ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನಗೊಂಡ ನಾಟಕವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಕುರಿತು ಅವಹೇಳನಕಾರಿ ಸಂಭಾಷಣೆ ಬಳಸಿರುವುದನ್ನು ಖಂಡಿಸಿ ಜನವರಿ 10 ರಂದು ರಂಗಾಯಣ ಮುತ್ತಿಗೆ ಹೋರಾಟ ನಡೆಸಲು ಸ್ವಾಭಿಮಾನಿ ಹೋರಾಟ ಸಮಿತಿ ನಿರ್ಧರಿಸಿದೆ.
‘ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪನವರ ಪ್ರತಿ ನಡೆಯು ಕೋಮು ಸಂಘರ್ಷಕ್ಕೆ ಕಾರಣವಾಗುತ್ತಿದೆ. ಸರ್ಕಾರದ ಸಂಸ್ಥೆಯಾದ ರಂಗಾಯಣವನ್ನು ತಮ್ಮ ದುರುದ್ದೇಶಕ್ಕೆ ಬಿಜೆಪಿ ಹಾಗೂ ಆರ್ಸ್ಎಸ್ ರಹಸ್ಯ ಕಾರ್ಯಸೂಚಿಗಳ ಜಾರಿಗೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮೈಸೂರು ನಗರದ ಓವಲ್ ಮೈದಾನದಲ್ಲಿ ಜಮಾವಣೆಗೊಂಡು ಖಂಡನಾ ಸಮಾವೇಶ ನಡೆಸಲಾಗುವುದು. ಆನಂತರ ರಂಗಾಯಣಕ್ಕೆ ಮುತ್ತಿಗೆ ಹಾಕಿ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಏನಿದು ಪ್ರಕರಣ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರರ ‘ಸಾಂಬಶಿವ ಪ್ರಹಸನ’ ನಾಟಕವನ್ನು ಕಾರ್ತಿಕ್ ಉಪಮನ್ಯು ನಿರ್ದೇಶನದಲ್ಲಿ ‘ನಾಗರತ್ನಮ್ಮ’ ರಂಗ ಕಾರ್ಯಾಗಾರದ ಶಿಬಿರಾರ್ಥಿಗಳು ಡಿಸೆಂಬರ್ 31ರ ಶನಿವಾರ ಪ್ರದರ್ಶಿಸುತ್ತಿದ್ದರು. ಈ ನಾಟಕದಲ್ಲಿ ಕೆಲವು ಅಂಶಗಳನ್ನು ತಿರುಚಿ ಸಿದ್ದರಾಮಯ್ಯನವರನ್ನು ಹೀಯಾಳಿಸಲಾಗಿದೆ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನೂ ಗೇಲಿ ಮಾಡಲಾಗಿದೆ ಎಂದು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
‘ಅನ್ನಭಾಗ್ಯ’, ‘ಕ್ಷೀರಭಾಗ್ಯ’, ‘ಶಾದಿ ಭಾಗ್ಯ’ಗಳನ್ನು ಕೊಟ್ಟು ಜನರನ್ನು ಅವರು ಸೋಂಬೇರಿಗಳನ್ನಾಗಿ ಮಾಡಿದರು. ಅದೇ ರೀತಿ ‘ಕಳ್ಳತನ ಭಾಗ್ಯ’ವನ್ನು ನೀಡಬೇಕಾಗಿತ್ತು ಎನ್ನುವ ಸಂಭಾಷಣೆಯನ್ನು ರಂಗದ ಮೇಲೆ ಪ್ರಸ್ತುತಪಡಿಸಲಾಗಿತ್ತು. ಕಾರ್ಯಕ್ರಮಗಳಲ್ಲಿ ನಿದ್ರೆ ಹೊಡೆಯುವುದು, ಗೊರಕೆ ಹೊಡೆದು ಅವರಿಂದ ರಾಜ್ಯವೇ ಹಾಳಾಗಿದೆ. ನಿಮಗೆ ಈ ಭಾರಿ ಬಾದಾಮಿಯೂ ಕೂಡ ಸಿಗುವುದಿಲ್ಲ ಎಂದು ಸೇವಕನ ಪಾತ್ರಧಾರಿಯಿಂದ ನಾಟಕದಲ್ಲಿ ಹೇಳಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ“ಇದು ನೇರವಾಗಿ ಸಿದ್ದರಾಮಯ್ಯನವರಿಗೆ ಹೋಲಿಕೆ ಮಾಡಲಾಗಿದೆ. ಹಾಗೂ ಕೇಡಿ ಆಂಕಲ್ ಎಂದು ಮಂತ್ರಿಯ ಪಾತ್ರವನ್ನು ಸೃಷ್ಟಿಸಿ ಅದರಲ್ಲಿ ಕಳ್ಳತನ ಮಾಡಿ ಕೊಳ್ಳೆ ಹೊಡೆಯುತ್ತಿದ್ದಾನೆ ಎಂದು ಹೇಳಿಸಲಾಗಿದೆ. ಇದೂ ಕೂಡ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನೇ ಹೋಲುವಂತೆ ಪಾತ್ರ ಸೃಷ್ಟಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಇದಕ್ಕೆ ಸ್ವತಃ ಕಂಬಾರರೇ ಆಕ್ರೋಶ ವ್ಯಕ್ತಪಡಿಸಿ “ಈ ರೀತಿ ನಾಟಕವನ್ನು ತಿರುಚಿದವರು ಮತ್ತು ನಾಟಕ ಪ್ರದರ್ಶಿಸಲು ಅವಕಾಶ ನೀಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು” ಎಂದು ಮೈಸೂರು ಪೊಲೀಸ್ ಕಮಿಷನರ್ಗೆ ಅವರು ಪತ್ರ ಬರೆದಿದ್ದಾರೆ.
“ಮೈಸೂರಿನ ರಂಗಾಯಣದಲ್ಲಿ ನನ್ನ ನಾಟಕ, ಸಾಂಬಶಿವ ಪ್ರಹಸನವನ್ನು ಅಸಹ್ಯವಾಗಿ ತಿರುಚಿ ಪ್ರದರ್ಶಿಸಿರುವ ಬಗ್ಗೆ ನನಗೆ ತುಂಬ ವಿಷಾದವಾಗಿದೆ” ಎಂದಿರುವ ಕಂಬಾರರು, “ಮೊದಲನೆಯದಾಗಿ ನನ್ನ ನಾಟಕ ಪ್ರದರ್ಶಿಸುವುದಕ್ಕೆ ನನ್ನ ಅನುಮತಿ ಕೇಳಲೇ ಬೇಕಾಗಿತ್ತು. ಆದರೆ ಇವರು ಕೇಳಿಲ್ಲ. ರಂಗಾಯಣವಾದರೂ ನನ್ನ ಅನುಮತಿ ಇಲ್ಲದ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವುದು ವಿಷಾದಕರ” ಎಂದು ಟೀಕಿಸಿದ್ದಾರೆ.
“ಎರಡನೆಯದಾಗಿ, ನನ್ನ ಯಾವುದೇ ನಾಟಕಗಳಲ್ಲಿ ವ್ಯಕ್ತಿಗಳ ನಿಂದನೆ ಇರುವುದು ಸಾಧ್ಯವಿಲ್ಲ. ಅನುಮತಿ ಇಲ್ಲದೇ ನಾಟಕವನ್ನು ಪ್ರದರ್ಶಿಸಿದ್ದಕ್ಕೆ, ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟವರಿಗೂ ಮತ್ತು ಇಲ್ಲದ ಸಾಹಿತ್ಯವನ್ನು ಸೇರಿಸಿದ್ದಕ್ಕೆ ನಿರ್ದೇಶಕರ ಮೇಲೂ ಈ ಅಹಿತಕರ ವಾತಾವರಣಕ್ಕೆ ಕಾರಣರಾದ, ಸಂಬಂಧಪಟ್ಟ ಎಲ್ಲರ ಮೇಲೂ, ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಕೋರಿದ್ದಾರೆ.
ಇದನ್ನೂ ಓದಿ: ನಾಟಕದಲ್ಲಿ ಇಲ್ಲದ ವಿಚಾರ ತುರುಕಿ ಸಿದ್ದರಾಮಯ್ಯನವರಿಗೆ ಅವಹೇಳನ: ಕ್ರಮ ಜರುಗಿಸಲು ಮೈಸೂರು ಕಮಿಷನರ್ಗೆ ಕಂಬಾರರ ಪತ್ರ


