Homeಅಂಕಣಗಳುಕನ್ನಡದ ನಟರ ಮೇಲೇಕೆ ಐಟಿ ಕಣ್ಣು

ಕನ್ನಡದ ನಟರ ಮೇಲೇಕೆ ಐಟಿ ಕಣ್ಣು

- Advertisement -
- Advertisement -

ಸುನೀಲ್ ಗಿರಿಗೌಡರ್ |

ನಟ ಪುನೀತ್ ರಾಜಕುಮಾರ್ ಹೇಳಿದ್ದಾರೆ, ತೆರಿಗೆ ಇಲಾಖೆ ದಾಳಿಯಿಂದ ಅವರೇನೂ ಹೆದರಿಲ್ಲವಂತೆ, ಅವರ ಲೆಕ್ಕಪತ್ರ ಸರಿಯಾಗಿಯೇ ಇದೆಯಂತೆ, ಐಟಿ ಅಧಿಕಾರಿಗಳು ಅವರ ಕೆಲಸ ಅವರು ಮಾಡಿದ್ದಾರಂತೆ…..
ಅದಕ್ಕೂ ಹಿಂದಿನ ದಿನ ಸುದೀಪ್ ಹೇಳುತ್ತಾರೆ: ದೊಡ್ಡ ಬಜೆಟ್‍ನ ಸಿನಿಮಾಗಳ ಹಿಂದಿನ ಹೂಡಿಕೆಯ ರಹಸ್ಯ ಅರಿಯಲು ಈ ದಾಳಿ ನಡೆದಿದೆ… ನಾನಂತೂ ಕರೆಕ್ಟಾಗಿ ತೆರಿಗೆ ಪಾವತಿ ಮಾಡಿದ್ದೇನೆ….
ಮನದಲ್ಲಿ ಒಂದಿಷ್ಟು ಆತಂಕ ಇಟ್ಟುಕೊಂಡೇ ಮಾತಬಾಡಿದ ಶಿವರಾಜಕುಮಾರ್, ನಮ್ಮ ಆಡಿಟರ್ ಇದಕ್ಕೆಲ್ಲ ಉತ್ತರ ಕೊಡುತ್ತಾರೆ ಅಂದರು.
‘ನಾನಂತೂ ಒಂದಿಷ್ಟೂ ತೆರಿಗೆ ವಂಚನೆ ಮಾಡಿಲ್ಲ. ದೊಡ್ಡ ಬಜೆಟ್ ಸಿನಿಮಾಗಳ ಕುರಿತಂತೆ ಡೌಟ್ ಇರುವುದರಿಂದ ಈ ಐಟಿ ದಾಳಿ ನಡೆಸಿದ್ದಾರೆ ಅನಿಸುತ್ತದೆ’ ಎಂದು ನಟ ಯಶ್ ‘ವಿಶ್ಲೇಷಿಸಿದ್ದಾರೆ’…
* * * * * *
ಜನವರಿ 3ರಂದು ಐಟಿ ದಾಳಿ ನಡೆದದ್ದು ಕೇವಲ ಮೇಲೆ ಉಲ್ಲೇಖಿಸಿದ ನಟರ ಮೇಲಷ್ಟೇ ಅಲ್ಲ. ಅವರ ‘ಅತ್ಯಾತ್ಮೀಯ’ ನಿರ್ಮಾಪಕರ ಮೇಲೂ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ. ಇದುವರೆಗೆ ಈ ನಿರ್ಮಾಪಕರು ಮೇಲಿನ ತರಹದ ಯಾವ ಹೇಳಿಕೆಯನ್ನು ನೀಡಿದ್ದು ಕಂಡುಬಂದಿಲ್ಲ. ಆದರೆ ನಟರ ಹೇಳಿಕೆಗಳು ತಾವೂ ಶುದ್ಧ, ತಮ್ಮ ನಿರ್ಮಾಪಕರೂ ಶುದ್ಧ, ದೊಡ್ಡ ಬಜೆಟ್ ಚಿತ್ರ ಬಂದಾಗ ಇವೆಲ್ಲ ಕಾಮನ್ ಎಂಬ ಲಹರಿಯಲ್ಲಿ ಇವೆ ತಾನೇ?
