ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕನಕೇನಹಳ್ಳಿ ಗ್ರಾಮದ ಸರ್ವೆ ನಂ 58ರ ಸರ್ಕಾರಿ ಜಾಗದಲ್ಲಿ ವಾಸವಿದ್ದ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರಜಾ ವಿಮೋಚನಾ ಚಳವಳಿಯ ನೇತೃತ್ವದಲ್ಲಿ ಶುಕ್ರವಾರ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, “ಘಟನೆ ನಡೆದ 5 ದಿನ ಕಳದರೂ ಆರೋಪಿಗಳನ್ನು ಬಂಧಿಸಿಲ್ಲ, ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರದ ಸಾಮಾಜಿಕ ಕಾರ್ಯಕರ್ತರಾದ ರಾಜು ಸಣ್ಣಕ್ಕಿಯವರು ಈ ಕುರಿತು ನಾನುಗೌರಿ.ಕಾಂನೊಂದಿಗೆ ಮಾತನಾಡಿ, “ಕನಕೇನಹಳ್ಳಿಯ ಸರ್ವೆ ನಂ58 ರಲ್ಲಿ 3.20 ಎಕರೆ ಇನಾಮ್ತಿ ಸರ್ಕಾರಿ ಜಮೀನಿದೆ. ಅಲ್ಲಿ ಗ್ರಾಮದ ಹೆಚ್ಚಿನ ದಲಿತರು ಮತ್ತು ಕೆಲ ಇತರ ಸಮುದಾಯಗಳು ಗುಡಿಸಲು, ಮನೆ ಕಟ್ಟಿಕೊಂಡು ವಾಸವಿದ್ದಾರೆ. ಮುತ್ತುರಾಜೇಗೌಡ ಎಂಬ ಸವರ್ಣೀಯ ಸಮುದಾಯದ ವ್ಯಕ್ತಿ ಅಲ್ಲಿಯೇ ಮನೆ ಕಟ್ಟಿಕೊಂಡಿದ್ದು, ದಲಿತರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಇಡೀ ಜಮೀನನ್ನು ಕಬಳಿಸಲು ಯತ್ನಿಸಿದ್ದರು. ಅವರು ಮತ್ತು ಅವರ ಪುತ್ರ ಸೇರಿಕೊಂಡು ಮೇ 03ರ ರಾತ್ರಿ 10.30ರ ಸಮಯದಲ್ಲಿ ನಾಗಮ್ಮ ಮತ್ತು ಹನುಮಕ್ಕನವರ ದಲಿತ ಕುಟುಂಬಗಳ ಗುಡಿಸಲಿಗೆ ಬೆಂಕಿ ಹಚ್ಚಿದ್ದಾರೆ” ಎಂದರು.

ಮುತ್ತುರಾಜೇಗೌಡ ಇಡೀ ಜಮೀನು ತನಗೆ ಸೇರಬೇಕೆಂದು ಎ.ಸಿ, ಡಿ.ಸಿ ಮತ್ತು ಕೆಳ ಹಂತದ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿದಾಗ ಅವೆಲ್ಲವೂ ವಜಾಗೊಂಡಿವೆ. ಈಗ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲವು ಸಹ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಹೀಗಿರುವಾಗ ಹೆದರಿಸಿ, ಬೆದರಿಸಿ ದಲಿತರನ್ನು ಅಲ್ಲಿಂದ ಎತ್ತಂಗಡಿ ಮಾಡಲು ಈ ರೀತಿ ಬೆಂಕಿ ಹಚ್ಚಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರೆ ಮೊದ ಮೊದಲು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದರು. ಆದರೆ ಪ್ರತಿಭಟನೆಗಳು ನಡೆದ ನಂತರ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಆರೋಪಿಗಳನ್ನು ಬಂಧಿಸಿಲ್ಲ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂತ್ರಸ್ತ ದಲಿತರಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ದಲಿತ್ ಫೈಲ್ಸ್: ದಲಿತ ದಮನಿತರ ಮೇಲಿನ ದೌರ್ಜನ್ಯಗಳು-ಪ್ರತಿರೋಧದ ಸುದ್ದಿಗಳನ್ನು ಇಲ್ಲಿ ಓದಿ
ಗ್ರಾಮದಲ್ಲಿ ದಲಿತರಿಗೆ ಸಣ್ಣ ಸಣ್ಣ ಮನೆಗಳಷ್ಟೆ ಇವೆ. ಹಾಗಾಗಿ ಅವರು ಅನಿವಾರ್ಯವಾಗಿ ಸರ್ಕಾರಿ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡಿದ್ದಾರೆ. ತಹಶೀಲ್ದಾರ್ರವರು ಬೇರೆಡೆ 11 ಕುಂಟೆ ಜಾಗ ನೀಡುವುದಾಗಿ ಹೇಳಿದ್ದಾರೆ. ಆದರೆ 50ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಆ ಜಾಗ ಸಾಲುವುದಿಲ್ಲ ಮಾತ್ರವಲ್ಲ, ಅದು ನಿಜವಾಗಿಯೂ ದಲಿತರ ಕೈಗೆ ಸಿಗುವುದು ಅಷ್ಟು ಸುಲಭವಲ್ಲ. ಹಾಗಾಗಿ ಸದ್ಯ ದಲಿತರು ಇರುವ ಜಾಗವನ್ನು ಅವರ ಹೆಸರಿಗೆ ಮಾಡಿ ಹಕ್ಕುಪತ್ರ ನೀಡಬೇಕು. ಅವರಿಗೆ ರಕ್ಷಣೆ ಒದಗಿಸಬೇಕು ಎಂದು ಪ್ರಜಾ ವಿಮೋಚನಾ ಚಳವಳಿಯ ಅಧ್ಯಕ್ಷರಾದ ಮುನಿ ಆಂಜನಪ್ಪ ಹೇಳಿದ್ದಾರೆ.
ಇದನ್ನೂ ಓದಿ: ತುಮಕೂರು: ದೇವರ ಮೆರವಣಿಗೆ ಕಳುಹಿಸಿ ಎಂದ ದಲಿತರ ಮೇಲೆ ದೌರ್ಜನ್ಯ; ಜೀವ ಬೆದರಿಕೆ
ಪ್ರಕರಣ ಕೋರ್ಟ್ನಲ್ಲಿರುವುದರಿಂದ ಪೊಲೀಸರು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಆದರೆ ಗುಡಿಸಲಿಗೆ ಬೆಂಕಿ ಹಚ್ಚಿದ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತೇವೆ ಎಂದು ಡಿವೈಎಸ್ಪಿ ನಾಗರಾಜು ತಿಳಿಸಿದ್ದಾರೆ.


