Homeಮುಖಪುಟನ್ಯಾಯಾಧೀಶರನ್ನು ನೇಮಿಸುವ ಅಧಿಕಾರ; ಕೊಲಿಜಿಯಂ ವರ್ಸಸ್ ಕೇಂದ್ರ ಸರ್ಕಾರ

ನ್ಯಾಯಾಧೀಶರನ್ನು ನೇಮಿಸುವ ಅಧಿಕಾರ; ಕೊಲಿಜಿಯಂ ವರ್ಸಸ್ ಕೇಂದ್ರ ಸರ್ಕಾರ

- Advertisement -
- Advertisement -

ಭಾರತದ ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ನೇಮಿಸುವ, ಬಡ್ತಿ ನೀಡುವ, ವರ್ಗಾವಣೆ ಮಾಡುವ ಅಧಿಕಾರ ಯಾರಿಗಿರಬೇಕೆಂಬ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. 1993ರವರೆಗೆ ಈ ಅಧಿಕಾರ ಕೇಂದ್ರ ಸರ್ಕಾರದ ಕೈಯಲ್ಲಿತ್ತು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ನ್ಯಾಯಾಧೀಶರ ನೇಮಕಾತಿಯಲ್ಲಿ ಏಕಪಕ್ಷೀಯವಾಗಿ, ಪಕ್ಷಪಾತ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಲವು ತೀರ್ಪುಗಳ ಮೂಲಕ ಸುಪ್ರೀಂ ಕೋರ್ಟ್ ಆ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಿತು. ಅದಕ್ಕಾಗಿ ಕೊಲಿಜಿಯಂ (ನ್ಯಾಯಮೂರ್ತಿಗಳ ನೇಮಕಾತಿ ಸಮಿತಿ) ಎಂಬ ವ್ಯವಸ್ಥೆ ಜಾರಿಗೊಳಿಸಿತು. ಅದು ಇಂದಿನವರೆಗೂ ನಡೆದುಕೊಂಡು ಬಂದಿದೆ.

’ಈ ಕೊಲಿಜಿಯಂನ ಕಾರ್ಯವಿಧಾನ ಪಾರದರ್ಶಕವಾಗಿಲ್ಲ ಮತ್ತು ಉತ್ತರದಾಯಿತ್ವವಾಗಿಲ್ಲ; ಮುಖ್ಯ ನ್ಯಾಯಮೂರ್ತಿಗಳ ಸಮಯ ನೇಮಕಾತಿಯಲ್ಲಿಯೇ ಪೋಲಾಗುತ್ತಿದೆ’ ಎಂಬ ಕಾರಣಗಳನ್ನು ನೀಡಿ 2015ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯ್ದೆಯನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಆ ಕಾಯ್ದೆಯನ್ನು ರದ್ದುಪಡಿಸಿ ಹಾಲಿ ಇರುವ ಕೊಲಿಜಿಯಂ ವ್ಯವಸ್ಥೆಯನ್ನು ಎತ್ತಿಹಿಡಿದಿತ್ತು. ಜೊತೆಗೆ ಹಾಲಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವುದಕ್ಕಾಗಿ ಸಾರ್ವಜನಿಕರಿಂದ ಸಲಹೆ ಕೇಳಿ ಪಾರದರ್ಶಕತೆಯನ್ನು ಹೆಚ್ಚಿಸುವುದಕ್ಕಾಗಿ ನಾಲ್ಕು ಅಂಶಗಳಲ್ಲಿ ಸುಧಾರಣೆಗೆ ಮುಂದಾಗಿತ್ತು.

ಕಿರಣ್ ರಿಜಿಜು

ಹಾಲಿ ಕೇಂದ್ರ ಸರ್ಕಾರ ಮತ್ತೆ ನ್ಯಾಯಾಧೀಶರ ನೇಮಕದ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಯತ್ನಿಸುತ್ತಿರುವಂತೆ ಭಾಸವಾಗುತ್ತಿದೆ. ಕೇಂದ್ರ ಸರ್ಕಾರದ ಕಾನೂನು ಸಚಿವ ಕಿರಣ್ ರಿಜಿಜು ಬಹಿರಂಗವಾಗಿ ಕೊಲಿಜಿಯಂ ವ್ಯವಸ್ಥೆ ವಿರುದ್ಧ ಕಿಡಿಕಾರುತ್ತಿದ್ದು, ಸರ್ಕಾರವು ಕೈಕಟ್ಟಿ ಕುಳಿತಿಲ್ಲ, ಪರ್ಯಾಯ ವ್ಯವಸ್ಥೆ ತರಲು ಯೋಚಿಸುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ ಕೊಲಿಜಿಯಂ ಶಿಫಾರಸ್ಸು ಮಾಡಿದ ನ್ಯಾಯಾಧೀಶರ ಹೆಸರು ಅಂತಿಮಗೊಳಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.

