ಸ್ಥಳೀಯ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಜಗಳವಾಡಿದ ಕಾರಣಕ್ಕೆ ಆಂಧ್ರ ಪ್ರದೇಶ ಪೊಲೀಸರು ದಲಿತ ಯುವಕನ ಮೇಲೆ ಅಮಾನುಷವಾಗಿ ಥಳಿಸಿದ ಆರೋಪದ ಮೇಲೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೆಬಲ್ನನ್ನು ಅಮಾನತುಗೊಳಿಸಲಾಗಿದೆ.
ಘಟನೆಯು ಸೀತಾನಗರಂ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ವೇದುಲ್ಲಪಲ್ಲಿ ಗ್ರಾಮದ ಸಂತ್ರಸ್ತ ಐ ವರ ಪ್ರಸಾದ್ ಅವರನ್ನು ಚಿಕಿತ್ಸೆಗಾಗಿ ರಾಜಮಂಡ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:
ವೇದುಲ್ಲಪಲ್ಲಿ ಗ್ರಾಮದಲ್ಲಿ ಐ ವರಪ್ರಸಾದ್ ವಾಸಿಸುತ್ತಿದ್ದ ರಸ್ತೆಯಲ್ಲಿ ಭಾನುವಾರ ಸಂಜೆ ಒಬ್ಬರು ಮೃತಪಟ್ಟಿದ್ದರು. ಅವರ ಅಂತ್ಯ ಸಂಸ್ಕಾರಕ್ಕೆ ಸಿದ್ದತೆಗಳು ನಡೆಯುತ್ತಿದ್ದ ಕಾರಣಕ್ಕೆ ಆ ರಸ್ತೆಯನ್ನು ಕೆಲ ಸಮಯ ನಿರ್ಬಂಧಿಸಲಾಗಿತ್ತು. ಈ ಕಾರಣಕ್ಕೆ ಜಗಳ ಆರಂಭವಾಗಿದೆ.
“ಸ್ಥಳೀಯ ವೈಎಸ್ಆರ್ ಕಾಂಗ್ರೆಸ್ ಮುಖಂಡರು ಅಲ್ಲಿಗೆ ಬಂದು ಮರಳು ಲಾರಿಗಳನ್ನು ನಿಲ್ಲಿಸಿದ್ದಕ್ಕಾಗಿ ನಮ್ಮನ್ನು ಪ್ರಶ್ನಿಸಿದರು. ನಾವು ಸ್ವಲ್ಪ ಸಮಯ ಕಾಯಿರಿ ಶವ ತೆಗೆದುಕೊಂಡ ಹೋದ ಕೂಡಲೇ ತೆರವುಗೊಳಿಸುತ್ತೇವೆ ಎಂದು ಹೇಳಿದೆವು. ಇದು ವಾದಕ್ಕೆ ಕಾರಣವಾಯಿತು. ಸೋಮವಾರ ಬೆಳಿಗ್ಗೆ, ಸೀತಾನಗರಂ ಠಾಣೆಯ ಸಬ್ ಇನ್ಸ್ಪೆಕ್ಟರ್ ಪೊಲೀಸ್ ಶೇಕ್ ಫಿರೋಜ್ ಶಾ ಮತ್ತು ಇತರ ಇಬ್ಬರು ಕಾನ್ಸ್ಟೆಬಲ್ಗಳು ಗ್ರಾಮಕ್ಕೆ ಬಂದು ನನ್ನನ್ನು ಮತ್ತು ಇತರ ಇಬ್ಬರನ್ನು ತನಿಖೆಯ ಹೆಸರಿನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದರು” ಎಂದು ಸಂತ್ರಸ್ತ ವರಪ್ರಸಾದ್ ಹೇಳಿದ್ದಾರೆ.
