ಚೆನ್ನೈನ ಪ್ರಸಿದ್ಧ ಕ್ರೀಡಾ ತರಬೇತುದಾರ ಪಿ. ನಾಗರಾಜನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ಕೇಳಿಬಂದಿವೆ. ಏಳಕ್ಕೂ ಹೆಚ್ಚು ಮಹಿಳಾ ಕ್ರೀಡಾಪಟುಗಳು ತಮ್ಮ ಮೇಲೆ ನಟರಾಜನ್ ಅವರು ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಎರಡು ತಿಂಗಳ ಹಿಂದೆ 19 ವರ್ಷದ ರಾಷ್ಟ್ರ ಮಟ್ಟದ ಕ್ರೀಡಾಪಟು ಒಬ್ಬರು ನಾಗರಾಜನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ನಾಗರಾಜನ್ ವಿರುದ್ಧ ಆರೋಪ ಮಾಡಿರುವ ಕ್ರೀಡಾಪಟುಗಳೆಲ್ಲರು 30 ವರ್ಷ ಮೇಲ್ಪಟ್ಟವರಾಗಿದ್ದು ಅನೇಕ ವರ್ಷಗಳ ಕಾಲ ತಮ್ಮ ಕೋಚ್ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದರು. ವಿಷಯವನ್ನು ಬಹಿರಂಗಗೊಳಿಸಿದರೆ ತರಬೇತಿಯನ್ನು ನಿಲ್ಲಿಸುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.
ಆರೋಪಿತ ಕೋಚ್ ನಾಗರಾಜನ್ ಹೆಚ್ಚಾಗಿ ಜ್ಯೂನಿಯರ್ ಲೆವೆಲ್ ಕ್ರೀಡಾಪಟುಗಳನ್ನು ತರಬೇತುಗೊಳಿಸುತ್ತಿದ್ದರು. ತಾವು ಅಪ್ರಾಪ್ತ ವಯಸ್ಕರಾಗಿದ್ದಾಗಲೇ ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಮಹಿಳಾ ಕ್ರೀಡಾಪಟುಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
2013 ರಿಂದ 2020 ರ ವರೆಗೆ ನಟರಾಜನ್ 19 ವರ್ಷದ ಕ್ರೀಡಾಪಟು ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಚೆನ್ನೈ ಡೆಪ್ಯುಟಿ ಕಮಿಷನರ್ ಎಸ್. ಮಹೇಶ್ವರನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಾಗರಾಜನ್ ವಿರುದ್ಧ ಅದೇ ತರಹದ 7 ಪ್ರಕರಣಗಳು ದಾಖಲಾಗಿವೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.
2013-2020 ರ ಅವಧಿಯಲ್ಲಿ 13 ವರ್ಷ ವಯಸ್ಸಿನವಳಾಗಿದ್ದಾಗಿನಿಂದ ಕೋಚ್ ತನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದರು. ದಿನದ ತರಬೇತಿ ಮುಗಿದ ನಂತರ ಇತರ ಸಹ ಕ್ರೀಡಾಪಟುಗಳನ್ನು ಕಳುಹಿಸಿ ನನ್ನನ್ನು ಚಿಕ್ಕ ಕೋಣೆಗೆ ಕರೆದುಕೊಂಡು ಹೋಗಿ ಫಿಸಿಯೋ ಥೆರಪಿ ಹೆಸರಿನಲ್ಲಿ ದೌರ್ಜನ್ಯವನ್ನು ಎಸಗುತ್ತಿದ್ದರು. ಅನೇಕ ಸಾರಿ ನಾನು ಇದರ ವಿರುದ್ಧ ಪ್ರತಿಭಟಿಸಿದಾಗ ಕ್ರೀಡಾಕೂಟಗಳಿಂದ ಹೊರಹಾಕುವುದು ಮತ್ತು ಸ್ಪರ್ಧೆಗೆ ಅವಕಾಶವನ್ನು ನಿರಾಕರಿಸುವ ಬೆದರಿಕೆ ಹಾಕಿದರು ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಹೇಳಿದ್ದಾರೆ.
ಪೊಲೀಸರು ತನಿಖಾಧಿಕಾರಿಯ ದೂರವಾಣಿ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಸಾರ್ವಜನಿಕಗೊಳಿಸಿದ ನಂತರ ನಾಗರಾಜನ್ ವಿರುದ್ಧ ಏಳು ದೂರುಗಳು ಬಂದಿವೆ. ೮ ನೇ ತರಗತಿಯಲ್ಲಿರುವಾಗ ಕೋಚ್ ಸರ್ ನನ್ನೊಂದಿಗೆ ಬೇರೆ ರೀತಿಯಲ್ಲಿ ನಡೆದುಕೊಳ್ಳಲು ಆರಂಭಿಸಿದರು. ಅದು ೭ ವರ್ಷಗಳ ಕಾಲ ನಡೆಯಿತು. ಈ ಘಟನೆಗಳಿಂದ ನನ್ನ ಮಾನಸಿಕ ಆರೋಗ್ಯ ಹದಗೆಟ್ಟಿತು. ಆತ್ಮಹತ್ಯೆಯ ಮನಸ್ಥಿತಿ ಬೆಳೆಯಲು ಕಾರಣವಾಗಿತ್ತು ಎಂದು ಮತ್ತೊಬ್ಬ ಕ್ರೀಡಾಪಟು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಮೇ 28 ರಂದು ನಾಗರಾಜನ್ ವಿರುದ್ಧ ಮೊದಲ ದೂರು ದಾಖಲಾಗಿತ್ತು. ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆರೋಪಿತ ಕೋಚ್ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಗರಾಜನ್ ವಿರುದ್ಧ ಐಪಿಸಿ ಮತ್ತು ಪೋಸ್ಕೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರತಿಯೊಂದು ದೂರು ಕೂಡ ಆರೋಪಿಯ ಕರಾಳ ಕೃತ್ಯಗಳನ್ನು ಬಹಿರಂಗಗೊಳಿಸಿದೆ ಎಂದು ಉಪ ಪೊಲೀಸ್ ಆಯುಕ್ತೆ ಹೆಚ್. ಜಯಲಕ್ಷ್ಮಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.