ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಶ್ನಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿ ವಿಚಾರಣೆ ಒಂದು ಕಡೆ ನಡೆಯುತ್ತಿದ್ದರೇ, ಮತ್ತೊಂದೆಡೆ ಸುವೇಂದು ಅಧಿಕಾರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ ಹೊಸ ಬೆಳವಣಿಗೆಗೆ ಕಾರಣವಾಗಿದ್ದಾರೆ.
ಬುಧವಾರ ಮಮತಾ ಬ್ಯಾನರ್ಜಿಯವರ ಅರ್ಜಿ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶರಾದ ಶಂಪಾ ಸರ್ಕಾರ್, ಚುನಾವಣಾ ಆಯೋಗಕ್ಕೆ ಮತ್ತು ಚುನಾವಣಾ ರಿಟರ್ನಿಂಗ್ ಅಧಿಕಾರಿಗೆ ನೋಟಿಸ್ ನೀಡಬೇಕು ಎಂದು ಹೇಳಿದ್ದಾರೆ. ಜೊತೆಗೆ ಮತದಾನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು (EVMs) ಸಂರಕ್ಷಿಸಬೇಕು ಎಂದು ಆದೇಶಿಸಿದ್ದರು.
ಹೊಸ ಬೆಳವಣಿಗೆಯಲ್ಲಿ ನಂದಿಗ್ರಾಮದ ಶಾಸಕ ಬಿಜೆಪಿಯ ಸುವೇಂದು ಅಧಿಕಾರಿ, ಮಮತಾ ಬ್ಯಾನರ್ಜಿಯವರ ಅರ್ಜಿ ವಿಚಾರಣೆಯನ್ನು ಬೇರೆ ರಾಜ್ಯಗಳಿಗೆ ವರ್ಗಾಯಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದರು. ಆದರೆ ಅವರ ತೃಣಮೂಲ ಕಾಂಗ್ರೆಸ್ ಪಕ್ಷವು ರಾಜ್ಯದ ಬೇರೆಡೆ ದೊಡ್ಡ ಜಯ ಸಾಧಿಸಿದೆ. ಅನೇಕ ತಿರುವುಗಳನ್ನು ಕಂಡು, ನಿಧಾನಗತಿಯ ಮತಎಣಿಕೆಯ ಬಳಿಕ ಮಮತಾ ಬ್ಯಾನರ್ಜಿ 2,000 ಕ್ಕಿಂತ ಕಡಿಮೆ ಮತಗಳಿಂದ ಸೋತಿದ್ದಾರೆ ಎಂದು ಘೋಷಿಸಲಾಗಿತ್ತು.
ಇದನ್ನೂ ಓದಿ: ನಂದಿಗ್ರಾಮ ಚುನಾವಣೆಯ ಇವಿಎಂ ಸಂರಕ್ಷಿಸಿ ಎಂದು ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚನೆ
ಈ ತೀರ್ಪಿನ ವಿರುದ್ಧ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಮತಗಳ ಮರು ಎಣಿಕೆಗೆ ಮನವಿ ಮಾಡಿದ್ದರು. ಆದರೆ, ಚುನಾವಣಾ ಆಯೋಗ ಮನವಿಯನ್ನು ತಿರಸ್ಕರಿಸಿತ್ತು. ಬಳಿಕ ಮಮತಾ, ಕೋಲ್ಕತ್ತಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಬುಧವಾರ ಆನ್ಲೈನ್ ವಿಚಾರಣೆಗೆ ಹಾಜರಾಗಿದ್ದ ಮಮತಾ ಬ್ಯಾನರ್ಜಿ, ಸುವೇಂದು ಅಧಿಕಾರಿ ವಿರುದ್ಧ ಲಂಚ, ದ್ವೇಷ ಮತ್ತು ದ್ವೇಷದ ಪ್ರಚಾರ, ಬೂತ್ ಆಕ್ರಮಣ ಮತ್ತು ಧರ್ಮದ ಆಧಾರದ ಮೇಲೆ ಮತಗಳನ್ನು ಬೇಡುವುದು ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 12 ರಂದು ನಡೆಯಲಿದೆ.
ಈ ಮೊದಲು ನಂದಿಗ್ರಾಮ ಚುನಾವಣೆಯ ವಿಚಾರಣೆ ನಡೆಸುತ್ತಿದ್ದ ಕೊಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಕೌಶಿಕ್ ಚಂದಾ ಅವರು ಬಿಜೆಪಿ ನಾಯಕರೊಂದಿಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇದು ಪಕ್ಷಪಾತಕ್ಕೆ ಕಾರಣವಾಗಬಹುದು ಎಂದು ಉಲ್ಲೇಖಿಸಿ ಬದಲಾಯಿಸುವಂತೆ ಮಮತಾ ಬ್ಯಾನರ್ಜಿ ಅರ್ಜಿ ಸಲ್ಲಿಸಿದ್ದರು. ಬ್ಯಾನರ್ಜಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿ, ಪ್ರಕರಣದಿಂದ ಹೊರ ಬಂದಿದ್ದ ನ್ಯಾಯಮೂರ್ತಿ ಕೌಶಿಕ್ ಚಂದಾ, ಇದು ಮಮತಾ ಬ್ಯಾನರ್ಜಿ ಅವರ ನ್ಯಾಯಾಧೀಶರನ್ನು ಕೆಣಕುವ ಪೂರ್ವಯೋಜಿತ ಕ್ರಮ ಮತ್ತು ಅವರ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಬಹುಜನ ಭಾರತ: ನಂದಿಗ್ರಾಮ ಬರೆಯಲಿದೆಯೇ ಜನತಂತ್ರದ ಭವಿಷ್ಯವನು?