ರಾಜ್ಯ ಬಿಜೆಪಿ ಸರ್ಕಾರ ಈ ವರ್ಷದ ಬಜೆಟ್ನಲ್ಲಿ ಕೇವಲ 29,688 ಕೋಟಿ ರೂಪಾಯಿ ಅಂದರೆ 11% ಹಣ ಮಾತ್ರ ನೀಡುವುದರ ಮೂಲಕ ತನ್ನ ಶಿಕ್ಷಣ ವಿರೋಧಿ, ವಿದ್ಯಾರ್ಥಿ ದ್ರೋಹಿ ನೀತಿಯನ್ನು ಮುಂದುವರೆಸಿದೆ ಎಂದು ಭಾರತೀಯ ವಿದ್ಯಾರ್ಥಿ ಫಡರೇಷನ್(SFI) ರಾಜ್ಯ ಸಮಿತಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ವರ್ಷದ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಈ ವರ್ಷದ ಬಜೆಟ್ನಲ್ಲಿ 70 ಕೋಟಿ ಹಣ ಅಂದರೆ 0.3% ಹಣವನ್ನು ಶಿಕ್ಷಣ ಕ್ಷೇತ್ರಕ್ಕೆ ಕಡಿತ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಸರ್ಕಾರ ಮತ್ತೆ ಮಠ ಮಾನ್ಯಗಳಿಗೆ, ಜಾತಿವಾರು ಪ್ರತಿಮೆಗಳ ನಿರ್ಮಾಣಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮೀಸಲಿಡುವುದರ ಮೂಲಕ ಬಿಜೆಪಿ ಸರ್ಕಾರಕ್ಕೆ ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿ ಕಣ್ಣೋಟ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತುಪಡಿಸಲಾಗಿದೆ ಎಂದು SFI ಟೀಕಿಸಿದೆ.
ಇದನ್ನೂ ಓದಿ: ದೇವಸ್ಥಾನದ ಕಾಣಿಕ ಡಬ್ಬಿ ಕಳವು: ಬಜರಂಗದಳ ಸಂಚಾಲಕನ ಬಂಧನ
“ಕೊರೋನಾದಿಂದ ಶೈಕ್ಷಣಿಕ ಸಮಸ್ಯೆಗಳು ತೀವ್ರವಾಗಿವೆ. ಈ ಸಂದರ್ಭದಲ್ಲಿ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಖಾಲಿ ಇರುವ ಶಿಕ್ಷಕ, ಉಪನ್ಯಾಸಕರ ಹುದ್ದೆಗಳ ಭರ್ತಿಯಾಗಬೇಕು, ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ವಿಶೇಷವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಳಿಸಬೇಕು, ವಿದ್ಯಾರ್ಥಿ ವೇತನ, ಅಗತ್ಯ ತರಗತಿ ಕೊಠಡಿ, ಉಚಿತ ಲ್ಯಾಪ್ಟಾಪ್, ಉಚಿತ ಬಸ್ ಪಾಸ್ , ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ ಕನಿಷ್ಠ 3500/-ರೂ ಹೆಚ್ಚಿಸಬೇಕೆಂದು ರಾಜ್ಯದ ವಿದ್ಯಾರ್ಥಿ ಸಮುದಾಯವನ್ನು ಸಂಘಟಿಸಿ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನಲ್ಲಿ 30% ಮೀಸಲಿಡಬೇಕು ಎಂದು ಇಡೀ ರಾಜ್ಯಾದ್ಯಂತ ಹೋರಾಟಗಳನ್ನು ನಡೆಸಿದರೂ ರಾಜ್ಯ ಸರ್ಕಾರ ಪರಿಗಣಿಸದೆ ಶಿಕ್ಷಣ ಕ್ಷೇತ್ರಕ್ಕೆ ನಿರ್ಲಕ್ಷ್ಯತೆ ತೋರಿದೆ ಎಂದು SFI ಆರೋಪಿಸಿದೆ.
ಬಿಜೆಪಿ ಸರ್ಕಾರದ ಪ್ರತಿ ಬಾರಿಯೂ ಶಿಕ್ಷಣ ಕ್ಷೇತ್ರಕ್ಕೆ ಹಣ ಕಡಿತ ಮಾಡುವ ಪರಿಪಾಠವನ್ನು ಮುಂದುವರಿಸಿರೋದರಿಂದ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ದ್ರೋಹ ಬಗೆದಿದೆ. ಈ ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಇನ್ನಷ್ಟು ಹೋರಾಟಗಳನ್ನು ತೀವ್ರಗೊಳಿಸಲು ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ SFI ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದೆ.
ಇದನ್ನೂ ಓದಿ: ರಾಜ್ಯಸಭೆ: ಬೆಲೆ ಏರಿಕೆಗಳ ವಿರುದ್ಧ ದನಿ ಎತ್ತಿದ ಮಲ್ಲಿಕಾರ್ಜುನ ಖರ್ಗೆ