Homeಕರ್ನಾಟಕರಮೇಶ್‍ಕುಮಾರ್ ಮತ್ತು ಡಿ.ಕೆ.ಶಿವಕುಮಾರ್: ಇಲ್ಲಿಯವರೆಗೆ ವಿಶ್ವಾಸಮತ ಗೆದ್ದುಕೊಂಡ ಇಬ್ಬರು

ರಮೇಶ್‍ಕುಮಾರ್ ಮತ್ತು ಡಿ.ಕೆ.ಶಿವಕುಮಾರ್: ಇಲ್ಲಿಯವರೆಗೆ ವಿಶ್ವಾಸಮತ ಗೆದ್ದುಕೊಂಡ ಇಬ್ಬರು

- Advertisement -
- Advertisement -

ಸರ್ಕಾರಕ್ಕೆ ಬಹುಮತ ಇಲ್ಲ, ಕುಮಾರಸ್ವಾಮಿ ರಾಜೀನಾಮೆ ಕೊಡಲಿ ಎಂದು ಬಿಜೆಪಿ ಅಬ್ಬರಿಸುತ್ತಿದೆ. ವಿಶ್ವಾಸಮತ ಯಾಚನೆ ಮಾಡಲಿದ್ದೇನೆ, ಸಮಯ ನಿಗದಿ ಮಾಡಿ ಎಂದು ಸ್ವತಃ ಕುಮಾರಸ್ವಾಮಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಮುಂಬೈನ ಹೋಟೆಲ್ಲಿನಲ್ಲಿ ಸೇರಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರು ಬಿಜೆಪಿಯು ತಮ್ಮನ್ನು ತೃಪ್ತರಾಗಿಸೀತೇ ಎಂದು ಕಾದುಕೊಂಡು ಕೂತಿದ್ದಾರೆ. ಯಾರ್ಯಾರಿಗೆ ಏನೇನು, ಎಷ್ಟೆಷ್ಟು ಸಿಕ್ಕಿದೆ ಅಥವಾ ಸಿಗುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಇಬ್ಬರಂತೂ ತಾವೇನು ಪಡೆದುಕೊಳ್ಳಲು ಇಚ್ಛಿಸಿದ್ದರೋ ಅಥವಾ ವಾಸ್ತವದಲ್ಲಿ ಯಾವುದಕ್ಕೆ ಅರ್ಹರೋ ಅದನ್ನು ಪಡೆದುಕೊಂಡಾಗಿದೆ.

ಅವರೇ ರಾಜ್ಯ ರಾಜಕಾರಣದ ಇಬ್ಬರು ಮಹತ್ವಾಕಾಂಕ್ಷಿಗಳಾದ ಸ್ಪೀಕರ್ ರಮೇಶ್ ಕುಮಾರ್ ಮತ್ತು ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್. ಶ್ರೀನಿವಾಸಪುರದ ಕೆ.ಆರ್.ರಮೇಶ್‍ಕುಮಾರ್ ಮುಖ್ಯಮಂತ್ರಿಯಾಗಬಹುದೆಂಬ ಆಸೆಯನ್ನೇನೂ ಇಟ್ಟುಕೊಂಡಿಲ್ಲ. ರಾಜಕೀಯ ಸಂದರ್ಭ ಮತ್ತು ಅವರದ್ದೇ ಮಿತಿಗಳ ಕಾರಣಕ್ಕೆ ಅವರನ್ನು ಸಚಿವರನ್ನಾಗಿಸಲೂ ಅವರ ಪಕ್ಷಗಳು ಸಿದ್ಧರಿಲ್ಲ. ಆದರೆ, ಸುದೀರ್ಘಕಾಲದ ರಾಜಕಾರಣದಲ್ಲಿ ತಾನು ಪಡೆದುಕೊಂಡಿರುವ ಜ್ಞಾನ ಹಾಗೂ ದೇಶದಲ್ಲಿ ಈ ಮಟ್ಟಿಗಿನ ತಿಳುವಳಿಕೆ ಇರುವ ಕೆಲವರಲ್ಲೇ ಒಬ್ಬನಾಗಿರುವ ತನಗೆ ಅದರ ‘ಸದ್ಬಳಕೆ’ಗೆ ಸೂಕ್ತ ಅವಕಾಶ ಸಿಕ್ಕಿಲ್ಲ ಎಂಬ ಕೊರಗಂತೂ ಇದೆ. ಈ ಸಾರಿಯ ಬಿಕ್ಕಟ್ಟು ಆ ಅವಕಾಶವನ್ನು ಅವರಿಗೆ ಒದಗಿಸಿದೆ ಮತ್ತು ಇನ್ನೂ ಕೆಲಕಾಲ ಒದಗಿಸಲಿದೆ.

ಸುಪ್ರೀಂಕೋರ್ಟು ಮತ್ತು ರಾಜ್ಯಪಾಲರಿಗೆ ‘ನನ್ನದು ಸ್ಪೀಕರ್ ಸ್ಥಾನ. ಶಾಸಕಾಂಗದ ಮಟ್ಟಿಗೆ ಇದೂ ಸಾಂವಿಧಾನಿಕ ಹುದ್ದೆಯೇ. ನನ್ನ ಕೆಲಸ ನಾನಷ್ಟೇ ಮಾಡುವುದು ಸಾಧ್ಯ. ನೀವು ನನಗೆ ಡಿಕ್ಟೇಟ್ ಮಾಡಲು ಸಾಧ್ಯವಿಲ್ಲ’ ಎಂದು ಅವರು ಸೂಚ್ಯವಾಗಿ ಹೇಳಿಯಾಗಿದೆ. ಇದು ತಲುಪಬೇಕಾದವರಿಗೆ ತಲುಪಲಿ ಎಂದು ಸಂದರ್ಭ ಇದ್ದಾಗಲೆಲ್ಲಾ ಇಂಗ್ಲಿಷಿನಲ್ಲೂ ಮಾತಾಡುತ್ತಾ, ರಾಜ್ಯಪಾಲರು ಮತ್ತು ಸುಪ್ರೀಂಕೋರ್ಟಿಗೂ ಅವರು ಸಂದೇಶ ರವಾನೆ ಮಾಡಿಯಾಗಿದೆ. ಸ್ಪೀಕರ್ ಸ್ಥಾನದಿಂದ ತಾನೇನು ಮಾಡಬಹುದೆಂಬ ಸಣ್ಣ ಸೂಚನೆಯನ್ನು ಉಮೇಶ್ ಜಾಧವ್ ರಾಜೀನಾಮೆ ಸಂದರ್ಭದಲ್ಲೇ ಅವರು ತೋರಿಸಿದ್ದರು.

ಸಂಜೆ 6 ಗಂಟೆ ಒಳಗೆ ರಾಜೀನಾಮೆ ಕೊಡಬಯಸುವ ಶಾಸಕರು ಸ್ಪೀಕರ್ ಅವರನ್ನು ಕಾಣಿ ಮತ್ತು ಇಂದೇ ರಾಜೀನಾಮೆಗಳನ್ನು ಸ್ಪೀಕರ್ ಇತ್ಯರ್ಥ ಮಾಡಲಿ ಎಂಬ ಸೂಚನೆಯನ್ನು ಸುಪ್ರೀಂಕೋರ್ಟು ನಿನ್ನೆ ಕೊಟ್ಟಿತ್ತು. ತಪ್ಪು ಲೆಕ್ಕಾಚಾರದಿಂದ ಎಚ್‍ಎಎಲ್ ಏರ್ ಪೋರ್ಟಿಗೆ ತಡವಾಗಿ ಬಂದ ತೃಪ್ತರಾಗದ ಶಾಸಕರು, ಸಿಗ್ನಲ್ ಫ್ರೀ ವ್ಯವಸ್ಥೆ ಇದ್ದರೂ 6 ಗಂಟೆ ಒಳಗೆ ವಿಧಾನಸೌಧ ತಲುಪಲಿಲ್ಲ. ಅದರ ರನ್ನಿಂಗ್ ಕಾಮೆಂಟ್ರಿ ನೀಡುತ್ತಿದ್ದ ಟಿವಿ ಆಂಕರ್ ಗಳಲ್ಲಿ ಯಾರಾದರೂ ಒಬ್ಬರು ಉಸಿರುಕಟ್ಟಿ ಸತ್ತು ಹೋಗಬಹುದು ಎನಿಸುವ ರೀತಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದರು.

