ಸಾವರ್ಕರ್ ವಿರುದ್ಧ ಮಾನಹಾನಿ ಹೇಳಿಕೆ ಪ್ರಕರಣದ ದೂರುದಾರರಾಗಿರುವ ಸತ್ಯಕಿ ಸಾವರ್ಕರ್ ಅವರು, ಮಹಾತ್ಮ ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯ ಸಹೋದರ ಗೋಪಾಲ್ ವಿನಾಯಕ್ ಗೋಡ್ಸೆಯ ಮೊಮ್ಮಗ ಎಂಬ ವಾಸ್ತವ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ ಎಂದು ಲೋಕಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ವಕೀಲ ಮಿಲಿಂದ್ ಪವಾರ್ ಮೂಲಕ ಪುಣೆಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ರಾಹುಲ್ ಗಾಂಧಿ, “ದೂರುದಾರ ಸತ್ಯಕಿ ಅವರು ತಾನು ವಿನಾಯಕ ಸಾವರ್ಕರ್ ಅವರ ಸೋದರಳಿಯ ಅಶೋಕ್ ಸಾವರ್ಕರ್ ಅವರ ಮಗ ಎಂದು ಹೇಳಿಕೊಂಡಿದ್ದಾರೆ. ಆದರೆ, ತನ್ನ ತಾಯಿ ಹಿಮಾನಿ ಅವರು ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯ ಸಹೋದರ ಗೋಪಾಲ್ ಗೋಡ್ಸೆಯ ಮಗಳು ಎಂಬ ಅಂಶವನ್ನು ಅವರು ಮರೆಮಾಚಿದ್ದಾರೆ” ಎಂದಿದ್ದಾರೆ.
ನಾಥೂರಾಮ್ ಗೋಡ್ಸೆ ಮತ್ತು ಗೋಪಾಲ್ ಗೋಡ್ಸೆ ಇಬ್ಬರೂ ಗಾಂಧಿ ಕೊಲೆ ಪ್ರಕರಣದ ಅಪರಾಧಿಗಳು
“ಸತ್ಯಕಿ ಅವರು ತನ್ನ ದೂರಿನ ಜೊತೆಗೆ ‘ತಂದೆಯ ಕಡೆಯ’ ವಂಶವೃಕ್ಷವನ್ನು ಮಾತ್ರ ಬಹಿರಂಗಪಡಿಸಿದ್ದಾರೆ. ‘ತಾಯಿಯ ಕಡೆಯ’ ವಂಶವೃಕ್ಷವನ್ನು ಬಹಿರಂಗಪಡಿಸಿಲ್ಲ. ಇದರಿಂದಾಗಿ ಅವರು (ಸತ್ಯಕಿ) ಗೋಪಾಲ್ ಗೋಡ್ಸೆಯ ಮೊಮ್ಮಗ ಎಂಬ ಅಂಶವು ದಾಖಲಾಗಿಲ್ಲ” ಎಂದು ರಾಹುಲ್ ಗಾಂಧಿ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.
ಮಹಾತ್ಮಾ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ಕೂಡ ‘ಸಹ-ಆರೋಪಿ’ ಆಗಿದ್ದರು. ಆದರೆ, ಸರಿಯಾದ ಪುರಾವೆಗಳ ಕೊರತೆಯಿಂದಾಗಿ ಅವರನ್ನು ಖುಲಾಸೆಗೊಳಿಸಲಾಯಿತು, ಶಿಕ್ಷೆಗೆ ಗುರಿಪಡಿಸಲಾಗಿಲ್ಲ. ಈ ಅಂಶವನ್ನು ಸತ್ಯಕಿ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಇದಲ್ಲದೆ, ಗೋಡ್ಸೆ ಮತ್ತು ಸಾವರ್ಕರ್ ಇಬ್ಬರೂ ‘ಹಿಂದೂ ರಾಷ್ಟ್ರ’ದ ಕಟ್ಟಾ ಬೆಂಬಲಿಗರಾಗಿದ್ದರು. ಭಾರತದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಹೊರಗಿನವರಂತೆ ಹೇಗೆ ಪರಿಗಣಿಸಿದ್ದರು ಮತ್ತು ವಿಭಜನೆಯ ಸಮಯದಲ್ಲಿ ಮಹಾತ್ಮ ಗಾಂಧಿಯವರು ಮುಸ್ಲಿಮರಿಗೆ ‘ದಯಪಾಲಿಸಿದ್ದರು’ ಎಂದು ಪರಿಗಣಿಸಿ ಅವರನ್ನು ಕೊಲ್ಲಲು ಹೇಗೆ ಸಂಚು ರೂಪಿಸಿದರು ಎಂಬುದನ್ನು ತೋರಿಸಲು ರಾಹುಲ್ ಗಾಂಧಿ ತನ್ನ ಅರ್ಜಿಯಲ್ಲಿ ‘ಐತಿಹಾಸಿಕ ಸಂಗತಿಗಳನ್ನು’ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಸಾವರ್ಕರ್ ಎರಡು ರಾಷ್ಟ್ರಗಳ ಸಿದ್ಧಾಂತದ ಪ್ರಮುಖ ಪ್ರತಿಪಾದಕರಾಗಿದ್ದರು. ಇದು ಹಿಂದೂಗಳು ಮತ್ತು ಮುಸ್ಲಿಮರುದ್ದು ‘ವಿಭಿನ್ನ ರಾಷ್ಟ್ರಗಳು’ ಎಂದು ಪ್ರತಿಪಾದಿಸಿದ್ದರು. ಇದನ್ನು ನಂತರ ಮುಸ್ಲಿಂ ಲೀಗ್ ನಾಯಕ ಮೊಹಮ್ಮದ್ ಅಲಿ ಜಿನ್ನಾ ಕೂಡ ಬೆಂಬಲಿಸಿದ್ದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
