2016ರಲ್ಲಿ ಓರ್ವ ವ್ಯಕ್ತಿ ದಾವಣಗೆರೆಯ ಉನ್ನತ ಪೊಲೀಸ್ ಅಧಿಕಾರಿಯ ಮೇಲೆ ಒಂದು ಗಂಭೀರ ಆರೋಪ ಮಾಡುತ್ತಾರೆ. ತನ್ನ ಪತ್ನಿಯೊಂದಿಗೆ ಆ ಪೊಲೀಸ್ ಅಧಿಕಾರಿ ಬಲವಂತದ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಾರೆಂದೂ, ತಮ್ಮ ಲೈಂಗಿಕ ಕ್ರಿಯೆಗಳ ಫೋಟೋ, ವಿಡಿಯೋ ಮಾಡಿ ಅವುಗಳನ್ನು ಬಳಸಿ ಲೈಂಗಿಕ ಸಂಬಂಧ ಮುಂದುವರೆಸುವಂತೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸ್ವತಃ ಸಂತ್ರಸ್ತೆಯೇ ದೂರು ನೀಡಿಲ್ಲವಾದುದರಿಂದ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಹೇಳಲಾಯಿತು.
ಅದಾದ ನಂತರ ಕನ್ನಡದ ಕೆಲವು ಟಿವಿ ವಾಹಿನಿಗಳಲ್ಲಿ ಆ ಅಧಿಕಾರಿ ಮತ್ತು ಓರ್ವ ಮಹಿಳೆಯು ಲೈಂಗಿಕ ಕ್ರಿಯೆಗಳಲ್ಲಿ ತೊಡಗಿದ ಫೋಟೊ ಮತ್ತು ವಿಡಿಯೋಗಳು ಬಿತ್ತರಿಸಲಾದವು. ಆ ಅಧಿಕಾರಿಯ ಮೇಲೆ ಇಲಾಖೆ ವಿಚಾರಣೆ ಒಳಪಡಿಸಲಾಯಿತು. ವಿಚಾರಣೆ ಪ್ರಾರಂಭವಾಗಿ ಒಂದೂವರೆ ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದ್ದರೂ ಇನ್ನೂ ವಿಚಾರಣೆ ಪೂರ್ಣಗೊಂಡಿಲ್ಲ ಮತ್ತು ಈ ಮಧ್ಯೆ ಅದೇ ಅಧಿಕಾರಿಗೆ ಮತ್ತೆ ಬೆಂಗಳೂರಿನಲ್ಲಿಯೇ ಆಯಕಟ್ಟಿನ ಜಾಗದಲ್ಲಿ ತಂದು ಕೂರಿಸಲಾಗಿದೆ.
ಎಲ್ಲರೂ ಮರೆತರೆ? ಸಂತ್ರಸ್ತೆಗೆ ನ್ಯಾಯ ಸಿಕ್ಕಿತೆ? ಸಿಗುವುದೇ?
ಸುದ್ದಿ ವಾಹಿನಿಗಳಲ್ಲಿ ತನ್ನ ವಿಡಿಯೋಗಳು ಬಿತ್ತರಿಸಲಾದ ನಂತರ ಆರೋಪಿ ಪೊಲೀಸ್ ಅಧಿಕಾರಿಯು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಟಿವಿ ಮತ್ತು ಮುದ್ರಣ ಮಾಧ್ಯಮಗಳನ್ನು ಒಳಗೊಂಡ ಸುಮಾರು 32 ವಾಹಿನಿ ಮತ್ತು ಪತ್ರಿಕೆಗಳು ಆ ವಿಷಯದ ಬಗ್ಗೆ ಬರೆಯದಂತೆ ತಡೆಯಾಜ್ಞೆ ತಂದರು. ಹಾಗಾಗಿ ಅದರ ಬಗ್ಗೆ ಸುದ್ದಿಗಳು ಜನಸಾಮಾನ್ಯರಿಗೆ ಮುಟ್ಟಲಿಲ್ಲ.
