ದೇಶದ್ರೋಹದ ಕಾನೂನು ಬ್ರಿಟೀಷ್ ಕಾಲದ ಈ ವಶಾಹತುಶಾಹಿ ಕಾನೂನು ಆಗಿದ್ದು, ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರವೂ ಅದರ ಅಗತ್ಯವಿದೆಯೇ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ದೇಶದ್ರೋಹ ಕಾನೂನಿನ ಸಿಂಧುತ್ವವನ್ನು ಪರಿಶೀಲಿಸುವುದಾಗಿ ಹೇಳಿದ ನ್ಯಾಯಾಲಯ, ಈ ಕುರಿತು ಕೇಂದ್ರದ ಪ್ರತಿಕ್ರಿಯೆ ಕೋರಿದೆ.
ದೇಶದ್ರೋಹದ ಕಾನೂನಿಗೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣರವರು “ಗಾಂಧೀಜಿಯ ಹೋರಾಟವನ್ನು ಹತ್ತಿಕ್ಕಲು ಬ್ರೀಟಿಷರು ಇದೇ ಕಾನೂನನ್ನು ಬಳಸುತ್ತಿದ್ದರು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬ್ರಿಟಿಷ್ ವಶಾಹತುಶಾಹಿ ದೇಶದ್ರೋಹದ ಕಾನೂನು ಅಗತ್ಯವಿದೆಯೇ? ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಈ ಕಾನೂನು ಬೇಕೆ? ಎಂದು ಸಿಜೆಐ ರಮಣರವರು ಅಟಾರ್ನಿಯವರನ್ನು ಪ್ರಶ್ನಿಸಿದ್ದಾರೆ.
ಈ ದೇಶದ್ರೋಹದ ಕಾನೂನನ್ನು ರದ್ದುಗೊಳಿಸಬೇಕೆಂದು ಹಲವಾರು ಅರ್ಜಿಗಳು ದಾಖಲಾಗಿದ್ದು ಎಲ್ಲವನ್ನು ಒಟ್ಟಿಗೆ ಆಲಿಸುವುದಾಗಿ ಸಿಜೆಐ ತಿಳಿಸಿದ್ದಾರೆ.
ಈ ಕಾನೂನು ದುರ್ಬಳಕೆಯಾಗುತ್ತಿದೆ ಎಂಬುದು ನಮ್ಮ ಕಾಳಜಿಯಾಗಿದೆ. ಅಲ್ಲದೆ ಇದನ್ನು ಜಾರಿಗೊರಿಸುವವರು ಯಾವುದೇ ಹೊಣೆಗಾರಿಕೆಯನ್ನು ಹೊಂದಿಲ್ಲ. ‘ಇದುವರೆಗೂ ದಾಖಲಾದ ಪ್ರಕರಣಗಳಲ್ಲಿ ಕೆಲವೇ ಪ್ರಕರಣಗಳು ಮಾತ್ರ ಸಾಬೀತಾಗಿದ್ದು, ಅಪರಾಧ ದರ ತೀರಾ ಕಡಿಮೆಯಿರುವುದನ್ನು ಇತಿಹಾಸ ತೋರಿಸಿದೆ’ ಎಂದು ಎನ್ವಿ ರಮಣ ತಿಳಿಸಿದ್ದಾರೆ.
ಯಾವುದೇ ಗ್ರಾಮದಲ್ಲಿ ಯಾರಾದರೂ ಪ್ರಶ್ನಿಸಿದರೆ ಅವರನ್ನು ಬಂಧಿಸಿ ಪೊಲೀಸರು ಆತನ ಮೇಲೆ 124ಎ ಪ್ರಕರಣ ದಾಖಲಿಸಬಹುದಾಗಿದೆ. ಇದರಿಂದ ಜನ ಭಯಭೀತರಾಗಿದ್ದಾರೆ ಎಂದು ರಮಣ ಅಭಿಪ್ರಾಯಪಟ್ಟಿದ್ದಾರೆ.