ಈ ನಿರ್ಮಾಪಕರೆಲ್ಲ, ಒಂದಿಲ್ಲೊಂದು ರಾಜಕೀಯ ನಂಟು ಹೊಂದಿದವರು. ಇವರ ಬಳಿ ತೆರಿಗೆ ಕಟ್ಟದ ಅಂದರೆ ಕಪ್ಪುಹಣ ಇರಬಹುದಾದ ಸಾಧ್ಯತೆಗಳಿಗೇನೂ ಕಮ್ಮಿ ಇಲ್ಲ. ಆದರೆ ನಮ್ಮ ಪ್ರಶ್ನೆ ಇರುವುದು ತಮ್ಮ ದಂಧೆಗಳ ಕಪ್ಪು ವ್ಯವಹಾರವನ್ನು ಮುಚ್ಚಿಡಲು, ಸಾರ್ವಜನಿಕರ ಕಣ್ಣಲ್ಲಿ ಹೀರೋಗಳಾಗಿಯೇ ಇರುವ ಈ ನಟರನ್ನು ಅವರು ಬಳಸಿಕೊಳ್ಳುತ್ತಿರಬಹುದೇ? ಶೋಧಿಸುತ್ತ ಹೋದರೆ, ಇದು ಸತ್ಯವೇ ಅನಿಸುತ್ತದೆ. ಎಲ್ಲೂ ನಮ್ಮ ನಟ ದಿಗ್ಗಜರು ತಮ್ಮ ನಿರ್ಮಾಪಕರ ಬಗ್ಗೆ ಒಂದೇ ಒಂದು ಬೇಸರ ಆಗುವಂತಹ ಮಾತನ್ನು ಹೇಳಿಯೇ ಇಲ್ಲವಲ್ಲ?
ಐಟಿ ದಾಳಿ: ನಟ-ನಿರ್ಮಾಪಕ-ವಿತರಕ ಲಿಂಕ್
ಜನವರಿ 3 ರಂದು ಕರ್ನಾಟಕ ಹಾಗೂ ಗೋವಾದ ಸುಮಾರು 180 ಅಧಿಕಾರಿಗಳು 21 ಸ್ಥಳಗಳಲ್ಲಿ ಐಟಿ ದಾಳಿ ನಡೆಸಿದ್ದರು. 3 ತಿಂಗಳ ಕಾಲ ಇಲಾಖೆ ತನಿಖೆ ನಡೆಸಿ ಅಧಿಕಾರಿಗಳ ಮಾಹಿತಿ ಕಲೆ ಹಾಕಿದ್ದರು. ಪ್ರೊಡಕ್ಷನ್ ಕಂಪನಿಗಳು, ನಿರ್ಮಾಪಕರು, ಸಿನಿಮಾ ಫೈನಾನ್ಶಿಯರ್ಸ್ ಹಾಗೂ ನಟರ ಮನೆಗಳ ಮೇಲೆ ದಾಳಿ ನಡೆಯಿತು. ದಾಳಿಗೆ ಕಾರಣ ತೆರಿಗೆ ವಂಚನೆಯಾಗಿತ್ತು ಎಂಬುದನ್ನು ನಂಬಲು ಸಾಧ್ಯವೇ?
ದಾಳಿ ವೇಳೆ ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ದಾಖಲೆಯಿಲ್ಲದ ಖರ್ಚು ವೆಚ್ಚದ ಕುರಿತು ಸಾಕ್ಷಿ ಸಿಕ್ಕಿದೆ. ಅದರಲ್ಲೂ ದಾಖಲೆಯಿಲ್ಲದ ಥಿಯೇಟರ್ ಕಲೆಕ್ಷನ್ ಹಾಗೂ ತೆರಿಗೆ ವಂಚನೆ ಎಸಗಿರುವುದು ಪತ್ತೆಯಾಗಿದೆ.