ಆದರೆ ಈ ತಡೆಯಾಜ್ಞೆ ಕೇವಲ ಆಯಾ ಮಾಧ್ಯಮ ಸಂಸ್ಥೆಗಳ ಮೇಲೆ ಮಾತ್ರ ಇದ್ದು ಇತರರು ಅದರ ಬಗ್ಗೆ ಮಾತನಾಡಬಹುದಾಗಿತ್ತು. ಹಾಗಾಗಿ ಆ ವಿಷಯವನ್ನು ಕೆಲವು ಸಾಮಾಜಿಕ ಹೋರಾಟಗಾರರು ಕೈಗೆತ್ತಿಕೊಂಡರು. ಪ್ರಮುಖವಾಗಿ ರವಿ ಕೃಷ್ಣಾರೆಡ್ಡಿ ಮತ್ತು ಅವರ ಸಂಗಾತಿಗಳು. ಓರ್ವ ವ್ಯಕ್ತಿಯೊಬ್ಬ ರವಿ ಕೃಷ್ಣಾರೆಡ್ಡಿ ಅವರ ಬಳಿ ಎಲ್ಲಾ ದಾಖಲೆಗಳನ್ನು, ವಿಡಿಯೋ, ಫೋಟೋಗಳನ್ನು ತಂದು, ಆ ಸಂತ್ರಸ್ತರ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳಿದಾಗ, ಓರ್ವ ಉನ್ನತ ಐಪಿಎಸ್ ಅಧಿಕಾರಿಯ ಮೇಲೆ ಗುರುತರ ಆಪಾದನೆಗಳಿದ್ದರೂ ಇನ್ನೂ ಉನ್ನತ ಹುದ್ದೆಯಲ್ಲಿ ಮುಂದುವರೆಯುವುದು ಆಡಳಿತದ ದೃಷ್ಟಿಯಿಂದ ತಪ್ಪು ಎಂದು ವಿಷಯವನ್ನು ಕೈಗೆತ್ತಿಕೊಂಡರು.
ಮುಂದಿನ ಕ್ರಮವಾಗಿ ರವಿ ಕೃಷ್ಣಾರೆಡ್ಡಿ ಮತ್ತು ಅವರ ಸಂಗಡಿಗರು ಫೆಬ್ರುವರಿ 11ನೇ ತಾರೀಕಿನಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಭೇಟಿ ಮಾಡಿ, ವಿಚಾರಣೆ ಪೂರ್ಣವಾಗುವ ತನಕ ಆ ಅಧಿಕಾರಿಯನ್ನು ಸೇವೆಯಲ್ಲಿ ಮುಂದುವರೆಸಬಾರದು ಎಂದು ವಿನಂತಿಸಿದ್ದಾರೆ. ಆಗ ಪೊಲೀಸ್ ಆಯುಕ್ತರು, ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡುವ ಅಧಿಕಾರ ಮುಖ್ಯಮಂತ್ರಿಗಳ ಬಳಿ ಮಾತ್ರ ಇದೆ, ಹಾಗಾಗಿ ಮನವಿಯನ್ನು ಸರಕಾರಕ್ಕೆ ಕಳುಹಿಸುತ್ತೇನೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಆಗ ಈ ಹೋರಾಟಗಾರರು, ಸರಕಾರವು ತುರ್ತಾಗಿ ಕ್ರಮ ಕೈಗೊಳ್ಳುವಂತೆ ಮಾಡಬೇಕು. ಶೀಘ್ರದಲ್ಲಿ ನ್ಯಾಯ ಸಿಗದಿದ್ದರೆ ಅನಿವಾರ್ಯವಾಗಿ ತಮ್ಮಲ್ಲಿರುವ ದಾಖಲೆಗಳನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಅದರಿಂದ ಕುಪಿತಗೊಂಡ ಪೊಲೀಸ್ ಆಯುಕ್ತರು ಅವರನ್ನು ಮತ್ತು ಅವರ ಸಂಗಡಿಗರನ್ನು ದೈಹಿಕ ಬಲ ಬಳಸಿ ಹೊರದಬ್ಬಿಸಿದರು ಎಂದು ರವಿ ಕೃಷ್ಣಾರೆಡ್ಡಿ ಅವರು ಆಪಾದಿಸಿದ್ದಾರೆ.
