Homeಅಂಕಣಗಳುಬಹುಜನ ಭಾರತ: ನಂದಿಗ್ರಾಮ ಬರೆಯಲಿದೆಯೇ ಜನತಂತ್ರದ ಭವಿಷ್ಯವನು?

ಬಹುಜನ ಭಾರತ: ನಂದಿಗ್ರಾಮ ಬರೆಯಲಿದೆಯೇ ಜನತಂತ್ರದ ಭವಿಷ್ಯವನು?

- Advertisement -
- Advertisement -

ನಂದಿಗ್ರಾಮದ ಹಿಂಸಾಚಾರ ಈ ಸರ್ಕಾರವನ್ನು ಪತನದ ಇಳಿಜಾರಿಗೆ ನೂಕಿತ್ತು. ರಾಜ್ಯವನ್ನು ಕೈಗಾರಿಕೀಕರಣದ ಹಾದಿಗೆ ಹಚ್ಚುವ ಭರದಲ್ಲಿ ಕುರುಡಾಗಿ ಜೇನುಹುಟ್ಟಿಗೆ ಕೈ ಇಟ್ಟಿತ್ತು ವಾಮವಾದಿ ಆಡಳಿತ. 2011ರಲ್ಲಿ ಛಿದ್ರವಾದ ಕೆಂಪುಕೋಟೆಯ ಅಡಿಯಲ್ಲಿ ಇಡಲಾದ ಸಿಡಿಮದ್ದು ತಯಾರಾದದ್ದು ನಂದಿಗ್ರಾಮದ ಮೂಸೆಯಲ್ಲಿ. ಆದರೆ ಈ ಸಿಡಿಮದ್ದನ್ನು ಅರೆದು ಗಟ್ಟಿ ಮಾಡುವ ಕ್ರಿಯೆಯಲ್ಲಿ ಖುದ್ದು ಎಡರಂಗ ಸರ್ಕಾರ ಕೈಜೋಡಿಸಿದ್ದು ಬಹುದೊಡ್ಡ ವಿಡಂಬನೆ. ಈ ಪರಿಯ ಮೈಮರೆವಿನಲ್ಲಿ ಮುಳುಗಿದ್ದ ಎಡರಂಗಕ್ಕೆ ಕಾಲ ಕೆಳಗಿನ ನೋಟವೇ ಕಾಣದಾಗಿತ್ತು. ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಲೇ ಹೋಯಿತು. ತಾನು ಜನರ ನಡುವೆ ಕೆಲಸ ಮಾಡಿ ಕಟ್ಟಿ ಬೆಳೆಸಿದ್ದ ಜನಶಕ್ತಿಯ ಕ್ರೋಧವನ್ನು ತನ್ನ ಮೈಮೇಲೆ ಎಳೆದುಕೊಂಡಿತು. ನೆಲಕ್ಕೆ ಆನಿಸಿ ಜನದನಿಯನ್ನು ಆಲಿಸಬೇಕಿದ್ದ ಕಿವಿಗಳಲ್ಲಿ ಟೊಳ್ಳುಗಾಳಿಯ ಸದ್ದೇ ತುಂಬಿ ಹೋಗಿತ್ತು. ದಮನದ ದಾರಿಯನ್ನು ಆರಿಸಿಕೊಂಡಿತು. ಎಡರಂಗದ ಕಾರ್ಯಕರ್ತರು ಪೊಲೀಸರ ವೇಷ ಧರಿಸಿದ್ದರು. ಅವರ ಕೈಯಲ್ಲಿ ಬಂದೂಕುಗಳಿದ್ದವು. ಹಿಂಸೆಯಲ್ಲಿ ಮುಳುಗೆದ್ದ ನಂದಿಗ್ರಾಮ ರಣರಂಗವಾಗಿತ್ತು. 14 ಮಂದಿ ಅಸುನೀಗಿದ್ದರು. ಎಡರಂಗ ಸರ್ಕಾರ 2011ರಲ್ಲಿ ಘೋರ ಪರಾಭವ ಕಂಡಿತ್ತು.

