅಜಿತ್ ಕೌರರ ಆತ್ಮಕಥೆ ಹಲವು ಕಾರಣಗಳಿಂದ ವಿಶಿಷ್ಟವಾಗಿದೆ.

1. ಓದುಗರನ್ನು ತಲ್ಲಣಗೊಳಿಸುವಂತೆ ಘಟನೆಗಳನ್ನು ವಿವರಿಸುವ ವಿಶಿಷ್ಟ ಬಗೆ. ಲೇಖಕಿಯ ಮಗಳು ಸುಟ್ಟುಕೊಂಡು ಸಾಯುವ ಇಲ್ಲವೇ ಲೇಖಕಿ ತನ್ನ ಪ್ರಿಯತಮನನ್ನು ಬೆನ್ನಹತ್ತಿಹೋಗುವ ಘಟನೆಗಳು, ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಉದ್ವಿಗ್ನ ಓದುಗರನ್ನು ತನ್ನೊಟ್ಟಿಗೆ ಕರೆದೊಯ್ಯುವ ಕಸುವುಳ್ಳ ಶೈಲಿಯ ನಿರೂಪಣೆಯಿಲ್ಲಿದೆ. ತನ್ನ ಸಮಸ್ತ ಚೈತನ್ಯವನ್ನು ಬಸಿಯುವಂತೆ ಅಜಿತ್ ಬರೆಯುತ್ತಾರೆ.

2. ಬಾಲ್ಯದಿಂದ ಮುಪ್ಪಿನತನಕ ಬದುಕಿನ ವಿವಿಧ ಘಟ್ಟಗಳಲ್ಲಿ ಪಟ್ಟ ಅನುಭವಗಳನ್ನು ಕ್ರಮಬದ್ಧವಾಗಿ ದಾಖಲಿಸುವ ಚಾರಿತ್ರಿಕ ನಿರೂಪಣ ವಿಧಾನವನ್ನು ಬಿಟ್ಟುಕೊಡುವುದು; ಬದಲಿಗೆ ಬಾಳಿನ ಕೆಲವು ಘಟನೆಗಳನ್ನು ಆಯ್ದು ನಿರೂಪಿಸುವ ಹಾದಿಯನ್ನು ಹಿಡಿಯುವುದು. ಇಲ್ಲಿರುವ ಮುಖ್ಯ ಘಟನೆಗಳೆಂದರೆ, ಹದಿಹರೆಯದಲ್ಲಿ ತನ್ನ ಪ್ರಿಯ ಅಧ್ಯಾಪಕನನ್ನು ಪ್ರೇಮಿಸುವ ಕಥೆ, ಮಗಳು ಸುಟ್ಟುಕೊಂಡು ಸಾಯುವುದಕ್ಕೆ ಸಾಕ್ಷಿಯಾಗುವ ಘಟನೆ, ಗಂಡನ ಮನೆಯನ್ನು ಬಿಟ್ಟು ಹೊರನಡೆವ ಘಟನೆ, ಹೊಸ ಪುರುಷನ ಪ್ರೇಮದಲ್ಲಿ ಅನುಭವಿಸುವ ಸುಖದುಃಖಗಳು, ಪತ್ರಕರ್ತೆಯಾಗಿ ಎದುರಿಸುವ ಬಿಕ್ಕಟ್ಟು, ಬಾಡಿಗೆ ಮನೆಯನ್ನು ಪಡೆಯಲು ಮಾಡುವ ಸೆಣಸಾಟ ಇತ್ಯಾದಿ. ಇಂತಹ ಕೆಲವೇ ಪ್ರಸಂಗಗಳ ಮೂಲಕ ಸಾರ್ವಜನಿಕ ಬದುಕಿನಲ್ಲಿರುವ ಹೆಣ್ಣ ಬಾಳಿನ ತಲ್ಲಣಗಳನ್ನು ಅಜಿತ್ ಶಕ್ತವಾಗಿ ಕಾಣಿಸುವರು.

