ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧದ ಹೋರಾಟದ ನೇತೃತ್ವ ವಹಿಸಿದ್ದ ಆರು ಕ್ರೈಸ್ತ ಸನ್ಯಾಸಿನಿಗಳಲ್ಲಿ ಒಬ್ಬರಾದ ಸಿಸ್ಟರ್ ಅನುಪಮಾ ಕೆಲಮಂಗಲತುವೆಲಿಯಿಲ್ ಅವರು ಅಧಿಕೃತವಾಗಿ ಸನ್ಯಾಸತ್ವ ತೊರೆದು ಕೇರಳದ ಅಲಪ್ಪುಝದಲ್ಲಿರುವ ತಮ್ಮ ಕುಟುಂಬವನ್ನು ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.
2018ರಲ್ಲಿ, ಕೊಟ್ಟಾಯಂನ ಮಿಷನರೀಸ್ ಆಫ್ ಜೀಸಸ್ ಕಾನ್ವೆಂಟ್ನ ಸನ್ಯಾಸಿನಿಯೊಬ್ಬರು, 2014ರಿಂದ 2016ರ ನಡುವೆ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರು ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಈ ವೇಳೆ ಕ್ಯಾಥೋಲಿಕ್ ಚರ್ಚ್ನಿಂದ ತೀವ್ರ ಒತ್ತಡ ಎದುರಿಸುತ್ತಿದ್ದರೂ, ಸಿಸ್ಟರ್ ಅನುಪಮಾ ಸೇರಿದಂತೆ ಇತರ ಆರು ಮಂದಿ ಸನ್ಯಾಸಿನಿಗಳು ಸಂತ್ರಸ್ತೆಯ ಬೆಂಬಲಕ್ಕೆ ನಿಂತು ಹೋರಾಡಿದ್ದರು.
ಆದರೂ, ಅತ್ಯಾಚಾರ ಪ್ರಕರಣ ದಾಖಲಾಗಿ ಮೂರು ತಿಂಗಳು ಕಳೆದರೂ ಜಲಂಧರ್ನ ಲ್ಯಾಟಿನ್ ಕ್ಯಾಥೋಲಿಕ್ ಡಯಾಸಿಸ್ನ ಮುಖ್ಯಸ್ಥರಾಗಿದ್ದ ಬಿಷಪ್ ಅವರನ್ನು ಬಂಧಿಸಿರಲಿಲ್ಲ.
ನಂತರ, ಸಿಸ್ಟರ್ ಅನುಪಮಾ ನೇತೃತ್ವದಲ್ಲಿ ಸನ್ಯಾಸಿಗಳು ಕೊಚ್ಚಿಯಲ್ಲಿ ಸಾರ್ವಜನಿಕ ಧರಣಿ ಪ್ರತಿಭಟನೆ ನಡೆಸಿದ್ದರು. ನಂತರ ಸಾರ್ವಜನಿಕ ವಲಯದಿಂದ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಅಕ್ರಮ ಬಂಧನ, ಅತ್ಯಾಚಾರ, ಅಸ್ವಾಭಾವಿಕ ಲೈಂಗಿಕತೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಬಂಧಿಸಲಾಗಿತ್ತು.
ಈ ಪ್ರಕರಣದಲ್ಲಿ, ಭಾರತದ ಕ್ಯಾಥೋಲಿಕ್ ಚರ್ಚ್ನ ಅಧಿಕಾರವನ್ನು ಸನ್ಯಾಸಿನಿಯರ ಗುಂಪೊಂದು ಪ್ರಶ್ನಿಸಿದ್ದು ಇದೇ ಮೊದಲ ಬಾರಿಯಾಗಿತ್ತು.
2019ರಲ್ಲಿ, ಬಿಷಪ್ ವಿರುದ್ದ ಹೋರಾಟ ನಡೆಸಿದ್ದ ಆರು ಸನ್ಯಾಸಿನಿಗಳಲ್ಲಿ ನಾಲ್ವರಿಗೆ ಚರ್ಚ್ ವರ್ಗಾವಣೆ ಆದೇಶ ನೀಡಿತ್ತು. ಈ ವೇಳೆ ಸನ್ಯಾಸಿನಿಯರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು, ಬಿಷಪ್ ವಿರುದ್ದ ಪ್ರಕರಣದ ವಿಚಾರಣೆಯ ಅಂತ್ಯದವರೆಗೆ ತಮ್ಮ ವರ್ಗಾವಣೆ ಆದೇಶವನ್ನು ತಡೆಯುವಂತೆ ಕೋರಿದ್ದರು.