ಅಲ್ಲಿಂದ ಹೊರಬಂದ ರೆಡ್ಡಿ ಮತ್ತು ಸಂಗಡಿಗರು ತಮ್ಮ ಬಳಿಯಿದ್ದ ಮನವಿಪತ್ರದ ಪ್ರತಿಗಳನ್ನು ಸುತ್ತಲ ಜನರಿಗೆ ಹಂಚಿದ್ದಾರೆ. ಆಗ ಪೊಲೀಸ್ ಸಿಬ್ಬಂದಿ ಅಡ್ಡಿಪಡಿಸಿದ್ದರಿಂದ ಅಲ್ಲಿಂದ ತೆರಳಿ ಹೈಕೋರ್ಟ್ನ ಪಾರ್ಕಿಂಗ್ ಕಡೆ ಬಂದಿದ್ದಾರೆ. ಆಗ ಪೊಲೀಸರು ಅಲ್ಲಿ ಬಂದು ರವಿ ಕೃಷ್ಣಾರೆಡ್ಡಿ ಮತ್ತು ವತ್ಸಲ ಎಂಬ ಒಬ್ಬ ಮಹಿಳಾ ಕಾರ್ಯಕರ್ತೆಯನ್ನೂ ಬಲವಂತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ವಾಹನದಲ್ಲಿ ಕೆಲಕಾಲ ಸುತ್ತಿಸಿ, ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೆಲಗಂಟೆ ಇರಿಸಿ ಬಿಡುಗಡೆ ಮಾಡಿದ್ದಾರೆ. ಈ ವಿಷಯಕ್ಕೆ ತಲೆಹಾಕಬರಾದು ಎಂದು ‘ಉಪದೇಶ’ ನೀಡಿದ್ದಾರೆ. ಸದ್ಯಕ್ಕೆ ರವಿ ಕೃಷ್ಣಾರೆಡ್ಡಿಯವರು ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಉತ್ತರವಿಲ್ಲದ ಪ್ರಶ್ನೆಗಳು
2018ರ ಜುಲೈ ತಿಂಗಳಲ್ಲೇ ಅಧಿಕಾರಿಯ ಮೇಲೆ ಸಂತ್ರಸ್ತೆಯ ಪತಿಯು ತನ್ನ ಪತ್ನಿಯ ಮೇಲೆ ಅತ್ಯಾಚಾರ, ಹಲ್ಲೆ ಮತ್ತು ವ್ಯಭಿಚಾರ ಎಸಗಿದ್ದಾರೆ ಎಂದು ಖಾಸಗಿ ದೂರು ಸಲ್ಲಿಸಿದ್ದಾರೆ. ದೂರು ಸಲ್ಲಿಸಿದ ಕೆಲವು ದಿನಗಳಲ್ಲೇ ಕನ್ನಡದ ಖಾಸಗಿ ವಾಹಿನಿಗಳಲ್ಲಿ ಆ ಅಧಿಕಾರಿಯ ಮತ್ತು ಸಂತ್ರಸ್ತೆಯ ವಿಡಿಯೋಗಳನ್ನು ಬಿತ್ತರಿಸಲಾಗಿದೆ. ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಶುರುಮಾಡಲಾಗಿದೆ. ವಿಚಾರಣೆ ಶುರುವಾಗಿ ಒಂದೂವರೆ ವರ್ಷ ಕಳೆದರೂ ಇನ್ನೂ ಏಕೆ ಪುರ್ಣಗೊಂಡಿಲ್ಲ? ಆರೋಪಿ ಅಧಿಕಾರಿಯನ್ನು ರಕ್ಷಿಸುವ ಕಾರಣಕ್ಕಾಗಿಯೇ ಸರಕಾರಿ ಕೆಂಪುಪಟ್ಟಿಯ ವಿಧಾನವನ್ನು ಬಳಸಲಾಗುತ್ತಿದೆಯೇ?
ಪ್ರಕರಣ ಬಯಲಿಗೆ ಬಂದ ಆರಂಭದಲ್ಲಿ ಸಂತ್ರಸ್ತ ಮಹಿಳೆಯು ಎಲ್ಲವನ್ನು ಅಲ್ಲಗೆಳೆದಿದ್ದರೂ 2019ರ ಜನವರಿ ತಿಂಗಳಲ್ಲಿ ತನಗೆ ಈ ಪೊಲೀಸ್ ಅಧಿಕಾರಿಯಿಂದ ಜೀವ ಬೆದರಿಕೆ ಇದೆ ಮತ್ತು ತನ್ನ ಪತಿ ಹೇಳಿರುವುದು ಸತ್ಯ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ. ಓರ್ವ ಪೊಲೀಸ್ ಅಧಿಕಾರಿ, ಅತ್ಯಾಚಾರ, ಹಲ್ಲೆ, ಬ್ಲ್ಯಾಕ್ಮೇಲ್ನಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವಾಗ, ಆ ಅಧಿಕಾರಿಯ ಮೇಲೆ ವಿಚಾರಣೆ ನಡೆಯುತ್ತಿರುವಾಗಲೇ ಅವರಿಗೆ ಮತ್ತೇ ಎಕ್ಸೆಕ್ಯೂಟಿವ್ ಪೋಸ್ಟಿಂಗ್ ನೀಡುವುದು ಎಷ್ಟು ಸರಿ?
