Homeಅಂಕಣಗಳುಕನ್ನಡದ ನಟರ ಮೇಲೇಕೆ ಐಟಿ ಕಣ್ಣು

ಕನ್ನಡದ ನಟರ ಮೇಲೇಕೆ ಐಟಿ ಕಣ್ಣು

- Advertisement -
- Advertisement -

ಸುನೀಲ್ ಗಿರಿಗೌಡರ್ |

ನಟ ಪುನೀತ್ ರಾಜಕುಮಾರ್ ಹೇಳಿದ್ದಾರೆ, ತೆರಿಗೆ ಇಲಾಖೆ ದಾಳಿಯಿಂದ ಅವರೇನೂ ಹೆದರಿಲ್ಲವಂತೆ, ಅವರ ಲೆಕ್ಕಪತ್ರ ಸರಿಯಾಗಿಯೇ ಇದೆಯಂತೆ, ಐಟಿ ಅಧಿಕಾರಿಗಳು ಅವರ ಕೆಲಸ ಅವರು ಮಾಡಿದ್ದಾರಂತೆ…..
ಅದಕ್ಕೂ ಹಿಂದಿನ ದಿನ ಸುದೀಪ್ ಹೇಳುತ್ತಾರೆ: ದೊಡ್ಡ ಬಜೆಟ್‍ನ ಸಿನಿಮಾಗಳ ಹಿಂದಿನ ಹೂಡಿಕೆಯ ರಹಸ್ಯ ಅರಿಯಲು ಈ ದಾಳಿ ನಡೆದಿದೆ… ನಾನಂತೂ ಕರೆಕ್ಟಾಗಿ ತೆರಿಗೆ ಪಾವತಿ ಮಾಡಿದ್ದೇನೆ….
ಮನದಲ್ಲಿ ಒಂದಿಷ್ಟು ಆತಂಕ ಇಟ್ಟುಕೊಂಡೇ ಮಾತಬಾಡಿದ ಶಿವರಾಜಕುಮಾರ್, ನಮ್ಮ ಆಡಿಟರ್ ಇದಕ್ಕೆಲ್ಲ ಉತ್ತರ ಕೊಡುತ್ತಾರೆ ಅಂದರು.
‘ನಾನಂತೂ ಒಂದಿಷ್ಟೂ ತೆರಿಗೆ ವಂಚನೆ ಮಾಡಿಲ್ಲ. ದೊಡ್ಡ ಬಜೆಟ್ ಸಿನಿಮಾಗಳ ಕುರಿತಂತೆ ಡೌಟ್ ಇರುವುದರಿಂದ ಈ ಐಟಿ ದಾಳಿ ನಡೆಸಿದ್ದಾರೆ ಅನಿಸುತ್ತದೆ’ ಎಂದು ನಟ ಯಶ್ ‘ವಿಶ್ಲೇಷಿಸಿದ್ದಾರೆ’…
* * * * * *
ಜನವರಿ 3ರಂದು ಐಟಿ ದಾಳಿ ನಡೆದದ್ದು ಕೇವಲ ಮೇಲೆ ಉಲ್ಲೇಖಿಸಿದ ನಟರ ಮೇಲಷ್ಟೇ ಅಲ್ಲ. ಅವರ ‘ಅತ್ಯಾತ್ಮೀಯ’ ನಿರ್ಮಾಪಕರ ಮೇಲೂ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ. ಇದುವರೆಗೆ ಈ ನಿರ್ಮಾಪಕರು ಮೇಲಿನ ತರಹದ ಯಾವ ಹೇಳಿಕೆಯನ್ನು ನೀಡಿದ್ದು ಕಂಡುಬಂದಿಲ್ಲ. ಆದರೆ ನಟರ ಹೇಳಿಕೆಗಳು ತಾವೂ ಶುದ್ಧ, ತಮ್ಮ ನಿರ್ಮಾಪಕರೂ ಶುದ್ಧ, ದೊಡ್ಡ ಬಜೆಟ್ ಚಿತ್ರ ಬಂದಾಗ ಇವೆಲ್ಲ ಕಾಮನ್ ಎಂಬ ಲಹರಿಯಲ್ಲಿ ಇವೆ ತಾನೇ?
ಈ ನಿರ್ಮಾಪಕರೆಲ್ಲ, ಒಂದಿಲ್ಲೊಂದು ರಾಜಕೀಯ ನಂಟು ಹೊಂದಿದವರು. ಇವರ ಬಳಿ ತೆರಿಗೆ ಕಟ್ಟದ ಅಂದರೆ ಕಪ್ಪುಹಣ ಇರಬಹುದಾದ ಸಾಧ್ಯತೆಗಳಿಗೇನೂ ಕಮ್ಮಿ ಇಲ್ಲ. ಆದರೆ ನಮ್ಮ ಪ್ರಶ್ನೆ ಇರುವುದು ತಮ್ಮ ದಂಧೆಗಳ ಕಪ್ಪು ವ್ಯವಹಾರವನ್ನು ಮುಚ್ಚಿಡಲು, ಸಾರ್ವಜನಿಕರ ಕಣ್ಣಲ್ಲಿ ಹೀರೋಗಳಾಗಿಯೇ ಇರುವ ಈ ನಟರನ್ನು ಅವರು ಬಳಸಿಕೊಳ್ಳುತ್ತಿರಬಹುದೇ? ಶೋಧಿಸುತ್ತ ಹೋದರೆ, ಇದು ಸತ್ಯವೇ ಅನಿಸುತ್ತದೆ. ಎಲ್ಲೂ ನಮ್ಮ ನಟ ದಿಗ್ಗಜರು ತಮ್ಮ ನಿರ್ಮಾಪಕರ ಬಗ್ಗೆ ಒಂದೇ ಒಂದು ಬೇಸರ ಆಗುವಂತಹ ಮಾತನ್ನು ಹೇಳಿಯೇ ಇಲ್ಲವಲ್ಲ?
