ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಬಡವರ ವಿರುದ್ದದ ‘ಅಘೋಷಿತ ಯುದ್ದ’ವಾಗಿದೆ. ಇದು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ ಚಿಂತಕ ಶಿವಸುಂದರ್ ಹೇಳಿದರು.
ಕಲಬುರಗಿ ನಗರದ ಕನ್ನಡ ಭವನದಲ್ಲಿ ಸಂವಿಧಾನ ರಕ್ಷಣಾ ಸಮಿತಿ ಹಾಗೂ ಎದ್ದೇಳು ಕರ್ನಾಟಕ ಭಾನುವಾರ (ಮಾ.1) ಹಮ್ಮಿಕೊಂಡಿದ್ದ ‘ಎಸ್ಐಆರ್ ಪರಿಣಾಮ-ಸವಾಲು ಸಂವಾದಗೋಷ್ಠಿ’ಯಲ್ಲಿ ಅವರು ಮಾತನಾಡಿದರು.
ಎಸ್ಐಆರ್ ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆ ಅಲ್ಲ, ಬದಲಿಗೆ ಅಂಚಿನ ಸಮುದಾಯಗಳ ವಿರುದ್ಧ ನಡೆಸುತ್ತಿರುವ ಸಂಚಿನ ಭಾಗವಾಗಿದೆ ಎಂದು ದೂರಿದರು.

ಎಸ್ಐಆರ್ ಎಂದರೆ ಸಾಮಾನ್ಯ ಪರಿಷ್ಕರಣೆ ಅಲ್ಲ. ಇದು ಅಲ್ಪಸಂಖ್ಯಾತರು, ಆದಿವಾಸಿಗಳು, ದಲಿತರು, ಮಹಿಳೆಯರು ಮತ್ತು ಇತರೆ ಹಿಂದುಳಿದ ವರ್ಗಗಳ ಮೇಲೆ ನಡೆಸುತ್ತಿರುವ ವ್ಯವಸ್ಥಿತ ಯುದ್ಧ. ಈ ಯುದ್ಧಕ್ಕೆ ಒಗ್ಗಟ್ಟಿನಿಂದ ಪ್ರತಿರೋಧ ತೋರಿಸದಿದ್ದರೆ, ನಮ್ಮದೇ ದೇಶದಲ್ಲಿ ನಾವು ದ್ವಿತೀಯ ದರ್ಜೆ ನಾಗರಿಕರಾಗಿ ಬದುಕಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಶಿವಸುಂದರ್ ಎಚ್ಚರಿಸಿದರು.
ಎಸ್ಐಆರ್ ಹಿಂದೆ ರಾಜಕೀಯ ಉದ್ದೇಶಗಳಿವೆ ಎಂದು ಆರೋಪಿಸಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು. ಎಸ್ಐಆರ್ ಪ್ರಕ್ರಿಯೆ ಮತದಾರರ ಪಟ್ಟಿಯನ್ನು ನವೀಕರಿಸುವುದಕ್ಕಿಂತ ಹೆಚ್ಚಾಗಿ ನಾಗರಿಕತ್ವವನ್ನು ಪರೀಕ್ಷಿಸುವ ಕ್ರಮವಾಗಿ ಪರಿಣಮಿಸಿದೆ ಎಂದು ಹೇಳಿದರು.
ಸಾಮಾನ್ಯ ಪರಿಷ್ಕರಣೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಯಾರಾದರೂ ಮತದಾರರು ನಿಧನರಾಗಿದ್ದಾರೆಯೇ?.. ಸ್ಥಳಾಂತರಗೊಂಡಿದ್ದಾರೆಯೇ? ಅಥವಾ ಹೊಸ ಮತದಾರ ಅರ್ಹರಾಗಿದ್ದಾರೆಯೇ? ಎಂಬುದನ್ನು ಪರಿಶೀಲಿಸುತ್ತಾರೆ. ಆದರೆ, ಎಸ್ಐಆರ್ನಲ್ಲಿ ನೀವು ಭಾರತೀಯ ನಾಗರಿಕರೇ?’ ಎಂಬ ಪ್ರಶ್ನೆಯನ್ನು ಆರಂಭದಲ್ಲೇ ಕೇಳಲಾಗುತ್ತಿದೆ. ಬಹುತೇಕ ಆದಿವಾಸಿಗಳು, ಅಲ್ಪಸಂಖ್ಯಾತರು, ಬಡವರು ಮತ್ತು ಮಹಿಳೆಯರ ಬಳಿ ಕೇಳಲಾಗುತ್ತಿರುವ ದಾಖಲೆಗಳು ಇಲ್ಲ. ಇದು ಮುಂದುವರಿದರೆ ಅನೇಕರ ಮತಹಕ್ಕು ಕಳೆದುಹೋಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತದ ಸಂವಿಧಾನ ರೂಪಿಸಿದ ಮಹನೀಯರು ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಖಾತ್ರಿ ಮಾಡುವ ಪ್ರಜಾಸತ್ತಾತ್ಮಕ, ಸಮಾಜವಾದಿ ಗಣರಾಜ್ಯದ ಕನಸು ಕಂಡಿದ್ದರು. ಎಸ್ಐಆರ್ ಈ ಸಂವಿಧಾನಿಕ ಮೌಲ್ಯಗಳನ್ನು ದುರ್ಬಲಗೊಳಿಸುವ ಸಂಚಾಗಿದೆ ಎಂದು ಶಿವಸುಂದರ್ ಹೇಳಿದರು.
ಎಸ್ಐಆರ್ ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆ ಅಲ್ಲ. ಇದು ಪ್ರಜಾಸತ್ತಾತ್ಮಕ ಹಾಗೂ ನಾಗರಿಕ ಹಕ್ಕುಗಳ ಹತ್ಯೆ ಎಂದು ಅವರು ಆರೋಪಿಸಿದರು.
ಇತರೆ ರಾಜ್ಯಗಳ ಅಂಕಿ ಅಂಶಗಳನ್ನು ಉಲ್ಲೇಖಿಸಿದ ಅವರು, ಬಿಹಾರದಲ್ಲಿ 65 ಲಕ್ಷ, ತಮಿಳುನಾಡಿನಲ್ಲಿ 74 ಲಕ್ಷ ಹಾಗೂ ಉತ್ತರ ಪ್ರದೇಶದಲ್ಲಿ ಸುಮಾರು 3 ಕೋಟಿ ಮತದಾರರನ್ನು ಎಸ್ಐಆರ್ ಮೂಲಕ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇವರಲ್ಲಿ ಬಹುತೇಕರು ಮುಸ್ಲಿಮರು ಅಥವಾ ಆಡಳಿತ ಪಕ್ಷದ ವಿರೋಧಿಗಳು ಎಂದು ವಿವರಿಸಿದರು.
ಎಸ್ಐಆರ್ ಮೂಲಕ ಆಡಳಿತ ಪಕ್ಷ ತನ್ನ ವಿರೋಧಿಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲು ಯತ್ನಿಸುತ್ತಿದೆ. ಇದು ಹಗಲಿನಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಹತ್ಯೆಯಾಗಿದೆ. ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ರಕ್ಷಿಸಲು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದರು.

ನಾಗರಿಕ ಸಮಾಜ ಸಂಸ್ಥೆಗಳು, ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರಗತಿಪರ ಸಂಘಟನೆಗಳು ಒಗ್ಗಟ್ಟಿನಿಂದ ಜನರನ್ನು ಜಾಗೃತಿಗೊಳಿಸಿ ಹೋರಾಟ ನಡೆಸಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಹೋರಾಟಗಾರರು ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನಾಗರಿಕರು, ಯುವಜನರು ಭಾಗವಹಿಸಿದ್ದರು.