ಏನಿದು ಕೊಲಿಜಿಯಂ?

ಭಾರತದ ಮುಖ್ಯ ನ್ಯಾಯಾಧೀಶರ (ಸಿಜೆಐ) ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ನ ಇತರ ನಾಲ್ವರು ಅತಿ ಹಿರಿಯ ನ್ಯಾಯಾಧೀಶರನ್ನೊಳಗೊಂಡ ಸಮಿತಿಯೇ ಕೊಲಿಜಿಯಂ. ಈ ಕೊಲಿಜಿಯಂ ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಮತ್ತು ವರ್ಗಾವಣೆ ಮಾಡುವ ಅಧಿಕಾರ ಹೊಂದಿದೆ. ಇಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಪಾತ್ರವಿರುವುದಿಲ್ಲ. ಕೊಲಿಜಿಯಂ ನೀಡಿದ ಶಿಫಾರಸ್ಸನ್ನು ಸಾಮಾನ್ಯವಾಗಿ ಅಂಗೀಕರಿಸುವುದಷ್ಟೆ ಅದರ ಕೆಲಸವಾಗಿದೆ. (ಕೆಲವು ಪ್ರಕರಣಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ನೇಮಕವನ್ನು ಕಾರ್ಯಾಂಗ ದೀರ್ಘಕಾಲ ವಿಳಂಬಗೊಳಿಸಿರುವ ಉದಾಹರಣೆಗಳಿವೆ). ಈ ವ್ಯವಸ್ಥೆಯು ಸಂವಿಧಾನದ ವಿಧಿಗಳು ಅಥವಾ ಸಂಸತ್ತಿನ ಕಾಯ್ದೆಯ ಬದಲಿಗೆ ಸುಪ್ರೀಂ ಕೋರ್ಟ್‌ನ ತೀರ್ಪುಗಳ ಆಧಾರದಲ್ಲಿ ರೂಪುಗೊಂಡಿದೆ.

ಕೊಲಿಜಿಯಂ ರಾಜಕೀಯವಾಗಿದೆ ಮತ್ತು ಸಂಪೂರ್ಣ ಅಪಾರದರ್ಶಕವಾಗಿದೆ – ಕಿರಣ್ ರಿಜಿಜು

ಭಾರತ ಹೊರತುಪಡಿಸಿ ಜಗತ್ತಿನಾದ್ಯಂತ ಎಲ್ಲಿಯೂ ನ್ಯಾಯಾಧೀಶರೆ ನ್ಯಾಯಾಧೀಶರನ್ನು ನೇಮಿಸುವುದಿಲ್ಲ. ಭಾರತದ ಕೊಲಿಜಿಯಂ ರಾಜಕೀಯವಾಗಿದೆ ಮತ್ತು ಸಂಪೂರ್ಣ ಅಪಾರದರ್ಶಕವಾಗಿದೆ. ಸಿಜೆಐ ಸೇರಿ ಕೊಲಿಜಿಯಂನ ಉಳಿದ ನ್ಯಾಯಾಧೀಶರು ನ್ಯಾಯ ನೀಡುವ ತಮ್ಮ ಪ್ರಾಥಮಿಕ ಕರ್ತವ್ಯದ ಬದಲು ನೇಮಕಾತಿ ಮತ್ತು ವರ್ಗಾವಣೆಗಳಲ್ಲಿಯೇ ಕಳೆದುಹೋಗುತ್ತಿದ್ದಾರೆ. ಹಾಗಾಗಿ ದೇಶದ ಜನರು ಈ ವ್ಯವಸ್ಥೆಂಮದ ಸಂತುಷ್ಟರಾಗಿಲ್ಲ. ಭಾರತದ ಸಂವಿಧಾನದ ಆಶಯದಂತೆ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂಬುದು ಕಾನೂನು ಸಚಿವರಾದ ಕಿರಣ್ ರಿಜಿಜುರವರ ವಾದವಾಗಿದೆ.

