ಪಶ್ಚಿಮ ತ್ರಿಪುರಾದಲ್ಲಿ 62 ವರ್ಷದ ಮಹಿಳೆಯನ್ನು ಮರಕ್ಕೆ ಕಟ್ಟಿ ಆಕೆಯ ಇಬ್ಬರು ಪುತ್ರರು ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಪುತ್ರರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದು, ಕೌಟುಂಬಿಕ ಕಲಹವೇ ಭೀಕರ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಚಂಪಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖಮರ್ಬರಿಯಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಮಹಿಳೆ ಸುಮಾರು ಒಂದೂವರೆ ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡ ನಂತರ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಆಕೆಯ ಇನ್ನೊಬ್ಬ ಮಗ ಅಗರ್ತಲಾದಲ್ಲಿ ವಾಸಿಸುತ್ತಿದ್ದ.
“ಮಹಿಳೆಗೆ ಬೆಂಕಿ ಹಚ್ಚಲಾಗಿದೆ ಎಂಬ ಮಾಹಿತಿ ಪಡೆದ ನಂತರ, ಪೊಲೀಸ್ ತಂಡವು ಅಲ್ಲಿಗೆ ಧಾವಿಸಿದೆ. ಮರಕ್ಕೆ ಕಟ್ಟಿದ ಸುಟ್ಟ ದೇಹವನ್ನು ಕಂಡು ನಾವು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದೇವೆ” ಎಂದು ಜಿರಾನಿಯಾದ ಉಪವಿಭಾಗದ ಪೊಲೀಸ್ ಅಧಿಕಾರಿ ಕಮಲ್ ಕೃಷ್ಣ ಕೊಲೊಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಾವು ಆಕೆಯ ಇಬ್ಬರು ಪುತ್ರರನ್ನು ಬಂಧಿಸಿದ್ದೇವೆ. ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು, ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೋರಲಾಗಿದೆ. ಕೌಟುಂಬಿಕ ಕಲಹ ಘಟನೆಗೆ ಕಾರಣವಾಗಿರಬಹುದು. ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದರು.
ಇದನ್ನೂ ಓದಿ; ನೇಪಾಳದಲ್ಲಿ ಭಾರಿ ಪ್ರವಾಹ-ಭೂಕುಸಿತ; ಸಾವಿನ ಸಂಖ್ಯೆ 200ಕ್ಕೆ ಏರಿಕೆ, ಹಲವರು ನಾಪತ್ತೆ