ಕಸ್ಟಡಿಯಲ್ಲಿ ನಮ್ಮ ಮೇಲೆ ಎಸ್ಐ ಬೆಲ್ಟ್ನಿಂದ ತೀವ್ರವಾಗಿ ಹೊಡೆದು ಒದೆದಿದ್ದಾರೆ ಎಂದು ಪ್ರಸಾದ್ ಆರೋಪಿಸಿದ್ದಾರೆ. ಅವರು ನಂತರ ಕ್ಷೌರಿಕನನ್ನು ಕರೆದರ ನನ್ನ ತಲೆಗೆ ಹೊಡೆದು ನನ್ನ ಮೀಸೆಗಳನ್ನು ಬಲವಂತವಾಗಿ ಬೋಳಿಸಲಾಯಿತು ಎಂದು ಅವರು ಹೇಳಿದ್ದಾರೆ
ಈ ಘಟನೆಯನ್ನು ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಖಂಡಿಸಿದ್ದಾರೆ. ದಲಿತ ಯುವಕರನ್ನು ಥಳಿಸುವ ಮೂಲಕ ಆಂಧ್ರಪ್ರದೇಶ ಮತ್ತೆ ಜಂಗಲ್ ರಾಜ್ಗೆ ಮರಳಿದೆ, ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ದಲಿತನ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
Jungle Raj has returned to AP. Vara Prasad's head was tonsured by leaders belonging to YCP in East Godavari District's Seethanagaram Police Station. All this happened in the presence of policemen who heckled and beat the man to pulp, destroying the self-esteem of a Dalit man(1/3) pic.twitter.com/kAr8lLoxRl
— N Chandrababu Naidu #StayHomeSaveLives (@ncbn) July 21, 2020
ಪೊಲೀಸರ ಸಮ್ಮುಖದಲ್ಲಿ ದಲಿತ ವ್ಯಕ್ತಿಯನ್ನು ಹೊಡೆದಿದ್ದಾರೆ. ದಲಿತ ವ್ಯಕ್ತಿಯ ಮೀಸೆ ಬೋಳಿಸುವ ಮೂಲಕ ಅವರ ಸ್ವಾಭಿಮಾನವನ್ನು ಹಾಳುಮಾಡುತ್ತಿದ್ದಾರೆ. ಈ ಪ್ರದೇಶದಲ್ಲಿನ ಅಕ್ರಮ ಮರಳು ಗಣಿಗಾರಿಕೆಯನ್ನು ಪ್ರಶ್ನಿಸುವುದು ಅವರ ಏಕೈಕ ತಪ್ಪು. ಪೊಲೀಸರಿಗೆ ಏನಾಗಿದೆ? ಭ್ರಷ್ಟ ಆಡಳಿತ ಪಕ್ಷದ ಕೈಯಲ್ಲಿ ಅವರು ಆಟಿಕೆಗಳಾಗಿರುವುದು ಏಕೆ? ಇದು ಅವರ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ” ಎಂದು ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ.
ಘಟನೆಯನ್ನು ಖಂಡಿಸಿ ಸ್ಥಳೀಯ ದಲಿತ ಸಂಘಟನೆಗಳ ತೀವ್ರ ಪ್ರತಿಭಟನೆಯ ನಂತರ, ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಎನ್ ರಾವ್ ಈ ಘಟನೆಯ ಬಗ್ಗೆ ತನಿಖೆ ನಡೆಸಿ ಫಿರೋಜ್ ಶಾ ಮತ್ತು ಇನ್ನೊಬ್ಬ ಕಾನ್ಸ್ಟೆಬಲ್ ಅವರನ್ನು ಅಮಾನತುಗೊಳಿಸುವುದಾಗಿ ಘೋಷಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324, 323 ಮತ್ತು 506 ರ ಅಡಿಯಲ್ಲಿ ಮತ್ತು ಎಸ್ಸಿ / ಎಸ್ಟಿ ದೌರ್ಜನ್ಯ (ತಡೆಗಟ್ಟುವಿಕೆ) ಕಾಯ್ದೆಯಡಿ ಸಬ್ ಇನ್ಸ್ಪೆಕ್ಟರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಕೆ.ವಿ.ಮೋಹನ್ ರಾವ್ ಹೇಳಿದ್ದಾರೆ.
“ಸೀತಾನಗರಂ ಪೊಲೀಸರು ದಲಿತ ಯುವಕನನ್ನು ಅವಮಾನಿಸಿದ ಘಟನೆಗೆ ನಾವು ವಿಷಾದಿಸುತ್ತೇವೆ. ಆರೋಪಿ ಪೊಲೀಸರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಮತ್ತು ಅಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ”ಎಂದು ಡಿಐಜಿ ಹೇಳಿದ್ದಾರೆ.
ದಲಿತ ಯುವಕರನ್ನು ಅವಮಾನಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಾಜಿ ಅಮಲಪುರಂ ಸಂಸದ ಜಿ.ವಿ.ಹರ್ಷ ಕುಮಾರ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೈಕ್ ಮುಟ್ಟಿದ್ದಕ್ಕೆ ದಲಿತ ಯುವಕನನ್ನು ಅರೆಬೆತ್ತಲುಗೊಳಿಸಿ ಹಲ್ಲೆ: 13ಕ್ಕು ಹೆಚ್ಚು ಜನರ ವಿರುದ್ಧ FIR, ಬಂಧನಕ್ಕೆ ಒತ್ತಾಯ