ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಖ್ಯಸ್ಥ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಬಿಜೆಪಿಯ ರಾಹುಲ್ ಸಿನ್ಹಾ ಸೋಮವಾರ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ನಾಲ್ಕು ಜನರಿಗಲ್ಲ 8 ಜನರಿಗೆ ಗುಂಡು ಹಾರಿಸಬೇಕಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೀತಾಲ್ಕುಚ್ಚಿಯಲ್ಲಿನ ತುಂಟ ಹುಡುಗರು ಗುಂಡೇಟು ತಿಂದಿದ್ದಾರೆ. ಮುಂದಿನ ಹಂತದ ಮತದಾನದಲ್ಲಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಮತ್ತಷ್ಟು ಗುಂಡೇಟು ತಿನ್ನಬೇಕಾಗುತ್ತದೆ. ಕೂಚ್ ಬೆಹಾರ್ನ ಸೀತಾಲ್ಕುಚ್ಚಿ ತರಹದ ಹತ್ಯೆಗಳು ಸಂಭವಿಸಬಹುದು ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಬೆದರಿಕೆ ಹಾಕಿದ್ದರು.
ಈ ಘಟನೆ ಬಗ್ಗೆಯೇ ಮಾತನಾಡಿರುವ ಹಬ್ರಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ರಾಹುಲ್ ಸಿನ್ಹಾ ಚುನಾವಣಾ ಪ್ರಚಾರದಲ್ಲಿ, ಕೂಚ್ ಬೆಹಾರ್ನ ಸೀತಾಲ್ಕುಚ್ಚಿ ಗಲಭೆಯಲ್ಲಿ ನಾಲ್ಕು ಜನರನ್ನಲ್ಲ, ಎಂಟು ಜನರನ್ನು ಕೇಂದ್ರ ಪಡೆಗಳು ಗುಂಡಿಕ್ಕಿ ಕೊಂದಿರಬೇಕಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರನ್ನು ವಾರೆಂಟ್ ಇಲ್ಲದೆ ಬಂಧಿಸಿ ‘ಪೊಲೀಸ್ ರಾಜ್ಯ’ ಮಾಡುತ್ತಿದ್ದಾರೆಯೆ: ಸಿದ್ದರಾಮಯ್ಯ
ರಾಹುಲ್ ಸಿನ್ಹಾ, “ಸೀತಾಲ್ಕುಚ್ಚಿಯಲ್ಲಿ ನಾಲ್ವರ ಬದಲು ಎಂಟು ಜನರನ್ನು ಕೇಂದ್ರ ಪಡೆಗಳು ಕೊಲ್ಲಬೇಕಾಗಿತ್ತು. ಏಕೆಂದರೆ, ಬಿಜೆಪಿಗೆ ಮತ ನೀಡಲು ಬಂದಿದ್ದ 18 ವರ್ಷದ ಯುವಕನನ್ನು ಮಮತಾ ಬ್ಯಾನರ್ಜಿ ಬೆಂಬಲಿಗರು ಸಾರ್ವಜನಿಕವಾಗಿ ಗುಂಡಿಕ್ಕಿ ಕೊಂದಿದ್ದರು” ಎಂದು ಆರೋಪಿಸಿದ್ದಾರೆ.
ಕೂಚ್ ಬೆಹರ್ ಶೂಟೌಟ್ ಬಗ್ಗೆ ನಾಲಿಗೆ ಹರಿ ಬಿಟ್ಟಿರುವ ಬಿಜೆಪಿ ನಾಯಕರ ಕುರಿತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜ್ಯೋತಿ ಪ್ರಿಯಾ ಮಲ್ಲಿಕ್ ಚುನಾವಣಾ ಆಯೋಗವು ಪಕ್ಷವನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೂಚ್ ಬೆಹಾರ್ನ ಸೀತಾಲ್ಕುಚ್ಚಿ ಹತ್ಯಾಕಾಂಡದಂತಹ ಘಟನೆಗಳು ಮರುಕಳಿಸುತ್ತವೆ ಎಂದು ಬೆದರಿಕೆ ಹಾಕುತ್ತಿರುವವರನ್ನು ರಾಜಕಾರಣದಿಂದ ನಿಷೇಧಿಸಬೇಕು ಎಂದು ರಾಣಾಘಾಟ್ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗ್ರಹಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ದಿಲೀಪ್ ಘೋಷ್ ಮಾತನಾಡಿರುವ ವಿಡಿಯೋವನ್ನು ಸೇರಿಸಲಾಗಿದೆ.
ಇದನ್ನೂ ಓದಿ: ಬಂಗಾಳ: ಮಮತಾ ಬ್ಯಾನರ್ಜಿಗೆ 24 ಗಂಟೆಗಳ ನಿಷೇಧ ಹೇರಿದ ಚುನಾವಣಾ ಆಯೋಗ