ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಭಾರಿ ಮಳೆಯಿಂದಾಗಿ ರತ್ನಾಗಿರಿ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದಲ್ಲಿ ಸುಮಾರು 6,000 ಪ್ರಯಾಣಿಕರು ರೈಲುಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ರೈಲು ಹಳಿಗಳ ಮೇಲೆ ಗುಡ್ಡಕುಸಿತ ಸೇರಿದಂತೆ ವಿವಿಧ ರೀತಿಯಲ್ಲಿ ರೈಲು ಪ್ರಯಾಣಕ್ಕೆ ತೊಡಕುಂಟಾಗಿದ್ದು, ಕೊಂಕಣ ರೈಲು ಮಾರ್ಗದಲ್ಲಿ ಒಂಬತ್ತು ರೈಲುಗಳನ್ನು ವಿವಿಧ ಸುರಕ್ಷಿತ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ. ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದೆ.
ಈ ರೈಲುಗಳಲ್ಲಿರುವ ಪ್ರಯಾಣಿಕರು ಸಹ ಸುರಕ್ಷಿತರಾಗಿದ್ದಾರೆ. ಅವರೆಲ್ಲರಿಗೂ ಆಹಾರ ಮತ್ತು ನೀರು ನೀಡಲಾಗುತ್ತಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ರತ್ನಾಗಿರಿಯ ಚಿಪ್ಲುನ್ ಮತ್ತು ಕಾಮಥೆ ನಿಲ್ದಾಣಗಳ ನಡುವಿನ ನದಿ ಸೇತುವೆಯಲ್ಲಿ ನೀರಿನ ಮಟ್ಟವು ಅಪಾಯದ ಗುರುತುಗಿಂತ ಹೆಚ್ಚಾಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಈ ವಿಭಾಗದಲ್ಲಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಂಕಣ ರೈಲ್ವೆ ಮಾರ್ಗದ ವಿವಿಧ ನಿಲ್ದಾಣಗಳಲ್ಲಿ 5,500 ದಿಂದ 6,000 ಪ್ರಯಾಣಿಕರು ರೈಲುಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿಪ್ಲುನ್ನಲ್ಲಿನ ಪ್ರವಾಹ ಪರಿಸ್ಥಿತಿಯಿಂದಾಗಿ, ಇದುವರೆಗೆ ಒಂಬತ್ತು ರೈಲುಗಳನ್ನು ಮಾರ್ಗ ಮಧ್ಯೆಯೇ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ ಎಂದು ಕೊಂಕಣ ರೈಲ್ವೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಭಾರಿ ಮಳೆ, ಸಿಡಿಲಿಗೆ ಮಕ್ಕಳು , ಮಹಿಳೆಯರು ಸೇರಿ 40 ಮಂದಿ ಬಲಿ
ದಾದರ್-ಸಾವಂತ್ವಾಡಿ ವಿಶೇಷ ರೈಲು ಚಿಪ್ಲುನ್ ನಿಲ್ದಾಣದಲ್ಲಿ ಮತ್ತು ಸಿಎಸ್ಎಂಟಿ-ಮಡ್ಗಾಂವ್ ಜನತಾಬ್ಡಿ ವಿಶೇಷ ರೈಲನ್ನು ಖೇಡ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಈ ರೈಲುಗಳಲ್ಲಿ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಕೊಂಕಣ ರೈಲ್ವೆ ವಕ್ತಾರ ಗಿರೀಶ್ ಕರಂಡಿಕರ್ ಹೇಳಿದ್ದಾರೆ.
ಕೆಲವು ಸವಾಲುಗಳ ಹೊರತಾಗಿಯೂ, ರೈಲುಗಳಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಆಹಾರ ಮತ್ತು ನೀರನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು. ರೈಲುಗಳಲ್ಲಿ ಸಿಕ್ಕಿಬಿದ್ದ ಎಲ್ಲ ಪ್ರಯಾಣಿಕರಿಗೆ ಚಹಾ, ತಿಂಡಿ ಮತ್ತು ನೀರು ಒದಗಿಸಲು ನಾವು ವ್ಯವಸ್ಥೆ ಮಾಡಿದ್ದೇವೆ ಎಂದು ಕರಂಡಿಕರ್ ಹೇಳಿದರು.
ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಈ ಮೂರು ರಾಜ್ಯಗಳಲ್ಲಿ ಹರಡಿರುವ ಈ ಮಾರ್ಗವು ಸವಾಲಿನ ರೈಲು ಮಾರ್ಗವಾಗಿದೆ. ಏಕೆಂದರೆ ಇದು ಅನೇಕ ನದಿಗಳು, ಕಮರಿಗಳು ಮತ್ತು ಬೆಟ್ಟ-ಗುಡ್ಡಗಳ ನಡುವೆ ಹಾದುಹೋಗಿದೆ. ಕೊಂಕಣ ರೈಲ್ವೆ 756 ಕಿ.ಮೀ ಉದ್ದದ ಟ್ರ್ಯಾಕ್ ಹೊಂದಿದೆ.
ಇದನ್ನೂ ಓದಿ: ಮುಂಬೈ ಭಾರಿ ಮಳೆ: ಭೂಕುಸಿತದಿಂದ 23 ಸಾವು