ಹಸಿವಿನಿಂದ ಕಂಗಾಲಾಗಿರುವ ಮಕ್ಕಳು, ಬೆಂಬಿಡದೇ ಸುರಿಯುತ್ತಿರುವ ಮಳೆ, ನಿದ್ರೆಯಿಲ್ಲದ ರಾತ್ರಿಗಳು.. ಇಂತಹದ್ದೊಂದು ಪರಿಸ್ಥಿತಿಯನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವೇ…?
ಕಳೆದ ಹದಿನೈದು ವರ್ಷಗಳ ಹಿಂದೆಯೇ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ವಲಸೆ ಬಂದು ತಿಪಟೂರಿನಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಾ ಜೀವನ ಕಟ್ಟಿಕೊಂಡಿದ್ದ 28 ಕುಟುಂಬಗಳು ಇಂದು ಬೀದಿಗೆ ಬಿದ್ದಿವೆ. ಸರ್ಕಾರಿ ಜಮೀನಿನಲ್ಲಿ ಟೆಂಟ್ ಹಾಕಿಕೊಳ್ಳುವಂತಿಲ್ಲ ಎಂದು ಪೊಲೀಸರು ರಾತ್ರೋರಾತ್ರಿ ಮಕ್ಕಳು, ಬಸರಿ ಹೆಂಗಸರು ಎಂಬುದನ್ನು ನೋಡದೇ ಎತ್ತಂಗಡಿ ಮಾಡಿಸಿದ್ದಾರೆ.
ಹದಿನೆಂಟು ಮುಸ್ಲಿಂ ಸಮುದಾಯ ಹಾಗೂ ಹತ್ತು ಸುಡುಗಾಡು ಸಿದ್ಧರ ಸಮುದಾಯದ ಕುಟುಂಬಗಳು ತಿಪಟೂರಿನ ನಗರ ಸಭೆಯ ಸರ್ಕಾರಿ ಜಾಗದಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಈ ಅಲೆಮಾರಿ ಸಮುದಾಯಗಳು ಒಂದು ಕಡೆ ನೆಲೆನಿಂತು, ವ್ಯಾಪಾರ ಮಾಡುತ್ತಿದ್ದದ್ದು ಮಾತ್ರವಲ್ಲದೇ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರು. ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಸಮುದಾಯದ ಯುವತಿ ಇಡೀ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಅಂಕ ಪಡೆದಿದ್ದಾಳೆ.
ವಿಡಿಯೋ ನೋಡಿ
ನಾನು ತುಂಬಾ ಚೆನ್ನಾಗಿ ಓದಬೇಕು. ಸರ್ಕಾರಿ ಅಧಿಕಾರಿಯಾಗಿ ಕೆಲಸ ಪಡೆದುಕೊಳ್ಳಬೇಕು ಎಂಬ ಕನಸಿದೆ ಎನ್ನುವ ಯುವತಿ ತನ್ನ ಈಗಿನ ತನ್ನ ದುಸ್ಥಿತಿ ನೆನೆದು ಬೇಸರಿಸಿಕೊಳ್ಳುತ್ತಾಳೆ..
