ಭಾನುವಾರ ನಡೆದ ಪಂಜಾಬ್ನ ಸಂಗ್ರೂರ್ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತಎಣಿಕೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಹೀನಾಯ ಸೋಲನುಭವಿಸಿದ್ದು, ಶಿರೋಮಣಿ ಅಕಾಲಿದಳ (ಅಮೃತಸರ) ಅಭ್ಯರ್ಥಿ ಸಿಮ್ರಂಜಿತ್ ಸಿಂಗ್ ಮಾನ್ ಗೆಲುವು ಸಾಧಿಸಿದ್ದಾರೆ.
ಸಿಮ್ರಂಜಿತ್ ಸಿಂಗ್ ಮಾನ್, ಕಳೆದ ಬಾರಿ ಮುಖ್ಯಮಂತ್ರಿ ಭಗವಂತ್ ಮಾನ್ ಹೊಂದಿದ್ದ ಲೋಕಸಭೆ ಕ್ಷೇತ್ರದಲ್ಲಿಯೇ ಆಡಳಿತ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. ಎಎಪಿ ಪ್ರತಿಸ್ಪರ್ಧಿ ಗುರ್ಮೈಲ್ ಸಿಂಗ್ ಅವರನ್ನು ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ 5,800 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸಿಮ್ರಂಜಿತ್ ಸಿಂಗ್ ಮಾನ್ 77 ವರ್ಷ ವಯಸ್ಸಿನ ಮಾಜಿ ಸಂಸದರು ಮತ್ತು ಶಿರೋಮಣಿ ಅಕಾಲಿದಳದ (ಅಮೃತಸರ) ಅಧ್ಯಕ್ಷರಾಗಿದ್ದಾರೆ. ಇವರು 1999ರಲ್ಲಿ ಇದೇ ಕ್ಷೇತ್ರದಿಂದ ಕೊನೆಯ ಬಾರಿಗೆ ಆಯ್ಕೆಯಾಗಿದ್ದರು. ಈ ಬಣ ಶಿರೋಮಣಿ ಅಕಾಲಿದಳಕ್ಕೆ ಸಂಬಂಧಿಸಿಲ್ಲ.
ಇದನ್ನೂ ಓದಿ: ಶಿವಸೇನೆಯ 15 ಬಂಡಾಯ ಶಾಸಕರಿಗೆ ವೈ-ಪ್ಲಸ್ ಭದ್ರತೆ ನೀಡಿದ ಕೇಂದ್ರ ಸರ್ಕಾರ
ಕಳೆದ ತಿಂಗಳು ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಬೆಂಬಲವೂ ಸಿಮ್ರಂಜಿತ್ ಸಿಂಗ್ ಮಾನ್ಗೆ ಇತ್ತು ಎಂದು ವರದಿಯಾಗಿದೆ. ಹೀಗಾಗಿ ತಮ್ಮ ಗೆಲುವವನ್ನು ಸಂಗ್ರೂರಿನ ಜನರಿಗೆ ಮತ್ತು ದಿವಂಗತ ನಟ, ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಮತ್ತು ಸಿಧು ಮೂಸೆವಾಲಾ ಅವರಿಗೆ ಅರ್ಪಿಸಿದ್ದಾರೆ.
“ಈ ಗೆಲುವು ಭಾರತದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕರು ‘ಸಿಮ್ರಂಜಿತ್ ಸಿಂಗ್ ಮಾನ್ ಏನು ಮಾಡುತ್ತಾರೆ’ ಎಂದು ಗೇಲಿ ಮಾಡುತ್ತಿದ್ದರು. ಅವರು ತಪ್ಪು ಎಂದು ಇಂದು ಸಾಬೀತಾಗಿದೆ” ಸಿಮ್ರಂಜಿತ್ ಮಾನ್ ಹೇಳಿದ್ದಾರೆ.
ಈ ಬಾರಿಯ ಉಪ ಚುನಾವಣೆಯಲ್ಲಿ ಅತೀ ಕಡಿಮೆ ಮತದಾನವಾಗಿದ್ದು, ಇದು ಆಮ್ ಆದ್ಮಿ ಪಾರ್ಟಿ ಸೋಲಿಗೆ ಕಾರಣ ಎಂದು ಎಎಪಿ ಆರೋಪಿಸಿದೆ.
ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ನಂತರ ಭಗವಂತ್ ಮಾನ್ ಅವರು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಉಪಚುನಾವಣೆ ನಡೆದಿತ್ತು. ಭಗವಂತ್ ಮಾನ್ ಅವರು 2014 ಮತ್ತು 2019 ರ ಚುನಾವಣೆಯಲ್ಲಿ ಸಂಗ್ರೂರ್ ಸ್ಥಾನವನ್ನು ಗೆದ್ದಿದ್ದರು. ಈ ಬಾರಿ ಜೂನ್ 23 ರಂದು ನಡೆದ ಉಪ ಚುನಾವಣೆಯಲ್ಲಿ 16 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಎಎಪಿ ಪಕ್ಷದ ಸಂಗ್ರೂರ್ ಜಿಲ್ಲಾ ಉಸ್ತುವಾರಿ ಗುರ್ಮೈಲ್ ಸಿಂಗ್ (38) ಅವರನ್ನು ಕಣಕ್ಕಿಳಿಸಿತು, ಆದರೆ ಕಾಂಗ್ರೆಸ್ ಮಾಜಿ ಶಾಸಕ ದಲ್ವಿರ್ ಸಿಂಗ್ ಗೋಲ್ಡಿ ಅವರನ್ನು ಆಯ್ಕೆ ಮಾಡಿತ್ತು. ಈ ತಿಂಗಳ ಆರಂಭದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಮಾಜಿ ಬರ್ನಾಲಾ ಶಾಸಕ ಕೇವಲ್ ಧಿಲ್ಲೋನ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.
ಇದನ್ನೂ ಓದಿ: ‘ಎಷ್ಟು ದಿನ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಿ?’: ಬಂಡಾಯಗಾರರಿಗೆ ಸಂಜಯ್ ರಾವತ್ ಪ್ರಶ್ನೆ


