ಮಗು ಕಲಿಕೆಯಲ್ಲಿ ಕೊನೆಯಲ್ಲಿರಲಿ ಅಥವಾ ಮೊದಲಿರಲಿ ಇನ್ನು ಮುಂದೆ ರ್ಯಾಂಕ್ ನೀಡುವುದಿಲ್ಲ, ಉತ್ತೀರ್ಣ ಮತ್ತು ಅನುತ್ತೀರ್ಣ ಎಂದು ವಿಭಾಗ ಮಾಡುವುದಿಲ್ಲ ಎಂದು ಸಿಂಗಾಪುರ ಸರ್ಕಾರ ಘೋಷಿಸಿದೆ.
ಮಕ್ಕಳಿಗೆ ‘ಕಲಿಕೆಯೊಂದು ಸ್ಪರ್ಧೆಯಲ್ಲ’ ಎಂಬುದನ್ನು ಮನದಟ್ಟು ಮಾಡಿಕೊಡಲು ಸಿಂಗಾಪುರದಲ್ಲಿ ಮುಂದಿನ ವರ್ಷದಿಂದ ಹೊಸ ವಿಧಾನವನ್ನು ಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಮಕ್ಕಳಿಗೆ ರ್ಯಾಂಕ್ ನೀಡದಿರಲು ಮತ್ತು ಮೊದಲು ಕೊನೆ ಎಂದು ಘೋಷಿಸದಿರಲು ಸಿಂಗಾಪುರ ಶಿಕ್ಷಣ ಮಂತ್ರಿ ಒಂಗ್ ಯೇ ಕುಂಗ್ ನಿರ್ಧರಿಸಿದ್ದಾರೆ.
ವರ್ಗ ಮತ್ತು ಮಟ್ಟದ ಸರಾಸರಿ, ಕನಿಷ್ಠ ಮತ್ತು ಗರಿಷ್ಠ ಅಂಕಗಳು, ನಿರ್ದಿಷ್ಟ ಅಂಕ ಪಡೆಯುವಲ್ಲಿ ವಿಫಲತೆ ಮತ್ತು ಅದನ್ನು ಬಣ್ಣದ ಪೆನ್ನುಗಳಿಂದ ಗುರುತಿಸಿರುವುದು, ವರ್ಷಾಂತ್ಯದ ಪರೀಕ್ಷೆಗಳಲ್ಲಿ ಪಾಸ್ ಆಗುವುದು ಅಥವಾ ಫೇಲ್ ಆಗುವುದು, ವಿಷಯದಲ್ಲಿ ಸರಾಸರಿ ಶ್ರೇಣಿ, ಒಟ್ಟು ಅಂಕಗಳು ವಿದ್ಯಾರ್ಥಿಯ ಸ್ಥಾನವನ್ನು ತೋರಿಸುವುದನ್ನು ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ.
ಎಲ್1ಆರ್5 ( ಇಂಗ್ಲೀಷ್ ಜತೆಗೆ ಇತರೆ ಐದು ವಿಷಯ), ಎಲ್1ಆರ್4, ಇಎಂಬಿ3 (ಇಂಗ್ಲೀಷ್, ಗಣಿತ ಹಾಗೂ 3 ಉತ್ತಮ ವಿಷಯಗಳು) ಲೋವರ್ ಸೆಕೆಂಡರಿ ಹಂತದಲ್ಲಿ ಇಎಂಬಿ1 ವಿಷಯಗಳಿವೆ. ಶೈಕ್ಷಣಿಕ ಸಚಿವಾಲಯ ಸೆಪ್ಟಂಬರ್ 28ರಂದು ಪ್ರತಿ ವಿದ್ಯಾರ್ಥಿಗಳ ಓದುವ ಪ್ರಕ್ರಿಯೆಯತ್ತ ಗಮನಹರಿಸಬೇಕು. ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೇಗಿದೆ..? ಅವರಿಗೆ ಕಲಿಕೆಯಲ್ಲಿ ಆಸಕ್ತಿ ಹೊಂದುವಂತೆ ಮಾಡಲು ಯಾವ ಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿಗಳ ನಡುವೆ ಹೋಲಿಕೆ ಮಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.