ಅಂದು ಮಮತಾ ಗೆಲುವಿನ ಪಯಣವನ್ನು ನಿರ್ಣಯಿಸಿದ್ದ ಅದೇ ನಂದಿಗ್ರಾಮ ಇಂದು ಆಕೆಯನ್ನು ಸತ್ವಪರೀಕ್ಷೆಗೆ ಗುರಿಪಡಿಸಿದೆ. ನಂದಿಗ್ರಾಮ ಮತ್ತು ಸಿಂಗೂರಿನಲ್ಲಿ ಕೃಷಿ ವ್ಯವಸ್ಥೆ ಮತ್ತು ಕೈಗಾರಿಕೀಕರಣದ ಕವಲುದಾರಿಯಲ್ಲಿ ನಿಂತಿತ್ತು ಬಂಗಾಳ. ಎಡರಂಗ ಸರ್ಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಗೊಡವೆಗೆ ಹೋಗದೆ ದುಡುಕಿತು. ಬಲವಂತ ಭೂಗ್ರಹಣದ ವಿರುದ್ಧ ಜನರೊಂದಿಗೆ ನಿಂತು ಮಮತಾ ಕಟ್ಟಿ ಬೆಳೆಸಿದ ಆಂದೋಲನವನ್ನು ಹಣಿಯಲು ಹೋಗಿ ಮಣ್ಣು ಮುಕ್ಕಿತು. ಆದರೆ ಅಂದು ಕೈಗಾರಿಕೆಗಳ ಸ್ಥಾಪನೆಗೆ ಕೃಷಿ ಭೂಮಿಯ ಬಲವಂತದ ಸ್ವಾಧೀನವನ್ನು ವಿರೋಧಿಸಿದ ಮಮತಾ ದೀದಿ ಕಳೆದ ಹತ್ತು ವರ್ಷಗಳ ತಮ್ಮ ಆಡಳಿತದಲ್ಲಿ ಮಾಡಿದ್ದಾದರೂ ಏನು? ಕೃಷಿ ಮತ್ತು ಕೈಗಾರಿಕೆಯ ಸಮನ್ವಯ ಅರ್ಥವ್ಯವಸ್ಥೆಯೊಂದನ್ನು ಜನವಿಶ್ವಾಸದ ಅಡಿಪಾಯದ ಮೇಲೆ ಕಟ್ಟಿ ಬೆಳೆಸಬೇಕಿತ್ತಲ್ಲವೇ? ಈ ಕಾರ್ಯದಲ್ಲಿ ಅವರು ಸಂಪೂರ್ಣ ವಿಫಲರಾದರು.

ಬಂಗಾಳದ ಅರ್ಥವ್ಯವಸ್ಥೆ ಹೆಚ್ಚೂಕಡಿಮೆ ಹದಿನಾಲ್ಕು ವರ್ಷಗಳ ಹಳೆಯ ನಂದಿಗ್ರಾಮ-ಸಿಂಗೂರುಗಳಲ್ಲೇ ಹೂತು ಹೋಗಿದೆ. ನಂದಿಗ್ರಾಮ ಹೊಮ್ಮಿಸಿದ ಸವಾಲುಗಳ ನೋಟಕ್ಕೆ ನೋಟ ಬೆರೆಸಿ ನೋಡಲಿಲ್ಲ ಮಮತಾ ಆಡಳಿತ. ಮಮತಾ ದಂಡು ಮತ್ತು ದಂಡನಾಯಕರು ನಡೆಸಿದ ಭ್ರಷ್ಟಾಚಾರವನ್ನೂ ತಮ್ಮ ಕೊರಳಿಗೆ ಸುತ್ತಿಕೊಂಡಿದ್ದಾರೆ. ಪರಿವರ್ತನೆಯ ಮಂತ್ರ ಜಪಿಸಿ ಅಧಿಕಾರಕ್ಕೆ ಬಂದವರು ಮಮತಾ. ಸರ್ಕಾರದ ಪರಿವರ್ತನೆ ಆಯಿತೇ ವಿನಾ ವ್ಯವಸ್ಥೆ ಬದಲಾಗಲಿಲ್ಲ. ಹಾಗೆಂದು ಮಮತಾ ಆಡಳಿತದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎನ್ನುವುದು ತಪ್ಪಾದೀತು. ಆದರೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿಲ್ಲ. ಅದರ ಸುತ್ತ ಬೆಸೆದಿದ್ದ ಆಶೋತ್ತರಗಳು ಚಿಗಿತು ಫಲ ನೀಡಲಿಲ್ಲ. ನಿಜ, ಮಮತಾ ಆಡಳಿತ ವಿರೋಧಿ ಅಲೆಯನ್ನೇನೂ ಎದುರಿಸಿಲ್ಲ.