ಬೇರೆ ಸ್ಪೀಕರ್ ಆಗಿದ್ದರೆ, 6 ಗಂಟೆ 1 ನಿಮಿಷಕ್ಕೆ ತಮ್ಮ ಕಚೇರಿಯಿಂದ ಹೊರಟು, ಎ.ಜಿ.ಕಚೇರಿ ಗೇಟಿನಿಂದ ವಿಧಾನಸೌಧ ಆವರಣ ಬಿಡಲು ವ್ಯವಸ್ಥೆ ಮಾಡಿಕೊಂಡಿರುತ್ತಿದ್ದರು. ಆಗ ಸುಪ್ರೀಂಕೋರ್ಟಿನ ತೀರ್ಪನ್ನು ಪಾಲನೆ ಮಾಡಿದ ಹಾಗೂ ಆಗಿರುತ್ತಿತ್ತು; ತಮ್ಮ ಪಕ್ಷವನ್ನು ಬಚಾವು ಮಾಡಿದ ಹಾಗೂ ಆಗಿರುತ್ತಿತ್ತು. ಆದರೆ ಸ್ಪೀಕರ್ ನೈತಿಕವಾಗಿ ತಪ್ಪು ಮಾಡಿದ ಕಳಂಕ ಹೊರಬೇಕಾಗುತ್ತಿತ್ತು. ರಮೇಶ್‍ಕುಮಾರ್ ರಿಗೆ ಇರುವ ಆತ್ಮವಿಶ್ವಾಸ ಎಷ್ಟೆಂದರೆ, ತಾನು ಈ ಪ್ರಕರಣವನ್ನು ತಾಂತ್ರಿಕವಾಗಿ ಗೆಲ್ಲಬೇಕಿಲ್ಲ; ಕೊಡಬೇಕಾದ ಪೆಟ್ಟು ಕೊಟ್ಟೇ ಗೆಲ್ಲುತ್ತೇನೆ ಎಂದು. ಹಾಗಾಗಿ ರಾಜೀನಾಮೆ ಪತ್ರವನ್ನು ತೆಗೆದುಕೊಂಡು (ಖಾಲಿ ಹಾಳೆ ಹಿಡಿದು ಬಂದ ಶಾಸಕರಿಗೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಪತ್ರ ಹೇಗಿರಬೇಕು ಎಂದು ಅವರೇ ಹೇಳಿರಲಿಕ್ಕೂ ಸಾಕು), ಹೊರಬಂದು ಪತ್ರಿಕಾಗೋಷ್ಠಿ ನಡೆಸಿದರು. ಸುಪ್ರೀಂಕೋರ್ಟು ತನಗೆ ಇಷ್ಟೇ ಸಮಯದಲ್ಲಿ ನಿರ್ಧಾರ ಹೇಳಿ ಎಂದು ತಾಕೀತು ಮಾಡುವಂತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಹೇಳಿದರು.

ಮರುದಿನ ಸುಪ್ರೀಂಕೋರ್ಟು ತಾನೇ ಸಮಯ ಕೇಳಿಕೊಂಡು ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಿತು! ಇಂತಹ ಸಂದರ್ಭ ಬರಬಹುದೆಂದೇ ಸಿದ್ದರಾಮಯ್ಯ ಮತ್ತು ದೇವೇಗೌಡರಿಬ್ಬರೂ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ರಮೇಶ್‍ಕುಮಾರ್‍ರನ್ನು ಸ್ಪೀಕರ್ ಮಾಡಿದ್ದರು. ಮೊನ್ನೆ ಕಾಂಗ್ರೆಸ್ ಸಂಸದೀಯ ಪಕ್ಷದಿಂದ ಸ್ಪೀಕರ್ ಕಚೇರಿಗೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಿಯೋಗವೊಂದು ಹೋಗಿತ್ತು. ಆಗ ಹಳೆಯ ಸ್ನೇಹಿತರಾದ ಸಿದ್ದರಾಮಯ್ಯ ಮತ್ತು ರಮೇಶ್‍ ಕುಮಾರ್ ನಡುವೆ ನಡೆದ ಮಾತುಕತೆ ಹೀಗಿತ್ತು.

ರಮೇಶ್ ಕುಮಾರ್: ‘ಒಟ್ಟಿನಲ್ಲಿ ನಿನಗೆ ಈಗ ಬಹಳ ಖುಷಿಯಲ್ಲವೇನಪ್ಪಾ? You are the happiest person now’,

ಸಿದ್ದರಾಮಯ್ಯ: ‘ನಾನೇಕೆ ಖುಷಿ ಪಡಬೇಕಪ್ಪಾ, ನಮ್ಮ ಕಷ್ಟ ನಮಗೆ ಆಗಿದೆ’.

ರ.ಕು: ‘ನನ್ನನ್ನ ಈ ಕಷ್ಟಕ್ಕೆ ಸಿಕ್ಕಿ ಹಾಕಿಸಿದ್ದಕ್ಕೆ’.

ಸಿ.ರಾ: ‘ಇಂಥದ್ದನ್ನೆಲ್ಲಾ ನಿಭಾಯಿಸಲು ನೀನೇ ಸರಿ. ಆ ಸಾಮಥ್ರ್ಯ, ತಿಳುವಳಿಕೆ ನಿನಗೇ ಇದೆ ಎಂಬ ಕಾರಣಕ್ಕೇ ನಿನ್ನನ್ನು ಸ್ಪೀಕರ್ ಆಗಿ ಮಾಡಿರುವುದು’.