ಈ ಸಂದರ್ಭದಲ್ಲಿ ಸನ್ಯಾಸಿನಿಯರು ಭಾರೀ ವಿರೋಧ ಮತ್ತು ಬಹಿಷ್ಕಾರವನ್ನು ಎದುರಿಸಬೇಕಾಯಿತು. ಆದರೂ, ಅವರು ತಮ್ಮ ಕಾನ್ವೆಂಟ್ ಬಿಡಲು ನಿರಾಕರಿಸಿದ್ದರು. ಸಂತ್ರಸ್ತೆ ಸನ್ಯಾಸಿನಿಯ ಬೆನ್ನಿಗೆ ದೃಢವಾಗಿ ನಿಂತಿದ್ದರು.
ಈ ವೇಳೆ ಕೇರಳ ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಸಂತ್ರಸ್ತೆ ಸನ್ಯಾಸಿನಿ, “ನನ್ನನ್ನು ಇತರ ಸನ್ಯಾಸಿನಿಗಳಿಂದ ಪ್ರತ್ಯೇಕಿಸಲು, ಕಿರುಕುಳ ಮತ್ತು ಚಿತ್ರಹಿಂಸೆ ನೀಡಲು ಚರ್ಚ್ ಪ್ರಯತ್ನಿಸುತ್ತಿದೆ. ಅಂತಹ ಪರಿಸ್ಥಿತಿ ಎದುರಾದರೆ ನನ್ನ ಜೀವಕ್ಕೆ ಅಪಾಯವಿದೆ” ಎಂದು ಆರೋಪಿಸಿದ್ದರು.
ಈ ನಡುವೆ 2022ರಲ್ಲಿ, ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಕೊಟ್ಟಾಯಂನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಳಿಸಿತು.
ಆಗ, ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಸ್ಟರ್ ಅನುಪಮಾ “ನಮ್ಮ ಸಹೋದರಿಗೆ ನ್ಯಾಯ ಸಿಗುವವರೆಗೂ ನಾವು ಹೋರಾಟವನ್ನು ಮುಂದುವರಿಸುತ್ತೇವೆ. ನಾವು ಸಾಯಬೇಕಾಗಿ ಬಂದರೂ ಸರಿ, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬಿಷಪ್ ಫ್ರಾಂಕೊ ಹಣ ಮತ್ತು ತೋಳ್ಬಲ ಎರಡನ್ನೂ ಹೊಂದಿರುವ ವ್ಯಕ್ತಿ” ಎಂದು ಹೇಳಿದ್ದರು.
ಬಳಿಕ ಸಂತ್ರಸ್ತೆ ಸನ್ಯಾಸಿನಿ ಕೊಟ್ಟಾಯಂ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಪ್ರಕರಣ ಹೈಕೋರ್ಟ್ನಲ್ಲಿ ಬಾಕಿಯಿದೆ.
ಜಿಲ್ಲಾ ನ್ಯಾಯಾಲಯದ ತೀರ್ಪಿನ ಬಳಿಕ ಹೋರಾಟ ನಿರತ ಎಲ್ಲಾ ಸನ್ಯಾಸಿನಿಗಳು ತಮ್ಮ ಕಾನ್ವೆಂಟ್ನಲ್ಲೇ ಉಳಿದು ಹೋರಾಟ ಮುಂದುವರಿಸುವುದಾಗಿ ಹೇಳಿದ್ದರು. ಆದಾಗ್ಯೂ, ಕಳೆದ ಮೂರು ವರ್ಷಗಳಲ್ಲಿ ಸಿಸ್ಟರ್ ಅನುಪಮಾ ಅಲ್ಲದೆ, ಇತರ ಇಬ್ಬರು ಸನ್ಯಾಸಿನಿಗಳು ಕೂಡ ಸನ್ಯಾಸಿನಿತ್ವವನ್ನು ತ್ಯಜಿಸಿ ಕಾನ್ವೆಂಟ್ ತೊರೆದಿದ್ದಾರೆ.