ಇದನ್ನೂ ಓದಿ: ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಕೊಲಿಜಿಯಂ ವ್ಯವಸ್ಥೆ ಅತ್ಯಗತ್ಯ: ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್

ಕೊಲಿಜಿಯಂ ಸಮತೋಲಿತ ವ್ಯವಸ್ಥೆ- ನಿವೃತ್ತ ಸಿಜೆಐ ಯು.ಯು ಲಲಿತ್

“ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಕಾನೂನಿನ ಆಳ್ವಿಕೆಗೆ ಕೊಲಿಜಿಯಂ ವ್ಯವಸ್ಥೆ ಅತ್ಯಗತ್ಯ ಮತ್ತು ಅನಿವಾರ್ಯ. ಕೊಲಿಜಿಯಂ ವ್ಯವಸ್ಥೆಯು ಸರಿಯಾದ ಮತ್ತು ಸಮತೋಲಿತ ವ್ಯವಸ್ಥೆಯಾಗಿದ್ದು, ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಸಾಬೀತಾಗಿದೆ. ಸರ್ಕಾರ ಸೇರಿದಂತೆ ಹಲವು ಪರಿಶೀಲನೆಗಳ ನಂತರವೇ ಕೊಲಿಜಿಯಂ ನ್ಯಾಯಾಧೀಶರ ನೇಮಕಾತಿಯನ್ನು ಅನುಮೋದಿಸುತ್ತದೆ. ಎಲ್ಲ ಸದಸ್ಯರ ಒಳನೋಟಗಳ ಮೂಲಕವೇ ರಮಣರವರು ಸಿಜೆಐ ಆಗಿದ್ದ ಕಾಲದಲ್ಲಿ 250ಕ್ಕೂ ಹೆಚ್ಚು ನ್ಯಾಯಾಧೀಶರ ನೇಮಕವಾಗಿದೆ. ಸರ್ಕಾರ ಮತ್ತು ಕೊಲಿಜಿಯಂ ಮಾತುಕತೆಗಳ ಮೂಲಕ ಯಾವುದೇ ತಡವಿಲ್ಲದೆ ನೇಮಕಾತಿಗಳು ನಡೆಯಬೇಕು” ಎಂದು ವಾರದ ಹಿಂದಷ್ಟೇ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿ ನಿವೃತ್ತರಾದ ಜಸ್ಟೀಸ್ ಯು.ಯು ಲಲಿತ್ ಪತ್ರಿಕಾ ಗೋಷ್ಠಿಯೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಯು.ಯು ಲಲಿತ್

ಹೀಗೆ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ನಡುವೆ ತಿಕ್ಕಾಟ ಆರಂಭವಾಗಿದೆ. ಹೀಗಿರುವಾಗ ಯಾವ ವ್ಯವಸ್ಥೆ ನಮ್ಮ ದೇಶಕ್ಕೆ ಸೂಕ್ತ ಎಂದು ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವ ಜಸ್ಟೀಸ್ ವಿ.ಗೋಪಾಲಗೌಡರು ಮತ್ತು ಜಸ್ಟೀಸ್ ನಾಗಮೋಹನ್ ದಾಸ್‌ರವರನ್ನು ನ್ಯಾಯಪಥ ಪತ್ರಿಕೆ ಸಂಪರ್ಕಿಸಿ ಅವರ ಅಭಿಪ್ರಾಯಗಳನ್ನು ದಾಖಲಿಸಿದೆ.

ಕೊಲಿಜಿಯಂ ಇರಬೇಕು, ಅದರಲ್ಲಿ ಬದಲಾವಣೆ ತರಬೇಕು- ಜಸ್ಟೀಸ್ ವಿ. ಗೋಪಾಲಗೌಡರು

“ಕೊಲಿಜಿಯಂ ಇರಬೇಕು ಎನ್ನುವುದು ನನ್ನ ಅಭಿಪ್ರಾಯ. ಆದರೆ ಅದರ ಕಾರ್ಯವಿಧಾನದಲ್ಲಿ ಕೆಲವು ಬದಲಾವಣೆಗಳು ಬರಬೇಕಿವೆ. ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸರ್ಕಾರಗಳಲ್ಲಿ ಒಳ್ಳೆಯವರು ಮತ್ತು ಕೆಟ್ಟವರೂ ಇದ್ದಾಗಲೂ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರ ಕೊಲಿಜಿಯಂಗೆ ಇರಬೇಕು” ಎನ್ನುತ್ತಾರೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಮತ್ತು ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಜಸ್ಟೀಸ್ ವಿ. ಗೋಪಾಲಗೌಡರು.

