ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಬಿಸಿಬಿಸಿ ಚರ್ಚೆಯಾಗುತ್ತಿದೆ.
ಬಿಜೆಪಿ, ಸಂಘಪರಿವಾರದ ನಾಯಕರು ಪ್ರಿಯಾಂಕ್ ಖರ್ಗೆ ಮೇಲೆ ಮುಗಿಬಿದ್ದರೆ, ಸಾರ್ವಜನಿಕರ ದೊಡ್ಡ ವರ್ಗ ಪ್ರಿಯಾಂಕ್ ಖರ್ಗೆ ಆಗ್ರಹಕ್ಕೆ ಧ್ವನಿಗೂಡಿಸಿದ್ದಾರೆ. ಇದೀಗ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ಕೂಡ ಆರ್ಎಸ್ಎಸ್ ವಿರುದ್ದ ಪೋಸ್ಟ್ ಹಾಕುವ ಮೂಲಕ ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ.
“ಆರ್ಎಸ್ಎಸ್ ಸಂಘಟನೆಯು ಎಷ್ಟೇ ಮೆರವಣಿಗೆಯನ್ನು ಮಾಡಬಹುದು. ಆದರೆ, ಓರ್ವ ನ್ಯಾಯಾಧೀಶರ ಮೇಲೆ ಶೂ ಎಸೆದ ಘಟನೆಯನ್ನು ಇವರು ಖಂಡಿಸಿದ್ದಾಗಲೀ, ವಿರೋಧಿಸಿದ್ದನ್ನಾಗಲೀ ನಾನು ಕಾಣಲಿಲ್ಲ. ಇವರ ಹಿಂದುತ್ವದ ಪರಿಧಿಯಲ್ಲಿ ಪರಿಶಿಷ್ಟರಿಗೆ ಸ್ಥಾನವಿಲ್ಲ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ? ಎಂದು ಮಹದೇವಪ್ಪ ಪ್ರಶ್ನಿಸಿದ್ದಾರೆ.
“ಇವರ ಸಂಘ ಹುಟ್ಟಿಕೊಂಡು 100 ವರ್ಷಗಳಾದರೂ ಸಹ ಸಹ ಜೀವಿಗಳ ಮೇಲೆ ಜರುಗುವ ಅವಮಾನಕ್ಕೆ ಮರುಗಬೇಕೆಂದು ಇವರು ಕಲಿತಿಲ್ಲ. ಇಂತವರು ಪ್ರಜಾಪ್ರಭುತ್ವದ ಅಪಾಯಕಾರಿ ಶಕ್ತಿಗಳೇ ಹೊರತು ಮತ್ತೇನೂ ಅಲ್ಲ!” ಎಂದು ಮಹದೇವಪ್ಪ ಬರೆದುಕೊಂಡಿದ್ದಾರೆ.
ಸರ್ಕಾರಿ ಆವರಣಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ನಿಷೇಧಕ್ಕೆ ಆಗ್ರಹಿಸಿದ ಬಳಿಕ ಬೆದರಿಕೆ: ಸಚಿವ ಪ್ರಿಯಾಂಕ್ ಖರ್ಗೆ