ರಾಮಜನ್ಮಭೂಮಿ ವಿವಾದ ಪ್ರಕರಣದ ವಿಚಾರಣೆ ಮುಗಿದಿದ್ದು, ಸದ್ಯದಲ್ಲೇ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ಬೆಳವಣಿಗೆಯ ನಡುವೆ ಉತ್ತರ ಪ್ರದೇಶದ ದೇವ್ಬಂದ್ನ ಬಿಜೆಪಿ ನಾಯಕ ರಾಣಾ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
‘ದೀಪಾವಳಿ ಹಬ್ಬಕ್ಕೆ ಹಿಂದೂಗಳು ಪಾತ್ರೆ ಕೊಳ್ಳುವ ಬದಲು ಖಡ್ಗಗಳನ್ನು ಕೊಂಡುಕೊಳ್ಳಿ’ ಎಂದು ಕರೆ ನೀಡಿದ್ದಾರೆ. ರಾಣಾ ಹೇಳಿಕೆ ಸಾಕಷ್ಟು ವಿವಾದಕ್ಕೆ ಗ್ರಾಸವಾಗಿದ್ದು, ಎಲ್ಲೆಡೆ ಟೀಕೆಗಳು ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ತಾನು ನೀಡಿರುವ ಹೇಳಿಕೆಯನ್ನು ರಾಣಾ ಸಮರ್ಥಿಸಿಕೊಂಡಿದ್ದಾರೆ.
‘ಕತ್ತಿಗಳು ನಮ್ಮ ಸುರಕ್ಷತೆಗೆ ಅತ್ಯಂತ ಅವಶ್ಯಕ. ಹೀಗಾಗಿ ಪಾತ್ರೆಗಳಿಗಿಂತ ದೀಪಾವಳಿ ಹಬ್ಬಕ್ಕೆ ಕತ್ತಿಗಳನ್ನು ಕೊಂಡುಕೊಳ್ಳಿ’ ಎಂದು ಹೇಳಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ. ಬದಲಾಗುತ್ತಿರುವ ಸನ್ನಿವೇಶದಲ್ಲಿ ಹಿಂದೂಗಳ ಸುರಕ್ಷತೆ ದೃಷ್ಟಿಯನ್ನಿಟ್ಟುಕೊಂಡು ಈ ರೀತಿ ಹೇಳಿಕೆ ನೀಡಿದ್ದಾಗಿ ರಾಣಾ ತಿಳಿಸಿದ್ದಾರೆ.
ಉತ್ತರ ಭಾರತದಲ್ಲಿ ದೀಪಾವಳಿಯಂದು ದಂತೇರಾ ಅಂದರೆ ಲಕ್ಷ್ಮೀ ದೇವಿಯನ್ನು ಪೂಜಿಸಲಾಗುತ್ತದೆ. ಈ ವೇಳೆ ಮನೆಗಳಿಗೆ ಪಾತ್ರೆ ಮತ್ತು ಲೋಹದ ವಸ್ತುಗಳನ್ನು ಖರೀದಿಸುವ ಸಂಪ್ರದಾಯವನ್ನು ಜನತೆ ರೂಢಿಸಿಕೊಂಡು ಬಂದಿದ್ದಾರೆ. ಹೀಗಾಗಿ ಪಾತ್ರೆಗಳನ್ನು ಕೊಳ್ಳುವ ಬದಲು ಕತ್ತಿಗಳನ್ನು ಕೊಳ್ಳಿರಿ ಎಂದು ರಾಣಾ ಹೇಳಿದ್ದಾರೆ.
ಅಯೋಧ್ಯೆ ವಿಚಾರಣೆ ಈಗಾಗಲೇ ಸುಪ್ರೀಂ ಕೋರ್ಟಿನಲ್ಲಿ ಮುಗಿದಿದ್ದು ನವೆಂಬರ್ ತಿಂಗಳಿಗೆ ತೀರ್ಪು ಕಾಯ್ದಿರಿಸಿದೆ. ಅತ್ತ ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. ಇಂಥಾ ಸನ್ನಿವೇಶದಲ್ಲಿ ಉದ್ವಿಗ್ನತೆಗೆ ಪ್ರಚೋದಿಸುವಂತಹ ಹೇಳಿಕೆ ಬಿಜೆಪಿ ನಾಯಕನಿಂದ ಹೊರಬಿದ್ದಿರೋದು ಜನರನ್ನು ಆತಂಕಕ್ಕೆ ತಳ್ಳಿದೆ. ಈ ತೀರ್ಪನ್ನು ರಾಜಕೀಯ ಪಕ್ಷಗಳು, ಮುಖ್ಯವಾಗಿ ಬಿಜೆಪಿ, ತನ್ನ ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳುವ ಯೋಜನೆಯನ್ನೇನಾದರು ಹಾಕಿಕೊಂಡಿದೆಯಾ ಎಂಬ ಚರ್ಚೆಗಳೂ ಶುರುವಾಗಿವೆ.