“ಕೊಲಿಜಿಯಂನಲ್ಲಿ ಸಮರ್ಥ ವಕೀಲರನ್ನು ಗುರುತಿಸಿ ನ್ಯಾಯಾಧೀಶರನ್ನಾಗಿ ಮಾಡಬೇಕು. ಅದು ಆಗುತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನ್ಯಾಯಾಧೀಶರ ಮಕ್ಕಳು – ಮೊಮ್ಮಕ್ಕಳು ನ್ಯಾಯಾಧೀಶರಾಗುತ್ತಿದ್ದಾರೆ ಎನ್ನುವ ಆರೋಪದಲ್ಲಿ ಹುರುಳಿದೆ. ಇಲ್ಲಿ ನಾವು ಬುದ್ಧಿ, ಪ್ರತಿಭೆ ಎಂಬ ಒಂದೇ ಮಾನದಂಡವನ್ನು ನೋಡಲಾಗುವುದಿಲ್ಲ. ಅದರೊಟ್ಟಿಗೆ ಸಮಾಜದ ಬಗ್ಗೆ ಕಳಕಳಿ, ತಿಳಿವಳಿಕೆ, ಮಾನವೀಯ ಮೌಲ್ಯಗಳನ್ನು ಹೊಂದಿರುವವರು ನ್ಯಾಯಾಧೀಶರಾಗಬೇಕು. ಅವರಿಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸುವ ಶಕ್ತಿ ರೂಢಿಸಿಕೊಳ್ಳುವವರು, ಜನರ ಭಾವನೆಗಳನ್ನು ಅರ್ಥೈಸಿಕೊಳ್ಳುವ ನ್ಯಾಯಾಧೀಶರು ಬೇಕು. ಇಂತಹವರನ್ನು ಹುಡುಕುವ ವ್ಯವಸ್ಥೆ ಬೇಕು” ಎನ್ನುತ್ತಾರೆ.

“ನ್ಯಾಯಾಲಯಗಳಲ್ಲಿ ಒಂದೇ ಧರ್ಮದ, ಒಂದೇ ಜಾತಿಯ ನ್ಯಾಯಾಧೀಶರು ಇರುವುದು ಸರಿಯಲ್ಲ. ಪ್ರಾದೇಶಿಕ, ಲಿಂಗ, ಧರ್ಮ, ಜಾತಿಗಳ ಆಧಾರದಲ್ಲಿ ನ್ಯಾಯಾಧೀಶರ ಪ್ರಾತಿನಿಧ್ಯ ಇರಲೇಬೇಕು. ಎಲ್ಲಾ ಜಾತಿ, ವರ್ಗದ ನ್ಯಾಯಾಧೀಶರಿಗೂ ಸಹ ಒಂದು ಅವಕಾಶ ನೀಡಿ, ಸಾಮಾಜಿಕ ನ್ಯಾಯವನ್ನು ಪರಿಪಾಲಿಸಬೆಕು.”

ವಿ. ಗೋಪಾಲಗೌಡರು

“ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವ, ನಿರ್ಣಯ ತೆಗೆದುಕೊಳ್ಳುವ ಛಾತಿ ಇರುವ, ಧೀಮಂತಿಕೆ ಇರುವವರು ಕೊಲಿಜಿಯಂ ಸದಸ್ಯರಾಗಬೇಕು. ಹಿರಿತನ ಮುಖ್ಯವಾದರೂ ಸಹ ದೃಢ ಮನಸ್ಸಿನ, ನಮ್ಮ ನ್ಯಾಯಾಂಗ ವ್ಯವಸ್ಥೆಯ ಹಿತಾಸಕ್ತಿ ಬಯಸುವವರು ಕೊಲಿಜಿಯಂನಲ್ಲಿರಬೇಕು. ಕೊಲಿಜಿಯಂಗೆ ಸಮರ್ಥ ಕಾರ್ಯನಿರ್ವಹಣೆ ಬೇಕು. ಅಲ್ಲಿನ ಸದಸ್ಯರು ಸಾಮೂಹಿಕ ನಿರ್ಧಾರಕ್ಕೆ ಬದ್ಧವಾಗಬೇಕೆ ಹೊರತು ಸಿಜೆಐ ಹೇಳಿದ್ದಕ್ಕೆ ಹುಹು ಅನ್ನುವುದಲ್ಲ. ಆ ರೀತಿ ಅದನ್ನು ಬದಲಿಸುವ ಸಂದರ್ಭ ಇದಾಗಿದೆ. ಅದಕ್ಕಾಗಿ ನಾನು ಒತ್ತಾಯಿಸುತ್ತೇನೆ” ಎಂದರು.