“ಸಾವರ್ಕರ್ ಜೈಲಿನಲ್ಲಿದ್ದಾಗಿನಿಂದಲೂ ‘ಮುಸ್ಲಿಂ ವಿರೋಧಿ’ ಬರಹಗಳಿಗೆ ಹೆಸರುವಾಸಿಯಾಗಿದ್ದರು” ಎಂಬುವುದಾಗಿ ಅರ್ಜಿಯಲ್ಲಿ ಆರೋಪಿಸಲಾಗಿದೆ ಎಂದು ವರದಿಯಾಗಿದೆ.
ವಿಶೇಷ ನ್ಯಾಯಾಧೀಶ ಅಮೋಲ್ ಶಿಂಧೆ ಅವರು ದೂರುದಾರ ಸತ್ಯಕಿ ಅವರಿಂದ ರಾಹುಲ್ ಗಾಂಧಿ ಅರ್ಜಿಯಲ್ಲಿ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ಕೇಳಿದ್ದಾರೆ.
2023ರಲ್ಲಿ ಲಂಡನ್ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ವಿನಾಯಕ್ ದಾಮೋದರ್ ಸಾವರ್ಕರ್ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂದು ಸತ್ಯಕಿ ಸಾವರ್ಕರ್ ಮೊಕದ್ದಮೆ ಹೂಡಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನಹಾನಿ) ಅಡಿ ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಬೇಕು ಮತ್ತು ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 357 ಅಡಿ ಅವರಿಂದ ಪರಿಹಾರ ಕೊಡಿಸಬೇಕು ಎಂದು ಸತ್ಯಕಿ ಕೋರಿದ್ದಾರೆ.
ಈ ಪ್ರಕರಣವನ್ನು ತೀರ್ಮಾನಿಸುವಲ್ಲಿ ನಿರ್ಣಾಯಕವಾಗಿರುವ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯೊಂದಿಗೆ ಹೊಂದಿರುವ ನೇರ ಕೌಟುಂಬಿಕ ಸಂಬಂಧವನ್ನು ದೂರುದಾರ ಸತ್ಯಕಿ ಸಾವರ್ಕರ್ ಉದ್ದೇಶಪೂರ್ವಕವಾಗಿ ಬಚ್ಚಿಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಇದಲ್ಲದೆ, ದೂರುದಾರ ಸತ್ಯಕಿ ಸಾವರ್ಕರ್ ಸುಳ್ಳು, ಮಾನಹಾನಿಕಾರಕ ಹಾಗೂ ನ್ಯಾಯಾಂಗ ನಿಂದನೆಯ ದೂರು ಸಲ್ಲಿಸಿದ್ದಾರೆ ಎಂದು ಆರೋಪಿಸಿ, ಮತ್ತೊಂದು ಪ್ರತ್ಯೇಕ ಅರ್ಜಿಯನ್ನೂ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಮೇ 9ರಂದು ದೂರುದಾರ ಸತ್ಯಕಿ ಸಾವರ್ಕರ್, ನಾನು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದೇನೆ ಎಂದು ದಾರಿ ತಪ್ಪಿಸುವ ಅರ್ಜಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಈ ಅರ್ಜಿಯಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಎರಡೂ ಪ್ರತ್ಯೇಕ ಅರ್ಜಿಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ದೂರುದಾರ ಸತ್ಯಕಿ ಸಾವರ್ಕರ್ ಗೆ ನ್ಯಾಯಾಲಯ ನಿರ್ದೇಶನ ನೀಡಿದೆ.