Homeಕರ್ನಾಟಕತುಮಕೂರು: ದೇವರ ಮೆರವಣಿಗೆ ಕಳುಹಿಸಿ ಎಂದ ದಲಿತರ ಮೇಲೆ ದೌರ್ಜನ್ಯ; ಜೀವ ಬೆದರಿಕೆ

ತುಮಕೂರು: ದೇವರ ಮೆರವಣಿಗೆ ಕಳುಹಿಸಿ ಎಂದ ದಲಿತರ ಮೇಲೆ ದೌರ್ಜನ್ಯ; ಜೀವ ಬೆದರಿಕೆ

ದೌರ್ಜನ್ಯದ ಕುರಿತು ದೂರು ನೀಡಿದರೂ ಪೊಲೀಸರು ಸ್ವೀಕರಿಸುತ್ತಿಲ್ಲ ಎಂದು ದಲಿತರು ಆರೋಪಿಸಿದ್ದಾರೆ

- Advertisement -
- Advertisement -

ಮುಜರಾಯಿ ಇಲಾಖೆಗೆ ಸೇರಿದ ದೇವರ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಪರಿಶಿಷ್ಠ ಜಾತಿ ಸಮುದಾಯದವರು ವಾಸಿಸುವ ಕಾಲೊನಿಗೆ ಕಳುಹಿಸಲು ಒಪ್ಪದೆ ಜಾತಿ ದೌರ್ಜನ್ಯ ಎಸಗಿರುವ ಘಟನೆ ತುಮಕೂರಿನ ಹುಣಸೆಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. ದೇವರ ಮೆರವಣಿಗೆಯನ್ನು ತಮ್ಮ ಕೇರಿಗೆ ಕಳುಹಿಸಿ ಎಂದು ಕೇಳಿಕೊಂಡರೂ ಅದಕ್ಕೆ ಒಪ್ಪದ ಸವರ್ಣೀಯರು, ದಲಿತರಿಗೆ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ಧಗಳಿಂದ ಬೈದಿದ್ದಲ್ಲದೆ ಕೊಲೆ ಬೆದರಿಕೆನ್ನೂ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ಹುಣಸೆಘಟ್ಟ ಗ್ರಾಮದಲ್ಲಿರುವ ಮುಜರಾಯಿ ಇಲಾಖೆಗೆ ಸೇರಿರುವ ದೇವಾಲಯದಲ್ಲಿ ವರ್ಷ ಪ್ರತಿ ನಡೆಯುವಂತೆ ಈ ವರ್ಷವೂ ಎಪ್ರಿಲ್‌ 22 ರಿಂದ 24ರ ವರೆಗೆ ಜಾತ್ರೆ ನಡೆದಿತ್ತು. ಜಾತ್ರೆಯಲ್ಲಿ ಗ್ರಾಮದ ದೇವರುಗಳಾದ ಆಂಜನೇಯ ಸ್ವಾಮಿ ಹಾಗೂ ದೊಡ್ಡಮ್ಮ, ಚಿಕ್ಕಮ್ಮ ದೇವರುಗಳ ಮೆರವಣಿಗೆ ನಡೆಯುತ್ತದೆ. ಆದರೆ ಈ ಮೆರವಣಿಗೆಯನ್ನು ಆದಿದ್ರಾವಿಡ ಜನಾಂಗದ ವಾಸಿಸುವ ಕಾಲೋನಿಗೆ ಕರೆದುಕೊಂಡು ಬರುವಂತೆ ಕೇಳಿದ್ದಕ್ಕಾಗಿ ಅವರ ವಿರುದ್ದ ಜಾತಿ ದೌರ್ಜನ್ಯ ಎಸಗಲಾಗಿದೆ ಎಂದು ದೂರಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದೇವರ ಮೆರವಣಿಗೆಯನ್ನು ತಮ್ಮ ಕಾಲೋನಿಯಲ್ಲಿರುವ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಕರೆದುಕೊಂಡು ಬಂದು ಅಲ್ಲಿ ಮಂಗಳಾರತಿ ಮಾಡಿಸಿಕೊಂಡು ಹೋಗುವಂತೆ ದಲಿತರು ಕೇಳಿದ್ದರು. ಆದರೆ ಸವರ್ಣೀಯರು ಅವರ ವಿರುದ್ದವೇ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ದಲಿತರು ತಿಪಟೂರು ತಹಸೀಲ್ದಾರರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ತಮ್ಮ ಕಾಲೋನಿಗೆ ದೇವರ ಮೆರವಣಿಗೆಯನ್ನು ಕಳುಹಿಸಿಕೊಡಿ ಎಂದು ಹಲವು ವರ್ಷಗಳಿಂದಲೂ ದಲಿತರು ಕೇಳುತ್ತಲೇ ಬಂದಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಪೆದ್ದನಹಳ್ಳಿ ಪ್ರಕರಣ: ಇಬ್ಬರು ದಲಿತ ಯುವಕರ ಹತ್ಯೆಯ ಸುತ್ತ ಎಷ್ಟೊಂದು ಸಂಕಟ!