ಬಂಗಾಳ ಚುನಾವಣೆ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರು
PC: Deccan herald

ಎರಡು ಅವಧಿಗಳ ನಂತರವೂ ಅಂತಹ ಅಲೆ ಇಲ್ಲದಿರುವುದು ಸಾಧಾರಣ ಸಂಗತಿಯೇನೂ ಅಲ್ಲ. ತಾವು ಎಡಕ್ಕಿಂತ ಹೆಚ್ಚು ಎಡ ಎಂದು ತೋರಿಸಿಕೊಂಡ ದೀದಿ ನೀತಿ ನಿರ್ಧಾರಗಳಲ್ಲಿ ಮೂಲಭೂತ ಬದಲಾವಣೆಗೆ ಕೈ ಹಾಕಲಿಲ್ಲ. ಹೀಗಾಗಿ ನಿರಾಸೆಯ ಅಂತರ್ವಾಹಿನಿ ಜನಮಾನಸದಲ್ಲಿ ಹರಿದಿರುವುದು ಹೌದು. ಅದು ಭ್ರಮನಿರಸನದ ರೂಪನ್ನು ಇನ್ನೂ ತಳೆದಿಲ್ಲವೆಂದರೆ ಮಮತಾ ಸರ್ಕಾರದ ಹಲವಾರು ಜನಪ್ರಿಯ ಕಾರ್ಯಕ್ರಮಗಳೇ ಕಾರಣ. ಎಡರಂಗವೇ ಪ್ರತಿಪಕ್ಷವಾಗಿ ಉಳಿದಿದ್ದರೆ ಮಮತಾಗೆ ಎದುರೇ ಇರುತ್ತಿರಲಿಲ್ಲ. ಆದರೆ ಎಡರಂಗ ಮತ್ತು ಕಾಂಗ್ರೆಸ್ ಉಳಿಸಿರುವ ಶೂನ್ಯವನ್ನು ಮೋದಿ ಮತ್ತು ಅಮಿತ್ ಶಾ ಅವರ ಅತ್ಯುಗ್ರ ಅಕ್ರಮಣಕಾರಿ ಹಿಂದುತ್ವ ರಾಜಕಾರಣ ಕಬಳಿಸಿದೆ.

ಎದುರಾದದ್ದನ್ನೆಲ್ಲ ಉರುಳಿಸಿ ನೆಲಸಮ ಮಾಡುವ ದೈತ್ಯ ಬುಲ್ಡೋಜರ್ ರಾಜಕಾರಣವಿದು. ಹುಟ್ಟಾ ಬಂಡಾಯಗಾರ್ತಿ ಎಂಬ ಪಟ್ಟ ಪಡೆದಿರುವ ಮಮತಾ ಅವರನ್ನೂ ಅಲ್ಲಾಡಿಸಿರುವ ದಾಳಿಯಿದು. ಬೇರುಮಟ್ಟದಲ್ಲಿ ರಾಜಕಾರಣವನ್ನು ನಿಯಂತ್ರಿಸುವ ತೋಳ್ಬಲ-ಧನಬಲದ ಕಟ್ಟಾಳುಗಳನ್ನು ತೃಣಮೂಲದಿಂದ ಸೆಳೆದುಕೊಂಡಿದೆ ಬಿಜೆಪಿ. ಶಾರದ-ನಾರದ ಹಗರಣಗಳಲ್ಲಿ ಕಳಂಕಿತರಾದ ಹಲವು ತೃಣಮೂಲ ತಲೆಯಾಳುಗಳು ಇಂದು ಬಿಜೆಪಿ ಎಂಬ ’ಗಂಗೆ’ಯಲ್ಲಿ ಮುಳುಗಿ ’ಪವಿತ್ರ’ರಾಗಿದ್ದಾರೆ. ಹೀಗಾಗಿ ಬಿಜೆಪಿ ಕೇವಲ ’ಕಟ್ ಮನಿ’ ಭ್ರಷ್ಟಾಚಾರದ ವಿರುದ್ಧ ಕತ್ತಿ ಝಳಪಿಸುತ್ತಿದೆಯೇ ವಿನಾ ಶಾರದ- ನಾರದ ಚಿಟ್ ಫಂಡ್ ಹಗರಣಗಳ ಕುರಿತು ತುಟಿ ಹೊಲಿದುಕೊಂಡಿದೆ.