ಈ ಅಪರಾಧಕ್ಕೆ ನಿರ್ಮಾಪಕರು ಮತ್ತು ವಿತರಕರಷ್ಟೇ ಜವಾಬ್ದಾರರಲ್ಲವೇ? ಆದರೆ ನಮ್ಮ ಸಿನಿಮಾ ನಟರು ತಮ್ಮ ಕೋಟಿ ಕೋಟಿ ಹಣವನ್ನು ನಿರ್ಮಾಣದಲ್ಲೂ, ವಿತರಣೆಯಲ್ಲೂ (ಇದು ಎಲ್ಲ ಭಾಷೆಗಳ ಸಿನಿಮಾದಲ್ಲಿ ನಡೆಯುತ್ತಿರುವ ವಿದ್ಯಮಾನವೇ ಆಗಿದೆ) ಹೂಡುತ್ತಿದ್ದಾರೆ. ಅವರು ಹೂಡುತ್ತಿರುವ ಹಣ ಪ್ರಾಮಾಣಿಕ ದುಡಿಮೆಯದ್ದೇ ಎಂಬ ಸಂಶಯಗಳಿವೆ. ನಮ್ಮ ನಟರಿಗೂ ಕೆಲವು ತೆರಿಗೆ ವಂಚಕ ಆಗರ್ಭ ಶ್ರೀಮಂತ ರಾಜಕಾರಣಿಗಳ ನಡುವೆ ತುಂಬ ಆಪ್ತವಾದ ಸಂಬಂಧವಿದೆ. ಈ ವಂಚಕ ರಾಜಕಾರಣಿಗಳು, ನಿರ್ಮಾಪಕರು, ವಿತರಕರು ಈ ನಟರÀನ್ನು ಬಳಸಿಕೊಳ್ಳುತ್ತಿರುವ ಸಾಧ್ಯತೆ ಇದ್ದೇ ಇವೆ.
ದಿನಪತ್ರಿಕೆಯೊಂದು, ತನ್ನ ಸಂಗಡ ಮಾತಾಡಿರುವ ಐಟಿ ಅಧಿಕಾರಿಯೊಬ್ಬರು ಈ ದಾಳಿಯ ಅಗತ್ಯವೇ ಇರಲಿಲ್ಲ ಎಂದಿದ್ದಾರೆ ಎಂಬ ವರದಿ ಪ್ರಕಟಿಸಿದೆ. ಐಟಿ ಅಧಿಕಾರಿಗಳ ನಡುವೆಯೇ ಒಮ್ಮತವಿರದಿದ್ದ, ಬಹಳ ದೊಡ್ಡ ಮಟ್ಟದ ದೋಷಗಳು ಸಿಕ್ಕಿಬೀಳುವ ಸಂಭವ ಇಲ್ಲದ ಖಾತ್ರಿಯಿದ್ದೂ ದಾಳಿಯನ್ನೂ ಎಂಜಿನಿಯರಿಂಗ್ ಮಾಡಲಾಗಿದೆ ಅಂದರೆ ಅದರ ಹಿಂದೆ ರಾಜಕೀಯದ ಲೆಕ್ಕಾಚಾರಗಳು ಇರಬೇಕೆನ್ನುವ ಗುಮಾನಿಗಳು ಮೂಡುತ್ತವೆ. ಐಟಿ ಇಲಾಖೆ ಬಹಿರಂಗ ಮಾಡಿದ ವಿವರದ ಪ್ರಕಾರ, ಒಟ್ಟಾರೆ 25.3 ಕೆಜಿ ಚಿನ್ನಾಭರಣ, 2.85 ರೂ. ಕೋಟಿ ನಗದು ಸೇರಿದಂತೆ 11 ಕೋಟಿ ರೂ. ಮೊತ್ತದ ಅಘೋಷಿತ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಅಲ್ಲದೇ 109 ಕೋಟಿ ರೂ. ಮೊತ್ತದ ದಾಖಲೆ ರಹಿತ ಆದಾಯ ಪತ್ತೆಯಾಗಿದೆ ಎನ್ನಲಾಗಿದೆ. ಅಲ್ಲದೇ ತೆರಿಗೆ ಪಾವತಿಸದೆ ಬಚ್ಚಿಟ್ಟ ಆಸ್ತಿ ಮೌಲ್ಯ ಇನ್ನೂ ಅಧಿಕವಾಗಿದ್ದು, ನಟರು, ನಿರ್ಮಾಪಕರು ಒಪ್ಪಿಕೊಳ್ಳದೆ ಇರುವುದರಿಂದ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತಿತರ ಹಣಕಾಸು ತನಿಖಾ ಸಂಸ್ಥೆಗಳ ತನಿಖೆಗೆ ಪ್ರಕರಣ ವಹಿಸಲಾಗುವುದು ಎಂದು ಐ.ಟಿ ತಿಳಿಸಿದೆ.
