ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಅಕ್ಟೋಬರ್ 8 ರಂದು ಬಂಧಿಸಲ್ಪಟ್ಟ 83 ವರ್ಷದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿಯವರಿಗೆ ಕೊನೆಗೂ ತಲೋಜಾ ಜೈಲಿನ ಅಧಿಕಾರಿಗಳು ನೀರು ಕುಡಿಯಲು ಬೇಕಿರುವ ಸ್ಟ್ರಾ ಮತ್ತು ಸಿಪ್ಪರ್ ಕಪ್ ನೀಡಿದ್ದಾರೆ.
ತಲೋಜಾ ಜೈಲಿನ ಅಧಿಕಾರಿಗಳು ಸ್ಟ್ಯಾನ್ ಸ್ವಾಮಿ ಅವರಿಗೆ ಸ್ಟ್ರಾ ಮತ್ತು ಸಿಪ್ಪರ್ ಕಪ್ ನೀಡಿದ್ದಾರೆ ಎಂದು ಫಾದರ್ ಸ್ಟ್ಯಾನ್ ಸ್ವಾಮಿಯ ಪರ ವಕೀಲ ಶರೀಫ್ ಶೇಖ್ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತಮಗೆ ಪಾರ್ಕಿನ್ಸನ್ ಕಾಯಿಲೆ ಇರುವುದರಿಂದ ಕೈಗಳು ನಡುಗುತ್ತದೆ. ಆದ್ದರಿಂದ ಆಹಾರ ಸೇವಿಸಲು ಆಗುದಿಲ್ಲ. ಹಾಗಾಗಿ ಬಂಧನದ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಸ್ಟ್ರಾ ಮತ್ತು ಸಿಪ್ಪರ್ ಅನ್ನು ವಾಪಸ್ ಕೊಡುವಂತೆ ಕೋರಿ ಸ್ಟಾನ್ ಸ್ವಾಮಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಫಾದರ್ ಸ್ಟ್ಯಾನ್ ಸ್ವಾಮಿ ಅವರು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಹೊಸ ಮೂರು ಅರ್ಜಿಗಳನ್ನು ಸಲ್ಲಿಸಿದ್ದು, ಬಂಧನದ ವೇಳೆ ತಮ್ಮಿಂದ ವಶಪಡಿಸಿಕೊಂಡಿರುವ ಬ್ಯಾಗ್ ಹಾಗೂ ಹಾರ್ಡ್ ಕ್ಲೋನ್ ಪ್ರತಿಯನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ತಮ್ಮನ್ನು ತಲೋಜಾ ಜೈಲಿನಿಂದ ಬೇರೆಡೆಗೆ ಸ್ಥಳಾಂತರಿಸದಂತೆ ಎನ್ಐಎ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಒಂದು ಸ್ಟ್ರಾ ಪಡೆಯಲು ’ಸ್ಟ್ಯಾನ್ ಸ್ವಾಮಿ’ ಇನ್ನೂ ಡಿಸೆಂಬರ್ವರೆಗೂ ಕಾಯಬೇಕು!
ಸ್ವಾಮಿ ಅವರಿಂದ ಸ್ಟ್ರಾ ಮತ್ತು ಸಿಪ್ಪರ್ ಅನ್ನು ವಶಪಡಿಸಿಕೊಂಡಿಲ್ಲ. ಆದ್ದರಿಂದ ಆ ವಸ್ತುಗಳನ್ನು ಅವರಿಗೆ ಹಿಂದಿರುಗಿಸುವ ಪ್ರಶ್ನೆಯಿಲ್ಲ ಎಂದು ಎನ್ಐಎ ಕಳೆದ ತಿಂಗಳು ನ್ಯಾಯಾಲಯಕ್ಕೆ ತಿಳಿಸಿತು. ನಂತರ ಸ್ವಾಮಿ ಸ್ಟ್ರಾ, ಸಿಪ್ಪರ್ ಮತ್ತು ಚಳಿಗಾಲದ ಬಟ್ಟೆಗಳನ್ನು ನೀಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದರು. ನವೆಂಬರ್ 26 ರಂದು ವಿಶೇಷ ಎನ್ಐಎ ನ್ಯಾಯಾಲಯವು ಜೈಲು ಅಧೀಕ್ಷಕರಿಗೆ ಅರ್ಜಿ ಸಲ್ಲಿಸಿ ತನ್ನ ಉತ್ತರವನ್ನು ಸಲ್ಲಿಸುವಂತೆ ನಿರ್ದೇಶಿಸಿತ್ತು.
