ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಮತ್ತು ಸಚಿನ್ ಪೈಲಟ್ ಬಣದ ಮೇಲೆ ಕ್ರಮ ಕೈಗೊಳ್ಳದಂತೆ ರಾಜಸ್ಥಾನ ಹೈಕೋರ್ಟ್ ನೀಡಿದ ತೀರ್ಪಿನಿಂದಾಗಿ ಕ್ರುದ್ಧಗೊಂಡಿರುವ ಗೆಹ್ಲೋಟ್ ಬಣದ ನೂರಕ್ಕು ಹೆಚ್ಚು ಶಾಸಕರು ವಿಧಾನಸಭಾ ಅಧಿವೇಶನ ಕರೆಯುವಂತೆ ಒತ್ತಾಯಿಸಿ ರಾಜ್ಯಪಾಲ ಕಾಳ್ರಾಜ್ ಮಿಶ್ರಾ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ತಡರಾತ್ರಿಯವರೆಗೆ ನಾಲ್ಕು ಗಂಟೆಗಳಿಗೂ ಹೆಚ್ಚು ಪ್ರತಿಭಟನೆ ನಡೆಸಿ ವಿಧಾನಸಭಾ ಅಧಿವೇಶನ ಕರೆಯಿರಿ, ನ್ಯಾಯಬೇಕು ಎಂಬ ಘೋಷಣೆಗಳನ್ನು ಕೂಗಿದ್ದಾರೆ. ರಾಜ್ಯಪಾಲರು ಉತ್ತರ ನೀಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹಠ ಹಿಡಿದಿದ್ದರು ಎನ್ನಲಾಗಿದೆ.
102 ಶಾಸಕರ ಬೆಂಬಲದ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿರುವ ಗೆಹ್ಲೋಟ್ “ನಾವು ಅಧಿವೇಶನ ಕರೆಯಲು ಮನವಿ ಮಾಡಿದ್ದೇವೆ. ತಡರಾತ್ರಿಯವರೆಗೂ ಪ್ರತಿಭಟನೆ ನಡೆಸಿದ್ದೇವೆ. ಆದರೆ ಬಿಜೆಪಿ ಹಿಡಿತದಲ್ಲಿರುವ ರಾಜ್ಯಪಾಲರು ಯಾವುದೇ ಸ್ಪಂದನೆ ನೀಡಿಲ್ಲ” ಎಂದು ದೂರಿದ್ದಾರೆ.
ನಾವು ಬಹುಮತ ಸಾಬೀತುಪಡಿಸಲು ಸಿದ್ದರಿದ್ದೇವೆ. ಇದನ್ನು ಬಿಜೆಪಿ ಸ್ವೀಕರಿಸಬೇಕು. ಆದರೆ ಇಲ್ಲ ಎಲ್ಲಾ ಉಲ್ಟಪಲ್ಟ ಆಗಿದೆ ಎಂದು ಗೆಹ್ಲೋಟ್ ಕಿಡಿಕಾರಿದ್ದಾರೆ.
ವಿಚಾರ ಸುಪ್ರೀಂ ಕೋರ್ಟ್ನಲ್ಲಿರುವುದರಿಂದ ಅಧಿವೇಶನ ಕರೆಯುವುದರ ಬಗ್ಗೆ ಕಾನೂನು ಅಭಿಪ್ರಾಯ ಪಡೆಯುತ್ತಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಗೆಹ್ಲೋಟ್ರವರ ಮನವಿಯಲ್ಲಿ ವಿಧಾನಸಭಾ ಅಧಿವೇಶನ ಕರೆಯುವ ಅಜೆಂಡಾವೇ ಇಲ್ಲ. ಅವರು ಹೊಸ ಮನವಿಯನ್ನು ಕಳಿಸಲಿ ಎಂದು ರಾಜ್ಯಪಾಲರು ಪ್ರತಿಕ್ರಿಯಿಸಿದ್ದಾರೆ.
ಇನ್ನೊಂದೆಡೆ ನಾನು ಗೆಹ್ಲೋಟ್ರವರ ಮನವಿಯನ್ನು ತಿರಸ್ಕರಿಸಿಲ್ಲ. ಆ ಬಗ್ಗೆ ಏನು ಮಾಡಬೇಕೆಂದು ನಿರ್ಧರಿಸಿಲ್ಲ. ನಾನು ನಿಯಮಗಳನ್ನು ಅನುಸರಿಸುತ್ತೇನೆ. ಕೋವಿಡ್ ಪರಿಸ್ಥಿತಿಯಲ್ಲಿ ವಿಧಾನಸಭಾ ಅಧಿವೇಶನ ಕರೆಯುವುದು ಸೂಕ್ತವೇ ಎಂದು ಯೋಚಿಸುತ್ತಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ರಘು ಶರ್ಮಾ, ನಾವು ಬೇಕಾದರೆ ಕೋವಿಡ್ ಟೆಸ್ಟ್ ಮಾಡಿಸುತ್ತೇವೆ. ಆದರೆ ರಾಜ್ಯಪಾಲರು ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನಿನ್ನೆ ಫೋನ್ನಲ್ಲಿ ರಾಜ್ಯಪಾಲರೊಂದಿಗೆ ಮಾತನಾಡಿದ್ದ ಗೆಹ್ಲೋಟ್, ನಮಗೆ ಬಹುಮತವಿದೆ. ಸಾಬೀತುಪಡಿಸಲು ಸಿದ್ದರಿದ್ದೇವೆ. ಸಂವಿಧಾನದ ಪ್ರಕಾರ ಅಧಿವೇಶನ ಕರೆಯಿರಿ. ಇಲ್ಲ ಜನರು ರಾಜಭವನವನ್ನು ಮುತ್ತಿಗೆ ಹಾಕಿದರೆ ಅದಕ್ಕೆ ನಾವು ಜವಾಬ್ದಾರರಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: ರಾಜಸ್ಥಾನ ಬಿಕ್ಕಟ್ಟು: ಜನ ದಂಗೆ ಎದ್ದರೆ ನಾವು ಜವಾಬ್ದಾರರಲ್ಲವೆಂದ ಅಶೋಕ್ ಗೆಹ್ಲೋಟ್