ಯಾರ ಮನೆಯಲ್ಲಿ ಎಷ್ಟು ಅಘೋಷಿತ ಆಸ್ತಿಪಾಸ್ತಿ ಸಿಕ್ಕಿದೆ ಎಂಬ ವಿವರಗಳನ್ನು ಐ.ಟಿ ನೀಡಿಲ್ಲ. ಶೀಘ್ರ ಈ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದೆ. ಇದರ ಅರ್ಥ ಇಷ್ಟೇ: ನೀವು ನಮ್ಮ ಪರ ಇರದಿದ್ದರೆ ನಾವೂ ಇ.ಡಿ. ದಾಳಿಯ ಮೂಲಕ ನಿಮ್ಮನ್ನು ಹಣಿಯುತ್ತೇವೆ ಎಂದು ಅಸಹಾಯಕ ಮೋದಿ ಟೀಮ್ ಸೂಚನೆ ನೀಡುತ್ತಿರಬಹುದೇ?
ಹರಿದಾಡುತ್ತಿದೆ ಹೀಗೊಂದು ವಾದ
ಕನ್ನಡ ಸ್ಟಾರ್ ನಟರ ಮೇಲೆ ಐಟಿ ದಾಳಿ ಮಾಡಿರೋದಕ್ಕೆ ವಾಸ್ತವಗಳು ಅದೇನೇ ಇರಬಹುದು, ಅವುಗಳ ಜೊತೆಗೆ ಒಂದು ಇಂಟರೆಸ್ಟಿಂಗ್ ವಾದವೂ ಹರಿದಾಡುತ್ತಿದೆ. ಸಿಬಿಐ, ಐಟಿ, ಇಡಿಗಳಂತಹ ಸ್ವಾಯತ್ತ ಸಂಸ್ಥೆಗಳು ಆಳುವ ಪಕ್ಷಗಳ ಕೈಗೊಂಬೆಗಳಂತೆ ವರ್ತಿಸುತ್ತಾ ಬಂದಿರೋದು ಹೊಸದೇನೂ ಅಲ್ಲ. ಖುದ್ದು ಸುಪ್ರೀಂ ನ್ಯಾಯಾಲಯವೇ ಸಿಬಿಐ ಅನ್ನು ಕೇಂದ್ರ ಸರ್ಕಾರದ ಪಂಜರದ ಗಿಳಿ ಅಂತ ದೂರಿದ್ದು ಇದೇ ಕಾರಣಕ್ಕೆ. ಮೋದಿಯವರ ನೇತೃತ್ವದ ಬಿಜೆಪಿ, ಕೇಂದ್ರದ ಅಧಿಕಾರ ಗದ್ದುಗೆ ಏರಿದ ಮೇಲಂತೂ ಈ ಹಸ್ತಕ್ಷೇಪ ವಿಪರೀತ ಎನ್ನುವಂತಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ ಪ್ರೆಸ್‍ಮೀಟ್ ಮಾಡಿದ್ದಾಗಲಿ, ಸಿಬಿಐ ಅಧಿಕಾರಿಗಳು ಬೀದಿಕಾಳಗ ನಡೆಸಿದ್ದಾಗಲಿ, ಆರ್‍ಬಿಐ ಗವರ್ನರ್ ಅರ್ಧಕ್ಕೇ ಎದ್ದುಹೋದದ್ದಾಗಲಿ, ಡಿಕೆ ಶಿವಕುಮಾರ್‍ನಂತಹ ವಿರೋಧ ಪಕ್ಷಗಳ ಪ್ರಭಾವಿ ನಾಯಕರ ಮೇಲೆ ಆಯಕಟ್ಟಿನ ಸಂದರ್ಭದಲ್ಲಿ ಐಟಿ, ಇಡಿಗಳನ್ನು ಛೂಬಿಟ್ಟಿದ್ದಾಗಲಿ ಇದನ್ನು ಸಾಬೀತು ಮಾಡುತ್ತವೆ. 2019ರ ಎಂಪಿ ಎಲೆಕ್ಷನ್ ಹತ್ತಿರವಿರುವ ಈ ಹೊತ್ತಿನಲ್ಲಿ ಕನ್ನಡದ ಸ್ಟಾರ್ ನಟರ ಮೇಲೆ ಐಟಿ ರೇಡು ಮಾಡಿರುವುದರ ಹಿಂದೆಯೂ ಮೋದಿ ಅರ್ಥಾತ್ ಬಿಜೆಪಿಯ ಹುನ್ನಾರವಿರಬಹುದಾ ಎನ್ನುವುದೇ ಆ ವಾದ!
