ನೈತಿಕ ಸಮಿತಿ ತನಿಖೆಯ ವಿವಾದದ ನಡುವೆ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರಿಗೆ ಪಕ್ಷವು ಹೊಸ ಜವಾಬ್ದಾರಿ ನೀಡಿದೆ. ಮೊಯಿತ್ರಾ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೃಷ್ಣನಗರ (ನಾಡಿಯಾ ಉತ್ತರ) ಜಿಲ್ಲಾ ಮುಖ್ಯಸ್ಥರನ್ನಾಗಿ ಅವರನ್ನು ನೇಮಿಸಲಾಗಿದೆ.
ಪಶ್ಚಿಮ ಬಂಗಾಳದ ಸಂಸದೆ ಮಹುವಾ ಮೊಯಿತ್ರಾ ಅವರ ವಿರುದ್ಧ ನಗದು-ಪ್ರಶ್ನೆ ಪ್ರಕರಣದ ವಿಚಾರವಾಗಿ ಭಾರೀ ವಿವಾದ ಸೃಷ್ಟಿಯಾಗಿದೆ. ಈ ನಡುವೆ ಮೊಯಿತ್ರಾ ಅವರು ಹೊಸ ಜವಾಬ್ದಾರಿ ಪಡೆದಿದ್ದಾರೆ.
ಈ ಹಿಂದೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷಕ್ಕೆ ಧನ್ಯವಾದ ತಿಳಿಸಿದ್ದಾರೆ. ”ನನ್ನನ್ನು ಕೃಷ್ಣನಗರ (ನಾಡಿಯಾ ಉತ್ತರ) ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಮತ್ತು ಎಐಟಿಸಿ (ಅಖಿಲ ಭಾರತ ತೃಣಮೂಲ ಕಾಂಗ್ರೆಸ್) ಅವರಿಗೆ ಧನ್ಯವಾದಗಳು. ಕೃಷ್ಣನಗರದ ಜನರಿಗಾಗಿ ಪಕ್ಷದೊಂದಿಗೆ ಯಾವಾಗಲೂ ಕೆಲಸ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
Thank you @MamataOfficial and @AITCofficial for appointing me District President of Krishnanagar (Nadia North) .
Will always work with the party for the people of Krishnanagar.— Mahua Moitra (@MahuaMoitra) November 13, 2023
ಬಂಗಾಳದಲ್ಲಿ ಆಡಳಿತ ಪಕ್ಷವು ಘೋಷಿಸಿದ ಇತರ 15 ಹೊಸ ಜಿಲ್ಲಾ ಮುಖ್ಯಸ್ಥರಲ್ಲಿ ಮೊಯಿತ್ರಾ ಅವರೂ ಸೇರಿದ್ದಾರೆ.
ಮೊಯಿತ್ರಾ ವಿರುದ್ಧದ ನಗದು-ಪ್ರಶ್ನೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಬಹಿರಂಗವಾಗಿ ಅವರ ನಿಲ್ಲದೇ ಜಾಣ ಮೌನವಹಿಸಿತ್ತು. ತೃಣಮೂಲ ಸಂಸದೆ ಮತ್ತು ಅಭಿಷೇಕ್ ಬ್ಯಾನರ್ಜಿ ಅವರನ್ನು ಸಂಸತ್ತಿನಿಂದ ಅಮಾನತುಗೊಳಿಸುವಂತೆ ಶಿಫಾರಸು ಮಾಡುವ ಲೋಕಸಭೆಯ ನೈತಿಕ ಸಮಿತಿಯ ನಿರ್ಧಾರದ ವಿಚಾರದಲ್ಲಿ ಅವರನ್ನು ಬೆಂಬಲಿಸಿದ್ದರೂ, ಸಾರ್ವಜನಿಕ ಸ್ಥಾನ ನೀಡುವ ಮೂಲಕ ಜಾಣತನ ತೋರಿದೆ.
ನೈತಿಕ ಸಮಿತಿ ಸಭೆಯಲ್ಲಿ ಮೊಯಿತ್ರಾ ಅವರಿಗೆ ಪ್ರಶ್ನಿಸಿದ ರೀತಿಗೆ ಅವರು ಅಲ್ಲಿಂದ ಹೊರಬಂದಿದ್ದರು. ಆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದ ಅವರು, ”ಸಮಿತಿಯ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ವಿನೋದ್ ಸೋಂಕರ್ ಅವರು ತಮ್ಮ ವೈಯಕ್ತಿಕ ಮತ್ತು ಅನೈತಿಕ ಪ್ರಶ್ನೆಗಳನ್ನು ಕೇಳಿದ್ದಾರೆ” ಎಂದು ಆರೋಪಿಸಿದರು.
”ನೀವು ರಾತ್ರಿಯಲ್ಲಿ ಯಾರೊಂದಿಗೆ ಮಾತನಾಡುತ್ತೀರಿ”, “ಎಷ್ಟು ಬಾರಿ”, “ನೀವು ನನಗೆ ಕರೆ ವಿವರಗಳನ್ನು ನೀಡಬಹುದೇ” ಸೇರಿದಂತೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಅತ್ಯಂತ ಅಸಹ್ಯಕರ ಪ್ರಶ್ನೆಗಳನ್ನು ಕೇಳಿದರು” ಎಂದು ಮೊಯಿತ್ರಾ ಹೇಳಿದರು.
”ನೀವು ದರ್ಶನ್ ಹಿರಾನಂದನಿ ಅವರ ಆತ್ಮೀಯ ಸ್ನೇಹಿತರಾಗಿದ್ದೀರಿ ಎಷ್ಟು ಆತ್ಮೀಯವಾಗಿದ್ದೀರಿ? ಇದು ಅವರ ಹೆಂಡತಿಗೆ ತಿಳಿದಿದೆಯಾ? ಎಂದು ಕೇಳಿದರು. ನೀವು ಹೌದು ಅಥವಾ ಇಲ್ಲ ಎಂದು ಉತ್ತರಿಸಬೇಕು” ಎಂದು ಹೇಳಿರುವುದಾಗಿ ಮೊಯಿತ್ರಾ ದಿ ಹಿಂದೂಗೆ ತಿಳಿಸಿದರು.
ಆ ನಂತರ ನೈತಿಕ ಸಮಿತಿಯು ಲೋಕಸಭೆಯ ಸ್ಪೀಕರ್ಗೆ ತನ್ನ 500 ಪುಟಗಳ ವರದಿಯಲ್ಲಿ ಅವರು ಸಂಸದರಾಗಿ ಮುಂದುವರಿಯಲು ಅವಕಾಶ ನೀಡಬಾರದು ಎಂದು ಹೇಳಿದೆ ಮತ್ತು ಅವರು ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಕೋರಿದೆ.
ಇದನ್ನೂ ಓದಿ: ನೈತಿಕ ಸಮಿತಿಯ ಕರಡು ಗೌಪ್ಯ ವರದಿ NDTVಯಿಂದ ಸೋರಿಕೆ: ಸ್ಪೀಕರ್ಗೆ ಮೊಯಿತ್ರಾ ಪತ್ರ