ಬೀಡುಬೀಸು ಪಕ್ಷಾಂತರ, ಹಣದಶಕ್ತಿಯ ಅಬ್ಬರ, ಕೇಂದ್ರದ ಅಧಿಕಾರದ ದಂಡದ ಯಥೇಚ್ಛ ಬಳಕೆ, ಕೋಮುವಾದಿ ಧ್ರುವೀಕರಣ ಹಾಗೂ ಮಿಥ್ಯಾಪ್ರಚಾರದ ಹಲವು ಹತಾರುಗಳನ್ನು ಝಳಪಿಸುತ್ತ ಬಿಜೆಪಿ ಬಂಗಾಳಕ್ಕೆ ಲಗ್ಗೆ ಹಾಕಿ ವರ್ಷಗಳೇ ಉರುಳಿವೆ. ತನ್ನ ಸನ್ನಾಹದಲ್ಲಿ ಅದು ಕಣ್ಣುಕುಕ್ಕುವ ಯಶಸ್ಸನ್ನು ಕಂಡಿದೆ ಕೂಡ. ಇಂದು ಬಂಗಾಳದ ಅಧಿಕಾರದ ಗದ್ದುಗೆಯ ಮೇಲೆ ಕೈಯಿರಿಸಿ ನಿಂತೀತೆಂದು ಹತ್ತು ವರ್ಷಗಳ ಹಿಂದೆ ಯಾರೂ ಊಹಿಸಿರಲಿಲ್ಲ.

ಇಂತಹ ಬಿಜೆಪಿ ಪ್ರವೇಶದ ನಂತರ ಪಶ್ಚಿಮ ಬಂಗಾಳದ ಬದಲಾದ ರಾಜಕಾರಣದ ವಿನ್ಯಾಸದ ಸುಳಿವುಗಳು ನಂದಿಗ್ರಾಮದ ಮಮತಾ ಬ್ಯಾನರ್ಜಿ-ಸುವೇಂದು ಅಧಿಕಾರಿ ಹಣಾಹಣಿಯಲ್ಲಿ ಕಾಣಸಿಗುತ್ತವೆ. ನಂದೀಗ್ರಾಮದ ಪರಿಶಿಷ್ಟ ಜಾತಿ-ಪಂಗಡಗಳ ಜನಸಂಖ್ಯೆಯ ಪ್ರಮಾಣ ಶೇ.16.5. ಈ ಸಮುದಾಯಗಳನ್ನೂ ಒಡೆದಿರುವ ಬಿಜೆಪಿ, ಹಿಂದೂ-ಮುಸ್ಲಿಮ್ ಧ್ರುವೀಕರಣ ಮತ್ತು ಭಾರೀ ಪ್ರಮಾಣದ ಪಕ್ಷಾಂತರದ ಮೂಲಕ ನಂದೀಗ್ರಾಮವನ್ನು ಗೆಲ್ಲಲು ಹೊರಟಿದೆ. ಈ ಮಾತು ಇಡೀ ಪಶ್ಚಿಮ ಬಂಗಾಳಕ್ಕೆ ಅಕ್ಷರಶಃ ವಿಸ್ತರಿಸಲಿದೆ. ನಂದಿಗ್ರಾಮದ ಕಂಪನಗಳು ರಾಜ್ಯಾದ್ಯಂತ ಹರಿಯಲಿವೆ. ಚುನಾವಣಾ ಫಲಿತಾಂಶಗಳ ನಂತರವೂ ಮುಂದುವರೆಯಲಿವೆ.

ಭಾರತದ ಸಹಬಾಳ್ವೆಯ ಆತ್ಮದ ಅಳಿವು ಉಳಿವಿಗಾಗಿ ನಡೆದಿರುವ ಬಂಗಾಳದ ಸಮರದ ಆತ್ಮ ನಂದಿಗ್ರಾಮ. ಇಲ್ಲಿ ಮಮತಾ ಸೋತರೆ ಈ ಉತ್ಪಾತದ ಕಂಪನಗಳು ದೇಶದ ಜನತಂತ್ರವನ್ನು ಅಸ್ಥಿರಗೊಳಿಸುವುದು ನಿಶ್ಚಿತ. ಬಿಜೆಪಿ ಬಯಸುತ್ತಿರುವ ಪ್ರತಿಪಕ್ಷಮುಕ್ತ ಭಾರತ ಬಾಗಿಲು ಬಡಿಯುತ್ತಿದೆ.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...