ಕೋವಿಡ್ ಕಾರಣದಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ ಹೇರಿರುವುದರ ನಡುವೆ ಕ್ರಿಸ್ಮಸ್ ಆಚರಣೆಯಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಕ್ರಿಸ್ಮಸ್ ಹಬ್ಬದ ಶುಭಕೋರಿದ್ದಾರೆ.
ಟ್ವೀಟ್ ಮೂಲಕ ಶುಭಕೋರಿರುವ ಪ್ರಧಾನಿ ಮೋದಿ, “ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು! ಸೇವೆ, ದಯೆ ಮತ್ತು ನಮ್ರತೆಗೆ ಹೆಚ್ಚಿನ ಒತ್ತು ನೀಡಿದ ಯೇಸು ಕ್ರಿಸ್ತನ ಜೀವನ, ಉದಾತ್ತ ಬೋಧನೆಗಳನ್ನು ನಾವು ಸ್ಮರಿಸುತ್ತೇವೆ. ಎಲ್ಲರೂ ಆರೋಗ್ಯವಂತರಾಗಿ ಮತ್ತು ಸಮೃದ್ಧರಾಗಿರಲಿ. ನಮ್ಮ ಸುತ್ತಮುತ್ತ ಸಾಮರಸ್ಯವಿರಲಿ” ಎಂದು ತಿಳಿಸಿದ್ದಾರೆ.
Christmas greetings to everyone! We recall the life and noble teachings of Jesus Christ, which placed topmost emphasis on service, kindness and humility. May everyone be healthy and prosperous. May there be harmony all around.
— Narendra Modi (@narendramodi) December 25, 2021
ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದು, “ಸಮಸ್ತ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭಕಾಮನೆಗಳು. ಎಲ್ಲರಿಗೂ ಸಂತಸ, ಉತ್ತಮ ಆರೋಗ್ಯ, ಯಶಸ್ಸು ದೊರೆಯಲಿ, ಸಾಂಕ್ರಾಮಿಕದ ಸಂಕಷ್ಟಗಳೆಲ್ಲ ಪರಿಹಾರವಾಗಲಿ ಎಂದು ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸೋಣ. ಎಲ್ಲರೂ ಕೋವಿಡ್-ಸೂಕ್ತ ನಡವಳಿಕೆಗಳನ್ನು ಪಾಲಿಸುತ್ತಾ ಹಬ್ಬವನ್ನಾಚರಿಸೋಣ” ಎಂದಿದ್ದಾರೆ.
ಬಿಜೆಪಿ ಕರ್ನಾಟಕ ಟ್ವೀಟರ್ ಅಕೌಂಟ್ ಮೂಲಕವೂ ಕ್ರಿಸ್ಮಸ್ ಹಬ್ಬದ ಶುಭಕೋರಲಾಗಿದೆ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, “ಶಾಂತಿ, ಪ್ರೀತಿ, ದಯೆ ಮತ್ತು ಕ್ಷಮಾ ಗುಣಗಳಿಂದ ಮಾಡುವ ಜನರ ಸೇವೆಯಿಂದ ದೇವರನ್ನು ಕಾಣಲು ಸಾಧ್ಯ ಎಂಬ ಜೀಸಸ್ ಕ್ರೈಸ್ತನ ಅರ್ಥಪೂರ್ಣ ಸಂದೇಶ ನಮ್ಮ ದಾರಿಗೆ ಬೆಳಕಾಗಿ ನಮ್ಮನ್ನು ಮುನ್ನಡೆಸಲಿ. ನಾಡಿನ ಕ್ರೈಸ್ತ ಬಂಧುಗಳಿಗೆ ಹಾರ್ದಿಕ ಶುಭಾಶಯಗಳು” ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಕ್ರಿಸ್ಮಸ್ ಶುಭಕೋರಿದ್ದಾರೆ.
ಓಮೈಕ್ರಾನ್ ರೂಪಾಂತರದ ತಳಿಯ ಸೋಂಕು ಹೆಚ್ಚಿತ್ತಿರುವ ನಡುವೆ ಕ್ರಿಸ್ಮಸ್ ಹಬ್ಬ ಬಂದಿದೆ. ಇದರಿಂದಾಗಿ ಹಲವೆಡೆ ನಿರ್ಬಂಧಗಳನ್ನು ಹಾಕಲಾಗಿದೆ.
ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಐದು ಅಥವಾ ಅದಕ್ಕಿಂತ ಹೆಚ್ಚಿನ ಸಭೆಗಳನ್ನು ನಡೆಸದಿರಲು ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ. ಹರಿಯಾಣ ಮತ್ತು ದೆಹಲಿಯಲ್ಲೂ ನಿರ್ಬಂಧಗಳನ್ನು ಹೇರಲಾಗಿದೆ. ಆದರೆ ದೆಹಲಿಯಲ್ಲಿ ಪೂಜಾ ಸ್ಥಳಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ರಜೆ ದಿನದ ಪ್ರವಾಸವನ್ನು ಕೈಗೊಳ್ಳಲು ಕೋವಿಡ್ ಅಡ್ಡಿಯಾಗಿದೆ. ವಿಶ್ವದಾದ್ಯಂತ 2,300ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಟ್ರ್ಯಾಕಿಂಗ್ ವೆಬ್ಸೈಟ್ Flightaware.com ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಇದನ್ನೂ ಓದಿರಿ: ಶಾಲೆಗೆ ನುಗ್ಗಿ ಕ್ರಿಸ್ಮಸ್ ಆಚರಿಸದಂತೆ ಬೆದರಿಸಿದ ಬಲಪಂಥೀಯರು