ಕುಟುಂಬಗಳಿದ್ದ ಜಾಗದಿಂದ ಎತ್ತಂಗಡಿ ಮಾಡಿಸಿರುವ ಪೊಲೀಸರು ಅವರು ಬೇರೆ ಕಡೆ ತಾತ್ಕಾಲಿಕ ಟೆಂಟ್ ಹಾಕಿಕೊಂಡರೆ ಅಲ್ಲಿಂದಲೂ ಎತ್ತಂಗಡಿ ಮಾಡಿಸುತ್ತಿದ್ದು ಲಾಠಿಚಾರ್ಜ್ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ತಿಪಟೂರಿನಿಂದ ಐದಾರು ಕಿ.ಮೀ ಅಂತರದಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳು ಭಯದಿಂದಲೇ ದಿನ ಕಳೆಯುವಂತಾಗಿದೆ. ಅಲ್ಲಿ ಅವರಿಗೆ ಕುಡಿಯುವ ನೀರು, ಶೌಚಾಲಯ ಸೇರಿ ಯಾವುದೇ ವ್ಯವಸ್ಥೆಯಿಲ್ಲ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರರು ಆ ಎಲ್ಲಾ ಕುಟುಂಬಗಳಿಗೆ ವಸತಿ ವ್ಯವಸ್ಥೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ತಿಳಿಸಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕುಟುಂಬಗಳಿಗೆ ಸರ್ಕಾರಿ ಜಾಗದಲ್ಲಿಯೇ ಟೆಂಟ್ ಹಾಕಿಕೊಳ್ಳಲು ವ್ಯವಸ್ಥೆ ಮಾಡಿಕೊಡಬೇಕು. ಸರ್ಕಾರವೇ ಈ ಕುಟುಂಬಗಳಿಗೆ ಮನೆ ನೀಡಬೇಕು ಎಂದು ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ. ಸೂರು ಕಳೆದುಕೊಂಡವರ ನಿಯೋಗ ತುಮಕೂರು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ವಸತಿ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದೆ.
ಈ ಕುಟುಂಬಗಳಿಗೆ ಸೂರಿನ ವ್ಯವಸ್ಥೆ ಮಾಡಬೇಕು ಇಲ್ಲದಿದ್ದಲ್ಲಿ ಹೋರಾಟ ಆರಂಭಿಸಲಾಗುವುದು ಎಂದಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ ಅವರು ಸರ್ಕಾರದ ಜಾಗದಲ್ಲಿಯೇ ಇವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದು ಬರಿ ತಿಪಟೂರಿನ ಕಥೆಯಲ್ಲ… ಇದೇ ರೀತಿ ರಾಜ್ಯದ ನಾನಾ ಭಾಗಗಳಲ್ಲಿ ಅಲೆಮಾರಿ ಕುಟುಂಬಗಳು ಸ್ವಂತ ಸೂರಿಲ್ಲದೇ, ಮೂಲಭೂತ ವ್ಯವಸ್ಥೆಗಳಿಲ್ಲದೇ ಬದುಕುತ್ತಿದ್ದಾರೆ. ಕುಡಿಯುವ ನೀರಿಗೂ ಹೋರಾಟ ಮಾಡುವಂತಹ ಪರಿಸ್ಥಿತಿಯಲ್ಲಿದ್ದಾರೆ. ಈ ಎಲ್ಲಾ ಕುಟುಂಬಗಳ ಬದುಕು ಹಸನಾಗುವುದು ಯಾವಾಗಾ…?
ಇದನ್ನೂ ಓದಿ: ಏಕಾಏಕಿ ಒಕ್ಕಲೆಬ್ಬಿಸುವಿಕೆ: ಮನೆ ಕಳೆದುಕೊಂಡು ದಾರಿ ಕಾಣದೆ ಪರಿತಪಿಸುತ್ತಿರುವ 86 ಕುಟುಂಬಗಳು
ಸಾರ್ವಜನಿಕ ಸೇವಕರ ಈ ಕ್ರೌರ್ಯ ಕಂಡನಾರ್ಹ.
ಈ ೨೮ ಕುಟುಂಬಗಳಿಗೆ ಸರ್ಕಾರ ಈ ಕೂಡಲೇ ತಾತ್ಕಾಲಿಕ ವಸತಿಯನ್ನು ಕಲ್ಪಿಸಬೇಕು.ಆನಂತರ ಇವರಿಗೆ ಆಶ್ರಯ ಯೋಜನೆಯ ಅಡಿಯಲ್ಲಿ ನಿವೇಶನ ಮತ್ತು ಮನೆಗಳನ್ನು ಕೊಡಬೇಕು.