ಅರೆ, ಸ್ಟಾರ್ ನಟರುಗಳಿಗೂ ಎಲೆಕ್ಷನ್‍ಗೂ ಏನು ಸಂಬಂಧ? ಅವರ ಮೇಲೆ ದಾಳಿ ಮಾಡಿ ಬಿಜೆಪಿ ಹೇಗೆ ತಾನೇ ಲಾಭ ಮಾಡಿಕೊಂಡೀತು? ರೇಡ್‍ಗೆ ತುತ್ತಾದವರಲ್ಲಿ ಶಿವರಾಜ್ ಕುಮಾರ್ ಹೊರತುಪಡಿಸಿ ಯಾರೂ ಸಕ್ರಿಯ ರಾಜಕಾರಣದಲ್ಲಿಲ್ಲ, ಶಿವಣ್ಣ ಕೂಡಾ ತಮ್ಮ ಮಡದಿ ಗೀತಕ್ಕ ಹಾಗೂ ಬಾಮೈದ ಮಧು ಬಂಗಾರಪ್ಪನ ಜೆಡಿಎಸ್ ರಾಜಕಾರಣದ ಬೆನ್ನಿಗೆ ನಿಂತಿದ್ದಾರೆಯೇ ವಿನಾಃ ಖುಲ್ಲಂಖುಲ್ಲ ಅಖಾಡಕ್ಕಿಳಿದಿಲ್ಲ. ಅಂತದ್ದರಲ್ಲಿ ಈ ನಟರುಗಳ ಮೇಲಿನ ದಾಳಿಯಿಂದ ಬಿಜೆಪಿ ಯಾವ ಸೀಮೆಯ ರಾಜಕೀಯ ಜಿದ್ದು ತೀರಿಸಿಕೊಂಡೀತು? ಈ ಎಲ್ಲಾ ಪ್ರಶ್ನೆಗಳಲ್ಲಿ ಖಂಡಿತ ವಜನ್ನು ಇದೆ. ಆದರೆ ಈ ವಾದವನ್ನು ಮುಂದಿಡುತ್ತಿರುವವರ ಪ್ರಕಾರ ಬಿಜೆಪಿ ಮೇಲೆ ಜನರ ಒಲವು ಕಡಿಮೆಯಾಗಿರೋದಲ್ಲದೆ, ನಾಲ್ಕೂವರೆ ವರ್ಷದಲ್ಲಿ ಯಾವೊಂದು ಜನಪರ ಕೆಲಸ ಮಾಡದೆ ಅಂಬಾನಿ-ಅದಾನಿಗಳ ಬಾಲಬುಡಕನಂತೆ ವರ್ತಿಸಿದ ಸ್ವತಃ ಮೋದಿಯವರ ಜನಪ್ರಿಯತೆಯೂ ಕುಸಿದಿದೆ. ಮೊನ್ನೆ ಮುಕ್ತಾಯವಾದ ಪಂಚರಾಜ್ಯ ಫಲಿತಾಂಶಗಳೇ ಇದಕ್ಕೆ ಸಾಕ್ಷಿ.
ಹಾಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಯಾವ ಸಮರ್ಥ ಕಾರಣಗಳೂ ಕಾಣುತ್ತಿಲ್ಲ್ಲ. ಈಗ ದಿಢೀರ್ ಜನಪ್ರಿಯತೆ ಏರಿಸಿಕೊಳ್ಳುವುದೊಂದೇ ಉಳಿದಿರುವ ಮಾರ್ಗ. ಯಾಕೆಂದರೆ ಬಿಜೆಪಿಯ ಫೇವರಿಟ್ ರಾಮಮಂದಿರ ಇಶ್ಯೂ ಕೂಡಾ ಪಂಚರಾಜ್ಯ ಎಲೆಕ್ಷನ್‍ನಲ್ಲಿ ವರ್ಕ್‍ಔಟ್ ಆಗಿಲ್ಲ. ಶಬರಿಮಲೆ ವಿವಾದವೂ ದೊಡ್ಡಮಟ್ಟದಲ್ಲಿ ಕೈಹಿಡಿಯುವಂತೆ ಕಾಣುತ್ತಿಲ್ಲ. ಮಲೆಯಾಳಿ ಮಹಿಳೆಯರು ನಡೆಸಿದ 650 ಕಿಮೀ ಉದ್ದದ ಮಾನವಸರಪಳಿ ಬಿಜೆಪಿಗರನ್ನು ಆತಂಕಕ್ಕೆ ತಳ್ಳಿದೆ. ಇನ್ನು ಬಿಜೆಪಿಯ ಐಟಿ ವಿಂಗು ನಡೆಸುತ್ತಿರುವ ಹಿಂದೂ-ಮುಸ್ಲಿಂ ದ್ವೇಷದ ಫೋಟೊಶಾಪ್ ಮೆಸೇಜುಗಳೂ ಜನರನ್ನು ಇಬ್ಬಾಗಿಸುತ್ತಿಲ್ಲ. ಇಂಥಾ ಹೊತ್ತಲ್ಲಿ ದಿಢೀರ್ ಜನಪ್ರಿಯತೆಯ ಹೊರತಾಗಿ ಬೇರಾವ ಮಾರ್ಗಗಳೂ ಬಿಜೆಪಿಯನ್ನು ಬಚಾವು ಮಾಡಲು ಸಾಧ್ಯವಿಲ್ಲ. ಇದನ್ನು ಸಾಧಿಸಬೇಕೆಂದರೆ ಏನೇನು ಮಾರ್ಗಗಳಿವೆ ಅನ್ನೋದನ್ನು ಈಗ ಬಿಜೆಪಿ ದಿಗ್ಗಜರು ಹುಡುಕಾಡುತ್ತಿದ್ದಾರೆ. ಜನಪ್ರಿಯ ಯೋಜನೆಗಳನ್ನು ಘೋಷಿಸೋದು ಅಂತವುಗಳಲ್ಲಿ ಒಂದು. ಅದು ಮಾಡಬೇಕೆಂದರೆ ಬೊಕ್ಕಸದಲ್ಲಿ ಹಣವಿರಬೇಕು. ಆದರೆ ನೀರವ್ ಮೋದಿ, ಮೆಹುಲ್ ಚೋಸ್ಕಿ, ವಿಜಯ್ ಮಲ್ಯರಂತ ಬ್ಯಾಂಕುಗಳ್ಳರು ಜನರ ಹಣ ದೋಚಿಕೊಂಡು ನಿರಾಯಾಸವಾಗಿ ಪರಾರಿಯಾದದ್ದಲ್ಲದೆ ಅಂಬಾನಿ, ಅದಾನಿಗಳಂತಹ ಕಾರ್ಪೊರೇಟ್ ಕುಳಗಳಿಗೆ ಕೇಂದ್ರ ಸರ್ಕಾರವೇ ಪೌರೋಹಿತ್ಯ ವಹಿಸಿ ತೆರಿಗೆ ಹಣವನ್ನು ಧಾರೆ ಎರೆದಿರೋದ್ರಿಂದ ಈಗ ಬೊಕ್ಕಸವೂ ಖಾಲಿ. ಹಾಗಾಗಿಯೇ ರಿಸರ್ವ್ ಬ್ಯಾಂಕಿನ ಆಪತ್ಕಾಲದ ನಿಧಿ ಮೇಲೂ ಮೋದಿ ಕಣ್ಣು ಹಾಕಿದ್ದಾರೆ. ಹಾಗೆ ಮಾಡಿದರೆ ಮುಂದೆ ತಾನೆಲ್ಲಿ ಸಿಕ್ಕಿಬೀಳುತ್ತೇನೊ ಎಂಬ ಭಯದಿಂದಲೇ ಆರ್‍ಬಿಐ ಗವರ್ನರ್ ಊರ್ಜಿತ್ ಸದ್ದಿಲ್ಲದೆ ರಾಜೀನಾಮೆ ಬಿಸಾಕಿ ಹೋದದ್ದು.
