Homeಕರ್ನಾಟಕಸಿಂದಗಿ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿ ನಡುವೆ ನೇರಾನೇರ ಪೈಪೋಟಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜೆಡಿಎಸ್ ಚಿತ್ತ...

ಸಿಂದಗಿ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿ ನಡುವೆ ನೇರಾನೇರ ಪೈಪೋಟಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜೆಡಿಎಸ್ ಚಿತ್ತ ಏನು?

- Advertisement -
- Advertisement -

ಮಾಜಿ ಸಚಿವ, ಜೆಡಿಎಸ್ ಶಾಸಕ ದಿವಂಗತ ಎಂ.ಸಿ.ಮನಗೊಳಿಯವರ ನಿಧನದಿಂದ ತೆರವಾಗಿರುವ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಅ.30 ರಂದು ಉಪಚುನಾವಣೆ ನಡೆಯಲಿದೆ. ಚುನಾವಣಾ ಪ್ರಚಾರ ರಂಗೇರುತ್ತಿದ್ದು, ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್, ಮತ ವಿಭಜನೆಗೆ ಮುನ್ನುಡಿ ಹಾಡಲು ಯತ್ನಿಸಿದೆ ಎಂಬ ಆರೋಪವನ್ನು ಎದುರಿಸುತ್ತಿದೆ.

ದೀರ್ಘಕಾಲದಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಸಿಂದಗಿಯಲ್ಲಿ ಕಳೆದೆರಡು ದಶಕಗಳಿಂದ ಬಿಜೆಪಿ, ಜೆಡಿಎಸ್ ನಡುವೆ ಸ್ಫರ್ಧೆ ಏರ್ಪಟ್ಟು, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಇಳಿದಿತ್ತು. ಇಲ್ಲಿ ಜೆಡಿಎಸ್ ಕೂಡ ಪಕ್ಷದ ವರ್ಚಸ್ಸಿನಿಂದ ಗೆಲುವು ಸಾಧಿಸುವುದಕ್ಕಿಂತ ಎಂ.ಸಿ.ಮನಗೊಳಿಯವರ ವರ್ಚಸ್ಸಿನಿಂದ ಗೆಲುವು ಪಡೆದಿತ್ತು.

ಈ ಬಾರಿ ಕಾಂಗ್ರೆಸ್, ದಿವಂಗತ ಎಂ.ಸಿ.ಮನಗೊಳಿ ಅವರ ಪುತ್ರ ಅಶೋಕ್ ಮಲ್ಲಪ್ಪ ಮನಗೊಳಿ ಅವರಿಗೆ ಟಿಕೆಟ್ ನೀಡಿದ್ದು, ಅನುಕಂಪದ ಮತಗಳ ಮೇಲೆ ಕಣ್ಣಿಟ್ಟಿದೆ. ಬಿಜೆಪಿಯು ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದ, ಕಳೆದ ಚುನಾವಣೆಯಲ್ಲಿ ಎಂ.ಸಿ.ಮನಗೊಳಿ ಎದುರು 9 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ರಮೇಶ್ ಭೂಸನೂರ್ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ ತಮ್ಮ ನಾಜಿಯಾ ಅಂಗಡಿಯವರನ್ನು ಕಣಕ್ಕಿಳಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೊಳಿ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯಾಗಿದ್ದಾರೆ.

ಸಿಂದಗಿ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಸಾಮಾನ್ಯ ವರ್ಗದವರು (ಮುಖ್ಯವಾಗಿ ಲಿಂಗಾಯತ ಮತ್ತು ಇತರ ಸಮುದಾಯದವರದ್ದು). ಎರಡನೇ ಸ್ಥಾನದಲ್ಲಿ ಹಿಂದುಳಿದ ವರ್ಗದವರಿದ್ದಾರೆ. ಮೂರನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ. 30 ಸಾವಿರಕ್ಕಿಂತ ಅಧಿಕ ಮುಸ್ಲಿಂ ಸಮುದಾಯದ ಮತಗಳಿವೆ. ಹೀಗಾಗಿ ಮುಸ್ಲಿಂ ಮತಗಳು ಗೆಲುವು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಮತ ವಿಭಜನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಎಂದು ಕಾಂಗ್ರೆಸ್ ಬಹಿರಂಗವಾಗಿಯೇ ಆರೋಪಿಸಿದೆ. ಮತಗಳು ವಿಭಜನೆಯಾದರೆ ಬಿಜೆಪಿಗೆ ತಕ್ಕಮಟ್ಟಿನ ಲಾಭವಿದೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ.

ಕಳೆದ ಬಾರಿಯ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಮೇಶ ಭೂಸನೂರ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ಸಿ. ಮನಗೂಳಿ ಸುಮಾರು 9,305 ಮತಗಳ ಅಂತರದಿಂದ ಜಯ ಗಳಿಸಿದ್ದರು. ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿರುವ ರಮೇಶ್ ಭೂಸನೂರ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ತಾವು ಶಾಸಕರಾಗಿದ್ದಾಗ ಮಾಡಿದ್ದ ಕೆಲಸಗಳು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಕ್ಷೇತ್ರದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂಬ ಮಾತುಗಳನ್ನು ಮುಂದಿಟ್ಟುಕೊಂಡು ಮತ್ತೆ ರಮೇಶ್ ಭೂಸನೂರ್ ಜನರ ಮುಂದೆ ಹೋಗಿದ್ದಾರೆ.

