ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಕಾನೂನಿನ ಆಳ್ವಿಕೆಗೆ ನ್ಯಾಯಾಂಗ ನೇಮಕಾತಿಗಳ ಕೊಲಿಜಿಯಂ ವ್ಯವಸ್ಥೆ ಅತ್ಯಗತ್ಯ ಎಂದು ಮಾಜಿ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಭಾನುವಾರ ಪ್ರತಿಪಾದಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ. “ನನ್ನ ಅಭಿಪ್ರಾಯದಲ್ಲಿ, ಕೊಲಿಜಿಯಂ ವ್ಯವಸ್ಥೆಯು ಅತ್ಯುತ್ತಮ ವ್ಯವಸ್ಥೆಯಾಗಿದ್ದು, ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಸಾಬೀತಾಗಿದೆ” ಎಂದು ಲಲಿತ್ ತಮ್ಮ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನವೆಂಬರ್ 8 ರಂದು ನಿವೃತ್ತರಾದ ನಂತರ ಮಾಜಿ ಮುಖ್ಯ ನ್ಯಾಯಾಧೀಶರು ಮೊದಲ ಬಾರಿಗೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಯನ್ನು “ಅತ್ಯಂತ ಅಪಾರದರ್ಶಕ” ಎಂದು ಒಕ್ಕೂಟ ಸರ್ಕಾರದ ಕಾನೂನು ಸಚಿವ ಕಿರಣ್ ರಿಜಿಜು ಬಣ್ಣಿಸಿದ ಒಂದು ತಿಂಗಳ ನಂತರ ಲಲಿತ್ ಅವರು ಈ ಹೇಳಿಕೆ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
2014 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತಿಂಗಳ ನಂತರ, ಸಂಸತ್ತು ಅಂಗೀಕರಿಸಿದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಕಾಯ್ದೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ 2015 ರ ತೀರ್ಪಿನ ಬಗ್ಗೆ ಸರ್ಕಾರವು ಅತೃಪ್ತವಾಗಿದೆ ಎಂದು ಅಕ್ಟೋಬರ್ 18 ರಂದು ರಿಜಿಜು ಹೇಳಿದ್ದರು.
ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ನ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಕಾನೂನು ಸಚಿವರು ಮತ್ತು ಪ್ರಧಾನ ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಿಂದ ನಾಮನಿರ್ದೇಶನಗೊಂಡ ಇತರ ಇಬ್ಬರು ಗಣ್ಯರನ್ನು ಒಳಗೊಂಡ ಸಂಸ್ಥೆಯ ಮೂಲಕ ನ್ಯಾಯಾಂಗ ನೇಮಕಾತಿಗಳನ್ನು ಮಾಡಲು ಈ ಕಾನೂನು ಪ್ರಸ್ತಾಪಿಸಿತ್ತು.
ಇದನ್ನೂ ಓದಿ: 10% ಮೀಸಲಾತಿಗೆ ಒಪ್ಪಿದ ಸುಪ್ರಿಂಕೋರ್ಟ್: ಟ್ವಿಟರ್ನಲ್ಲಿ ‘ಬ್ಯಾನ್ ಇಡಬ್ಲ್ಯೂಎಸ್’ ಟ್ರೆಂಡ್
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವು ಕೊಲಿಜಿಯಂ ವ್ಯವಸ್ಥೆಯನ್ನು ಬದಲಿಸಲು ಉದ್ದೇಶಿಸಿತ್ತು. ಈ ವರೆಗೆ ಕೊಲಿಜಿಯಂ ಅಡಿಯಲ್ಲಿ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಸುಪ್ರೀಂ ಕೋರ್ಟ್ನ ಐವರು ಹಿರಿಯ ನ್ಯಾಯಾಧೀಶರು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳಿಗೆ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಯನ್ನು ನಿರ್ಧರಿಸುತ್ತಾರೆ.
ಭಾನುವಾರ ಮಾತನಾಡಿದ ಲಲಿತ್ ಅವರು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಮರಳಿ ತರುವುದು ಸರ್ಕಾರದ ವಿಶೇಷ ಅಧಿಕಾರವಾಗಿದೆ. ಆದರೆ ಇದನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕವೆಂದು ಪರಿಗಣಿಸಿದೆ ಎಂದು ನೆನಪಿಸಿದರು.