ಹಲವು ದಶಕಗಳಿಂದ ಅಲೆಮಾರಿಗಳು ಅಲೆದು ಅಲೆದು ಸಾಕಾಗಿದ್ದಾರೆ. ಕೊರೊನಾ ಲಾಕ್ಡೌನ್ ಸಮಯವಂತೂ ಅವರನ್ನು ಇನ್ನಿಲ್ಲದ ಸಂಕಷ್ಟಕ್ಕೀಡುಮಾಡಿದೆ. ತುತ್ತು ಕೂಳಿಗಾಗಿ ಜೀವಮಾನವಿಡಿ ಅಲೆಯುತ್ತಲೇ ಇದ್ದ ಅವರಿಗೆ ಒಂದೆಡೆ ನೆಲೆನಿಂತು ತಮ್ಮ ಬದುಕು ಕಟ್ಟಿಕೊಳ್ಳುವ ಆಸೆಗೆ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಸ್ಪಂದಿಸುತ್ತಿಲ್ಲ. ಕೊನೆಗೆ ಅಲೆಮಾರಿಗಳು ಶಾಶ್ವತ ಸೂರಿಗಾಗಿ ಹೋರಾಟಕ್ಕಿಳಿದಿದ್ದು, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಕ.ರಾ.ರೈ.ಸಂಘ ಮತ್ತು ಕರ್ನಾಟಕ ಜನಶಕ್ತಿ ಅವರ ಬೆಂಬಲಕ್ಕೆ ನಿಂತಿವೆ.
ಶಿವಮೊಗ್ಗದ ಅಂಬೇಡ್ಕರ್ ನಗರದಲ್ಲಿ (ಹಕ್ಕಿಪಿಕ್ಕಿ ಕಾಲೋನಿ) 350ಕ್ಕೂ ಹೆಚ್ಚು ಕುಟುಂಬಗಳ ಸಾವಿರಾರು ಜನರು ಕಳೆದ 8-10 ವರ್ಷಗಳಿಂದ ನೆಲೆಸಿದ್ದಾರೆ. ಅದಕ್ಕೂ ಮೊದಲು ಅವರು ತಮಗೊಂದು ಶಾಶ್ವತ ನೆಲೆ ಒದಗಿಸುವಂತೆ ಹಲವು ಬಾರಿ ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಆಗ ಸರ್ಕಾರ ಹಾಯನೂರು ಹೋಬಳಿಯ ವೀರಣ್ಣನ ಬೆಳ್ಳಹಳ್ಳಿಯಲ್ಲಿ ಅವರಿಗೆ 4 ಎಕರೆ ಜಾಗ ಮಂಜೂರು ಮಾಡಿತ್ತು. ಆದರೆ ಬೆಳ್ಳಹಳ್ಳಿಯ ನಿವಾಸಿಗಳು ಅದಕ್ಕೆ ವಿರೋಧ ವ್ಯಕ್ತಪಡಿಸಿ ಅದು ಅರಣ್ಯ ಭೂಮಿಯೆಂದು ದಾವೆಯೂಡಿದ ಪರಿಣಾಮ ಅವರ ಶಾಶ್ವತ ನೆಲೆ ಆಸೆ ಕನಸಾಗಿಯೇ ಉಳಿಯಿತು.
