ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳ ಕೊರೊನಾ ಲಾಕ್ಡೌನ್ ಸಮಯದಲ್ಲಿ ಗಂಗಾ ನದಿಗೆ ಹರಿದು ಬರುವ ಮಾಲಿನ್ಯವು ಕಡಿಮೆಯಾಗಿದ್ದರಿಂದ ನದಿಯು ಸ್ಪಚ್ಛಗೊಂಡಿತ್ತು. ಆದರೆ ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಹೇರಲ್ಪಟ್ಟ ಲಾಕ್ಡೌನ್ನಿಂದಾಗಿ ನದಿಯು ಸ್ವಚ್ಛವಾಗಬಹುದು ಎಂದು ನಂಬಲಾಗಿತ್ತು, ಆದರೆ ಇದೀಗ ನದಿ ನೀರಿನ ಬಣ್ಣವು ಗಾಢ ಹಸಿರು ಬಣ್ಣಕ್ಕೆ ತಿರುಗಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಗಂಗಾ ನದಿಯು ತನ್ನ ಬಣ್ಣವನ್ನು ಹಸಿರು ಬಣ್ಣಕ್ಕೆ ಬದಲಾಯಿಸಿದಂತೆ ತೋರುತ್ತಿದೆ. ವಿಜ್ಞಾನಿಗಳ ಪ್ರಕಾರ, ನೀರು ವಿಷಕಾರಿಯಾಗುವ ಸಾಧ್ಯತೆಯಿದ್ದು, ಹಸಿರು ಬಣ್ಣವು ಹೆಚ್ಚು ಕಾಲ ಇರಲಿದೆಯೆ ಎಂದು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರ ಜನರಿಗಿಂತ ಸಾಮಾಜಿಕ ಜಾಲತಾಣಗಳನ್ನು ಆದ್ಯತೆಯಾಗಿ ಪರಿಗಣಿಸಿದೆ: ರಾಹುಲ್ ಗಾಂಧಿ
ಕೆಲವು ದಿನಗಳಿಂದ ನದಿ ನೀರಿನ ಬಣ್ಣದಲ್ಲಿ ಬದಲಾವಣೆಯಾಗಿದ್ದು ವಾರಣಾಸಿಯ ಜನರು ಕಳವಳ ವ್ಯಕ್ತಪಡಿಸಿದ್ದಾರೆ. 84 ಕಾಂಕ್ರೀಟ್ ನದಿ ತೀರಗಳ ಹೊರತಾಗಿಯು, ನದಿಯು ಹಸಿರು ಬಣ್ಣಕ್ಕೆ ಬದಲಾಗಿದ್ದು ಇತರ ಪ್ರದೇಶಗಳಲ್ಲೂ ಕಾಣಿಸುತ್ತಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

“ಮಳೆಗಾಲದ ಸಮಯದಲ್ಲಿ ಕೊಳ, ಕೆರೆಗಳಿಂದ ಪಾಚಿಗಳು ನದಿಗೆ ಸೇರುವುದರಿಂದ ಗಂಗಾ ನದಿಯ ನೀರು ತಿಳಿ ಹಸಿರು ಬಣ್ಣಕ್ಕೆ ತಿರುಗುವುದು ಸಾಮಾನ್ಯವಾಗಿದೆ. ಆದರೆ ಈ ಸಮಯದಲ್ಲಿ ನದಿಯ ನೀರು ಗಾಢ ಹಸಿರು ಬಣ್ಣಕ್ಕೆ ತಿರುಗಿದೆ. ಸಾಮಾನ್ಯವಾಗಿ, ಕೆಲವು ಘಾಟ್ಗಳಿಂದ ನಿಂತು ನೋಡಿದರೆ ಮಾತ್ರ ಕಾಣಿಸುತ್ತಿತ್ತು ಆದರೆ ಈಗ ಎಲ್ಲಡೆ ಈ ಬಣ್ಣ ಗೋಚರಿಸುತ್ತದೆ. ಕೆಟ್ಟ ವಾಸನೆ ಹರಡಿರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ” ಎಂದು ವಾರಣಾಸಿಯ ನಿವಾಸಿ ಲವ್ಕುಶ್ ಸಾಹ್ನಿ ಹೇಳಿದ್ದಾರೆಂದು ಇಂಡಿಯಾ ಟುಡೆ ವರದಿ ಮಾಡಿದೆ.
ಬೆನಾರಸ್ ಹಿಂದೂ ವಿಶ್ವವಿದ್ಯಾಲಯದ ಮಾಳವಿಯಾ ಗಂಗಾ ಸಂಶೋಧನಾ ಕೇಂದ್ರದ ಅಧ್ಯಕ್ಷ ಬಿ.ಡಿ. ತ್ರಿಪಾಠಿ ಅವರು, ನದಿಯ ಹಸಿರು ಬಣ್ಣವು ಮೈಕ್ರೋಸಿಸ್ಟಿಸ್ ಪಾಚಿಗಳಿಂದಾಗಿರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಜೆ ಮೇಲೆ ತೆರಳಿದ ಲೈಂಗಿಕ ಹಗರಣ ತನಿಖೆ ನಡೆಸುತ್ತಿದ್ದ ಎಸ್ಐಟಿ ಮುಖ್ಯಸ್ಥ, ತನಿಖೆ ಸ್ಥಗಿತ
“ಹರಿಯುವ ನೀರಿನಲ್ಲಿ ಇವುಗಳನ್ನು ಕಾಣಬಹುದು. ಆದರೆ ಇದು ಸಾಮಾನ್ಯವಾಗಿ ಗಂಗಾ ನದಿಯಲ್ಲಿ ಕಂಡುಬರುವುದಿಲ್ಲ. ಆದರೆ ನೀರು ನಿಂತು ಪೋಷಕಾಂಶಗಳು ಸೃಷ್ಟಿಯಾದರೆ ಈ ಮೈಕ್ರೋಸಿಸ್ಟಿಸ್ ಪಾಚಿ ಬೆಳೆಯಲು ಪ್ರಾರಂಭಿಸುತ್ತದೆ. ಕೊಳ ಮತ್ತು ಕಾಲುವೆಗಳ ನೀರಿನಲ್ಲಿ ಮಾತ್ರ ಬೆಳೆಯುವುದು ಇದರ ವಿಶೇಷತೆಯಾಗಿದ” ಎಂದು ತ್ರಿಪಾಠಿ ಹೇಳಿದ್ದಾರೆ.
