ಲಡಾಖ್ನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ವೈದ್ಯಕೀಯ ಆಧಾರದ ಮೇಲೆ ಬಂಧನದಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ (ಫೆ.11) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
“ವೈದ್ಯಕೀಯ ಆಧಾರದಲ್ಲಿ ಸೋನಮ್ ವಾಂಗ್ಚುಕ್ ಅವರ ಬಂಧನವನ್ನು ಮರುಪರಿಶೀಲಿಸುವಂತೆ ನ್ಯಾಯಾಲಯ ಸೂಚಿಸಿರುವುದನ್ನು ಕೇಂದ್ರ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆದರೆ, ಅವರನ್ನು ಬಿಡುಗಡೆಗೊಳಿಸುತ್ತಿಲ್ಲ” ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್ಗೆ ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಪೀಠದ ಮುಂದೆ ಮಾಹಿತಿ ನೀಡಿದ ತುಷಾರ್ ಮೆಹ್ತಾ “ಜೈಲು ಕೈಪಿಡಿಯ ನಿಯಮದಂತೆ ಸೋನಮ್ ವಾಂಗ್ಚುಕ್ ಅವರನ್ನು ಇದುವರೆಗೆ 28 ಬಾರಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರು ಸಂಪೂರ್ಣವಾಗಿ ಸದೃಢರಾಗಿದ್ದು, ಆರೋಗ್ಯವಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಮೆಹ್ತಾ, “ವಾಂಗ್ಚುಕ್ ಅವರಿಗೆ ಕೆಲವು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡಿವೆ, ಆದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಪ್ರಿವೆಂಟಿವ್ ಬಂಧನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿನಾಯಿತಿಗಳನ್ನು ನೀಡಲು ಸಾಧ್ಯವಿಲ್ಲ ಮತ್ತು ಅದು ಅಪೇಕ್ಷಣೀಯವೂ ಅಲ್ಲ ಎಂದು ಮೆಹ್ತಾ ವಾದ ಮಂಡಿಸಿದ್ದಾರೆ.
ಫೆಬ್ರವರಿ 4ರ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಳೆ ಅವರು ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ, “ಅವರ ಆರೋಗ್ಯ ವರದಿಗಳು ಉತ್ತಮವಾಗಿಲ್ಲ, ಸರ್ಕಾರ ಅವರ ಬಂಧನದ ಬಗ್ಗೆ ಮರುಚಿಂತನೆ ನಡೆಸಲಿ” ಎಂದು ಸೂಚಿಸಿದ್ದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಕೆ.ಎಂ. ನಟರಾಜ್ ಅವರು ಆರಂಭದಲ್ಲಿ ಕಾಲಾವಕಾಶ ಕೋರಿ, “ವಾಂಗ್ಚುಕ್ ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ತಿಳಿಸಿದ್ದರು.
ಇಂದು (ಫೆ. 11) ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್ಗೆ ಸ್ಪಷ್ಟಪಡಿಸಿ, ವಾಂಗ್ಚುಕ್ “ಸಂಪೂರ್ಣ ಆರೋಗ್ಯವಾಗಿದ್ದಾರೆ” ಮತ್ತು ಅವರನ್ನು ವೈದ್ಯಕೀಯ ಆಧಾರದ ಮೇಲೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, “ಸರ್ಕಾರ ವಾಂಗ್ಚುಕ್ ಅವರ ಆರೋಗ್ಯ ವರದಿಯನ್ನು ಒಪ್ಪಿಕೊಂಡಿದೆ, ಆದರೆ, ಅವರಿಗೆ ಇರುವ ಅನಾರೋಗ್ಯವು ಬಿಡುಗಡೆ ಮಾಡುವಷ್ಟು ಗಂಭೀರವಾಗಿಲ್ಲ ಎಂಬುವುದು ಸರ್ಕಾರದ ವಾದವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಲುಷಿತ ನೀರಿನ ಸೇವನೆಯಿಂದಾಗಿ ಸೋನಮ್ ವಾಂಗ್ಚುಕ್ ಅವರು ಪದೇ ಪದೇ ಹೊಟ್ಟೆ ನೋವಿನ ಬಗ್ಗೆ ದೂರು ನೀಡುತ್ತಿದ್ದಾರೆ, ಆದ್ದರಿಂದ ತಜ್ಞ ವೈದ್ಯರಿಂದ ಅವರನ್ನು ತಪಾಸಣೆ ಮಾಡಿಸಬೇಕು ಎಂದು ಕೋರಿ (ವಾಂಗ್ಚುಕ್ ಪತ್ನಿ ಆಂಗ್ಮೋ ಪರವಾಗಿ) ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯದ ಸೂಚನೆಯಂತೆ ಏಮ್ಸ್ ಜೋಧ್ಪುರ ವೈದ್ಯರು ಅವರ ಆರೋಗ್ಯ ತಪಾಸಣೆ ನಡೆಸಿ ವರದಿ ನೀಡಿದ್ದಾರೆ ಎನ್ನಲಾಗಿದೆ. ಈ ವರದಿಯನ್ನು ಆಧರಿಸಿ, ವಾಂಗ್ಚುಕ್ ಅವರಿಗೆ ಸಾಮಾನ್ಯ ಜೀರ್ಣಕ್ರಿಯೆ ಸಮಸ್ಯೆಯಿದೆ ಹೊರತು, ಬಿಡುಗಡೆ ಮಾಡುವಷ್ಟು ಗಂಭೀರ ಸ್ಥಿತಿಯಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಲಡಾಖ್ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ನಂತರ, ಸೆಪ್ಟೆಂಬರ್ 26, 2025 ರಂದು ಸೋನಮ್ ವಾಂಗ್ಚುಕ್ ಅವರನ್ನು ಬಂಧಿಸಿ ಜೋಧ್ಪುರಕ್ಕೆ ಕರೆದೊಯ್ಯಲಾಗಿದೆ. ರಾಷ್ಟ್ರೀಯ ಭದ್ರತಾ ಕಾಯ್ದೆ, 1980 (ಎನ್ಎಸ್ಎ) ಅಡಿಯಲ್ಲಿ ಅವರ ಬಂಧನ ಕಾನೂನುಬಾಹಿರ ಎಂದು ವಾದಿಸಿರುವ ಪತ್ನಿ ಡಾ. ಗೀತಾಂಜಲಿ ಆಂಗ್ಮೋ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠವು ನಡೆಸುತ್ತಿದೆ.