ತದನಂತರ ಆ ಅಲೆಮಾರಿಗಳೆಲ್ಲರು ಶಿವಮೊಗ್ಗದ ಅಂಬೇಡ್ಕರ್ ನಗರಕ್ಕೆ ಬಂದು ನೆಲೆಸಿದರಾದರೂ ಅವರಿಗೆ ಇದುವರೆಗೂ ಜಿಲ್ಲಾಡಳಿತ ಕನಿಷ್ಠ ಮೂಲಭೂತ ಸೌಲಭ್ಯ ಒದಿಗಿಸಿಲ್ಲ. ನೀರು, ರಸ್ತೆ, ಶೌಚಾಲಯ, ವಿದ್ಯುತ್ ವ್ಯವಸ್ಥೆ ಇಲ್ಲದೆ ಇಂದಿಗೂ ಪರಿತಪಿಸುತ್ತಿದ್ದಾರೆ. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡರೆ ಅದಕ್ಕೂ ಬಿಡದೇ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ದೂರುತ್ತಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಲೇಶಪ್ಪನವರು, “ಭಾರತದ ಪ್ರಜೆಗಳೇ ಆದ, ಚಿಂದಿ ಆಯುತ್ತಾ ನೈರ್ಮಲ್ಯ ಕಾಪಾಡುವುದರೊಂದಿಗೆ ಕಠಿಣ ಶ್ರಮ ಹಾಕಿ ದುಡಿಯುವ ಈ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕು, ಅವರಿರುವ ಜಾಗವನ್ನು ಸ್ಲಂ ಎಂದು ಘೋಷಿಸಿ ಹಕ್ಕುಪತ್ರ ನೀಡಬೇಕೆನ್ನುವುದು ನಮ್ಮ ನಿರಂತರ ಆಗ್ರಹ. ಹಲವು ಹೋರಾಟಗಳ ಫಲವಾಗಿ ಡಿಸಿ, ಎಸಿ, ತಹಶೀಲ್ದಾರ್ರವರು ಸ್ಥಳಪರಿಶೀಲನೆ ನಡೆಸಿದ್ದಾರೆ. ಸ್ಲಂ ಬೋರ್ಡ್ ಅಧಿಕಾರಿಗಳು ಸಹ ಒಪ್ಪಿಗೆ ನೀಡಿದ್ದಾರೆ. ಸ್ಲಂ ಎಂದು ಘೋಷಿಸಲು ಎಲ್ಲರೂ ಅನಮತಿ ನೀಡಿದರೂ ಸಹ ನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಜನ ಕಷ್ಟ ಅನುಭವಿಸುವಂತಾಗಿದೆ” ಎನ್ನುತ್ತಾರೆ.

ಇಲ್ಲಿನ ಜನರ ಹಕ್ಕೊತ್ತಾಯಗಳಿಗೆ ವಿರುದ್ಧವಾಗಿ ನಗರ ಪಾಲಿಗೆ ನಡೆದುಕೊಳ್ಳುತ್ತಿದೆ. ಅವರು ಅನಧಿಕೃತವಾಗಿ ಹಾಕಿಕೊಂಡಿದ್ದ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ಅಧಿಕಾರಿಗಳು ಕಿತ್ತುಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನ ಕಳೆದ 2 ತಿಂಗಳಿನಿಂದಲೂ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಕುರಿತು ಅಂಬೇಡ್ಕರ್ ನಗರದ ಮೂಲನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ಸ್ಲಂ ಎಂದು ಘೋಷಿಸುವಂತೆ ಒತ್ತಾಯಿಸಿ ಇಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್ ಈಶ್ವರಪ್ಪನವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿದೆ. ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಲೇಶಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಎಚ್.ಆರ್ ಬಸವರಾಜಪ್ಪನವರು ಮತ್ತು ಕರ್ನಾಟಕ ಜನಶಕ್ತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಲ್ ಅಶೋಕ್ರವರು ಉಸ್ತುವಾರಿ ಮಂತ್ರಿಗಳ ಬಳಿ ಒತ್ತಡ ತಂದಿದ್ದರೆ. ಒಂದು ವಾರದಲ್ಲಿ ತಮ್ಮ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಸಭೆ ನಡೆಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಈಗಲಾದರೂ ಈ ಅಲೆಮಾರಿಗಳಿಗೆ ನೆತ್ತಿಗೊಂದು ಸೂರು ಸಿಕ್ಕಿ ನೆಮ್ಮದಿಯಿಂದ ಬದುಕುವಂತಾಗಲಿ ಎಂಬುದು ನಮ್ಮ ಆಶಯ.
ಇದನ್ನೂ ಓದಿ: ಬದುಕಲು ಬೇಕಾದಷ್ಟು ಭೂಮಿ, ಗೌರವದಿಂದ ಬಾಳುವಂತಹ ವಸತಿ ನಮ್ಮ ಜನ್ಮ ಸಿದ್ಧ ಹಕ್ಕು: ಭೂಮಿ ಹೋರಾಟದ ನಿರ್ಣಯಗಳು