ನಿರ್ದಿಷ್ಟ ನಿಯಮಗಳುಳ್ಳ ಸ್ವಾಯತ್ತ ಸಂಸ್ಥೆ ಬೇಕು – ಜಸ್ಟೀಸ್ ಎಚ್.ಎನ್ ನಾಗಮೋಹನ್ ದಾಸ್

“90ರ ದಶಕಕ್ಕಿಂತ ಮುಂಚೆ ಕೊಲಿಜಿಯಂ ವ್ಯವಸ್ಥೆಯೇ ಇರಲಿಲ್ಲ. ನ್ಯಾಯಾಧೀಶರ ನೇಮಕಾತಿಯಲ್ಲಿ ಸರ್ಕಾರದ ಮೇಲುಗೈ ಇತ್ತು. ಆದರೆ ಆ ಮೇಲುಗೈಯನ್ನು ಸರ್ಕಾರ ಸದ್ಬಳಕೆ ಮಾಡಿಕೊಳ್ಳಲಿಲ್ಲ. ಅದು ಕೊಂಚ ದುರ್ಬಳಕೆಯಾದುದರ ವಿರುದ್ಧ ಜನರು ದನಿಯೆತ್ತಿದ್ದರು. ಸರ್ಕಾರದ ಮೇಲುಗೈ ಕೊನೆಗಾಣಿಸುವ ಚರ್ಚೆಗಳಾದವು. ಹಾಗಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂ ವ್ಯವಸ್ಥೆಯನ್ನು ಜಾರಿಗೊಳಿಸಿತು. ಆದರೆ ಕ್ರಮೇಣ ಈ ಕೊಲಿಜಿಯಂ ವ್ಯವಸ್ಥೆ ಸಹ ವಿಫಲವಾಗಿದೆ” ಎನ್ನುತ್ತಾರೆ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್‌ರವರು.

ಇದನ್ನೂ ಓದಿ: 12 ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳ ಹೆಸರು ಶಿಫಾರಸು ಮಾಡಿದ ಕೊಲಿಜಿಯಂ

“ಕೊಲಿಜಿಯಂ ವ್ಯವಸ್ಥೆಗೆ ನಿರ್ದಿಷ್ಟವಾಗಿ ಕ್ರೋಢೀಕರಿಸಿದ ನಿಯಮಗಳಾಗಲಿ, ಮಾನದಂಡಗಳಾಗಲಿ ಇಲ್ಲ. ಹಾಗಾಗಿ ನೇಮಕಾತಿಯಲ್ಲಿ ಪಾರದರ್ಶಕತೆ ಬಾರದೆ, ನ್ಯಾಯಾಧೀಶರ ಮಕ್ಕಳೆ ನ್ಯಾಯಾಧೀಶರಾಗುವಂತಹ ಪರಿಸ್ಥಿತಿ ಇದೆ. ಈ ನ್ಯಾಯಾಂಗದ ಮೇಲುಗೈಯನ್ನು ತಪ್ಪಿಸಲು ಸರ್ಕಾರ ಮತ್ತೆ ಯತ್ನಿಸುತ್ತಿದೆ. ಆದರೆ ನನ್ನ ಅಭಿಪ್ರಾಯದಲ್ಲಿ ಸರ್ಕಾರದ ಅಥವಾ ನ್ಯಾಯಾಂಗದ ಮೇಲುಗೈ ಇಲ್ಲದ ಸ್ಪಷ್ಟ ನಿಯಮಗಳನ್ನು ಹೊಂದಿರುವ ಸ್ವತಂತ್ರವಾದ ಸಂಸ್ಥೆಯೊಂದಕ್ಕೆ ನ್ಯಾಯಾಧೀಶರ ನೇಮಕಾತಿ ಅಧಿಕಾರ ನೀಡಬೇಕು” ಎಂದರು.