3. ವಿವರಗಳಿಗೆ ಹೋಗದೆ ಧ್ವನಿಪೂರ್ಣವಾದ ಸಂಕೇತ ಪ್ರತಿಮೆಗಳ ಮೂಲಕ ನಿರೂಪಿಸುವ ಪರಿ; ಕಥೆಯ ಭಾರವನ್ನು ಕಳೆದುಕೊಂಡು ಅನುಭವದ ಸೂಕ್ಷ್ಮಸ್ತರಗಳನ್ನು ಮುಟ್ಟಿ ಕಾಣಿಸುವಲ್ಲಿ ಸ್ವತಃ ಕಾವ್ಯವಾಗುವ ಗದ್ಯಭಾಷೆ. ವಿಷಾದಭರಿತವಾದ ಮತ್ತು ಹರಿತವಾದ ವ್ಯಂಗ್ಯ; ನಾಟಕೀಯವಾದ ಈ ವ್ಯಂಗ್ಯದೊಳಗೆ ಸ್ತ್ರೀಸಂವೇದನೆಯ ಮೌಲ್ಯಗಳನ್ನು ಕಾಣಿಸುವ ದಾರ್ಶನಿಕತೆ ಇದೆ. ಉದಾಹರಣೆಗೆ ವಾಣಿಜ್ಯ ವ್ಯವಹಾರದ ಪತ್ರಿಕೆಯ ಸಂಪಾದಕಿಯಾಗಿದ್ದ ಲೇಖಕಿಯನ್ನು, ಆಕೆಗೆ ಸಲ್ಲಬೇಕಾದ ಪ್ರಕಾಶನದ ಖರ್ಚನ್ನು ಹಣವನ್ನು ಪಾವತಿಸದೆ, ಅಧಿಕಾರಶಾಹಿ ಮತ್ತು ರಾಜಕಾರಣಿಗಳು ಸತಾಯಿಸುವ ಪ್ರಕರಣವನ್ನು ಗಮನಿಸಬಹುದು. ‘ದುರ್ಘಟನೆಗಳ ಪರಿಷೆ’ ಎಂಬ ಹೆಸರಿನ ಅಧ್ಯಾಯದಲ್ಲಿ ಇದು ನಿರೂಪಿತಗೊಂಡಿದೆ. ಇದು ಶುರುವಾಗುವುದು ಹೀಗೆ:

“ಗೆಳೆಯರೇ, ನಾನೊಂದು ಸ್ವಾರಸ್ಯಕರ ಘಟನೆಯ ಬಗ್ಗೆ ಹೇಳ್ತೀನಿ. ಮಾಮೂಲಿ ಘಟನೆಯಾದರೂ ವಿಚಲಿತಗೊಳಿಸುವಂಥದ್ದು. ಮುಖ್ಯ ಅಪರಾಧ ‘ಹೆಣ್ಣಾಗಿರುವುದು’. ಎರಡನೆಯ ಅಪರಾಧ ‘ಒಂಟಿಯಾದ ಹೆಣ್ಣು’. ಮೂರನೆಯ ಅಪರಾಧ ‘ಏಕಾಂಗಿ ಮತ್ತು ತನ್ನ ರೊಟ್ಟಿಯನ್ನು ತಾನೇ ಗಳಿಸಬಲ್ಲ ಹೆಣ್ಣು’. ಮಹಾ ಅಪರಾಧ ‘ತನ್ನ ರೊಟ್ಟಿಯನ್ನು ಖುದ್ದು ಗಳಿಸಬಲ್ಲ, ಬುದ್ಧಿವಂತೆ, ಸ್ವಾವಲಂಬಿಯಾದ ಈ ಒಂಟಿ ಹೆಣ್ಣುಮಗಳು, ದೇವತೆಗಳು ವಾಸಿಸುವ ಈ ಭಾರತದಲ್ಲಿರುವುದು. ಆದ್ದರಿಂದ ಗೆಳೆಯರೇ, ಮೊಟ್ಟಮೊದಲು ಮೇಲೆ ಉಲ್ಲೇಖಿಸಿದ ನಾಲ್ಕೂ ಅಪರಾಧಗಳನ್ನು ನಾನು ಸ್ವೀಕರಿಸುತ್ತೇನೆ. ಈ ಅಪರಾಧಗಳಲ್ಲದೇ ಇನ್ನೂ ಒಂದು ಅಪರಾಧವಿದೆ ದಯಾಳುಗಳೇ. ಅದು ಇಡೀ ಮಾನವಜಾತಿಗೆ ಅನ್ವಯಿಸುವಂಥದ್ದು. ಮತ್ತದು ಅಪರಾಧಗೈದ ಅಪರಾಧಿಯನ್ನು ಸುಮ್ಮನೆ ಬಿಡುವುದಿಲ್ಲ. ಅಪರಾಧಿಯಾದವ ಯಾರ ಅನುಕಂಪವನ್ನೂ ಬೇಡುವುದಿಲ್ಲ. ಅನುಕಂಪದ ಹಪಹಪಿಯೇ ಇರುವುದಿಲ್ಲ ಅವನಿಗೆ. ಇದಕ್ಕೆ ವ್ಯತಿರಿಕ್ತವಾಗಿ ‘ಅನುಕಂಪ’, ‘ಕರುಣೆ’ಯಂಥ ಜಿಡ್ಡುಲಡ್ಡಾದ ಪೊಳ್ಳುಪದಗಳೆಂದರೆ ಅಪರಾಧಿಗೆ ತಿರಸ್ಕಾರವಿರುತ್ತದೆ. ಆ ಅಪರಾಧಗಳೆಂದರೆ- ತನ್ನ ಷರತ್ತುಗಳ ಮೇಲೆ ಬದುಕುವುದು. ತನ್ನ ಆತ್ಮಗೌರವದಲ್ಲಿ ತಲೆಯೆತ್ತಿ ಬಾಳುವುದು, ಸ್ವಾಭಿಮಾನದಿಂದ ಬಾಳುವುದು ಮತ್ತು ಲೋಕದ ಸಿದ್ಧಮಾದರಿಯ ಮೌಲ್ಯಗಳೊಂದಿಗೆ ರಾಜಿಯಾಗಲು ಅಥವಾ ಯಾವುದೇ ಷರತ್ತನ್ನು ಮನಸ್ಸೊಪ್ಪಿಕೊಳ್ಳದಿದ್ದಾಗ ಯಾವುದಕ್ಕೂ ರಾಜಿ ಮಾಡಿಕೊಳ್ಳದೇ ಇರುವುದು. ಅಂಥ ಅಪರಾಧಿಯನ್ನು ನಟ್ಟನಡುವೆ ನಾಲ್ಕು ದಾರಿ ಕೂಡುವಲ್ಲಿ ನೇಣುಗಂಬಕ್ಕೇರಿಸಬೇಕು ಸ್ನೇಹಿತರೇ”

4. ಸಹಜವಾದ ವಿವರಗಳನ್ನು ದಾರ್ಶನಿಕ ಅರ್ಥದಲ್ಲಿ ದುಡಿಸಿಕೊಳ್ಳುವುದು. ಚಿಕ್ಕಚಿಕ್ಕ ಮನೆ-ಹಾಸ್ಟೆಲುಗಳ ಖೋಲಿಗಳಲ್ಲಿ ಜೀವಿಸುವ ಲೇಖಕಿ ಕೊನೆಗೊಮ್ಮೆ ಇಷ್ಟಪಟ್ಟು ಹಿಡಿದ ಬಾಡಿಗೆ ಮನೆಯನ್ನು ವರ್ಣಿಸುವುದು ಹೀಗೆ:

“ವಿಶಾಲವಾದ ಮನೆ. ವಿಶಾಲವಾದ ಮನೆಯಲ್ಲಿ ಸುಳಿದಾಡುವ ರಾಶಿರಾಶಿ ಗಾಳಿ. ಆ ಮನೆಯಲ್ಲಿ ನಾವು ಆಗಂತುಕರಲ್ಲ. ನಮ್ಮದೇ ಮನೆಯೆಂದು ನುಸುಳುವ ಪೂರ್ತಿ ಬಿಸಿಲನ್ನು ಪೂರ್ತಿ ಬೆಳಕನ್ನು ನಿರುಮ್ಮಳವಾಗಿ ಆಸ್ವಾದಿಸುತ್ತಿದ್ದೆವು. ಪೂರಾ ಮನೆ, ಪೂರಾ ಮಾಳಿಗೆ ಮತ್ತು ಪೂರಾಪೂರಾ ನೀಲಿ ಆಕಾಶ. ಎಲ್ಲವೂ ನಮ್ಮದೇ! ಎದುರು ಚಾಚಿಕೊಂಡ ಹಸಿರು ಸಾಗರ ಮತ್ತು ಗಾಳಿಯಲ್ಲಿ ಮೆಲ್ಲಮೆಲ್ಲನೇ ಕಂಪಿಸುವ ಗಿಡಗಳು. ನಿಧಾನಕ್ಕೆ ಅವುಗಳ ಎತ್ತರ ನಮ್ಮ ಮಾಳಿಗೆಯವರೆಗೆ ಬೆಳೆಯುತ್ತಿತ್ತು. ಜೀವನದಲ್ಲಿ ಮೊದಲ ಬಾರಿ ಇಷ್ಟು ವಿಶಾಲ, ಇಂಥ ನೆಮ್ಮದಿಯ ಮನೆಯಲ್ಲಿದ್ದೆವು. ನಮ್ಮಿಬ್ಬರದೇ ಮನೆ-ಅಪರ್ಣಾ ಮತ್ತು ನನ್ನದು. ದೊಡ್ಡದೊಡ್ಡ ವಿಶಾಲ ಮನೆ ಲಾಹೋರಿನಲ್ಲೂ ಇತ್ತು. ಆದರೆ ಅದು ಅಪ್ಪಾಜಿಯದು. ಅಲ್ಲಿರುವ ಮತ್ತು ಇಲ್ಲದಿರುವ ಎಲ್ಲ ವಸ್ತುವೂ ಅಪ್ಪಾಜಿಯವರ ಇಚ್ಛೆಗನುಗುಣವಾಗಿದ್ದವು. ಈ ಮನೆಯಲ್ಲಿ ಎಲ್ಲವೂ ನಾವು ಸದಾ ಕಾಲ ಬಯಸಿದವೇ ಆಗಿದ್ದವು. ಗಾಳಿ-ಬಿಸಿಲು, ಈ ಜಾಗ, ಸುಂದರ ವಸ್ತುಗಳು, ಸಂಗೀತ, ಪುಸ್ತಕ ಎಲ್ಲವೂ”

ಇದು ಕೇವಲ ಮನೆಯ ವರ್ಣನೆಯಲ್ಲ. ಸೃಜನಶೀಲ ಜೀವವೊಂದು ಸ್ವತಂತ್ರವಾಗಿ ಬದುಕಲು ಬೇಕಾದ ಸಾಮಾಜಿಕ ಆರ್ಥಿಕ ಅವಕಾಶ ಕೂಡ ಎಂಬುದು ಓದುಗರಿಗೆ ಹೊಳೆಯುತ್ತದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಅಜಿತ್ ಕೌರ್, ಕುವೆಂಪು ಕಾದಂಬರಿಗಳಲ್ಲಿ ಬರುವ ಎಲ್ಲ ಮಹಿಳಾ ಪಾತ್ರಗಳ ಚೈತನ್ಯದ ಪ್ರತೀಕದಂತಿದ್ದಾರೆ. ಕುವೆಂಪು ಗೃಹಿಣಿಯನ್ನು ಕುರಿತು ರಚಿಸಿರುವ ಒಂದು ಪದ್ಯದಲ್ಲಿ ‘ಹೊಸಲಾಚೆಗೆ ನೀ ಹೋದರೆ ಮನೆಯ ಬೆಳಕು ಆರಿಹೋಗುತ್ತದೆ’ ಎಂಬರ್ಥದ ಮಾತುಗಳಿವೆ. ಆದರೆ ಅಜಿತ್ ಕೌರ್, ತನ್ನ ಧೀಮಂತ ಬದುಕನ್ನು ಹೊಸಿಲಾಚೆ ಕಾಲಿಟ್ಟೇ ಕಟ್ಟಿಕೊಂಡವರು. ಪಂಜಾಬಿನ ಲೇಖಕಿಯರ ಆತ್ಮಕಥನಗಳಲ್ಲಿ ಅಲ್ಲಿನ ಪುರುಷಪ್ರಧಾನ ಸಮಾಜದ ತಣ್ಣನೆಯ ಕ್ರೌರ್ಯದ ಚಿತ್ರಗಳು ಸಾಮಾನ್ಯ.

