ರಾಜಸ್ಥಾನದ ಬಿಕ್ಕಟ್ಟಿನ ನಡುವೆ ಸಚಿನ್ ಪೈಲಟ್ ಬಣದ ಶಾಸಕರ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ವಿಚಾರಣೆಗೆತ್ತಿಕೊಂಡಿದೆ. “ಶಾಸಕರ ಬಗ್ಗೆ ಸ್ಪೀಕರ್ ತೀರ್ಮಾನಿಸದ ಹೊರತು ನ್ಯಾಯಾಲಯವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ” ಎಂದು ಸ್ಪೀಕರ್ ಪರವಾಗಿ ಹಾಜರಾದ ಅಭಿಷೇಕ್ ಸಿಂಗ್ವಿ ವಾದಿಸಿದ್ದಾರೆ.
ರಾಜಸ್ಥಾನ ಸ್ಪೀಕರ್ ಸಿಪಿ ಜೋಶಿ ಅವರನ್ನು ಪ್ರತಿನಿಧಿಸುವ ಅಭಿಷೇಕ್ ಸಿಂಗ್ವಿ, “ಪಕ್ಷದ ಎರಡು ಪ್ರಮುಖ ಸಭೆಗಳಿಗೆ ಗೈರುಹಾಜರಾಗಿರುವುದು ದೊಡ್ಡ ಪ್ರಮಾದವಲ್ಲವೇ, ಅದು ಪಕ್ಷ ತೊರೆದಂತೆ ಅಲ್ಲವೇ” ಎಂದು ಪ್ರಶ್ನಿಸಿದ್ದಾರೆ.
ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದಿರುವುದು ಪಕ್ಷದ ಸದಸ್ಯತ್ವವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ನಿರ್ಣಯಿಸಬಹುದು, ಆದರೆ ಅದನ್ನು ತೀರ್ಮಾನಿಸುವವರು ಸ್ಪೀಕರ್ ಎಂದು ಸಿಂಗ್ವಿ ವಾದಿಸಿದರು.
ಬಂಡಾಯ ಶಾಸಕರ ಪ್ರಕರಣವು ತೀರಾ ಕೆಟ್ಟದಾಗಿದೆ. ಈಗಾಗಲೇ ಸುಪ್ರೀಂ ಕೋರ್ಟ್ ವಜಾಗೊಳಿಸಿರುವ ಹಳೆಯ ವಾದಗಳನ್ನು ಅವರು ಮುಂದಿಡುತ್ತಿದ್ದಾರೆ. ಯಾವುದೇ ಹೊಸ ವಿಚಾರವಿಲ್ಲ ಎಂದು ಸಿಂಗ್ವಿ ವಾದಿಸಿದ್ದಾರೆ.
ಸ್ಪೀಕರ್ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ಸಚಿನ್ ಪೈಲಟ್ ಮತ್ತು ಇತರ ಬಂಡಾಯ ಶಾಸಕರು ಅನರ್ಹತೆ ನೋಟಿಸ್ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ.
ತತ್ವರಹಿತ ಪಕ್ಷಾಂತರವು ರಾಜಕೀಯ ಪಾಪ ಮತ್ತು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗಿದೆ” ಎಂದು ಅಭಿಷೇಕ್ ಸಿಂಗ್ವಿ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಿಂದ ಅಂತರ ಕಾಯ್ದುಕೊಂಡಿರುವ ಸಚಿನ್ ಪೈಲಟ್ ಮತ್ತು ಇತರ ಬಂಡಾಯ ಶಾಸಕರು ಅನರ್ಹತೆ ನೋಟಿಸ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಶುಕ್ರವಾರ ನ್ಯಾಯಾಲಯವು 4 ದಿನಗಳ ಕಾಲ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸೂಚನೆ ನೀಡಿತ್ತು.
ಇದನ್ನೂ ಓದಿ: ರಾಜಸ್ಥಾನದಲ್ಲಿ ‘ಕುದುರೆ ವ್ಯಾಪಾರ’: ವಿಚಾರಣೆಗೆ ಹಾಜರಾಗಲು ಕೇಂದ್ರ ಸಚಿವರಿಗೆ ನೋಟಿಸ್