ಐಟಿ ದಾಳಿ: ನಟ-ನಿರ್ಮಾಪಕ-ವಿತರಕ ಲಿಂಕ್
ಜನವರಿ 3 ರಂದು ಕರ್ನಾಟಕ ಹಾಗೂ ಗೋವಾದ ಸುಮಾರು 180 ಅಧಿಕಾರಿಗಳು 21 ಸ್ಥಳಗಳಲ್ಲಿ ಐಟಿ ದಾಳಿ ನಡೆಸಿದ್ದರು. 3 ತಿಂಗಳ ಕಾಲ ಇಲಾಖೆ ತನಿಖೆ ನಡೆಸಿ ಅಧಿಕಾರಿಗಳ ಮಾಹಿತಿ ಕಲೆ ಹಾಕಿದ್ದರು. ಪ್ರೊಡಕ್ಷನ್ ಕಂಪನಿಗಳು, ನಿರ್ಮಾಪಕರು, ಸಿನಿಮಾ ಫೈನಾನ್ಶಿಯರ್ಸ್ ಹಾಗೂ ನಟರ ಮನೆಗಳ ಮೇಲೆ ದಾಳಿ ನಡೆಯಿತು. ದಾಳಿಗೆ ಕಾರಣ ತೆರಿಗೆ ವಂಚನೆಯಾಗಿತ್ತು ಎಂಬುದನ್ನು ನಂಬಲು ಸಾಧ್ಯವೇ?
ದಾಳಿ ವೇಳೆ ಸಿನಿಮಾ ನಿರ್ಮಾಣ ಹಾಗೂ ವಿತರಣೆಯಲ್ಲಿ ದಾಖಲೆಯಿಲ್ಲದ ಖರ್ಚು ವೆಚ್ಚದ ಕುರಿತು ಸಾಕ್ಷಿ ಸಿಕ್ಕಿದೆ. ಅದರಲ್ಲೂ ದಾಖಲೆಯಿಲ್ಲದ ಥಿಯೇಟರ್ ಕಲೆಕ್ಷನ್ ಹಾಗೂ ತೆರಿಗೆ ವಂಚನೆ ಎಸಗಿರುವುದು ಪತ್ತೆಯಾಗಿದೆ.
ಈ ಅಪರಾಧಕ್ಕೆ ನಿರ್ಮಾಪಕರು ಮತ್ತು ವಿತರಕರಷ್ಟೇ ಜವಾಬ್ದಾರರಲ್ಲವೇ? ಆದರೆ ನಮ್ಮ ಸಿನಿಮಾ ನಟರು ತಮ್ಮ ಕೋಟಿ ಕೋಟಿ ಹಣವನ್ನು ನಿರ್ಮಾಣದಲ್ಲೂ, ವಿತರಣೆಯಲ್ಲೂ (ಇದು ಎಲ್ಲ ಭಾಷೆಗಳ ಸಿನಿಮಾದಲ್ಲಿ ನಡೆಯುತ್ತಿರುವ ವಿದ್ಯಮಾನವೇ ಆಗಿದೆ) ಹೂಡುತ್ತಿದ್ದಾರೆ. ಅವರು ಹೂಡುತ್ತಿರುವ ಹಣ ಪ್ರಾಮಾಣಿಕ ದುಡಿಮೆಯದ್ದೇ ಎಂಬ ಸಂಶಯಗಳಿವೆ. ನಮ್ಮ ನಟರಿಗೂ ಕೆಲವು ತೆರಿಗೆ ವಂಚಕ ಆಗರ್ಭ ಶ್ರೀಮಂತ ರಾಜಕಾರಣಿಗಳ ನಡುವೆ ತುಂಬ ಆಪ್ತವಾದ ಸಂಬಂಧವಿದೆ. ಈ ವಂಚಕ ರಾಜಕಾರಣಿಗಳು, ನಿರ್ಮಾಪಕರು, ವಿತರಕರು ಈ ನಟರÀನ್ನು ಬಳಸಿಕೊಳ್ಳುತ್ತಿರುವ ಸಾಧ್ಯತೆ ಇದ್ದೇ ಇವೆ.
ದಿನಪತ್ರಿಕೆಯೊಂದು, ತನ್ನ ಸಂಗಡ ಮಾತಾಡಿರುವ ಐಟಿ ಅಧಿಕಾರಿಯೊಬ್ಬರು ಈ ದಾಳಿಯ ಅಗತ್ಯವೇ ಇರಲಿಲ್ಲ ಎಂದಿದ್ದಾರೆ ಎಂಬ ವರದಿ ಪ್ರಕಟಿಸಿದೆ. ಐಟಿ ಅಧಿಕಾರಿಗಳ ನಡುವೆಯೇ ಒಮ್ಮತವಿರದಿದ್ದ, ಬಹಳ ದೊಡ್ಡ ಮಟ್ಟದ ದೋಷಗಳು ಸಿಕ್ಕಿಬೀಳುವ ಸಂಭವ ಇಲ್ಲದ ಖಾತ್ರಿಯಿದ್ದೂ ದಾಳಿಯನ್ನೂ ಎಂಜಿನಿಯರಿಂಗ್ ಮಾಡಲಾಗಿದೆ ಅಂದರೆ ಅದರ ಹಿಂದೆ ರಾಜಕೀಯದ ಲೆಕ್ಕಾಚಾರಗಳು ಇರಬೇಕೆನ್ನುವ ಗುಮಾನಿಗಳು ಮೂಡುತ್ತವೆ. ಐಟಿ ಇಲಾಖೆ ಬಹಿರಂಗ ಮಾಡಿದ ವಿವರದ ಪ್ರಕಾರ, ಒಟ್ಟಾರೆ 25.3 ಕೆಜಿ ಚಿನ್ನಾಭರಣ, 2.85 ರೂ. ಕೋಟಿ ನಗದು ಸೇರಿದಂತೆ 11 ಕೋಟಿ ರೂ. ಮೊತ್ತದ ಅಘೋಷಿತ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಅಲ್ಲದೇ 109 ಕೋಟಿ ರೂ. ಮೊತ್ತದ ದಾಖಲೆ ರಹಿತ ಆದಾಯ ಪತ್ತೆಯಾಗಿದೆ ಎನ್ನಲಾಗಿದೆ. ಅಲ್ಲದೇ ತೆರಿಗೆ ಪಾವತಿಸದೆ ಬಚ್ಚಿಟ್ಟ ಆಸ್ತಿ ಮೌಲ್ಯ ಇನ್ನೂ ಅಧಿಕವಾಗಿದ್ದು, ನಟರು, ನಿರ್ಮಾಪಕರು ಒಪ್ಪಿಕೊಳ್ಳದೆ ಇರುವುದರಿಂದ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತಿತರ ಹಣಕಾಸು ತನಿಖಾ ಸಂಸ್ಥೆಗಳ ತನಿಖೆಗೆ ಪ್ರಕರಣ ವಹಿಸಲಾಗುವುದು ಎಂದು ಐ.ಟಿ ತಿಳಿಸಿದೆ.
ಯಾರ ಮನೆಯಲ್ಲಿ ಎಷ್ಟು ಅಘೋಷಿತ ಆಸ್ತಿಪಾಸ್ತಿ ಸಿಕ್ಕಿದೆ ಎಂಬ ವಿವರಗಳನ್ನು ಐ.ಟಿ ನೀಡಿಲ್ಲ. ಶೀಘ್ರ ಈ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದೆ. ಇದರ ಅರ್ಥ ಇಷ್ಟೇ: ನೀವು ನಮ್ಮ ಪರ ಇರದಿದ್ದರೆ ನಾವೂ ಇ.ಡಿ. ದಾಳಿಯ ಮೂಲಕ ನಿಮ್ಮನ್ನು ಹಣಿಯುತ್ತೇವೆ ಎಂದು ಅಸಹಾಯಕ ಮೋದಿ ಟೀಮ್ ಸೂಚನೆ ನೀಡುತ್ತಿರಬಹುದೇ?
ಹರಿದಾಡುತ್ತಿದೆ ಹೀಗೊಂದು ವಾದ
ಕನ್ನಡ ಸ್ಟಾರ್ ನಟರ ಮೇಲೆ ಐಟಿ ದಾಳಿ ಮಾಡಿರೋದಕ್ಕೆ ವಾಸ್ತವಗಳು ಅದೇನೇ ಇರಬಹುದು, ಅವುಗಳ ಜೊತೆಗೆ ಒಂದು ಇಂಟರೆಸ್ಟಿಂಗ್ ವಾದವೂ ಹರಿದಾಡುತ್ತಿದೆ. ಸಿಬಿಐ, ಐಟಿ, ಇಡಿಗಳಂತಹ ಸ್ವಾಯತ್ತ ಸಂಸ್ಥೆಗಳು ಆಳುವ ಪಕ್ಷಗಳ ಕೈಗೊಂಬೆಗಳಂತೆ ವರ್ತಿಸುತ್ತಾ ಬಂದಿರೋದು ಹೊಸದೇನೂ ಅಲ್ಲ. ಖುದ್ದು ಸುಪ್ರೀಂ ನ್ಯಾಯಾಲಯವೇ ಸಿಬಿಐ ಅನ್ನು ಕೇಂದ್ರ ಸರ್ಕಾರದ ಪಂಜರದ ಗಿಳಿ ಅಂತ ದೂರಿದ್ದು ಇದೇ ಕಾರಣಕ್ಕೆ. ಮೋದಿಯವರ ನೇತೃತ್ವದ ಬಿಜೆಪಿ, ಕೇಂದ್ರದ ಅಧಿಕಾರ ಗದ್ದುಗೆ ಏರಿದ ಮೇಲಂತೂ ಈ ಹಸ್ತಕ್ಷೇಪ ವಿಪರೀತ ಎನ್ನುವಂತಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರೇ ಪ್ರೆಸ್‍ಮೀಟ್ ಮಾಡಿದ್ದಾಗಲಿ, ಸಿಬಿಐ ಅಧಿಕಾರಿಗಳು ಬೀದಿಕಾಳಗ ನಡೆಸಿದ್ದಾಗಲಿ, ಆರ್‍ಬಿಐ ಗವರ್ನರ್ ಅರ್ಧಕ್ಕೇ ಎದ್ದುಹೋದದ್ದಾಗಲಿ, ಡಿಕೆ ಶಿವಕುಮಾರ್‍ನಂತಹ ವಿರೋಧ ಪಕ್ಷಗಳ ಪ್ರಭಾವಿ ನಾಯಕರ ಮೇಲೆ ಆಯಕಟ್ಟಿನ ಸಂದರ್ಭದಲ್ಲಿ ಐಟಿ, ಇಡಿಗಳನ್ನು ಛೂಬಿಟ್ಟಿದ್ದಾಗಲಿ ಇದನ್ನು ಸಾಬೀತು ಮಾಡುತ್ತವೆ. 2019ರ ಎಂಪಿ ಎಲೆಕ್ಷನ್ ಹತ್ತಿರವಿರುವ ಈ ಹೊತ್ತಿನಲ್ಲಿ ಕನ್ನಡದ ಸ್ಟಾರ್ ನಟರ ಮೇಲೆ ಐಟಿ ರೇಡು ಮಾಡಿರುವುದರ ಹಿಂದೆಯೂ ಮೋದಿ ಅರ್ಥಾತ್ ಬಿಜೆಪಿಯ ಹುನ್ನಾರವಿರಬಹುದಾ ಎನ್ನುವುದೇ ಆ ವಾದ!
