Homeಮುಖಪುಟಹಣ ಬಲದಿಂದ ಅಧಿಕಾರ ಖರೀದಿಸುತ್ತಿದ್ದಾರೆ: ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದಲ್ಲಿ ದೊಡ್ಡರಂಗೇಗೌಡರ ವಿಷಾದ

ಹಣ ಬಲದಿಂದ ಅಧಿಕಾರ ಖರೀದಿಸುತ್ತಿದ್ದಾರೆ: ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದಲ್ಲಿ ದೊಡ್ಡರಂಗೇಗೌಡರ ವಿಷಾದ

- Advertisement -
- Advertisement -

ಇತ್ತೀಚಿನ ವರ್ಷಗಳಲ್ಲಿ ಹಣಬಲದಿಂದ ಅಧಿಕಾರವನ್ನು ಪಡೆಯುವವರು ವಿಧಾನಸಭೆ, ವಿಧಾನಪರಿಷತ್ ಗಳನ್ನು ಪ್ರವೇಶಿಸುತ್ತಿದ್ದಾರೆ ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ದೊಡ್ಡರಂಗೇಗೌಡ ವಿಷಾದಿಸಿದರು.

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನಕ-ಶರೀಫ-ಸರ್ವಜ್ಞ ಪ್ರಧಾನ ವೇದಿಕೆಯಲ್ಲಿ ಶನಿವಾರ ನಡೆದ ‘ಸಮ್ಮೇಳನಾಧ್ಯಕ್ಷರ ಜೊತೆ ಮಾತು – ಮಂಥನ’ ಕಾರ್ಯಕ್ರಮದಲ್ಲಿ ಅವರು ಲೇಖಕರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

“ಸಂಸದೀಯ ವ್ಯವಸ್ಥೆಯಲ್ಲಿ ಚರ್ಚೆಗಳಾಗದೆ ಮಸೂದೆಗಳು ಜಾರಿಯಾಗುತ್ತಿವೆ. ಶಾಸನ ಸಭೆಯಲ್ಲಿ ಗುಣಮಟ್ಟದ ಚರ್ಚೆಗಳು ಕಂಡು ಬರುತ್ತಿಲ್ಲ’’ ಎಂಬುದನ್ನು ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಪ್ರಸ್ತಾಪಿಸಿದರು. ಮಾಜಿ ವಿಧಾನಪರಿಷತ್ ಸದಸ್ಯರೂ ಆಗಿರುವ ದೊಡ್ಡರಂಗೇಗೌಡರು ಮಾತನಾಡಿ, “ಶಾಸಕರು ಬಳಸುತ್ತಿರುವ ಭಾಷೆ ಯೋಚಿಸುವಂತಾಗಿದೆ. ಅದನ್ನು ನೋಡಿದರೆ ನೋವಾಗುತ್ತದೆ. ಹಣದ ಪ್ರಭಾವದಿಂದ ಅಧಿಕಾರವನ್ನು ಖರೀದಿಸಲಾಗುತ್ತಿದೆ. ಪಂಚೆಯನ್ನು ಎತ್ತಿಕಟ್ಟಿ, ಸದನದಲ್ಲಿಯೇ ತೊಡೆ ತಟ್ಟುತ್ತಿರುವುದಕ್ಕೆ ಏನನ್ನು ಹೇಳಬೇಕು?’’ ಎಂದು ಪ್ರಶ್ನಿಸಿದರು.

ಭ್ರಷ್ಟತೆ ಪರಮಾವಧಿಯಾಗಿರುವ ಈ ಕಾಲದಲ್ಲಿ ಪ್ರಾಮಾಣಿಕತೆಯನ್ನು ಹುಡುಕಬೇಕಿದೆ. ಪ್ರಜೆಗಳ ಹಿತಾಸಕ್ತಿ ಕಡಿಮೆಯಾಗಿ, ಸ್ವಹಿತಾಸಕ್ತಿಗಳು ಶಾಸನ ಸಭೆಗಳನ್ನು ಪ್ರವೇಶಿಸುತ್ತಿದ್ದಾರೆ. ಇಂದು ಎಸ್.ನಿಜಲಿಂಗಪ್ಪ, ಕಡಿದಾಳು ಮಂಜಪ್ಪ, ಕೆಂಗಲ್ ಹನುಮಂತಯ್ಯನವರಂತಹ ಸಂಸದೀಯ ಪಟುಗಳು ಕಾಣದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯಗಳು ದಿನೇ ದಿನೇ ಅರ್ಥಕಳೆದುಕೊಳ್ಳುತ್ತಿವೆ. ದುಡ್ಡಿರುವವರು ಗೆದ್ದುಬರುತ್ತಾರೆ ಎಂದು ಟೀಕಿಸಿದರು.