ಇಂದು ತಲೋಜಾ ಜೈಲಿನ ಅಧಿಕಾರಿಗಳು ಸ್ವಾಮಿ ಅವರಿಗೆ ಸ್ಟ್ರಾ, ಸಿಪ್ಪರ್ ಜೊತೆಗೆ ಚಳಿಗಾಲದ ಉಡುಪುಗಳನ್ನು ಕೊಟ್ಟಿದ್ದಾರೆ’ ಎಂದು ವಕೀಲ ಶರೀಫ್ ಶೇಖ್ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಸ್ವಾಮಿ ವೈದ್ಯಕೀಯ ಕಾರಣಕ್ಕೂ ಜಾಮೀನು ಅರ್ಜಿ ಸಲ್ಲಿಸಿದ್ದರು.
ಸ್ವಾಮಿಯವರ ಆರೋಗ್ಯ ಸ್ಥಿತಿ ಕುರಿತು ತಲೋಜಾ ಜೈಲಿನಿಂದ ನ್ಯಾಯಾಲಯ ವರದಿ ಕೋರಿತ್ತು. ಜೈಲು ಅಧಿಕಾರಿಗಳು ವರದಿಯನ್ನು ಸಲ್ಲಿಸಲು ಸಮಯ ಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದು, ನ್ಯಾಯಾಲಯವು ಡಿಸೆಂಬರ್ 10 ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಡಿಸೆಂಬರ್ 10 ರಂದು ಸ್ವಾಮಿ ಸಲ್ಲಿಸಿದ್ದ ಮೂರು ಹೊಸ ಅರ್ಜಿಗಳನ್ನೂ ಆಲಿಸುವುದಾಗಿ ನ್ಯಾಯಾಲಯ ಹೇಳಿದೆ.
ಕ್ಯಾಥೋಲಿಕ್ ಪಾದ್ರಿಯಾಗಿರುವ ಸ್ಟ್ಯಾನ್ ಸ್ವಾಮಿ ಕೇರಳ ಮೂಲದವರಾಗಿದ್ದು 50 ವರ್ಷದಿಂದ ಮಾನವ ಹಕ್ಕು ಮತ್ತು ಬುಡಕಟ್ಟು ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಭೀಮಾ ಕೋರೆಗಾಂವ್ ಪ್ರಕರಣದ ಸಂಬಂಧ ಬಂಧನಕ್ಕೊಳಗಾದ 16 ನೇ ವ್ಯಕ್ತಿಯಾಗಿದ್ದು, ಇದುವರೆಗೂ ಬಂಧಿಸಿದವರಲ್ಲಿ ಹಿರಿಯರಾಗಿದ್ದಾರೆ. ಸ್ಟ್ಯಾನ್ ಸ್ವಾಮಿ ಹಲವು ರೀತಿಯ ಕಾಯಿಲೆಯಿಂದ ಬಳಲುತ್ತಿದ್ದಾರೆ.
ನಮ್ಮ ದೇಶದ ಜೈಲುಗಳಲ್ಲಿರುವ ಚಿಂತಕರು ಮತ್ತು ಹೋರಾಟಗಾರರ ಪರಿಸ್ಥಿತಿ ಚಿಂತಾಜನಕವಾಗಿದೆ.