ನಾವು ಯಾವುದೇ ಸರ್ಕಾರವನ್ನು ದೂಷಿಸುತ್ತಿಲ್ಲ. ಆದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಎಕ್ಷನ್ 66ಎ ಅನ್ನು ರದ್ದುಪಡಿಸಿ ಬಹಳ ದಿನಗಳಾದರೂ ಇನ್ನು ಬಳಕೆಯಲ್ಲಿದೆ. ಅದೇ ರೀತಿ ಈ ದೇಶದ್ರೋಹ ಕಾನೂನು ಸಹ ದುರ್ಬಳಕೆಯಾಗುತ್ತಿದೆ. ಇದರ ಸಿಂಧುತ್ವವನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಕಾಯ್ದೆ ಅತಿಯಾಗಿ ದುರ್ಬಳಕೆಯಾಗಿದೆ. ಬಡಗಿಯೊಬ್ಬನಿಗೆ ಕಾಡೋಂದನ್ನು ತೋರಿಸಿ ಯಾವುದಾದರೊಂದು ಮರವನ್ನು ಬಳಸಿಕೊ ಎಂದರೆ ಆತನ ಇಡೀ ಕಾಡನ್ನು ಕಡಿದ ರೀತಿ ಈ ಕಾನೂನು ಎಲ್ಲರ ವಿರುದ್ಧ ಪ್ರಯೋಗಿಸಲ್ಪಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಎರಡು ದಿನಗಳ ಹಿಂದೆ UAPA ಕಾಯ್ದೆಯ ಬಗ್ಗೆ ಸಹ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಭಯೋತ್ಪಾದನಾ ವಿರೋಧಿ ಕಾನೂನುಗಳ ದುರ್ಬಳಕೆ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಜಸ್ಟಿಸ್ ಡಿ.ವೈ. ಚಂದ್ರಚೂಡ್ ಅಭಿಪ್ರಾಯ ಪಟ್ಟಿದ್ದರು. ಜುಲೈ 12ರಂದು ಇಂಡೋ-ಅಮೇರಿಕನ್ ನ್ಯಾಯಾಧೀಶರ ವರ್ಚುವಲ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, UAPA ಸೇರಿದಂತೆ ಭಯೋತ್ಪಾದನಾ ತಡೆ ಕಾನೂನುಗಳನ್ನು ಭಿನ್ನಮತಗಳ ದಮನಕ್ಕೆ ಮತ್ತು ಪ್ರಜೆಗಳ ಮೇಲಿನ ದೌರ್ಜನ್ಯಕ್ಕೆ ಪ್ರಯೋಗಿಸುವ ಟ್ರೆಂಡ್ ಇತ್ತೀಚೆಗೆ ಬೆಳೆಯುತ್ತಿರುವುದರ ಕುರಿತು ವಿಷಾದ ವ್ಯಕ್ತಪಡಿಸಿದರು.
ಮಾನವ ಹಕ್ಕುಗಳ ಹೋರಾಟಗಾರ 84 ವರ್ಷ ವಯಸ್ಸಿನ ಫಾದರ್ ಸ್ಟ್ಯಾನ್ ಸ್ವಾಮಿ ನಿಧನದ ನಂತರ ದೇಶದಲ್ಲಿ ಯುಎಪಿಎ ಕಾಯ್ದೆ ಕುರಿತು ತೀವ್ರ ಟೀಕೆಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಜಸ್ಟಿಸ್ ಚಂದ್ರಚೂಡ್ ಅವರ ಹೇಳಿಕೆ ಮಹತ್ವದ ಸ್ಥಾನ ಪಡೆದುಕೊಂಡಿದೆ.
ಇತ್ತೀಚೆಗೆ ಖ್ಯಾತ ಪತ್ರಕರ್ತ ವಿನೋದ್ ದುವಾ ವಿರುದ್ಧ ದಾಖಲಿಸಲಾಗಿದ್ದ ದೇಶದ್ರೋಹ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಹಾಗೂ ಹಿಂಸಾಚಾರದ ಪ್ರಚೋದನೆ ಇಲ್ಲದಿರುವವರೆಗೂ ಪ್ರಭುತ್ವವನ್ನು ಮುಕ್ತವಾಗಿ ಟೀಕಿಸುವ ಪತ್ರಕರ್ತರ ಸ್ವಾತಂತ್ರ್ಯವನ್ನು ದೃಢವಾಗಿ ಅನುಮೋದಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಇದನ್ನೂ ಓದಿ: ವಿನೋದ್ ದುವಾ ವಿರುದ್ಧ ಎಫ್ಐಆರ್ ರದ್ದು; ದೇಶದ್ರೋಹ ಕಾನೂನಿನ ಮೂಲಭೂತ ನಿಯಮಗಳನ್ನು ನೆನಪಿಸಿದ ಕೋರ್ಟ್