ಎಚ್.ಎನ್ ನಾಗಮೋಹನ್ ದಾಸ್

“ಈಗ ಕೊಲಿಜಿಯಂ ಕಳಿಸುವ ಶಿಫಾರಸ್ಸುಗಳನ್ನು ಸರ್ಕಾರ ಅನಗತ್ಯವಾಗಿ ತಡೆಹಿಡಿಯುತ್ತಿದೆ. ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳದೆ ಸಮಯ ವ್ಯರ್ಥ ಮಾಡಲಾಗುತ್ತಿದೆ. ಇದರಿಂದ ನ್ಯಾಯಾಧೀಶರಾಗಲು ಒಪ್ಪಿಗೆ ನೀಡಿದ್ದವರು ಸುಸ್ತಾಗಿ ತಮ್ಮ ಅನುಮತಿ ವಾಪಸ್ ಪಡೆಯುವ ಸಂಭವವಿದೆ. ಇನ್ನು ಕೆಲವರು ವಯಸ್ಸು ಮೀರಿ ನಿವೃತ್ತಿಯಾಗುವುದು ಇದೆ. ಇವೆಲ್ಲವೂ ರಾಜಕೀಯ ಕಾರಣಗಳಿಗಾಗಿ ನಡೆಯುತ್ತಿವೆ. ಹಾಗಾಗಿ ಇದು ಸರಿಯಾದ ಮಾರ್ಗವಲ್ಲ.”

“ಮಹಿಳೆಯರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ನ್ಯಾಯಾಂಗಗಳಲ್ಲಿ ಪ್ರಾತಿನಿಧ್ಯವಿರಬೇಕು. ಏಕೆಂದರೆ ಭಾರತವೆಂದರೆ ಯಾವುದೋ ಒಂದು ಜಾತಿಯವರ ಸ್ವತ್ತಲ್ಲ. ಅದು ಹಲವು ಜಾತಿ-ಧರ್ಮಗಳ ಒಕ್ಕೂಟವಾಗಿದೆ. ಎಲ್ಲಾ ಜಾತಿಯವರಿಗೂ ಪ್ರಾತಿನಿಧ್ಯ ಕೊಡಲಾಗದಿದ್ದರೂ ಒಂದು ವಿಶಾಲ ಒಳಗೊಳ್ಳುವಿಕೆ ಅಗತ್ಯವಿದೆ. ನಮ್ಮ ಜನಸಂಖ್ಯೆಯಲ್ಲಿ 50% ಇರುವ ಮಹಿಳೆಯರಿಗೆ ನ್ಯಾಯಾಲಯಗಳಲ್ಲಿ ಪ್ರಾತಿನಿಧ್ಯ ಬೇಡವೇ? ದಲಿತರಿಗೆ ಪ್ರಾತಿನಿಧ್ಯ ಬೇಡವೇ? ಅವರನ್ನು ಹುಡುಕಿ ಅವಕಾಶ ಕೊಡುವ ಅವಶ್ಯಕತೆಯಿದೆ. ಈ ರೀತಿಯ ಪ್ರಾತಿನಿಧ್ಯ, ಪ್ರಾದೇಶಿಕ ಸಮತೋಲನ ಕಾಪಾಡಿಕೊಳ್ಳಬೇಕು” ಎಂದರು.

“ಸುಪ್ರೀ ಕೋರ್ಟ್‌ನಲ್ಲಿ ಐವರು ನ್ಯಾಯಾಧೀಶರು ಮತ್ತು ಹೈಕೋರ್ಟ್‌ಗಳಲ್ಲಿ ಮೂವರು ನ್ಯಾಯಾಧೀಶರು ಕೊಲಿಜಿಯಂನಲ್ಲಿರುತ್ತಾರೆ. ಆದರೆ ಇವರ ಕಣ್ಣಿಗೆ ಕಂಡವರು ಮಾತ್ರ ಪ್ರತಿಭಾವಂತರು ಎಂದು ಹೇಳಲಾಗುವುದಿಲ್ಲ. ಆ ಪ್ರತಿಭಾವಂತರನ್ನು ಗುರುತಿಸುವ ವ್ಯವಸ್ಥೆ ನಮಗೆ ಬೇಕಿದೆ. ಅದಕ್ಕಾಗಿ ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಕ ಮಾಡುವುದು ಸರಿಯಿಲ್ಲ ಅಥವಾ ಸರ್ಕಾರ ಮಾಡುವುದು ಸರಿಯಲ್ಲ. ಬದಲಿಗೆ ನಿರ್ದಿಷ್ಟ ನಿಯಮಗಳು, ಮಾರ್ಗದರ್ಶನಗಳುಳ್ಳ ಒಂದು ಸ್ವಾಯತ್ತ ಸಂಸ್ಥೆಯನ್ನು ಹುಟ್ಟುಹಾಕುವ ಕಡೆಗೆ ಹೆಜ್ಜೆ ಇಡಬೇಕಿದೆ. ಆಗ ಮಾತ್ರ ಅದರ ನೇಮಕಾತಿಗಳಿಗೆ ಮಾನ್ಯತೆ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...