ಆರಾಧನಾ ಸ್ಥಳಗಳ ಕಾಯ್ದೆ-1991ನ್ನು ದೃಢೀಕರಿಸುವ ಸುಪ್ರೀಂ ಕೋರ್ಟ್ನ ಅಯೋಧ್ಯೆ ತೀರ್ಪಿನ ಐದು ಪುಟಗಳನ್ನು ಭಾರತದ ಪ್ರತಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ಗಳಲ್ಲಿ ಓದಬೇಕು ಎಂದು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಒತ್ತಾಯಿಸಿದ್ದಾರೆ.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಅಝೀಝ್ ಮುಶಬ್ಬರ್ ಅಹ್ಮದಿ ಅವರ ಸ್ಮರಣಾರ್ಥ ಸ್ಥಾಪಿಸಲಾದ ಅಹ್ಮದಿ ಫೌಂಡೇಶನ್ನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮೂರ್ತಿ ನಾರಿಮನ್, “ಅಯೋಧ್ಯೆ ತೀರ್ಪನ್ನು ‘ಜಾತ್ಯತೀತತೆಗೆ ನ್ಯಾಯದ ಅಪಹಾಸ್ಯ’ ಎಂದು ಬಣ್ಣಿಸಿದ್ದು, 1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ಎತ್ತಿ ಹಿಡಿದ ಭಾಗವನ್ನು ಅವರು ಪ್ರಶಂಸಿಸಿದ್ದಾರೆ.
ಅಯೋಧ್ಯೆ ವಿವಾದದ ಕುರಿತು ಸಂವಿಧಾನ ಪೀಠದ ತೀರ್ಪಿನ ಐದು ಪುಟಗಳು ಈ ಹಿಂದೆ ದೇವಾಲಯಗಳ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಲಾದ ಮಸೀದಿಗಳ ಸಮೀಕ್ಷೆಯನ್ನು ಕೋರಿ ದೇಶದಾದ್ಯಂತ ನಡೆಯುತ್ತಿರುವ ವ್ಯಾಜ್ಯಗಳಿಗೆ ಉತ್ತರವಾಗಿದೆ. ಈ ಐದು ಪುಟಗಳು, ದೇಶದಾದ್ಯಂತ ಮಸೀದಿಗಳನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಪ್ರಕರಣಗಳನ್ನು ಪರಿಹರಿಸಲು ನಿರ್ಣಾಯಕ ಸಾಧನವಾಗಿ ಕಾರ್ಯನಿರ್ವಹಿಸಬಹುದು ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದ್ದಾರೆ.
1991ರ ಆರಾಧನಾ ಸ್ಥಳಗಳ ಕಾಯ್ದೆಯು ಯಾವುದೇ ಆರಾಧನಾ ಸ್ಥಳಗಳ ಸ್ವರೂಪ ಬದಲಾವಣೆಯನ್ನು ನಿಷೇಧಿಸಿದೆ. ಆಗಸ್ಟ್ 15, 1947ರಂದು ಅಸ್ತಿತ್ವದಲ್ಲಿದ್ದ ಸ್ವರೂಪದಲ್ಲೇ ಮುಂದುವರಿಯುವಂತೆ ಹೇಳುತ್ತದೆ. ಇದು ಪ್ರಸ್ತುತ ಸುಪ್ರೀಂ ಕೋರ್ಟ್ನಲ್ಲಿ ಸವಾಲಾಗಿದೆ. ಇದನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ಅಯೋಧ್ಯೆಯ ತೀರ್ಪಿನ ಐದು ಪುಟಗಳನ್ನು ರಾಷ್ಟ್ರವ್ಯಾಪಿ ನ್ಯಾಯಾಲಯಗಳಲ್ಲಿ ಅನ್ವಯಿಸುವುದಾಗಿದೆ ಎಂದು ಹೇಳಿದ್ದಾರೆ.
ಬಾಬರಿ ಮಸೀದಿ ಧ್ವಂಸ ಕ್ರಿಮಿನಲ್ ಪಿತೂರಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಧೀಶರು ನಿವೃತ್ತಿಯ ನಂತರ ಉತ್ತರ ಪ್ರದೇಶದ ಉಪ ಲೋಕಾಯುಕ್ತರಾಗಿ ನೇಮಕಗೊಂಡರು ಎಂದು ಹೇಳಿರುವ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್, ʼಕೊಡು-ಕೊಳ್ಳುವಿಕೆʼ ನೇಮಕಾತಿಗಳ ಬಗ್ಗೆ ಗಮನಸೆಳೆದಿದ್ದಾರೆ.
ಕೃಪೆ : ಬಾರ್ & ಬೆಂಚ್


