ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಒದಗಿಸದ ಸಚಿವರು ಮತ್ತು ಅಧಿಕಾರಿಗಳ ವಿರುದ್ದ ಸೋಮವಾರ (ಮಾ.16) ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್, ಸದನವನ್ನು ಮುಂದೂಡಿಕೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ವಿಧಾನಸಭೆಯಲ್ಲಿ ಲಿಖಿತ ಉತ್ತರ ಪ್ರಕ್ರಿಯೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, 230 ಲಿಖಿತ ಮೂಲಕ ಪ್ರಶ್ನೆಗಳ ಪೈಕಿ ಕೇವಲ 84ಕ್ಕೆ ಉತ್ತರಗಳನ್ನು ಮಂಡಿಸಿದರು.
ಈ ವೇಳೆ ಎದ್ದು ನಿಂತ ವಿಪಕ್ಷ ನಾಯಕ ಆರ್. ಅಶೋಕ್, ಯಾವ ರೀತಿಯಲ್ಲಿ ಲೆಕ್ಕ ಹಾಕಿದರೂ ಶೇಕಡ 50ರ ಗಡಿ ದಾಟಿಲ್ಲ. ಈ ಹಿಂದೆ ನಾಲ್ಕು ಬಾರಿ ಎಚ್ಚರಿಕೆ ಕೊಡಲಾಗಿದೆ. ಇವತ್ತು ಐದನೇ ಬಾರಿ ಎಚ್ಚರಿಕೆ ಕೊಟ್ಟು ಬಿಡಿ, ಅದೊಂದು ದಾಖಲೆಯಾಗಲಿ ಎಂದರು. ಸಭಾಧ್ಯಕ್ಷರ ಈ ಹಿಂದಿನ ಆದೇಶಗಳಿಗೆ ಸರ್ಕಾರ ಯಾವುದೇ ಬೆಲೆ ಕೊಟ್ಟಿಲ್ಲ. ಅಧಿಕಾರಿಗಳು ನಿತ್ಯ ದೇವರ ರೀತಿ ಬಂದು ಕುಳಿತುಕೊಳ್ಳುತ್ತಾರೆ. ಆನಂತರ ದೇವರಂತೆ ಎದ್ದು ಮನೆಗೆ ಹೋಗುತ್ತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ಇದಕ್ಕೊಂದು ಪರಿಹಾರ ಕಂಡು ಹಿಡಿಯೋಣ ಎಂದರು. ಆಡಳಿತ ಪಕ್ಷವನ್ನು ಉದ್ದೇಶಿಸಿ ಮಾತನಾಡಿದ ಅವರು, “ನಾನು ಈಗಾಗಲೇ ಹೇಳಿದ್ದೇನೆ. ಈ ಅಧಿವೇಶನ ನಡೆಯುವುದು ಸಚಿವರಿಗಾಗಿ ಅಲ್ಲ, ಶಾಸಕರಿಗಾಗಿ. ಸಚಿವರು ಯಾವಾಗ ಬೇಕಾದರು ಚರ್ಚೆ ಮಾಡಬಹುದು. ಆದರೆ, ಶಾಸಕರು ಮೂರು ತಿಂಗಳಿಗೊಮ್ಮೆ ಬಂದು ಅವರ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಬೇಕಿದೆ” ಎಂದರು.
ಮುಂದುವರಿದು, ಈ ಹಿಂದೆ ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಯಾವುದೇ ಸುಧಾರಣೆಯಾದಂತೆ ಕಾಣುತ್ತಿಲ್ಲ ಎಂದು ಹೇಳಿದರು. ಈ ರೀತಿಯಾದರೆ ಎಲ್ಲಾ ಸದಸ್ಯರು ಮೆಚ್ಚುವಂತೆ ಸದನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು. ಆದ್ದರಿಂದ ಸಂಬಂಧಪಟ್ಟ ಸಚಿವರು ಮತ್ತು ಕಾರ್ಯದರ್ಶಿಗಳು ಏಕೆ ಹೀಗಾಯಿತು ಎಂದು ಹೇಳುವವರೆಗೆ ನಾನು ಸದನವನ್ನು ನಡೆಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸದನವನ್ನು ಮುಂದೂಡಿದರು.


