ದಾವಣಗೆರೆಯಲ್ಲೂ ಕೂಡ ಶಾಹಿನ್ ಬಾಗ್ ಮಾದರಿ ಹೋರಾಟ ನಡೆಯುತ್ತಿದೆ. (ಫೆಬ್ರವರಿ 22) ಇವತ್ತಿಗೆ 22ನೇ ದಿನಕ್ಕೆ ಕಾಲಿಟ್ಟಿದೆ. ಈ ಹೋರಾಟದಲ್ಲಿ ಬರೀ ಮುಸ್ಲಿಂ ಸಮುದಾಯವಲ್ಲದೆ ಸುತ್ತಮುತ್ತ ಹಳ್ಳಿಯ ದಲಿತ ಸಮುದಾಯವರು ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ. ಯಾಕೆಂದರೆ ಎಲ್ಲರೂ ಪರಸ್ಪರ ಪ್ರೀತಿ ಸಮಾನತೆ, ಸಹಬಾಳ್ವೆ, ಸಹೋದರತೆಯನ್ನು ಬಯಸುವ ಮನಸುಳ್ಳವರಾಗಿದ್ದಾರೆ.
ಶಹೀದ್ ಅಶ್ಫಾಕುಲ್ಲಾ ಖಾನ್ ಒಂದು ಮಾತನ್ನು ಹೇಳುತ್ತಾರೆ, ‘ಪ್ರೀತಿ ಯಾವ ಮನುಷ್ಯನ ಹೃದಯದಲ್ಲಿ ಇರುತ್ತೋ ಆತ ದೇಶಕ್ಕಾಗಿ, ದೇಶದ ಜನರಿಗಾಗಿ, ಎಲ್ಲರಿಗಾಗಿ ಎಲ್ಲರ ಹಿತಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಾನೆ. ಮಾನವ ಪ್ರೇಮವೆ ದೇವ ಪ್ರೇಮವಾಗಿ ಮನುಷ್ಯ ಜೀವಿಸಬೇಕು, ಅದುವೆ ನಿಜವಾದ ದೇಶಪ್ರೇಮ’. ಈ ಮಾತುಗಳು ಪ್ರಸ್ತುತ ಕಾಲಘಟ್ಟದಲ್ಲಿ ವಿಚಿತ್ರ ಅನ್ನಿಸುತ್ತದೆ. ಯಾಕೆಂದರೆ ಬೆಳಕು ಹರಿದರೆ ಸಾಕು ದನದ ಹೆಸರಿನಲ್ಲಿ ಮನುಷ್ಯನ ಕಗ್ಗೊಲೆಗಳು ನಡೆಯುತ್ತಿವೆ.
ಲವ್ಜಿಹಾದ್, ಗೋಮಾಂಸ ಇತ್ಯಾದಿಗಳ ಹೆಸರಿನಲ್ಲಿ ಮುಸ್ಲಿಮರ ಹತ್ಯೆ, ಹೆಣ್ಣುಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಕೊಲೆಗಳು, ಕಾರ್ಮಿಕರಿಗೆ ಕನಿಷ್ಟ ಕೂಲಿ ಸಿಗದೆ ಪರದಾಟ, ನಿರುದ್ಯೋಗ/ಬಡತನದ ಸಲುವಾಗಿ ಆತ್ಮಹತ್ಯೆಗಳು, ಹಸಿವಿನಿಂದ ಹಾಹಾಕಾರ – ಇವುಗಳು ದೇಶದ ಇಂದಿನ ಸ್ಥಿತಿ. ಮಹಾತ್ಮ ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್, ಭಗತ್ ಸಿಂಗ್, ಆಶ್ಫಾಖ್ವುಲ್ಲಾಖಾನ್ರಂಥವರು ಬಯಸಿದ ದೇಶ ಇದಾ ಅಂತ ಪ್ರಶ್ನೆಯಾಗಿ ಕಾಡುತ್ತೆ. ಬಡತನ, ಅಪೌಷ್ಟಿಕತೆ, ನಿರುದ್ಯೋಗ, ಅಸ್ಪೃಶ್ಯತೆ, ಅತ್ಯಾಚಾರಗಳು ತುಂಬಿ ತುಳುಕುತ್ತಿರುವಾಗ ನಾವು ಪ್ರಪಂಚಕ್ಕೇ ಮಾದರಿಯಾಗುವ ರಾಷ್ಟ್ರ ಆಗಲು ಸಾಧ್ಯವಾ? ಇಂತಹ ಜ್ವಲಂತ ಸಮಸ್ಯೆಗಳನ್ನು ಬದಿಗಿಟ್ಟು ಇವತ್ತು NPR, NRC, CAA ಅಂಥ ಕರಾಳ ಕಾಯ್ದೆಯನ್ನು ತಂದು ಧರ್ಮ/ಜಾತಿಗಳ ಮಧ್ಯೆ ಜಗಳವನ್ನು ಹಚ್ಚುವುದನ್ನು ಆಡಳಿತ ಎನ್ನುವುದು ಸಾಧ್ಯವಾ?