ಇನ್ನು ದಿಢೀರ್ ಜನಪ್ರಿಯತೆ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಅಮಿತ್ ಶಾ ಟೀಮಿಗೆ ಹೊಳೆದಿರೋದು ಜನಪ್ರಿಯ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸೋದು. ಸುಲಭಕ್ಕೆ ಸಿಗುವ ಮತ್ತು ಹೆಚ್ಚು ಪರಿಣಾಮಕಾರಿಯಾದ ಅಂಥಾ ವ್ಯಕ್ತಿಗಳೆಂದರೆ ಅದು ಸಿನಿಮಾ ಮಂದಿ. ಅತ್ತ ತಮಿಳುನಾಡಿನಲ್ಲಿ ಸೂಪರ್‍ಸ್ಟಾರ್ ರಜನೀಕಾಂತ್‍ರನ್ನೇ ಖೆಡ್ಡಾಕ್ಕೆ ಕೆಡವಿಕೊಳ್ಳಲು ತಯಾರಿ ನಡೆಸಿರುವ ಬಿಜೆಪಿಗೆ ದಕ್ಷಿಣ ರಾಜ್ಯಗಳಲ್ಲಿ ಸಿನಿಮಾ ನಟರ ಪ್ರಭಾವ ಎಂತದ್ದು ಅನ್ನೋದು ಅರ್ಥವಾಗಿದೆ. ಅದರಲ್ಲೂ ಎಂಪಿ ಎಲೆಕ್ಷನ್‍ನ ಜೊತೆಜೊತೆಗೆ ಸಾಧ್ಯವಾದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಧ್ವಂಸ ಮಾಡಿ ಬಿಜೆಪಿ ಸರ್ಕಾರ ರಚಿಸುವ ಮೂಲಕ ದೇಶದಲ್ಲಿ ಕುಗ್ಗಿರುವ ತನ್ನ ಅಧಿಕಾರ ಬಲವನ್ನು ಹಿಗ್ಗಿಸಿಕೊಳ್ಳಲು ಅವಕಾಶವಿರುವ ಕರ್ನಾಟಕದಲ್ಲಿ ಸಿನಿಮಾ ನಟರುಗಳನ್ನು ಅಂಕೆಯಲ್ಲಿಟ್ಟುಕೊಳ್ಳುವುದು ಬಿಜೆಪಿಯ ಹುನ್ನಾರ ಎನ್ನುತ್ತೆ ಆ ವಾದ.
ಯಶ್ ಮತ್ತು ಸುದೀಪ್ ಕೇವಲ ಸಿನಿಮಾ ಪ್ರಭಾವದಲ್ಲಿ ಮಾತ್ರವಲ್ಲದೆ ಜಾತಿ ಹಿನ್ನೆಲೆಯಲ್ಲೂ ಪ್ರಭಾವಿಗಳು. ಕಳೆದ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಈ ಇಬ್ಬರೂ ಕೆಲ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಅವರು ಪ್ರಚಾರ ಮಾಡಿದ ಬಹುಪಾಲು ಕಡೆ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ ಒಂದು ಐಡಿಯಾಲಜಿಕಲ್ ಫ್ರೇಮ್ ಇಲ್ಲದ ಇವರು ಯಾವ ಪಕ್ಷದ ಅಭ್ಯರ್ಥಿಗಳು ಕರೆದರೂ ಹೋಗಿ ಕೈಬೀಸಾಡಿ ಬರುತ್ತಾರೆ. ಯಶ್ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರೆ, ಸುದೀಪ್ ಬಿಜೆಪಿಯ ಶ್ರೀರಾಮುಲು ಪರ ಮೊಳಕಾಲ್ಮೂರಿನಲ್ಲಿ ಪ್ರಚಾರ ಮಾಡಿದರು ಕಾಂಗ್ರೆಸಿನ ಸಿದ್ದರಾಮಯ್ಯ ಮೇಲಿನ ಅಭಿಮಾನದಿಂದ ಬಾದಾಮಿ ಕಣದಲ್ಲಿ ರಾಮುಲು ಪರ ಕೈಬೀಸದೆ ಹಿಂದೆ ಸರಿದಿದ್ದರು. ಇನ್ನು ರಾಜ್ ಕುಟುಂಬದ ಶಿವಣ್ಣ, ಪುನೀತ್‍ಗೆ ರಾಜ್ಯಾದ್ಯಂತ ಅಭಿಮಾನಿ ಸಮೂಹವಿದೆ. ಎಲೆಕ್ಷನ್‍ಗು ಮುನ್ನ ಇಂತಿಪ್ಪ ಸ್ಟಾರ್‍ವ್ಯಾಲ್ಯು ನಟರನ್ನು ತನ್ನ ಅಂಕೆಯಲ್ಲಿಟ್ಟುಕೊಂಡರೆ ಎಲೆಕ್ಷನ್ ಸಮಯದಲ್ಲಿ ತಮ್ಮ ಪರ ಪ್ರಚಾರಕ್ಕೆ ಬಳಸಿಕೊಳ್ಳಬಹುದು, ಕಡೇಪಕ್ಷ ವಿರೋಧಿಗಳ ಪರವಾಗಿ ಪ್ರಚಾರಕ್ಕೆ ಹೋಗದಂತೆ ನಿಯಂತ್ರಿಸಬಹುದು ಎನ್ನುವ ಲೆಕ್ಕಾಚಾರದಿಂದಲೇ ಐಟಿಯನ್ನು ಛೂಬಿಟ್ಟು ಬೆದರಿಸಿದೆ ಎಂಬ ಷರಾ ಬರೆಯುತ್ತಿದೆ ಆ ವಾದ.
