ಪತ್ರಕರ್ತ ಸಿರಾಜ್ ಬಿಸರಳ್ಳಿ ಮತ್ತು ರಾಜಭಕ್ಷಿ ಅವರ ಬಂಧನವನ್ನು ಬಂಡಾಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರು ತೀವ್ರವಾಗಿ ಖಂಡಿಸಿದ್ದಾರೆ.
“ಆನೆಗುಂದಿ ಉತ್ಸವದಲ್ಲಿ ಪೌರತ್ವಕಾಯಿದೆ ವಿರೋಧಿಸಿ ಕವಿತೆ ವಾಚನಮಾಡಿದ ಕಾರಣಕ್ಕೆ ಕವಿ ಸಿರಾಜ್ ಬಿಸರಳ್ಳಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಂಚಿಕೊಂಡದ್ದಕ್ಕೆ ರಾಜಭಕ್ಷಿ ಅವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಒಪ್ಪಸಿರುವ ವಿದ್ಯಮಾನ ಆಘಾತಕಾರಿಯಾದದು. ವ್ಯಕ್ತಿಯ ತೇಜೊವಧೆ ಹಾಗೂ ಚಾರಿತ್ರ್ಯ ಹರಣ ಮಾಡುವ ಬರಹಗಳಾಗಿದ್ದರೆ ಸಂಬಂಧಪಟ್ಟವರು ‘ಮಾನಹಾನಿ ಮೊಕದ್ದಮೆ’ ಹೂಡಬಹುದು. ಆದರೆ ಸರ್ಕಾರವೊಂದರ ನೀತಿ ನಿಲುವುಗಳ ವಿರೋಧವು ದೇಶವಿರೋಧಿಯಾಗುವುದಿಲ್ಲ.”
“ಜನಸಂಘದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಕನ್ನಡದ ಪ್ರಸಿದ್ಧ ಕವಿ ಗೋಪಾಲಕೃಷ್ಣ ಅಡಿಗರು ನೆಹರೂ ಬದುಕಿದ್ದಾಗಲೇ ಅವರನ್ನು ವಿರೋಧಿಸಿ, ವಿಡಂಬಿಸಿ ‘ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಕವಿತೆ ಬರೆದಾಗ, ವಾಚಿಸಿದಾಗ, ಯಾರೂ ಮೊಕದ್ದಮೆ ಹೂಡದೆ ಇರುವ ಸಹಿಷ್ಣು ವಾತಾವರಣವಿತ್ತು. ಈಗ ಇಂಥ ವಾತಾವರಣ ಇಲ್ಲವಾಗುತ್ತಿರುವುದು ಆತಂಕದ ವಿಷಯ.”
“ಅಷ್ಟೇ ಏಕೆ, ಕೆಲವು ರಾಜಕಾರಣಿಗಳು ಮೋದಿ, ಅಮಿತ್ಷಾ ಅವರನ್ನು ಇನ್ನು ಕೆಲವರು ರಾಹುಲ್ಗಾಂಧಿ, ಸೋನಿಯಾಗಾಂಧಿಯವರನ್ನೂ ಬೀದಿ ಬೀದಿಗಳಲ್ಲಿ ಬಾಯಿಗೆ ಬಂದಂತೆ ಅಸಂಸದೀಯ ಭಾಷೆಯಲ್ಲಿ ನಿಂದಿಸಿದರೂ ಪರಸ್ಪರ ಮಾನಹಾನಿ ಮೊಕದ್ದಮೆ ಹೂಡುವುದಿಲ್ಲ”
“ಒಂದುವರ್ಷದ ಹಿಂದೆ ದೆಹಲಿಯ ಜಂತರ್ ಮಂತರ್ ನಲ್ಲಿ ಸಂವಿಧಾನದ ಪ್ರತಿಸುಟ್ಟು ‘ಅಂಬೇಡ್ಕರ್ ಗೆ ಧಿಕ್ಕಾರ ಕೂಗಿದವರ ವಿರುದ್ಧ ಯಾವ ಕ್ರಮ ಜರುಗಿಸುಲಾಯಿತೊ ಗೊತ್ತಿಲ್ಲ. ಗಾಂಧಿ ಚಿತ್ರಕ್ಕೆ ಗುಂಡು ಹಾರಿಸಿದವರು, ʼಗೋಡ್ಸೆ ದೇಶಭಕ್ತ ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತʼ ಎಂದವರು ಯಾವ ಬಂಧನಕ್ಕೂ ಬಳಗಾಗಿಲ್ಲ. ಇಂತಹ ವಿಪರ್ಯಾಸಗಳ ನಡುವೆ ಕವಿಯ ಬಂಧನ ಮಾತ್ರ ಆಗುತ್ತಿದೆ. ಒಪ್ಪಿತವಾಗದ ವಿಚಾರಗಳ ಬಗ್ಗೆ ವಿಮರ್ಶೆ ಮತ್ತು ಟೀಕೆಗಳ ‘ಹಕ್ಕು’ ಚಲಾಯಿಸುವ ಬದಲು ಬಂಧನದ ‘ಅಧಿಕಾರ’ ಬಳಸುವುದು ಸಂವಿಧಾನದ ಆಶಯಕ್ಕೆ ವಿರೋದಿಯಾದ ಖಂಡನೀಯ ಕ್ರಮವಾಗುತ್ತದೆ” ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ.ಬರಗೂರು ರಾಮಚಂದ್ರಪ್ಪ ಬಂಧನವನ್ನು ತೀವ್ರವಾಗಿ ಖಂಡಿಸಿದ್ದಾರೆ.