“ಪ್ರಸ್ತುತ ನೀರು ಹತ್ತಿರದ ಕೊಳ ಮತ್ತು ಸಣ್ಣ ನದಿಗಳಿಂದ ಬಂದಿರಬಹುದು. ನೀರಿನ ಹರಿವು ಹೆಚ್ಚಾದರೆ ಪಾಚಿಗಳು ಹರಿಯುತ್ತವೆ. ಆದರೆ ಅದು ಹರಿದು ಹೋಗದೆ ಈ ರೀತಿ ತುಂಬಾ ಸಮಯ ಇದ್ದರೆ ಅವು ನರಮಂಡಲದ ಮೇಲೆ ಪರಿಣಾಮ ಬೀರುವ ವಿಷವನ್ನು ಹೊರಸೂಸುತ್ತದೆ. ಇದು ಜಲಚರಗಳಿಗೆ ಅಪಾಯವನ್ನುಂಟು ಮಾಡುತ್ತದೆ” ಅವರು ಹೇಳಿದ್ದಾರೆ.

ಪರಿಸರ ಮಾಲಿನ್ಯ ವಿಜ್ಞಾನಿ ಡಾ.ಕೃಪಾ ರಾಮ್ ಅವರು ಹೇಳುವಂತೆ ನೀರಿನಲ್ಲಿ ಪಾಚಿ ಬೆಳೆಯುವ ಪೋಷಕಾಂಶಗಳು ಹೆಚ್ಚಿರುವುದರಿಂದ ಇದು ಕಂಡುಬಂದಿದೆ. ಗಂಗಾ ನೀರಿನ ಬಣ್ಣ ಬದಲಾಗಲು ಮಳೆ ಕೂಡ ಒಂದು ಕಾರಣ ಎಂದು ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ’ಯಾರಿಂದಲೂ ನನ್ನ ಅರೆಸ್ಟ್ ಮಾಡಲು ಸಾಧ್ಯವಿಲ್ಲ’- ಬಾಬಾ ರಾಮ್ದೇವ್ ಹೇಳಿಕೆ
“ಮಳೆಯಿಂದಾಗಿ, ಈ ಪಾಚಿಗಳು ನದಿಗೆ ಹರಿಯುತ್ತವೆ. ಸಾಕಷ್ಟು ಪೋಷಕಾಂಶಗಳನ್ನು ಪಡೆದ ನಂತರ ಅವು ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ. ನೀರು ತುಂಬಾ ಸಮಯದವರೆಗೂ ಹಾಗೆ ಇದ್ದರೆ, ದ್ಯುತಿಸಂಶ್ಲೇಷಣೆಯನ್ನು ಶಕ್ತಗೊಳಿಸುವ ಸೂರ್ಯನ ಕಿರಣಗಳು ಆಳಕ್ಕೆ ಹೋಗಬಹುದು. ಫಾಸ್ಫೇಟ್, ಗಂಧಕ ಮತ್ತು ನೈಟ್ರೇಟ್ ಪಾಚಿಗಳ ಬೆಳವಣಿಗೆಗೆ ಸಹಾಯ ಮಾಡುವ ಪೋಷಕಾಂಶಗಳಾಗಿವೆ. ಪೋಷಕಾಂಶಗಳು ಕೃಷಿ ಭೂಮಿ ಮತ್ತು ಒಳಚರಂಡಿಯಿಂದಲೂ ಬರಬಹುದು” ಎಂದು ಕೃಪಾ ರಾಮ್ ಹೇಳಿದ್ದಾರೆ.
“ಯಾವುದೆ ಚಿಂತೆಯ ಅಗತ್ಯವಿಲ್ಲ. ಇದು ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಸಾಮಾನ್ಯವಾಗಿ ಮಾರ್ಚ್ ಮತ್ತು ಮೇ ನಡುವೆ ನಡೆಯುತ್ತದೆ. ಆದರೆ ಇದು ನೀರನ್ನು ವಿಷಕಾರಿಯಾಗಿಸುತ್ತದೆ. ಅದರಲ್ಲಿ ಸ್ನಾನ ಮಾಡುವುದರಿಂದ ಚರ್ಮ ರೋಗಗಳು ಉಂಟಾಗುತ್ತದೆ. ಅಲ್ಲದೆ ಈ ನೀರನ್ನು ಕುಡಿಯುವುದರಿಂದ ಯಕೃತ್ತಿಗೆ ಹಾನಿಯಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕೊರೊನಾಗೆ ಬಲಿಯಾಗುತ್ತಿರುವವರ ನಿಜವಾದ ಪ್ರಮಾಣವೆಷ್ಟು? ಭಾರತವನ್ನೇ ಬೆಚ್ಚಿ ಬೀಳಿಸುವಂತಿದೆ ಈ ವರದಿ


