ದೇಶದ 12 ಹೈಕೋರ್ಟ್ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ದಾಖಲೆಯ 68 ಹೆಸರುಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಕೊಲಿಜಿಯಂ ಶಿಫಾರಸ್ಸು ಮಾಡಿದೆ.
ಹೈಕೋರ್ಟ್ಗಳಲ್ಲಿ ತೀವ್ರತರನಾಗಿ ನ್ಯಾಯಮೂರ್ತಿಗಳ ಕೊರತೆ ಇದ್ದು, ಖಾಲಿ ಹುದ್ದೆಗಳನ್ನು ತುಂಬುವ ನಿಟ್ಟಿನಲ್ಲಿ 12 ಹೈಕೋರ್ಟ್ಗಳಿಗೆ ಒಮ್ಮೆಲೆ 68 ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ಕೊಲಿಜಿಯಂ ಸೂಚಿಸಿರುವುದು ಅಭೂತಪೂರ್ವ ಕ್ಷಣವಾಗಿದೆ.
ಜಸ್ಟೀಸ್ ಎನ್.ವಿ.ರಮಣ, ಜಸ್ಟೀಸ್ ಯು.ಯು.ಲಲಿತ್, ಜಸ್ಟೀಸ್ ಎ.ಎಂ.ಖಾನ್ವಿಲ್ಖರ್ ಅವರನ್ನು ಒಳಗೊಂಡಿದ್ದ ಕೊಲಿಜಿಯಂ, 8 ನ್ಯಾಯಮೂರ್ತಿಗಳನ್ನು ಕೇರಳ ಹೈಕೋರ್ಟ್ಗೆ, ಕೊಲ್ಕತ್ತ ಹಾಗೂ ರಾಜಸ್ಥಾನಕ್ಕೆ ತಲಾ 6, ಗುಜರಾತ್ ಮತ್ತು ಜಾರ್ಖಾಂಡ್ಗೆ ತಲಾ 5, ಪಂಜಾಬ್, ಹರಿಯಾಣ, ಮದ್ರಾಸ್ಗೆ ತಲಾ 4, ಛತ್ತೀಸ್ಗಡಕ್ಕೆ ಇಬ್ಬರು, ಮಧ್ಯಪ್ರದೇಶಕ್ಕೆ ಒಬ್ಬರು ನ್ಯಾಯಮೂರ್ತಿಗಳನ್ನು ನೇಮಿಸುವಂತೆ ಒಕ್ಕೂಟ ಸರ್ಕಾರಕ್ಕೆ ಸೂಚಿಸಿದೆ.
ಮಿಜೋರಂನ ಮೊದಲ ಮಹಿಳಾ ನ್ಯಾಯಾಂಗ ಅಧಿಕಾರಿಯೆಂದು ಗುರುತಿಸಲಾಗಿರುವ ಮರ್ಲಿ ವಂಕಂಗ್ ಹೆಸರನ್ನು ಗುವಾಹತಿ ಹೈಕೋರ್ಟ್ಗೆ ಶಿಫಾರಸ್ಸು ಮಾಡಲಾಗಿದೆ. ಪರಿಶಿಷ್ಟ ಪಂಗಡದವರೂ ಆಗಿರುವ ಮರ್ಲಿ ಅವರನ್ನು ಒಳಗೊಂಡಂತೆ 9 ಮಹಿಳೆಯರ ಹೆಸರುಗಳನ್ನು ವಿವಿಧ ಕೋರ್ಟ್ಗಳಿಗೆ ನೇಮಿಸಲು ತಿಳಿಸಲಾಗಿದೆ.