ಅರೆ, ಸ್ಟಾರ್ ನಟರುಗಳಿಗೂ ಎಲೆಕ್ಷನ್‍ಗೂ ಏನು ಸಂಬಂಧ? ಅವರ ಮೇಲೆ ದಾಳಿ ಮಾಡಿ ಬಿಜೆಪಿ ಹೇಗೆ ತಾನೇ ಲಾಭ ಮಾಡಿಕೊಂಡೀತು? ರೇಡ್‍ಗೆ ತುತ್ತಾದವರಲ್ಲಿ ಶಿವರಾಜ್ ಕುಮಾರ್ ಹೊರತುಪಡಿಸಿ ಯಾರೂ ಸಕ್ರಿಯ ರಾಜಕಾರಣದಲ್ಲಿಲ್ಲ, ಶಿವಣ್ಣ ಕೂಡಾ ತಮ್ಮ ಮಡದಿ ಗೀತಕ್ಕ ಹಾಗೂ ಬಾಮೈದ ಮಧು ಬಂಗಾರಪ್ಪನ ಜೆಡಿಎಸ್ ರಾಜಕಾರಣದ ಬೆನ್ನಿಗೆ ನಿಂತಿದ್ದಾರೆಯೇ ವಿನಾಃ ಖುಲ್ಲಂಖುಲ್ಲ ಅಖಾಡಕ್ಕಿಳಿದಿಲ್ಲ. ಅಂತದ್ದರಲ್ಲಿ ಈ ನಟರುಗಳ ಮೇಲಿನ ದಾಳಿಯಿಂದ ಬಿಜೆಪಿ ಯಾವ ಸೀಮೆಯ ರಾಜಕೀಯ ಜಿದ್ದು ತೀರಿಸಿಕೊಂಡೀತು? ಈ ಎಲ್ಲಾ ಪ್ರಶ್ನೆಗಳಲ್ಲಿ ಖಂಡಿತ ವಜನ್ನು ಇದೆ. ಆದರೆ ಈ ವಾದವನ್ನು ಮುಂದಿಡುತ್ತಿರುವವರ ಪ್ರಕಾರ ಬಿಜೆಪಿ ಮೇಲೆ ಜನರ ಒಲವು ಕಡಿಮೆಯಾಗಿರೋದಲ್ಲದೆ, ನಾಲ್ಕೂವರೆ ವರ್ಷದಲ್ಲಿ ಯಾವೊಂದು ಜನಪರ ಕೆಲಸ ಮಾಡದೆ ಅಂಬಾನಿ-ಅದಾನಿಗಳ ಬಾಲಬುಡಕನಂತೆ ವರ್ತಿಸಿದ ಸ್ವತಃ ಮೋದಿಯವರ ಜನಪ್ರಿಯತೆಯೂ ಕುಸಿದಿದೆ. ಮೊನ್ನೆ ಮುಕ್ತಾಯವಾದ ಪಂಚರಾಜ್ಯ ಫಲಿತಾಂಶಗಳೇ ಇದಕ್ಕೆ ಸಾಕ್ಷಿ.
ಹಾಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಯಾವ ಸಮರ್ಥ ಕಾರಣಗಳೂ ಕಾಣುತ್ತಿಲ್ಲ್ಲ. ಈಗ ದಿಢೀರ್ ಜನಪ್ರಿಯತೆ ಏರಿಸಿಕೊಳ್ಳುವುದೊಂದೇ ಉಳಿದಿರುವ ಮಾರ್ಗ. ಯಾಕೆಂದರೆ ಬಿಜೆಪಿಯ ಫೇವರಿಟ್ ರಾಮಮಂದಿರ ಇಶ್ಯೂ ಕೂಡಾ ಪಂಚರಾಜ್ಯ ಎಲೆಕ್ಷನ್‍ನಲ್ಲಿ ವರ್ಕ್‍ಔಟ್ ಆಗಿಲ್ಲ. ಶಬರಿಮಲೆ ವಿವಾದವೂ ದೊಡ್ಡಮಟ್ಟದಲ್ಲಿ ಕೈಹಿಡಿಯುವಂತೆ ಕಾಣುತ್ತಿಲ್ಲ. ಮಲೆಯಾಳಿ ಮಹಿಳೆಯರು ನಡೆಸಿದ 650 ಕಿಮೀ ಉದ್ದದ ಮಾನವಸರಪಳಿ ಬಿಜೆಪಿಗರನ್ನು ಆತಂಕಕ್ಕೆ ತಳ್ಳಿದೆ. ಇನ್ನು ಬಿಜೆಪಿಯ ಐಟಿ ವಿಂಗು ನಡೆಸುತ್ತಿರುವ ಹಿಂದೂ-ಮುಸ್ಲಿಂ ದ್ವೇಷದ ಫೋಟೊಶಾಪ್ ಮೆಸೇಜುಗಳೂ ಜನರನ್ನು ಇಬ್ಬಾಗಿಸುತ್ತಿಲ್ಲ. ಇಂಥಾ ಹೊತ್ತಲ್ಲಿ ದಿಢೀರ್ ಜನಪ್ರಿಯತೆಯ ಹೊರತಾಗಿ ಬೇರಾವ ಮಾರ್ಗಗಳೂ ಬಿಜೆಪಿಯನ್ನು ಬಚಾವು ಮಾಡಲು ಸಾಧ್ಯವಿಲ್ಲ. ಇದನ್ನು ಸಾಧಿಸಬೇಕೆಂದರೆ ಏನೇನು ಮಾರ್ಗಗಳಿವೆ ಅನ್ನೋದನ್ನು ಈಗ ಬಿಜೆಪಿ ದಿಗ್ಗಜರು ಹುಡುಕಾಡುತ್ತಿದ್ದಾರೆ. ಜನಪ್ರಿಯ ಯೋಜನೆಗಳನ್ನು ಘೋಷಿಸೋದು ಅಂತವುಗಳಲ್ಲಿ ಒಂದು. ಅದು ಮಾಡಬೇಕೆಂದರೆ ಬೊಕ್ಕಸದಲ್ಲಿ ಹಣವಿರಬೇಕು. ಆದರೆ ನೀರವ್ ಮೋದಿ, ಮೆಹುಲ್ ಚೋಸ್ಕಿ, ವಿಜಯ್ ಮಲ್ಯರಂತ ಬ್ಯಾಂಕುಗಳ್ಳರು ಜನರ ಹಣ ದೋಚಿಕೊಂಡು ನಿರಾಯಾಸವಾಗಿ ಪರಾರಿಯಾದದ್ದಲ್ಲದೆ ಅಂಬಾನಿ, ಅದಾನಿಗಳಂತಹ ಕಾರ್ಪೊರೇಟ್ ಕುಳಗಳಿಗೆ ಕೇಂದ್ರ ಸರ್ಕಾರವೇ ಪೌರೋಹಿತ್ಯ ವಹಿಸಿ ತೆರಿಗೆ ಹಣವನ್ನು ಧಾರೆ ಎರೆದಿರೋದ್ರಿಂದ ಈಗ ಬೊಕ್ಕಸವೂ ಖಾಲಿ. ಹಾಗಾಗಿಯೇ ರಿಸರ್ವ್ ಬ್ಯಾಂಕಿನ ಆಪತ್ಕಾಲದ ನಿಧಿ ಮೇಲೂ ಮೋದಿ ಕಣ್ಣು ಹಾಕಿದ್ದಾರೆ. ಹಾಗೆ ಮಾಡಿದರೆ ಮುಂದೆ ತಾನೆಲ್ಲಿ ಸಿಕ್ಕಿಬೀಳುತ್ತೇನೊ ಎಂಬ ಭಯದಿಂದಲೇ ಆರ್‍ಬಿಐ ಗವರ್ನರ್ ಊರ್ಜಿತ್ ಸದ್ದಿಲ್ಲದೆ ರಾಜೀನಾಮೆ ಬಿಸಾಕಿ ಹೋದದ್ದು.
ಇನ್ನು ದಿಢೀರ್ ಜನಪ್ರಿಯತೆ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಅಮಿತ್ ಶಾ ಟೀಮಿಗೆ ಹೊಳೆದಿರೋದು ಜನಪ್ರಿಯ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸೋದು. ಸುಲಭಕ್ಕೆ ಸಿಗುವ ಮತ್ತು ಹೆಚ್ಚು ಪರಿಣಾಮಕಾರಿಯಾದ ಅಂಥಾ ವ್ಯಕ್ತಿಗಳೆಂದರೆ ಅದು ಸಿನಿಮಾ ಮಂದಿ. ಅತ್ತ ತಮಿಳುನಾಡಿನಲ್ಲಿ ಸೂಪರ್‍ಸ್ಟಾರ್ ರಜನೀಕಾಂತ್‍ರನ್ನೇ ಖೆಡ್ಡಾಕ್ಕೆ ಕೆಡವಿಕೊಳ್ಳಲು ತಯಾರಿ ನಡೆಸಿರುವ ಬಿಜೆಪಿಗೆ ದಕ್ಷಿಣ ರಾಜ್ಯಗಳಲ್ಲಿ ಸಿನಿಮಾ ನಟರ ಪ್ರಭಾವ ಎಂತದ್ದು ಅನ್ನೋದು ಅರ್ಥವಾಗಿದೆ. ಅದರಲ್ಲೂ ಎಂಪಿ ಎಲೆಕ್ಷನ್‍ನ ಜೊತೆಜೊತೆಗೆ ಸಾಧ್ಯವಾದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಧ್ವಂಸ ಮಾಡಿ ಬಿಜೆಪಿ ಸರ್ಕಾರ ರಚಿಸುವ ಮೂಲಕ ದೇಶದಲ್ಲಿ ಕುಗ್ಗಿರುವ ತನ್ನ ಅಧಿಕಾರ ಬಲವನ್ನು ಹಿಗ್ಗಿಸಿಕೊಳ್ಳಲು ಅವಕಾಶವಿರುವ ಕರ್ನಾಟಕದಲ್ಲಿ ಸಿನಿಮಾ ನಟರುಗಳನ್ನು ಅಂಕೆಯಲ್ಲಿಟ್ಟುಕೊಳ್ಳುವುದು ಬಿಜೆಪಿಯ ಹುನ್ನಾರ ಎನ್ನುತ್ತೆ ಆ ವಾದ.
ಯಶ್ ಮತ್ತು ಸುದೀಪ್ ಕೇವಲ ಸಿನಿಮಾ ಪ್ರಭಾವದಲ್ಲಿ ಮಾತ್ರವಲ್ಲದೆ ಜಾತಿ ಹಿನ್ನೆಲೆಯಲ್ಲೂ ಪ್ರಭಾವಿಗಳು. ಕಳೆದ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಈ ಇಬ್ಬರೂ ಕೆಲ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಅವರು ಪ್ರಚಾರ ಮಾಡಿದ ಬಹುಪಾಲು ಕಡೆ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದರೆ ಒಂದು ಐಡಿಯಾಲಜಿಕಲ್ ಫ್ರೇಮ್ ಇಲ್ಲದ ಇವರು ಯಾವ ಪಕ್ಷದ ಅಭ್ಯರ್ಥಿಗಳು ಕರೆದರೂ ಹೋಗಿ ಕೈಬೀಸಾಡಿ ಬರುತ್ತಾರೆ. ಯಶ್ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರೆ, ಸುದೀಪ್ ಬಿಜೆಪಿಯ ಶ್ರೀರಾಮುಲು ಪರ ಮೊಳಕಾಲ್ಮೂರಿನಲ್ಲಿ ಪ್ರಚಾರ ಮಾಡಿದರು ಕಾಂಗ್ರೆಸಿನ ಸಿದ್ದರಾಮಯ್ಯ ಮೇಲಿನ ಅಭಿಮಾನದಿಂದ ಬಾದಾಮಿ ಕಣದಲ್ಲಿ ರಾಮುಲು ಪರ ಕೈಬೀಸದೆ ಹಿಂದೆ ಸರಿದಿದ್ದರು. ಇನ್ನು ರಾಜ್ ಕುಟುಂಬದ ಶಿವಣ್ಣ, ಪುನೀತ್‍ಗೆ ರಾಜ್ಯಾದ್ಯಂತ ಅಭಿಮಾನಿ ಸಮೂಹವಿದೆ. ಎಲೆಕ್ಷನ್‍ಗು ಮುನ್ನ ಇಂತಿಪ್ಪ ಸ್ಟಾರ್‍ವ್ಯಾಲ್ಯು ನಟರನ್ನು ತನ್ನ ಅಂಕೆಯಲ್ಲಿಟ್ಟುಕೊಂಡರೆ ಎಲೆಕ್ಷನ್ ಸಮಯದಲ್ಲಿ ತಮ್ಮ ಪರ ಪ್ರಚಾರಕ್ಕೆ ಬಳಸಿಕೊಳ್ಳಬಹುದು, ಕಡೇಪಕ್ಷ ವಿರೋಧಿಗಳ ಪರವಾಗಿ ಪ್ರಚಾರಕ್ಕೆ ಹೋಗದಂತೆ ನಿಯಂತ್ರಿಸಬಹುದು ಎನ್ನುವ ಲೆಕ್ಕಾಚಾರದಿಂದಲೇ ಐಟಿಯನ್ನು ಛೂಬಿಟ್ಟು ಬೆದರಿಸಿದೆ ಎಂಬ ಷರಾ ಬರೆಯುತ್ತಿದೆ ಆ ವಾದ.
ಕನ್ನಡದಲ್ಲಿ ದಿ ವಿಲನ್, ಕೆಜೆಎಫ್‍ನಂತಹ ದೊಡ್ಡ ಬಜೆಟ್‍ನ ಸಿನಿಮಾ ನಿರ್ಮಾಣವಾದ್ದರಿಂದ ಈ ರೇಡು ನಡೆಸಲಾಗಿದೆ ಎಂಬ ಸಮರ್ಥನೆ ಕೇಳಿಬರುತ್ತಿದೆಯಾದರು ಅದು ಅಷ್ಟೊಂದು ಗಟ್ಟಿ ನೆಪವಲ್ಲ. ಯಾಕೆಂದರೆ ಇವುಗಳಿಗಿಂತ ದೊಡ್ಡ ಬಜೆಟ್ಟಿನ ಸಿನಿಮಾಗಳು ತೆಲುಗು, ತಮಿಳು ಚಿತ್ರರಂಗದಲ್ಲಿ ಮಾಮೂಲಿ ಎನ್ನುವಷ್ಟು ಸಹಜವಾಗಿ ನಿರ್ಮಾಣವಾಗುತ್ತಿವೆ. ರಾಜಮೌಳಿಯ ಬಾಹುಬಲಿ, ರಜನೀಕಾಂತ್‍ರ 2.0 ಸಿನಿಮಾಗಳ ಬಜೆಟ್ಟಿನ ಮುಂದೆ ಕನ್ನಡ ಸಿನಿಮಾಗಳ ಬಜೆಟ್ಟಾಗಲಿ, ಮಾರುಕಟ್ಟೆಯಾಗಲಿ ದೊಡ್ಡ ಪ್ರತಿಸ್ಪರ್ಧಿಗಳಲ್ಲ ಅನ್ನೋದು ವಾಸ್ತವ. ಆ ಸಿನಿಮಾ ನಿರ್ಮಾತೃಗಳ ಮೇಲಿಲ್ಲದ ಐಟಿ ಇಲಾಖೆಯ ಕಣ್ಣು, ಕನ್ನಡ ಸಿನಿಮಾಗಳನ್ನೇಕೆ ಕೆಕ್ಕರಿಸಿ ನೋಡಬೇಕು?
ರಾಜಕೀಯ ಲೆಕ್ಕಾಚಾರದಿಂದ ಕನ್ನಡದ ನಟರುಗಳ ಮೇಲೆ ಐಟಿ ರೇಡು ನಡೆದಿದೆ ಅನ್ನೋ ಈ ವಾದದಲ್ಲಿ ಅಷ್ಟಾಗಿ ಲಾಜಿಕ್ಕು ಕಾಣದಿರಬಹುದು, ಆದರೆ ಮೋದಿ-ಅಮಿತ್ ಶಾ ರಾಜಕಾರಣದ ವೈಖರಿ ನೋಡಿದರೆ ಯಾವುದನ್ನೂ ಅಷ್ಟು ಸುಲಭಕ್ಕೆ ತಳ್ಳಿಹಾಕಲಾಗುವುದಿಲ್ಲ ಅನ್ನೋದು ಮಾತ್ರ ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಪೃಶ್ಯ ಅಲೆಮಾರಿ ಸಮುದಾಯಗಳನ್ನು ಪ್ರವರ್ಗ ಸಿಗೆ ಸೇರಿಸಿದ್ದನ್ನು ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡ ರಾಜ್ಯ ಸರ್ಕಾರ