ಅಮೃತಾ ಪ್ರೀತಂ ತಮ್ಮ ಆತ್ಮಕಥೆಗೆ ‘ರೆವಿನ್ಯೂ ಸ್ಟಾಂಪ್’ ಹೆಸರಿಡಲು ಕಾರಣ, ಅವರ ಜೀವನದ ಬಗ್ಗೆ ಕುಶವಂತ್‌ಸಿಂಗರು ಕುಹಕದಿಂದ ಆಡಿದ ಒಂದು ಮಾತು. ಬಹುಶಃ ಯೋಧ ಚಟುವಟಿಕೆ ಪ್ರಧಾನವಾಗಿರುವ ಸಮಾಜಗಳಲ್ಲಿ ಹೆಣ್ಣನ್ನು ಉಪಭೋಗದ ಸರಕಾಗಿ ನೋಡುವ ಗುಣ ದಟ್ಟವಾಗಿರುತ್ತದೆ. ಅದುವೇ ಇಂಥ ಸ್ತ್ರೀಸ್ವಾತಂತ್ರ್ಯವಾದಿಗಳನ್ನು ಕೂಡ ಪತ್ರಿಯಾಗಿ ಹುಟ್ಟಿಸುತ್ತದೆ. ಅಮೃತಾ ಮತ್ತು ಅಜಿತ್ ಇಬ್ಬರೂ, ಪಂಜಾಬಿ ಸಮಾಜದಲ್ಲಿದ್ದ ವಿವಾಹ-ಕುಟುಂಬ-ಪತಿನಿಷ್ಠೆ ಎಂಬ ಉಸಿರುಗಟ್ಟುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದವರು. ಲಗ್ನವಾದ ಗಂಡನನ್ನು ಬಿಟ್ಟು ತಮ್ಮ ಜೀವಕ್ಕೆ ಮಿಡಿವ ಸಂಗಾತಿಗಳನ್ನು ಅರಸುತ್ತ ಹೋದವರು. ಆ ಸಂಗಾತಿಗಳ ಜತೆ ಮಾಡಿದ ಬಾಳುವೆಯನ್ನು ದಾಖಲಿಸಿದವರು. ಒಂಟಿ ಮಹಿಳೆಯರಾಗಿದ್ದು ತಮ್ಮ ಮಕ್ಕಳನ್ನು ಬೆಳೆಸಿದವರು.

ಈ ಆತ್ಮಕಥೆಯನ್ನು ದೆಹಲಿ ಕನ್ನಡತಿ ರೇಣುಕಾ ನಿಡಗುಂದಿ ಕನ್ನಡಿಸಿದ್ದಾರೆ. ಈ ಹಿಂದೆ ಅವರು ಅಮೃತಾ ಪ್ರೀತಮರ ನೆನಪುಗಳನ್ನು ಕನ್ನಡಕ್ಕೆ ಸಮರ್ಥವಾಗಿ ತಂದವರು. ಅವರಿಗೆ ಅಮೃತಾ, ಅಜಿತ್ ಕೌರರಂತಹ ಪಂಜಾಬಿ ಲೇಖಕರ ಕುದಿಯುವ ವ್ಯಕ್ತಿತ್ವವನ್ನು, ಅವರ ಕಾವ್ಯಮಯ ಭಾಷೆ ಮತ್ತು ಸಂವೇದನೆ-ಸೂಕ್ಷ್ಮತೆಯನ್ನು ಹಿಡಿದುಕೊಡುವ ಕುಶಲತೆ ದಕ್ಕಿದೆ. ಈ ಕೃತಿ ಮಹಿಳಾ ಸಂವೇದನೆಯ ಕೃತಿಗಳನ್ನು ಪ್ರಕಟಿಸುವುದಕ್ಕೆ ಖ್ಯಾತವಾಗಿರುವ ಅಹರ್ನಿಶಿ ಪ್ರಕಾಶನದಿಂದ ಬಂದಿರುವುದು ಮತ್ತೂ ಔಚಿತ್ಯದಾಯಕವಾಗಿದೆ. ಪಂಜಾಬಿನ ಅಜಿತ್‌ಕೌರ್, ಧಾರವಾಡದ ರೇಣುಕಾ, ತೀರ್ಥಹಳ್ಳಿಯ ಅಕ್ಷತಾ ಇವರಿಗೆ ಕೃತಜ್ಞತೆಗಳು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...