ಇದು ವಾಸ್ತವವೇ. ಹಾಗೆಯೇ ಅದಕ್ಕಿಂತ ಜಾಸ್ತಿ ರಮೇಶ್‍ ಕುಮಾರ್ ರವರಿಗೆ ಅವಕಾಶ ಕೊಡಬಾರದು ಎಂಬುದು ಸಿದ್ದರಾಮಯ್ಯ ಮತ್ತು ದೇವೇಗೌಡರಿಬ್ಬರಿಗೂ ಗೊತ್ತು. ಸಂಸದೀಯ ನಿಯಮಾವಳಿಗಳ ಬಗ್ಗೆ ಅಪಾರ ಜ್ಞಾನವಿರುವ ರಮೇಶ್‍ಕುಮಾರ್, ಈ ಅವಧಿಯಲ್ಲಿ ಎರಡೆರಡು ಸಾರಿ ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ರಿಂದಲೂ ಸಲಹೆ ಪಡೆದುಕೊಂಡಿದ್ದಾರೆ. ಅವೆಲ್ಲದರ ಪರಿಣಾಮವಾಗಿ ಈ ಪ್ರಕರಣವನ್ನು ವಿಶೇಷ ರೀತಿಯಲ್ಲಿ ನಿಭಾಯಿಸಬೇಕೆಂಬ ನಿರ್ಧಾರಕ್ಕೆ ಅವರು ಬಂದಂತಿದೆ.

ಸಂವಿಧಾನದ 10ನೇ ಶೆಡ್ಯೂಲ್‍ನ ಪ್ರಕಾರ ಶಾಸಕರನ್ನು ಅನರ್ಹಗೊಳಿಸುವ ಪರಮಾಧಿಕಾರ ಸ್ಪೀಕರ್ ಗೆ ಇದೆ. ಅದನ್ನು ನಂತರ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಬಹುದಾದರೂ, ಕೋರ್ಟಿಗೆ ಕೆಲವು ಮಿತಿಗಳಿವೆ. ಈಗಾಗಲೇ ಕಿಹೊಟೊ ಹೊಲ್ಲೊಹಾನ್ ವರ್ಸಸ್ ಜಾಚಿಲ್ಹು (Kihoto Hollohan v/s Zachillhu) ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟೇ ಅದನ್ನು ಹೇಳಿದೆ. ಹಾಗಾಗಿ ಇದು ಶಾಸಕಾಂಗ ಮತ್ತು ನ್ಯಾಯಾಂಗದ ಅಧಿಕಾರವ್ಯಾಪ್ತಿಯ ಕುರಿತ ತಿಕ್ಕಾಟವಾಗುವ ಸಂಭವವಿದೆ. ಹಾಗಾದಾಗ, ಸಾಂವಿಧಾನಿಕ ಮೌಲ್ಯಗಳು ಏನಿರಬೇಕು ಎಂಬುದನ್ನು ಸಮರ್ಥವಾಗಿ ಅಭಿವ್ಯಕ್ತಿಸಬಲ್ಲ ಸ್ಪೀಕರ್ ಇಲ್ಲಿರುವುದರಿಂದ ಸುಪ್ರೀಂಕೋರ್ಟು ಸಹಾ ಇಕ್ಕಟ್ಟಿಗೆ ಸಿಲುಕುತ್ತದೆ.

ಇವೆಲ್ಲದರ ಕೇಂದ್ರದಲ್ಲಿರುವ ರಮೇಶ್‍ ಕುಮಾರ್ ರವರಿಗೆ ಇವೆಲ್ಲವೂ ಹೆಚ್ಚೆಚ್ಚು ಅವಕಾಶಗಳನ್ನು ಒದಗಿಸುತ್ತಾ ಹೋಗುತ್ತದೆ ಮತ್ತು ಅವರೂ ಅದನ್ನು ಬಯಸುತ್ತಾರೆ. ಇವೆಲ್ಲದರ ಪರಿಣಾಮವಾಗಿ ಪ್ರಜಾತಂತ್ರಕ್ಕೆ ಒಳಿತಾಗುವುದಾದರೆ ಮತ್ತು ಅನೈತಿಕ ಪಕ್ಷಾಂತರವನ್ನು ತಡೆಯುವಲ್ಲಿ ಮೈಲುಗಲ್ಲನ್ನು ನಿರ್ಮಿಸುವುದಾದರೆ ಅದಕ್ಕಿಂದ ಒಳ್ಳೆಯದು ಇನ್ನೊಂದಿಲ್ಲ.

ಇದನ್ನೂ ಓದಿ: ಮುಂಬೈಗೆ ಹೋಗಿ ತನ್ನ ಪರವಾದ ವಿಶ್ವಾಸಮತ ಗೆದ್ದುಕೊಂಡ ಡಿ.ಕೆ.ಶಿವಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...