ಆಗಸ್ಟ್‌ 18 2025ರಂದು ರಾಜ್ಯ ಸರ್ಕಾರ ಒಳಮೀಸಲಾತಿ ವರ್ಗೀಕರಣ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟವು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿಯನ್ನು ದಾಖಲಿಸಿತ್ತು. ರಾಜ್ಯ ಸರ್ಕಾರ...

ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ಪೌರತ್ವ ತ್ಯಜಿಸಿದ್ದಾರೆ: ಎಂಇಎ

ಕಳೆದ ಐದು ವರ್ಷಗಳಲ್ಲಿ ಸುಮಾರು ಒಂಬತ್ತು ಲಕ್ಷ ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಜಾಗತಿಕ ಚಲನಶೀಲತೆ ಹೆಚ್ಚಾದಂತೆ ಮತ್ತು ವೈಯಕ್ತಿಕ ಆಯ್ಕೆಗಳು ವಲಸೆ ಪ್ರವೃತ್ತಿಯನ್ನು ರೂಪಿಸುತ್ತಿರುವುದರಿಂದ ವಾರ್ಷಿಕವಾಗಿ ಸಂಖ್ಯೆಗಳು ಗಮನಾರ್ಹವಾಗಿ ಬದಲಾಗಿವೆ...

ನಟ ದಿಲೀಪ್ ಖುಲಾಸೆ: ನ್ಯಾಯಾಲಯದ ಕಲಾಪವನ್ನು ವಿರೂಪಗೊಳಿಸಬೇಡಿ ಎಂದು ಮಾಧ್ಯಮ ಮತ್ತು ವಕೀಲರಿಗೆ ಎಚ್ಚರಿಕೆ ನೀಡಿದ ನ್ಯಾಯಾದೀಶೆ ಹನಿ ವರ್ಗೀಸ್ 

2017 ರಲ್ಲಿ ದಕ್ಷಿಣ ಭಾರತದ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿದ ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಧೀಶೆ ಹನಿ ಎಂ ವರ್ಗೀಸ್, ತಮ್ಮ ತೀರ್ಪಿನ...