ತಮ್ಮ ತಂದೆಯ ಹೆಸರು, ಅವರ ಅಕಾಲಿಕ ಸಾವಿನ ಅನುಕಂಪ, ಅವರ ವರ್ಚಸ್ಸು, ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಕಾಂಗ್ರೆಸ್ ಜನಪರ ಯೋಜನೆಗಳನ್ನು ಜಾರಿಮಾಡಿದೆಯೆಂದು ಜನರಿಗೆ ತಿಳಿಸುತ್ತಾ ಪ್ರಚಾರ ನಡೆಸುತ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮಲ್ಲಪ್ಪ ಮನಗೊಳಿ.

ಇನ್ನು ಜೆಡಿಎಸ್ ಅಭ್ಯರ್ಥಿಯಾಗಿರುವ ನಾಜಿಯಾ ಅಂಗಡಿ ಪದವೀಧರೆಯಾಗಿದ್ದು, ಜೆಡಿಎಸ್‌ನಿಂದ ಶಾಸಕರಾಗಿದ್ದ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಡುತ್ತಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

ಈ ಬಾರಿ ಸಿಂದಗಿಯನ್ನು ಬಿಟ್ಟುಕೊಡಬಾರದೆಂಬ ಹಠದಲ್ಲಿರುವ ಕಾಂಗ್ರೆಸ್ ಜಾತಿವಾರು ಸಮಾವೇಶಗಳ ಮೂಲಕ ಪ್ರಚಾರ ನಡೆಸುತ್ತಿದೆ. ಮುಸ್ಲಿಂ ಮತಗಳು ವಿಭಜನೆಯಾಗದಂತೆ ತಡೆಯಲು ಯು.ಟಿ.ಖಾದರ್, ಜಮೀರ್ ಅಹ್ಮದ್ ಅವರಿಂದ ಪ್ರಚಾರ ಮಾಡಿಸುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿ ಹಲವು ನಾಯಕರು ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇತ್ತ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಎಂಬ ಧ್ಯೇಯ ಇಟ್ಟುಕೊಂಡು ಮತಯಾಚಿಸುತ್ತಿದೆ. ಕ್ಷೇತ್ರ ಅಭಿವೃದ್ಧಿಯಾಗಲು ಬಿಜೆಪಿಗೆ ಮತ ನೀಡಬೇಕು ಎಂದು ಹೇಳುತ್ತಿದೆ. ಕಾಂಗ್ರೆಸ್‌ಅನ್ನು ಗುರಿಯಾಗಿಸಿಕೊಂಡು ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ಬಿಜೆಪಿ ನಾಯಕರು ಕಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ, ಎಚ್.ಡಿ.ಕುಮಾರಸ್ವಾಮಿ ಜೊತೆಗೆ ಸಿಂದಗಿಯಲ್ಲಿ ಠಿಕಾಣಿ ಹೂಡಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಚುನಾವಣೆ ಗೆಲ್ಲುವುದಕ್ಕಿಂತ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಅಶೋಕ್ ಮನಗೊಳಿಯವರನ್ನು ಸೋಲಿಸುವುದೇ ಮುಖ್ಯವಾಗಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸಿಂದಗಿಯ ಜಾತಿವಾರು ಮತಗಳ ಅಂದಾಜು ಹೀಗಿದೆ. ಕುರುಬ – 40,000; ಗಾಣಿಗ – 35,000; ಪಂಚಮಸಾಲಿ – 34,000; ಬಣಜಿಗ – 25,000; ಮುಸ್ಲಿಂ – 35,000; ಪ.ಜಾ/ಪ.ಪಂ – 32,000; ಗಂಗಾಮತಸ್ಥ- 19,000; ತಳವಾರ ಮತ್ತು ಇತರೆ- 27,000;

ಸಿಂದಗಿಯಲ್ಲಿ ಶೇ.30ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಮೊದಲಿನಿಂದಲೂ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪರವಾಗಿದೆ ಎನ್ನಲಾಗಿದೆ. ಇದರ ಜೊತೆಗೆ, ವಡ್ಡ, ಅಲೆಮಾರಿ, ಲಂಬಾಣಿ ಸಮುದಾಯಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿವೆ ಎನ್ನಲಾಗುತ್ತಿದೆ. ಆದರೆ ಪ್ರಮುಖ ಭಾಗವಾಗಿರುವ ಲಿಂಗಾಯತ ಸಮುದಾಯ ಬಿಜೆಪಿಯತ್ತ ತನ್ನ ಒಲವು ತೋರಿದೆ ಎನ್ನಲಾಗುತ್ತಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ 11,54,55 ಪುರುಷರು, 10,76,04 ಮಹಿಳೆಯರು ಸೇರಿ ಒಟ್ಟು 2,23,059 ಮತದಾರರು ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿದ್ದರು. ಸದ್ಯ 2021ರ ಉಪಚುನಾವಣೆಗೆ 1,20,949 ಪುರುಷರು, 1,13,327 ಮಹಿಳೆಯರು ಮತ್ತು ಇತರೆ 33 ಮಂದಿ ಸೇರಿ ಒಟ್ಟು 2,34,309 ಮತದಾರರಿದ್ದಾರೆ.