ಕನ್ನಡದಲ್ಲಿ ದಿ ವಿಲನ್, ಕೆಜೆಎಫ್‍ನಂತಹ ದೊಡ್ಡ ಬಜೆಟ್‍ನ ಸಿನಿಮಾ ನಿರ್ಮಾಣವಾದ್ದರಿಂದ ಈ ರೇಡು ನಡೆಸಲಾಗಿದೆ ಎಂಬ ಸಮರ್ಥನೆ ಕೇಳಿಬರುತ್ತಿದೆಯಾದರು ಅದು ಅಷ್ಟೊಂದು ಗಟ್ಟಿ ನೆಪವಲ್ಲ. ಯಾಕೆಂದರೆ ಇವುಗಳಿಗಿಂತ ದೊಡ್ಡ ಬಜೆಟ್ಟಿನ ಸಿನಿಮಾಗಳು ತೆಲುಗು, ತಮಿಳು ಚಿತ್ರರಂಗದಲ್ಲಿ ಮಾಮೂಲಿ ಎನ್ನುವಷ್ಟು ಸಹಜವಾಗಿ ನಿರ್ಮಾಣವಾಗುತ್ತಿವೆ. ರಾಜಮೌಳಿಯ ಬಾಹುಬಲಿ, ರಜನೀಕಾಂತ್‍ರ 2.0 ಸಿನಿಮಾಗಳ ಬಜೆಟ್ಟಿನ ಮುಂದೆ ಕನ್ನಡ ಸಿನಿಮಾಗಳ ಬಜೆಟ್ಟಾಗಲಿ, ಮಾರುಕಟ್ಟೆಯಾಗಲಿ ದೊಡ್ಡ ಪ್ರತಿಸ್ಪರ್ಧಿಗಳಲ್ಲ ಅನ್ನೋದು ವಾಸ್ತವ. ಆ ಸಿನಿಮಾ ನಿರ್ಮಾತೃಗಳ ಮೇಲಿಲ್ಲದ ಐಟಿ ಇಲಾಖೆಯ ಕಣ್ಣು, ಕನ್ನಡ ಸಿನಿಮಾಗಳನ್ನೇಕೆ ಕೆಕ್ಕರಿಸಿ ನೋಡಬೇಕು?
ರಾಜಕೀಯ ಲೆಕ್ಕಾಚಾರದಿಂದ ಕನ್ನಡದ ನಟರುಗಳ ಮೇಲೆ ಐಟಿ ರೇಡು ನಡೆದಿದೆ ಅನ್ನೋ ಈ ವಾದದಲ್ಲಿ ಅಷ್ಟಾಗಿ ಲಾಜಿಕ್ಕು ಕಾಣದಿರಬಹುದು, ಆದರೆ ಮೋದಿ-ಅಮಿತ್ ಶಾ ರಾಜಕಾರಣದ ವೈಖರಿ ನೋಡಿದರೆ ಯಾವುದನ್ನೂ ಅಷ್ಟು ಸುಲಭಕ್ಕೆ ತಳ್ಳಿಹಾಕಲಾಗುವುದಿಲ್ಲ ಅನ್ನೋದು ಮಾತ್ರ ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...