ನಾಡಿನ ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ದಲಿತ, ಕಮ್ಯುನಿಸ್ಟ್ ಹೋರಾಟಗಾರ ಚಂದ್ರಶೇಖರ ತೋರಣಘಟ್ಟರವರು ಇಂದು ಚಿತ್ರದುರ್ಗದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ದಾವಣಗೆರೆ ಜಿಲ್ಲೆಯ ತೋರಣಘಟ್ಟದವರಾದ ಇವರು 80ರ ದಶಕದಲ್ಲಿ ಕರ್ನಾಟಕದಲ್ಲಿ ಕ್ರಾಂತಿಕಾರಿ ಕಮ್ಯೂನಿಸ್ಟ್ ಪಕ್ಷ ಕಟ್ಟುವ ಮೂಲಕ ದುಡಿವ ದಲಿತ ದಮನಿತರಿಗೆ ದನಿಯಾಗಿದ್ದರು. ಹಲವು ವರ್ಷಗಳಿಂದ ತೀವ್ರ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.
ತೋರಣಘಟ್ಟರವರು ಪತ್ನಿ ಹಾಗೂ ಒರ್ವ ಪುತ್ರನನ್ನು ಅಗಲಿದ್ದು ಇಂದು ರಾತ್ರಿಯವರೆಗೂ ಅವರ ಪಾರ್ಥಿವ ಶರೀರವನ್ನು ಚಿತ್ರದುರ್ಗದಲ್ಲಿ ಇಡಲಾಗುತ್ತಿದ್ದು ನಾಳೆ ಮುಂಜಾನೆ ತೋರಣಘಟ್ಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಭದ್ರಾವತಿಯಲ್ಲಿ ಮೊದಲಿಗೆ ಹಕ್ಕಿಪಿಕ್ಕಿ ಸಮುದಾಯದವರಿಗೆ ಮನೆಗಾಗಿ ಭಾರೀ ಹೋರಾಟ ರೂಪಿಸಿದ್ದ ಅವರು ಅಲ್ಲಿನ ಗೂಂಡಾಗಳನ್ನು ಎದುರುಹಾಕಿಕೊಂಡು ದಿಟ್ಟಯುವಪಡೆಯನ್ನು ಕಟ್ಟಿ ಬೃಹತ್ ಹೋರಾಟದಲ್ಲಿ ಜಯಶೀಲರಾದರು. ಇವರ ಹೋರಾಟದ ಕಾರಣಕ್ಕೆ ಇಂದಿಗೂ ಭದ್ರಾವತಿಯಲ್ಲಿ ನೂರಾರು ದಲಿತ ಕುಟುಂಬಗಳಿಗೆ ನೆಲೆ ಸಿಕ್ಕಿದೆ. ಅಲ್ಲಿಂದ ನಕ್ಸಲ್ ಹೋರಾಟದ ಪ್ರಭಾವಕ್ಕೊಳಗಾದ ತೋರಣಘಟ್ಟರವರು ಆರ್ವೈಎಫ್ ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಹುಟ್ಟುಹಾಕಿದ್ದರು.
ದಲಿತ ಸಂಘರ್ಷ ಸಮಿತಿಯ ಆರಂಭದಲ್ಲಿ ಒಬ್ಬರಾಗಿದ್ದ ಇವರು ಸಂಸದೀಯ ಚುನಾವಣೆಗೆ ಸಂಘಟನೆಗಳು ಭಾಗವಹಿಸುವುದನ್ನು ವಿರೋಧಿಸಿ ಡಿಎಸ್ಎಸ್ (ಸಂಯೋಜಕ) ಬಣ ಸ್ಥಾಪಿಸಿದರು. ಮುಂದೆ ಸಿಪಿಐ (ಎಂಎಲ್) ಸಂಘಟನೆಯಲ್ಲಿಯೂ ಸಕ್ರಿಯವಾಗಿ ತೊಡಿಗಿಸಿಕೊಂಡಿದ್ದರು. ಕೊಡಗಿನ ಆದಿವಾಸಿಗಳನ್ನು ಸಂಘಟನೆ ಮಾಡಲು ಮುಂದಾದಾಗ ಅಪಘಾತಕ್ಕೊಳಗಾದ ಅವರು ಕಾಲು ಪೆಟ್ಟಿನಿಂದಾಗಿ ದಾವಣಗೆರೆಯಲ್ಲಿ ನೆಲೆಸಬೇಕಾಯಿತು. ಆಗ ಪಿ.ಲಂಕೇಶ್ರವರ ನೇತೃತ್ವದಲ್ಲಿ ಹೊರಬರುತ್ತಿದ್ದ ಲಂಕೇಶ್ ಪತ್ರಿಕೆಯ ವರದಿಗಾರರಾಗಿ ಬಹಳ ಕಾಲ ಪತ್ರಕರ್ತರ ಪಾತ್ರವಹಿಸಿದ್ದಾರೆ.
ಇವರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೇಹಳ್ಳಿ ಭೂ ಹೋರಾಟ, ರಾಯಚೂರು ಜಿಲ್ಲೆಯ ಚಿಕ್ಕಹೆಸರೂರ ತೋರಣದಿನ್ನಿ ಭೂ ಹೋರಾಟ, ಕೊಪ್ಪಳದ ಕಾರಟಗಿ ಕೆರೆ ಅಂಗಳ ಭೂ ಹೋರಾಟ, ಚಿಕ್ಕಮಗಳೂರು ಜಿಲ್ಲೆಯ ಕಬ್ಬಿನಹಳ್ಳಿ ಭೂ ಹೋರಾಟ, ಭದ್ರಾವತಿಯ ಒಸಿ ಬ್ಲಾಕ್ ಕೊಳಗೇರಿ ನಿವಾಸಿಗಳ ಹೋರಾಟ… ಹೀಗೆ ಎರಡು ದಶಕಗಳ ಕಾಲ ರಾಜ್ಯದಲ್ಲಿ ನಡೆದ ಜಮೀನ್ದಾರಿ ವಿರೋಧಿ – ಸಾಮ್ರಾಜ್ಯ ವಿರೋಧಿ ಕ್ರಾಂತಿಕಾರಿ ಚಳವಳಿಯಲ್ಲಿ ತೋರಣಗಟ್ಟರವರು ತಮ್ಮನ್ನು ಬಿಡುವಿಲ್ಲದೇ ತೊಡಗಿಸಿಕೊಂಡಿದ್ದರು.
ನಂತರ ಗ್ರಾಮೀಣ ಅಧ್ಯಯನ ಮಾಡಲು ಅವರು ಬಳ್ಳಾರಿಗೆ ಪ್ರಯಾಣಿಸುತ್ತಿದ್ದ ವೇಳೆ ಎರಡನೇ ಬಾರಿಗೆ ಅಪಘಾತಕ್ಕೊಳಗಾದಾಗ ಅವರ ಆರೋತ್ಯ ಮತ್ತಷ್ಟು ಹದಗೆಟ್ಟಿತು. ಹಾಗಾಗಿ ಅವರು ಸಕ್ರಿಯ ಚಳಿವಳಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ತದನಂತರ ಅಪಘಾತದಲ್ಲಿ ಅವರ ಹಿರಿಯ ಮಗನನ್ನು ಸಹ ಕಳೆದುಕೊಂಡು ತೀವ್ರ ಮಾನಸಿಕ ಒತ್ತಡಕ್ಕೊಳಗಾಗುತ್ತಾರೆ.
ಆದರೂ ಸಾಮಾಜಿಕ ಕಾಳಜಿ ಹೊಂದಿದ್ದ ಅವರು ತಮ್ಮ ಬದುಕಿನುದ್ದಕ್ಕೂ ತೀವ್ರ ಹೋರಾಟ ನಡೆಸಿಕೊಂಡೇ ಬಂದವರು. ಇದಕ್ಕೆ ಪ್ರಾಧ್ಯಾಪಕರಾಗಿರುವ ಅವರ ಪತ್ನಿ ಯಶೋಧರವರ ಸಕ್ರಿಯ ಬೆಂಬಲ ಸದಾ ಇತ್ತು. ತೋರಣಘಟ್ಟರವರು ಚಳವಳಿ, ಹೋರಾಟ ಎಂದು ಊರೂರು ತಿರುಗಿದರೆ ಮನೆಯನ್ನು ನಿಭಾಯಿಸಿ ಅವರ ಹೋರಾಟಕ್ಕೆ ಅಗತ್ಯ ಹಣಕಾಸಿನ ನೆರವನ್ನು ಸಹ ಅವರ ಪತ್ನಿ ಒದಗಿಸುತ್ತಿದ್ದರು. ಅಷ್ಟರಮಟ್ಟಿಗಿನ ಸಾಮಾಜಿಕ ಕಾಳಜಿ ಅವರಿಗೂ ಇದ್ದ ಕಾರಣದಿಂದಲೇ ಇವರು ಇಷ್ಟೆಲ್ಲಾ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿತ್ತು.
ಕೋಮು ಸೌಹಾರ್ದ ವೇದಿಕೆ, ಕರ್ನಾಟಕ ಜನಪರ ವೇದಿಕೆಗಳಲ್ಲಿಯು ಕೆಲಸ ಮಾಡಿ ಸೌರ್ಹಾದತೆಗಾಗಿ ಶ್ರಮಿಸಿದ್ದ ತೋರಣಘಟ್ಟರವರ ಆರೋಗ್ಯ ಕಳೆದ ಐದಾರು ವರ್ಷಗಳಿಂದ ಹದಗೆಡುತ್ತಾ ಬಂದಿದ್ದು ಇಂದು ಇಹಲೋಕ ತ್ಯಜಿಸಿದ್ದಾರೆ.