ಸಂವಿಧಾನ ವಿರೋಧಿಯಾದ ಭಾಷೆಯನ್ನು ಶಾಸಕರು ಬಳಸುತ್ತಿದ್ದಾರೆ. ನಡೆದುಕೊಳ್ಳಬಾರದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ವ್ಯಕ್ತಿತ್ವಕ್ಕೆ ಕಳಂಕ. ಆದರೆ ಇಡೀ ವಿಶ್ವದಲ್ಲೇ ಭ್ರಷ್ಟತೆ ಆಕ್ರಮಿಸಿಕೊಂಡು ಕಾಡುತ್ತಿದೆ. ಇದನ್ನು ಬೇರು ಸಹಿತ ಕಿತ್ತುಹಾಕಬೇಕಾದರೆ ಕ್ರಾಂತಿಯಾಗಬೇಕು. ಕ್ರಾಂತಿ ಎಂದರೆ ವ್ಯಕ್ತಿಗಳಲ್ಲಿ ಅರಿವನ್ನು ಮೂಡಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು.

ಲೇಖಕ ಅಂಜನ್ ಶೆಟ್ಟಿಯವರು ಶಾಸನ ಸಭೆಗಳ ಕುರಿತು ಪ್ರಶ್ನೆಯನ್ನು ಮುಂದುವರಿಸಿದಾಗ, ‘ಕಲೆ ಸಾಹಿತ್ಯದಂತಹ ನಾಮನಿರ್ದೇಶಿತ ಸ್ಥಾನಗಳಿಗೆ ಆ ಕ್ಷೇತ್ರದಲ್ಲಿ ಸೇವೆ ಸಲ್ಲಿಸದವರು ಪ್ರವೇಶಿಸುತ್ತಿದ್ದಾರೆ. ಒಂದು ಕ್ಷೇತ್ರವನ್ನು ಇನ್ನೊಂದು ಕ್ಷೇತ್ರದವರು ಅತಿಕ್ರಮಣ ಮಾಡುವುದು ದುರಂತ. ಇಂಥವರ  ಆಯ್ಕೆಗಳು ರಾಜ್ಯಪಾಲರ ಅಂಕಿತ ದೊರಕುತ್ತಿದೆ’’ ಎಂದು ವಿಷಾದಿಸಿದರು.

ಲೇಖಕಿ ಸಂಕಮ್ಮ ಜಿ.ಸಂಕಣ್ಣನವರ ಮಾತನಾಡಿ, ಚಿತ್ರ ಸಾಹಿತ್ಯ ಹಾಗೂ ಸಾಹಿತ್ಯಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಬೇಕೆಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ದೊಡ್ಡರಂಗೇಗೌಡರು, “ಒಂದು ಸಿನಿಮಾಕ್ಕೆ ಸಾಹಿತ್ಯ ರಚಿಸುವಾಗ ನಿರ್ದೇಶಕ, ನಿರ್ಮಾಪಕ ಹೇಳಿದ ಸನ್ನಿವೇಶಕ್ಕೆ ಸೂಕ್ತವಾಗಿ ಬರೆಯಬೇಕು. ಸಂಗೀತ, ಸ್ವರ ಪ್ರಸ್ತಾವವನ್ನು ತಿಳಿದು ಬರೆಯುತ್ತೇವೆ. ಒಮ್ಮೆ ಸುಲಭ ಸನ್ನಿವೇಶ ಸಿಗಬಹುದು, ಕೆಲವೊಮ್ಮೆ ಕ್ಲಿಷ್ಟ ಸನ್ನಿವೇಶ ಸಿಗಬಹುದು. ಆದರೆ ಸಾಹಿತ್ಯದಲ್ಲಿ ಕವಿಗೆ ನಿರ್ಬಂಧ ಇರುವುದಿಲ್ಲ. ತನ್ನ ಕಲ್ಪನಾ ಲೋಕದಲ್ಲಿ ಕವಿ ಬರೆಯಬಹುದು. ಸಮುದ್ರದ ಅಲೆಗಳಂತೆ ಭಾವನೆಗಳು ಬರುತ್ತವೆ. ಅಲ್ಲಿ ಸ್ವಂತಿಕೆಯನ್ನು ಪ್ರದರ್ಶಿಸಬಹುದು” ಎಂದು ತಮ್ಮ ಅನುಭವ ಹಂಚಿಕೊಂಡರು.

ಮಾಲತೇಶ ಅಂಗೂರ ಅವರು ಪ್ರಶ್ನಿಸಿ, “ಗೋಕಾಕ್ ಚಳವಳಿಯ ನಂತರದಲ್ಲಿ ಅಂತಹದೊಂದು ಕನ್ನಡದ ಚಳವಳಿ ಮತ್ತೆ ಹುಟ್ಟಲಿಲ್ಲ’’ ಎಂದು ಪ್ರಸ್ತಾಪಿಸಿದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸರ್ವಾಧ್ಯಕ್ಷರು, “ಗೋಕಾಕ್ ಚಳವಳಿಗಿಂತ ಮೀರಿದ ಚಳವಳಿ ಅಗತ್ಯವಿದೆ’’ ಎಂದರು.

ಡಾ.ಶಾರದಾ ಮುಳ್ಳೂರು ಅವರು ದೊಡ್ಡರಂಗೇಗೌಡರ ಸಾಹಿತ್ಯ ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಿದ್ದರ ಕುರಿತು ಮಾತನಾಡಿದರು. ಇತರ ಲೇಖಕರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಪ್ರಾತಿನಿಧ್ಯ ಸಮಸ್ಯೆಗಳಿಂದ ಕಾವೇರಿದ ಹಾವೇರಿ ಸಾಹಿತ್ಯ ಸಮ್ಮೇಳನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...