2020-21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ವಿಜಯಪುರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಯಾಗಿಲ್ಲ. ಸಿಂದಗಿ ಪಟ್ಟಣದಲ್ಲಿ ಅಭಿವೃದ್ಧಿ ಕೊರತೆ ಎದ್ದು ಕಾಣುವಂತಿದೆ. ಸಿಂದಗಿಯಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ನೀರಾವರಿ ಯೋಜನೆಗಳಾದ ಗುತ್ತಿ ಬಸವಣ್ಣ, ಕೃಷ್ಣಾ ಯೋಜನೆಗಳನ್ನು ಮೇಲ್ದರ್ಜೆಗೇರಿಸಿ ಕುಡಿಯುವ ನೀರಿನ ಸೌಲಭ್ಯ ಮತ್ತು ಬೆಳೆಗೆ ನೀರು ದೊರೆಯುವಂತೆ ಮಾಡಬೇಕಿದೆ.

ಇನ್ನು ಉಪಚುನಾವಣೆಯ ಪ್ರಣಾಳಿಕೆಗಳ ಕಡೆಗೆ ಗಮನ ಹರಿಸಿದರೆ ಈ ಕ್ಷೇತ್ರ ಎಷ್ಟು ಅಭಿವೃದ್ಧಿಯಾಗಬೇಕಿದೆ ಎಂಬುದು ತಿಳಿಯುತ್ತದೆ.

ಸಿಂದಗಿಯಲ್ಲಿ ಹೈಟೆಕ್ ಶೌಚಾಲಯ, ಬಿ.ಆರ್. ಅಂಬೇಡ್ಕರ್ ವೃತ್ತ ಅಭಿವೃದ್ಧಿ, ಸಿಂದಗಿ ಪಟ್ಟಣದಲ್ಲಿ ಗ್ರಂಥಾಲಯ, ಪುರಸಭಾ ನೂತನ ಕಟ್ಟಡ ನಿರ್ಮಾಣ, ಪ.ಜಾತಿ ಮತ್ತು ಪ.ಪಂಗಡದ ಕಾಲೋನಿಗಳಲ್ಲಿ ಮೂಲಸೌಕರ್ಯ, ವಿದ್ಯಾರ್ಥಿಗಳಿಗೆ ಸಿಟಿ ಬಸ್ ಸೇವೆ ಆರಂಭ, ಹೈಟೆಕ್ ಬಸ್ ನಿಲ್ದಾಣ, ರೈತರು ತಮ್ಮ ಜಮೀನುಗಳಿಗೆ ತೆರಳಲು ರಸ್ತೆ ನಿರ್ಮಾಣ, ಮುರಾರ್ಜಿ ದೇಸಾಯಿ ಶಾಲೆಗಳ ನಿರ್ಮಾಣ, 110 ಕೆವಿ ವಿದ್ಯುತ್ ಕೇಂದ್ರವನ್ನು ನಿರ್ಮಾಣ, ಪಟ್ಟಣದಲ್ಲಿ ಪೂರ್ಣ ಪ್ರಮಾಣದ ತರಕಾರಿ ಮಾರುಕಟ್ಟೆ ನಿರ್ಮಾಣ ಮುಂತಾದವೂ
ಸೇರಿವೆ. ಇಷ್ಟೆಲ್ಲಾ ಸಮಸ್ಯೆಗಳಿರುವ ಕ್ಷೇತ್ರದಲ್ಲಿ ಯಾವ ಬಗೆಯ ರಾಜಕೀಯ ಮೇಲುಗೈ ಪಡೆಯಲಿದೆ ಎಂದು ನವೆಂಬರ್ 2ರಂದು ತಿಳಿಯಲಿದೆ.


ಇದನ್ನೂ ಓದಿ: ಟಿಕ್ರಿ ಗಡಿ ಬಳಿ ದುರ್ಘಟನೆ: ಲಾರಿ ಹರಿದು ಮೂವರು ರೈತ ಮಹಿಳೆಯರ ಸಾವು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’: ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ದ್ವೇಷ ಭಾಷಣಕ್ಕೆ ವ್ಯಾಪಕ ಆಕ್ರೋಶ

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’ ಎಂಬ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಯು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ನೀಡಿರುವ ಈ ಹೇಳಿಕೆಯು...

ತಪ್ಪಾಗಿ ಸುದ್ದಿ ಪ್ರಕಟ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿದ PTI

ತಮ್ಮ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿದ್ದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಅಧಿಕೃತವಾಗಿ ಕ್ಷಮೆಯಾಚಿಸಿದರೂ, ಅದರಿಂದ ಈಗಾಗಲೇ ಉಂಟಾಗಿರುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆ....

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...