ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ಸಂಭಾಲ್ ಹಿಂಸಾಚಾರದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರನ್ನು ಮಂಗಳವಾರ (ಡಿ.10) ದೆಹಲಿಯಲ್ಲಿ ಭೇಟಿಯಾದರು.
ಸೋನಿಯಾ ಗಾಂಧಿಯ ನಿವಾಸದಲ್ಲಿ ಮೃತರ ಕುಟುಂಬಸ್ಥರನ್ನು ಭೇಟಿಯಾದ ಗಾಂಧಿ ಸಹೋದರರು, ಹಿಂಸಾಚಾರ ಮತ್ತು ಅದರ ಬಳಿಕದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು.
ಡಿ.4ರಂದು ಸಂಭಾಲ್ಗೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ರಾಹುಲ್ ಗಾಂಧಿ ಹೊರಟ್ಟಿದ್ದರು. ಆದರೆ, ಅವರನ್ನು ದೆಹಲಿ-ಉತ್ತರ ಪ್ರದೇಶ ಗಡಿ ಘಾಝೀಪುರದಲ್ಲಿ ಸರ್ಕಾರ ತಡೆದಿತ್ತು.
ಪೊಲೀಸರು ತಡೆದಾಗ ರಾಹುಲ್ ಗಾಂಧಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಪಕ್ಷ ನಾಯಕನಾಗಿ ಸಂಭಾಲ್ಗೆ ಹೋಗುವುದು ನನ್ನ ಹಕ್ಕು ಎಂದಿದ್ದರು. ನಾನು ಪೊಲೀಸರು ಜೊತೆ ಸಹಕರಿಸಲು ಸಿದ್ದ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಒಬ್ಬನೇ ಹೋಗುತ್ತೇನೆ. ಪೊಲೀಸರ ಜೊತೆ ಹೋಗುತ್ತೇನೆ ಎಂದು ಹೇಳಿದ್ದರು.
“ಸಂಭಾಲ್ ನಾನು ಹೋಗದಂತೆ ತಡೆಯುವುದು ಸಂವಿಧಾನ ನೀಡಿರುವ ಹಕ್ಕಿಗೆ ವಿರುದ್ದವಾಗಿದೆ. ಇದು ಹೊಸ ಭಾರತ..ಈ ಭಾರತ ಸಂವಿಧಾನವನ್ನು ಕೊನೆಗೊಳಿಸಲಿದೆ. ಈ ಭಾರತ ಅಂಬೇಡ್ಕರ್ ಅವರ ಸಂವಿಧಾವನ್ನು ಕೊನೆಗೊಳಿಸಲಿದೆ. ಇದರ ವಿರುದ್ದ ನಾವು ಹೋರಾಟ ಮುಂದುವರೆಸುತ್ತೇವೆ” ಎಂದಿದ್ದರು.
ಮೊಘಲ್ ಕಾಲದ ಪುರಾತನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ನ್ಯಾಯಾಲು ಆದೇಶಿಸಿದ ಬಳಿಕ, ನವೆಂಬರ್ 19ರಿಂದ ಉತ್ತರ ಪ್ರದೇಶದ ಸಂಭಾಲ್ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನ. 24ರಂದು ಅಧಿಕಾರಿಗಳು ಎರಡನೇ ಸಮೀಕ್ಷೆಗೆ ಆಗಮಿಸಿದಾಗ ಆಕ್ರೋಶಗೊಂಡ ಜನರು ಪ್ರತಿಭಟನೆ ನಡೆಸಿದ್ದದರು. ಅದು ಹಿಂಸಾಚಾರಕ್ಕೆ ತಿರುಗಿ ಭದ್ರತಾ ಪಡೆಗಳು ಗುಂಡು ಹಾರಿಸಿತ್ತು. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಪೊಲೀಸರ ಗುಂಡಿಗೆ ಇವರು ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಸಿರಿಯಾ ಬಳಿಕ ಕೊರಿಯಾದಲ್ಲಿ ಅರಾಜಕತೆ : ಅಧ್ಯಕ್ಷರ ವಿರುದ್ಧ ಜನಾಕ್ರೋಶ ; ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಸಚಿವ!


