ಚಿಕ್ಕಮಗಳೂರಿನ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳಿದಾಗ ಹೊಸಪೇಟೆ ಮೂಲದ ಬೋರಮ್ಮ(34), ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ.
ಕಾಡಾನೆ ಎಲ್ಲೆಂದರಲ್ಲೇ ಓಡಾಡುತ್ತಿರುವುದು ಹಾಗೂ ದಾಳಿ ನಡೆಸಿ, ಜನರನ್ನು ಹಾಗೂ ತೋಟದ ಕೂಲಿ ಕಾರ್ಮಿಕರನ್ನು ಬಲಿ ಪಡೆದಿದೆ. ಈ ಘಟನೆಯಿಂದ ಮಲೆನಾಡಿನಲ್ಲಿ ಜನರು, ಕೂಲಿ ಕಾರ್ಮಿಕರು ಭಯದ ವಾತಾವರಣದಲ್ಲಿ ಬದುಕಬೇಕಾದಂತ ಪರಿಸ್ಥಿತಿ ಎದುರಾಗಿದೆ. ಈ ವಿಚಾರವಾಗಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ, ರಾಜ್ಯದ ಅರಣ್ಯ ಸಚಿವರಿಗೆ ಮೃತಪಟ್ಟ ಮನೆಗಳಿಗೆ ಪರಿಹಾರ ಕೊಡುವುದು ಬಿಟ್ಟರೆ, ಬೇರೆ ಪರ್ಯಾಯ ಮಾರ್ಗ ಕಂಡುಕೊಳ್ಳುವುದಲ್ಲಿ ವಿಫಲವಾಗಿದ್ದಾರೆ ಎಂದು ಮಲೆನಾಡಿಗರು ಆಕ್ರೋಶವನ್ನು ಹೊರಹಕಿದ್ದಾರೆ. ಇಂತಹ ಘಟನೆಗಳು ಮುಂದೆ ಆಗದಂತೆ ಸರ್ಕಾರ ಹಾಗೂ ಅರಣ್ಯ ಸಚಿವರು, ಶಾಸಕರು ಕೂಡಲೇ ಗಮನ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕಾಗಿದೆ.
ಇನ್ನು ಒಂದೇ ವಾರದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಆನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಅರಣ್ಯ ಅಧಿಕಾರಿಗಳು ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಏಳು ತರಬೇತಿ ಪಡೆದ ಆನೆಗಳು (ಕುಮ್ಕಿಗಳು) ಮತ್ತು ಸುಮಾರು 75 ಸಿಬ್ಬಂದಿಗಳನ್ನು ಒಳಗೊಂಡ ಪ್ರಮುಖ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು.
ಏಳು ಕುಮ್ಕಿ ಆನೆಗಳು ಹಾಗೂ ಸುಮಾರು 75 ಸಿಬ್ಬಂದಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಹಿಳೆಗೆ ದಾಳಿ ನಡೆಸಿದ ಸ್ಥಳದಿಂದ ಅಲ್ಪ ದೂರದಲ್ಲಿರುವ ಕಾಫಿ ತೋಟದಲ್ಲಿ ಕಾಡಾನೆಯನ್ನು ಪತ್ತೆ ಮಾಡಲಾಯಿತು. ಸೂಕ್ತ ಸಮಯದಲ್ಲಿ ಅರವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ಅಚೇತನಗೊಳಿಸಿ, ಬಳಿಕ ಕುಮ್ಕಿ ಆನೆಗಳ ಸಹಾಯದಿಂದ ಕಾಡಾನೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದು ಸೆರೆ ಹಿಡಿಯಲಾಗಿದೆ.