ಜಾತಿ ದೌರ್ಜನ್ಯದ ವಿರುದ್ದ ದಲಿತರು ನೋಣವಿನಕೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಮನವಿಯನ್ನು ಕೂಡಾ ಸ್ವೀಕರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಶ್ರೀನಿವಾಸ್ ಅವರು, “ನಾವು ಹಲವಾರು ವರ್ಷಗಳಿಂದ ನಮ್ಮ ಕಾಲೋನಿಗೆ ದೇವರ ಉತ್ಸವ ಮೂರ್ತಿ ತರಬೇಕು ಎಂದು ಕೇಳುತ್ತಲೆ ಇದ್ದೇವೆ. ಆದರೆ ಸವರ್ಣೀಯರು ಇದಕ್ಕೆ ಸೋಪ್ಪು ಹಾಕುತ್ತಿಲ್ಲ. ಈ ಬಾರಿ ನಾವು ಅಡ್ಡ ನಿಂತು ಕೇಳಿಕೊಂಡರೂ ಅವರು ನಾವು ದಲಿತರು ಎಂಬ ಕಾರಣಕ್ಕೆ ನಮಗೆ ಜಾತಿ ನಿಂದನೆ ಮಾಡಿ ಮುಂದುವರೆದಿದ್ದಾರೆ” ಎಂದು ಆರೋಪಿಸಿದ್ದಾರೆ.

ಮನವಿ ಪತ್ರ ಸ್ವೀಕರಿಸುತ್ತಿಲ್ಲ ಆರೋಪದ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ನೊಣವಿನಕರೆ ಪೊಲೀಸ್‌ ಠಾಣೆಯ ಪಿಎಸ್‌ಐ ಜಗದೀಶ್‌, “ಆ ರೀತಿ ಎಲ್ಲಾ ನಡೆದಿಲ್ಲ, ಅದು ತಪ್ಪು ಆರೋಪ. ಘಟನೆ ಕುರಿತು ತಹಸಿಲ್ದಾರ್‌ಗೆ ಮನವಿ ನೀಡಿದ್ದಾರೆ. ಅವರು ಹೇಳಿದ್ದನ್ನೆಲ್ಲಾ ಕೇಳಬೇಡಿ. ಇಂತಹ ಘಟನೆ ನಡೆದರೆ ನಾವು ಬೇಗನೇ ದೂರು ಸ್ವೀಕರಿಸುತ್ತೇವೆ. ಅಲ್ಲಿ ದೊಡ್ಡ ಗಲಾಟೆ ನಡೆಯುತ್ತಿರುವಾಗ ತಕ್ಷಣವೇ ನಾನು ಸ್ಥಳಕ್ಕೆ ತೆರಳಿ ಸಮಾಧಾನ ಮಾಡಿದ್ದೇನೆ. ದೇವಾಲಯ ಮುಜರಾಯಿಗೆ ಸೇರಿರುವುದರಿಂದ ನಾವು ತಹಸಿಲ್ದಾರ್‌ಗೆ ಪತ್ರ ಬರೆದಿದ್ದೇವೆ. ಅವರು ಬಂದು ಸ್ಥಳ ಪರಿಶೀಲನೆ ಮಾಡಿ ಸಂತ್ರಸ್ತರಿಗೆ ನ್ಯಾಯ ಒದಗಿಸಿ ಕೊಡುತ್ತಾರೆ” ಎಂದು ಹೇಳಿದರು.

ಜಾತಿ ದೌರ್ಜನ್ಯ ಹಾಗೂ ಕೊಲೆ ಬೆದರಿಕೆ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, “ಅವರ ಮನವಿಗಳನ್ನು ನಾವು ಸ್ವೀಕರಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ನಾನು ಬೇರೆ ಪ್ರಕರಣವೊಂದರ ತನಿಖೆಗೆ ಹೊರಗಡೆ ಹೋಗಿದ್ದೆ. ಪೊಲೀಸ್‌‌ ಸ್ಟೇಷನ್‌ ಎಸ್‌ಎಚ್‌ಓಗಳು ತಗೊಂಡಿರಬಹುದು. ಅದನ್ನು ಪರಿಶೀಲನೆ ಮಾಡಿ ಹೇಳುತ್ತೇನೆ” ಎಂದು ತಿಳಿಸಿದರು.

ಇದನ್ನೂ ಓದಿ: ಜಿಗ್ನೇಶ್‌ ಬಂಧನ; ಗುಜರಾತ್‌ನಾದ್ಯಂತ ಪ್ರತಿಭಟನೆಯ ಕಾವು- ದಲಿತ ಹೋರಾಟಗಾರರ ಮೇಲೂ ಪೊಲೀಸ್‌ ಕಾರ್ಯಾಚರಣೆ

ನಂತರ ಮತ್ತೇ ನಾನುಗೌರಿ.ಕಾಂಗೆ ಕರೆ ಮಾಡಿದ ಅವರು, “ಜಾತಿ ದೌರ್ಜನ್ಯದ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಹೀಗಾಗಿ ನಾವು ಡಿಎಸ್‌ಪಿ ಅಥವಾ ಎಎಸ್‌ಪಿ ಜೊತೆಗೆ ಮಾತನಾಡಿ ಪ್ರಕರಣ ದಾಖಲಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿಗೆ ನಾನುಗೌರಿ.ಕಾಂ ಜಿಲ್ಲಾ ಎಎಸ್‌ಪಿ ಸಿದ್ದಾರ್ಥ್‌ ಗೋಯೆಲ್ ಅವರಿಗೆ ಕರೆ ಮಾಡಿತ್ತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಅವರು ಸಂಪರ್ಕಕ್ಕೆ ಸಿಕ್ಕ ಕೂಡಲೇ ಅವರ ಹೇಳಿಕೆಯನ್ನು ಇಲ್ಲಿ ಅಪ್‌ಡೇಟ್‌ ಮಾಡುತ್ತೇವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...