ಇದರ ಮೂಲಕ ತನ್ನ ರಾಜಕೀಯದ ಬೆಳೆಯನ್ನು ಬೇಯಿಸಿಕೊಳ್ಳಲು ತುಂಬಾ ಆತುರದಲ್ಲಿ ನಮ್ಮ ದೇಶದ ಮೋದಿಶಾ ಜೋಡಿ ಇತ್ತು. ಅವರ ಈ ಆಸೆಯನ್ನು ಹುಸಿಯಾಗಿಸುವ ರೀತಿಯಲ್ಲಿ ದೇಶದಾದ್ಯಂತ ನಾವು ಭಾರತಿಯರು ಒಂದೆ ಬ್ಯಾನರ್ ಅಡಿಯಲ್ಲಿ ಕೆಂಪು, ನೀಲಿ, ಹಸಿರು ವಿಚಾರ ಉಳ್ಳವರು, ಪ್ರಗತಿಪರರು, ಬರಹಗಾರರು, ವಿದ್ಯಾರ್ಥಿ ಯುವಜನರು ಬೀದಿಗಿಳಿದರು. ಅದರಲ್ಲಿ ಮುಖ್ಯವಾಗಿ ಮಹಿಳೆಯರು ಹೋರಾಟದ ಮುಂಚೂಣಿಯಲ್ಲಿದ್ದು ಇವತ್ತು ಹೋರಾಟವನ್ನು ನಡೆಸಿಕೊಂಡು ಹೋಗುತಿದ್ದಾರೆ. ಶಾಹಿನ್ ಬಾಗ್ನ ತಾಯಂದಿರ ಹೋರಾಟ ಜಗತ್ತೇ ನೋಡುವಂತಹ ಮಾದರಿಯಾಗಿದೆ. ಆ ತಾಯಂದಿಯರಿಗೆ ನನ್ನ ಸಾವಿರ ಸಾವಿರ ಸಲಾಂ. ಇದೆ ಮಾದರಿಯಲ್ಲಿ ದಾವಣಗೆರೆ ಇಮಾಂ ಅಹ್ಮದ್ ರಜಾ ಪಾರ್ಕಿನಲ್ಲಿ ಅನಿರ್ದಿಷ್ಟ್ಟ ಹೋರಾಟ ಮುಂದುವರೆದಿದೆ. ಈ ಹೋರಾಟದಲ್ಲಿ ಕೂಡ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ನಾನು ಅದರ ಭಾಗವಾಗಿದ್ದೇನೆ ಎಂದುಕೊಳ್ಳಲು ಹೆಮ್ಮೆಯೆನಿಸುತ್ತದೆ.
ಇವರು ಭಾರತೀಯರಾದ ನಮ್ಮೆಲ್ಲರನ್ನು ಹೊರಗೆ ಹಾಕಲು ಸಾಧ್ಯವೆಂದು ನನಗನ್ನಿಸುವುದಿಲ್ಲ. ಆದರೆ, ಸಂಘ ಪರಿವಾರದ ಉದ್ದೇಶವೇನೆಂದರೆ ಎಲ್ಲರನ್ನೂ ಆತಂಕದಲ್ಲಿಟ್ಟು ಜೀ ಹುಜೂರ್ ಅಂತ ಅನ್ನಿಸುತ್ತಿರಬೇಕು. ಬಾಂಗ್ಲಾದೇಶ್, ಆಫ್ಘಾನಿಸ್ತಾನ್, ಪಾಕಿಸ್ತಾನದಲ್ಲಿ ಧಾರ್ಮಿಕ ದಮನಕ್ಕೆ ತುತ್ತಾಗಿದ್ದಾರೆಂದು ಅರ್ಜಿಯನ್ನು ಕೊಟ್ಟಿದ್ದರಾ? ಆದರೆ, ನಾವು ಬೀಡಿ ಸುತ್ತುವವರ ಪರವಾಗಿ, ಕಟ್ಟಡ ಕಟ್ಟುವವರ ಪರವಾಗಿ, ಮನೆಯಿಲ್ಲದವರ ಪರವಾಗಿ ನಿಮಗೆ ಸಾವಿರಾರು ಅರ್ಜಿಗಳನ್ನು ಕೊಟ್ಟಿದ್ದೆವಲ್ಲಾ? ಅರ್ಜಿ ಕೊಟ್ಟ ಸ್ವಂತ ದೇಶದವರಿಗೇ ನ್ಯಾಯ ಕೊಡದವರು ಬೇರೆ ದೇಶದವರಿಗೆ ಯಾವ ನ್ಯಾಯ ಕೊಡಿಸಬಲ್ಲಿರಿ?
ಒಂದು ಪ್ರಶ್ನೆ ನಿಮಗೆ. ಈ ದೇಶದಲ್ಲಿರುವ ಕೋಟಿಗಟ್ಟಲೇ ಆದಿವಾಸಿಗಳು ಅತಂತ್ರ ಸ್ಥಿತಿಯಲ್ಲಿದ್ದಾರಲ್ಲಾ ಅವರ್ಯಾರು, ದನದ ಚರ್ಮ ಸುಲಿದಿದ್ದಾರೆಂದು ಸಾಯೋ ಬದುಕುವ ಹಾಗೆ ದಲಿತರಿಗೆ ಹೊಡೆದಿದ್ದರಲ್ಲಾ ಅವರ್ಯಾರು? ಇವತ್ತು ನಿಮಿಷಕ್ಕೊಂದು ದಲಿತ ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ನಡಿತಾಯಿದೆ ಅಲ್ವಾ ಅವರ್ಯಾರು? ಈ ಎಲ್ಲರನ್ನೂ ಸೋದರರಂತೆ ಭಾವಿಸಿ ಬದುಕದೇ ಇದ್ದಲ್ಲಿ ನಮ್ಮದೊಂದು ದೇಶವಾಗಿ ಉಳಿದೀತೇ?
ಈ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿಲ್ಲ. ಆದರೆ ಶಾಹೀನ್ಬಾಗ್ಗಳಲ್ಲಿ ಕೂತವರಲ್ಲಿ ಉತ್ತರವಿದೆ. ಅಲ್ಲಿ ಬಂಧುತ್ವವನ್ನು ಬೆಸೆಯಲಾಗುತ್ತಿದೆ.