ರಾಜ್‌ಕೋಟ್‌ ಬಾಲಕಿ ಅತ್ಯಾಚಾರ ಪ್ರಕರಣ; ಆಕ್ರೋಶ ಹೊರಹಾಕಿದ ಶಾಸಕ ಜಿಗ್ನೇಶ್‌ ಮೇವಾನಿ; ಕಠಿಣ ಶಿಕ್ಷೆಗೆ ಆಗ್ರಹ

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಏಳು ವರ್ಷದ ಬಾಲಕಿ ಅತ್ಯಾಚಾರ ಹಾಗೂ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಧಿಸಿದಂತೆ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್‌ ಮೇವಾನಿ; ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಕುರಿತು...

ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಪ್ರೋತ್ಸಾಹಧನ ನೀಡಲು BJP ಕಾರ್ಯಕರ್ತರ ಮನವಿ

ಮಂಡ್ಯ:  ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಶಾದಿ ಭಾಗ್ಯ’ದಂತೆ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದ ವತಿಯಿಂದ ರೂ.5ಲಕ್ಷ ಪ್ರೋತ್ಸಾಹಧನ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರ ಮೂಲಕ...

ನಿವೃತ್ತಿ ನಿರ್ಧಾರ ಹಿಂತೆಗೆದುಕೊಂಡ ವಿನೇಶ್ ಫೋಗಟ್; ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ತಯಾರಿ

ಕುಸ್ತಿಪಟು ವಿನೇಶ್ ಫೋಗಟ್ ಸ್ಪರ್ಧಾತ್ಮಕ ಕ್ರೀಡೆಗೆ ಮರಳುವುದಾಗಿ ಘೋಷಿಸುವ ಮೂಲಕ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದಾರೆ. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಅನ್ನು ಗುರಿಯಾಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಕುರಿತ ಹೇಳಿಕೆ ಬಿಡುಗಡೆ ಮಾಡಿರುವ...

ಗುಜರಾತ್‌ನ ವಲ್ಸಾದ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಐವರು ಕಾರ್ಮಿಕರಿಗೆ ಗಾಯ

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಔರಂಗ ನದಿಗೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿನ ಗಿರ್ಡರ್ ಕುಸಿದಿದ್ದು, ಐವರು ಕಾರ್ಮಿಕರು ಗಾಯಗೊಂಡಿದ್ದಾರೆ.  ಹಳೆಯ ಸೇತುವೆಗೆ ಸಮಾನಾಂತರವಾಗಿ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತಿರುವ ಕೈಲಾಶ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ 8...

ಆಮದು ಸುಂಕ ಹೆಚ್ಚಿಸಿದ ಮೆಕ್ಸಿಕೊ: ಭಾರತದ ವಾಹನ-ಉಕ್ಕು ರಫ್ತಿನ ವೆಚ್ಚ ಹೆಚ್ಚಳ ಸಾಧ್ಯತೆ

ಸ್ಥಳೀಯ ಕೈಗಾರಿಕೆಗಳನ್ನು ರಕ್ಷಿಸುವ ಗುರಿಯ ಭಾಗವಾಗಿ, ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಏಷ್ಯಾದ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಹೆಚ್ಚಿನ ಸುಂಕ ಹೆಚ್ಚಳ ನಿರ್ಧಾರವನ್ನು ಮೆಕ್ಸಿಕೋ ಅನುಮೋದಿಸಿದೆ. ಮೆಕ್ಸಿಕನ್...

Cognizant ಕಂಪನಿಗೆ 99 ಪೈಸೆಗೆ ಒಂದು ಎಕರೆ ಭೂಮಿ: ವಿಶಾಖಪಟ್ಟಣದಲ್ಲಿ ತಾತ್ಕಾಲಿಕ ಕಛೇರಿ ಉದ್ಘಾಟನೆ

ಕಳೆದ ಜೂನ್‌ ನಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ Cognizant ಕಂಪನಿಯು 1582 ಕೋಟಿ ಹೂಡಿಕೆ ಮಾಡಿ 8 ಸಾವಿರ ಉದ್ಯೋಗ ಸೃಷ್ಠಿ ಮಾಡಲಾಗುವುದೆಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸರ್ಕಾರ ಘೋಷಿಸಿತ್ತು....

ಅಲ್ಪಸಂಖ್ಯಾತ ಶಾಲೆಗಳಿಗೆ ಆರ್.ಟಿ.ಇ ಕಾಯ್ದೆಯಿಂದ ವಿನಾಯಿತಿ ತೀರ್ಪಿನ ವಿರುದ್ಧ ಅರ್ಜಿ; ಎನ್.ಜಿ.ಒಗೆ ದಂಡ ವಿಧಿಸಿದ ಸುಪ್ರೀಂ  

ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ನಿಬಂಧನೆಗಳಿಂದ ಅಲ್ಪಸಂಖ್ಯಾತ ಶಾಲೆಗಳಿಗೆ ವಿನಾಯಿತಿ ನೀಡಿದ್ದ, ತನ್ನ ಹಿಂದಿನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರವಾಗಿ ಖಂಡಿಸಿದೆ.  ಜಸ್ಟೀಸ್ ಬಿ.ವಿ. ನಾಗರತ್ನ ಮತ್ತು...