‘ಮುಂದಿನ ವರ್ಷದಿಂದ ಪ್ರಾಥಮಿಕ ಹಂತದಿಂದ ಸೆಕೆಂಡರಿ ಹಂತದವರೆಗಿನ ಎಲ್ಲಾ ಪರೀಕ್ಷೆಗಳನ್ನೂ ತೆಗೆದು ಹಾಕಲಾಗುವುದು. ವಿದ್ಯಾರ್ಥಿಗಳಿಗೆ ಬರೆಯುವ ಪರೀಕ್ಷೆ ಹಾಗೂ ಮೌಲ್ಯಮಾಪನದ ದರ್ಜೆಯನ್ನು ನೀಡುವುದಿಲ್ಲ’ ಎಂದು ಹೇಳಿದೆ. ‘ಮಕ್ಕಳಿಗೆ, ಶಿಕ್ಷಕರು ಪ್ರಶ್ನೋತ್ತರ ಮಾಲಿಕೆ, ಮನೆಗೆಲಸ, ಕಲಿತ ಪಾಠ ಅಥವಾ ವಿಷಯದ ಬಗ್ಗೆ ಚರ್ಚೆ ನಡೆಸಬೇಕು. ವಿದ್ಯಾರ್ಥಿಗಳಲ್ಲಿ ಈ ಮೂಲಕ ಆತ್ಮವಿಶ್ವಾಸ ಮತ್ತು ಕಲಿಕೆಯ ಬಗ್ಗೆ ಜ್ಞಾನ ಒದಗಿಸಬೇಕು. ಅಂಕಗಳು ಮತ್ತು ಶ್ರೇಣಿಯ ಬದಲು ಈ ಹಂತಗಳನ್ನು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದೆ. ಆಗಾಗ ಪಾಲಕರ ಭೇಟಿ ಕಾರ್ಯಕ್ರಮ ಏರ್ಪಡಿಸಬೇಕು. ಮಕ್ಕಳ ಶೈಕ್ಷಣಿಕ ಪ್ರಗತಿ ಬಗ್ಗೆ ಪಾಲಕರು ನಿರಂತರವಾಗಿ ವರದಿ ಪಡೆಯಬೇಕು ಎಂದು ಹೇಳಿದೆ.
ಕಳೆದ ವಾರ 1700 ಶಾಲಾ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಿದ ಒಂಗ್ ಯೇ ಕುಂಗ್, ಮಕ್ಕಳ ಪ್ರಗತಿ, ಉತ್ತಮ ಕಾರ್ಯಗಳನ್ನು ಶಿಕ್ಷಕರು ಶ್ಲಾಘಿಸಬೇಕು ಮತ್ತು ಮೆಚ್ಚುಗೆ ವ್ಯಕ್ತಪಡಿಸಿ, ಹೊಸ ಹೊಸ ಅನ್ವೇಷಣೆಗಳಿಗೆ ಪ್ರೋತ್ಸಾಹ ನೀಡಬೇಕು. ಮಕ್ಕಳ ಸಾಧನೆ ಬಗ್ಗೆ ಮುಕ್ತವಾಗಿ, ಭೇದಭಾವವಿಲ್ಲದೇ ಶ್ಲಾಘಿಸಬೇಕು. ಹೀಗಾದಾಗ ಮಾತ್ರ ಕಲಿಕೆ ಒಂದು ಸ್ಪರ್ಧೆಯಲ್ಲ ಎಂಬ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಸಾಧ್ಯ ಎಂದು ಹೇಳಿದ್ದಾರೆ. ಈ ಮೂಲಕ ಕಲಿಕೆ ಎಂದರೆ ಸ್ಪರ್ಧೆ ಎಂದು ಭಾವಿಸಿರುವ ಮಕ್ಕಳ ಮನಸ್ಥಿತಿಯಲ್ಲಿ ಬದಲಾವಣೆ ತರಲು ಸಿಂಗಾಪುರ ಸರ್ಕಾರ ಮುಂದಡಿಯಿಟ್ಟಿದೆ.