ಆಗಸ್ಟ್ 25ರಿಂದ ಸೆಪ್ಟೆಂಬರ್ 1ರವರೆಗೆ ನಡೆದ ಕೊಲಿಜಿಯಂ ಪರಿಶೀಲನೆಯ ಮುಂದೆ 112 ಮಂದಿಯ ಹೆಸರುಗಳಿದ್ದವು. ಶಿಫಾರಸ್ಸು ಮಾಡಲಾಗಿರುವ 68 ಹೆಸರುಗಳಲ್ಲಿ 44 ಮಂದಿಯು ಬಾರ್ ಅಸೋಸಿಯೇಷನ್ ಹಿನ್ನೆಲೆಯವರಾಗಿದ್ದು, 24 ಮಂದಿ ನ್ಯಾಯಾಂಗದ ಸೇವೆಯ ಹಿನ್ನೆಲೆಯವರಾಗಿದ್ದಾರೆ.
ಇದನ್ನೂ ಓದಿ:‘ಆಮ್ಲಜನಕವನ್ನು ಹೊರಬಿಡುವ ಏಕೈಕ ಪ್ರಾಣಿ ದನ’- ಅಲಹಾಬಾದ್ ಹೈಕೋರ್ಟ್ ವಿಚಿತ್ರ ಹೇಳಿಕೆ
ತೆಲಂಗಾಣ ಹೈಕೋರ್ಟ್ಗೆ ನೇಮಕ ಮಾಡುವಂತೆ 7 ಮಂದಿಯ ಹೆಸರನ್ನು ಆ.17ರಂದು ಶಿಫಾರಸು ಮಾಡಿದ್ದ ಐವರು ನ್ಯಾಯಮೂರ್ತಿಗಳಿದ್ದ ಕೊಲಿಜಿಯಂ, ಮೂವರು ಮಹಿಳಾ ನ್ಯಾಯಮೂರ್ತಿಗಳನ್ನು ಒಳಗೊಂಡಂತೆ 9 ಮಂದಿಯನ್ನು ಸುಪ್ರೀಂ ಕೋರ್ಟ್ಗೆ ನೇಮಿಸುವಂತೆ ಐತಿಹಾಸಿಕ ನಿರ್ಧಾರ ಪ್ರಕಟಿಸಿತ್ತು. ಅದರಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿತ್ತು. ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ, ವಿಕ್ರಮ್ ನಾಥ್, ಜೀತೇಂದ್ರಕುಮಾರ್ ಮಹೇಶ್ವರಿ, ಹಿಮಾ ಕೊಹ್ಲಿ, ಬಿ.ವಿ.ನಾಗರತ್ನ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಈಚೆಗೆ ಪ್ರಮಾಣ ವಚನ ಸ್ವೀಕರಿಸಿದ್ದರು.
ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ, ಸೆಪ್ಟೆಂಬರ್ 1ರವರೆಗೆ ಹೇಳುವುದಾದರೆ 25 ಹೈಕೋರ್ಟ್ಗಳಲ್ಲಿ 281 ಕಾಯಂ ನ್ಯಾಯಾಧೀಶರು, 184 ಹೆಚ್ಚುವರಿ ನ್ಯಾಯಾಧೀಶರು ನೇಮಕ ಆಗಬೇಕಿದೆ. ಅದರಲ್ಲಿ ಅಲಹಾಬಾದ್ ಹೈಕೋರ್ಟ್ನಲ್ಲಿ 68, ಪಂಜಾಬ್, ಹರಿಯಾಣ ಹೈಕೋರ್ಟ್ನಲ್ಲಿ ತಲಾ 40, ಕೊಲ್ಕತ್ತಾ ಹೈಕೋರ್ಟ್ನಲ್ಲಿ 36 ಹುದ್ದೆಗಳು ಭರ್ತಿಯಾಗಬೇಕಿದೆ.
ಇದನ್ನೂ ಓದಿ; ಸಿದ್ದರಾಮಯ್ಯ ಬ್ರಾಹ್ಮಣ್ಯವನ್ನು ಹೆಚ್ಚು ಆಳವಾಗಿ ಬೇರೂರಿಸುವ ಜಾತಿ ನಾಯಕರು: ನಟ ಚೇತನ್