ಕೋಲ್ಕತ್ತಾದ ಪ್ರತಿಷ್ಠಿತ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣದ ಅಪರಾಧಿ ಸಂಜಯ್ ರಾಯ್ಗೆ ನ್ಯಾಯಾಲಯ ಸೋಮವಾರ (ಜ.20) ಜೀವಾವಧಿ ಶಿಕ್ಷೆ ವಿಧಿಸಿದೆ.
ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 103(1)ರ ಅಡಿಯಲ್ಲಿ ಸಂಜಯ್ ರಾಯ್ಗೆ ಜೀವಾವಧಿ ಶಿಕ್ಷೆ ಹಾಗೂ 50,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಕೋಲ್ಕತ್ತಾದ ಸಿಯಾಲದಹ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬಕ್ಕೆ 17 ಲಕ್ಷ ಪರಿಹಾರ ರೂಪಾಯಿ ಪರಿಹಾರ ನೀಡುವಂತೆಯೂ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಪ್ರಕರಣದ ವಿಚಾರಣೆ ವೇಳೆ ಕೇಂದ್ರ ತನಿಖಾ ದಳವು (ಸಿಬಿಐ) ಆರೋಪಿ ಸಂಜಯ್ ರಾಯ್ಗೆ ‘ಮರಣದಂಡನೆ’ ವಿಧಿಸುವಂತೆ ಕೋರಿತ್ತು. ಅಪರಾಧಿಗೆ ಮರಣದಂಡನೆ ವಿಧಿಸಲು ಈ ಪ್ರಕರಣ “ಅಪರೂಪದಲ್ಲಿ ಅಪರೂಪ” ವರ್ಗಕ್ಕೆ ಸೇರುವುದಿಲ್ಲ ಎಂದು ನ್ಯಾಯಾಧೀಶ ದಾಸ್ ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಅಪರಾಧಿ ಸಂಜಯ್ ರಾಯ್ “ತಾನು ಏನೂ ತಪ್ಪು ಮಾಡಿಲ್ಲ. ತನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಸುಮ್ಮನೆ ಸಿಲುಕಿಸಲಾಗಿದೆ. ನನಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ಅವರಿಗೆ ಬೇಕಾದುದ್ದಕ್ಕೆ ಸಹಿ ಹಾಕುವಂತೆ ಒತ್ತಾಯಿಸಿದ್ದಾರೆ” ಎಂದು ಪುನರುಚ್ಚರಿಸಿದ್ದಾರೆ.
ಅಪರಾಧಿ ಪರ ವಕೀಲರು ವಾದ ಮಂಡಿಸಿ, “ಇದು ಅಪರೂಪದ ಪ್ರಕರಣವಾಗಿದ್ದರೂ ಸಹ, ಸುಧಾರಣೆಗೆ ಅವಕಾಶವಿರಬೇಕು. ಅಪರಾಧಿ ಸುಧಾರಣೆ ಅಥವಾ ಪುನರ್ವಸತಿಗೆ ಏಕೆ ಅರ್ಹನಲ್ಲ ಎಂದು ನ್ಯಾಯಾಲಯ ತೋರಿಸಬೇಕು. ಸರ್ಕಾರಿ ಅಭಿಯೋಜಕರು ಈ ಸಂಬಂಧ ಸಾಕ್ಷ್ಯಗಳನ್ನು ಪ್ರಸ್ತುತಪಡಿಸಬೇಕು ಮತ್ತು ವ್ಯಕ್ತಿಯು ಸುಧಾರಣೆಗೆ ಅರ್ಹನಲ್ಲ ಎಂಬುದಕ್ಕೆ ಕಾರಣಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ, ಸಂತ್ರಸ್ತೆಯ ಕುಟುಂಬದ ಪರ ವಕೀಲರು, ಅಪರಾಧಿಗೆ ಗರಿಷ್ಠ ಶಿಕ್ಷೆಯಾಗಿ ಮರಣದಂಡನೆ ವಿಧಿಸುವಂತೆ ಕೋರಿದ್ದಾರೆ. ಸಂತ್ರಸ್ತೆಯ ತಂದೆ ಕೂಡ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದು, ಬೀದಿಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64 (ಅತ್ಯಾಚಾರ), ಸೆಕ್ಷನ್ 66 (ಮಹಿಳೆಯ ಸಾವಿಗೆ ಕಾರಣವಾಗುವುದು) ಹಾಗೂ ಸೆಕ್ಷನ್ 103(1) (ಹತ್ಯೆ) ಅಡಿಯಲ್ಲಿ ರಾಯ್ ದೋಷಿ ಎಂದು ನ್ಯಾಯಾಧೀಶರು ಶನಿವಾರ ಆದೇಶ ಪ್ರಕಟಿಸಿದ್ದರು.