ಮೊದಲೇ ಪೊಲೀಸ್ ಠಾಣೆ ಎಂದರೆ ಹೆದರಿ, ತಮ್ಮ ಮೇಲಾದ ಅತ್ಯಾಚಾರ, ಶೋಷಣೆಗಳನ್ನು ಬಹಿರಂಗಪಡಿಸಲು, ದೂರು ನೀಡಲು ಹೆದರುವ ಪರಿಸ್ಥಿತಿಯಲ್ಲಿ ಒಬ್ಬ ಉನ್ನತ ಅಧಿಕಾರಿಯೇ ಆರೋಪಿಯಾಗಿರುವ ಪೊಲೀಸ್ ಠಾಣೆಗೆ ಮಹಿಳೆಯರು, ಸಂತ್ರಸ್ತರು ದೂರು ನೀಡಲು ಯಾವ ಧೈರ್ಯದಿಂದ ಬರಬೇಕು? ಈ ಪ್ರಕರಣ ಇಡೀ ಪೊಲೀಸ್ ಇಲಾಖೆಯ ಮೇಲೆ ಕಪ್ಪುಚುಕ್ಕೆಯಾಗಿ ಪರಿಣಮಿಸುತ್ತದಲ್ಲವೇ? ಪೊಲೀಸ್ ಇಲಾಖೆಯಲ್ಲಿಯ ದಕ್ಷ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ?
ಎಲ್ಲಕ್ಕಿಂತ ಮುಖ್ಯವಾಗಿ ಪೊಲೀಸರಿಂದ ಸಂತ್ರಸ್ತೆಗೆ ನ್ಯಾಯ ಸಿಗಬಹುದು ಎಂಬ ನಂಬಿಕೆಯನ್ನು ಕಳೆದುಕೊಳ್ಳಲು ಇಲಾಖೆ ಬಿಡಬಾರದು. ಶೀಘ್ರವಾಗಿ ನ್ಯಾಯ ದೊರಕಿಸುವಂತೆ ಇಲಾಖೆ ಮತ್ತು ಸರಕಾರ ತುರ್ತು ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಇಡೀ ಇಲಾಖೆಯೇ ಈ ಹಗರಣದಲ್ಲಿ ಭಾಗಿಯಾಗಿದೆ ಎನ್ನುವ ನಿಷ್ಕರ್ಷಕ್ಕೆ ಬಂದುಬಿಡುವಂತೆ ಆಗುತ್ತದೆ. ಆಗಬೇಕಾದ್ದು ಇಷ್ಟೇ. ತನಿಖೆ ಪೂರ್ಣಗೊಳ್ಳಬೇಕು; ತಪ್ಪಿದ್ದರೆ ಶಿಕ್ಷೆಯಾಗಬೇಕು. ಆ ನಂತರವೇ ಸದರಿ ಅಧಿಕಾರಿಯ ಸ್ಥಾನ ನಿರ್ಧಾರ ಆಗಬೇಕು.
ಇಷ್ಟನ್ನು ಹೇಳಿದ ಸಾಮಾಜಿಕ ಕಾರ್ಯಕರ್ತರೊಬ್ಬರನ್ನು ಬೀದಿಯಲ್ಲಿ ಎಳೆದು ಬಂಧಿಸುವುದೆಂದರೆ ಇದರ ಹಿಂದೆ ಪೊಲೀಸರ ಈಗೋಗಳು ಮತ್ತು ತಪ್ಪನ್ನು ಮುಚ್ಚಿ ಹಾಕುವ ಪ್ರಯತ್ನ ಇದೆಯೆಂಬ ಭಾವನೆ ಬಲವಾಗುತ್ತದೆ.


